ಹೆಸರು ಬದಲಾವಣೆ ಮಾಡಿಕೊಳ್ಳಲಿರುವ ಅಲ್ಲು ಅರ್ಜುನ್, ಕಾರಣವೇನು?
Allu Arjun: ನಟ ಅಲ್ಲು ಅರ್ಜುನ್, ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಅದೃಷ್ಟ ಅವರ ಜೊತೆಗೇ ಇದೆ. ಹೀಗಿದ್ದರೂ ಸಹ ಅಲ್ಲು ಅರ್ಜುನ್ ತಮ್ಮ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ. ಸಂಖ್ಯಾಶಾಸ್ತ್ರಜ್ಞರು ಮತ್ತು ಜ್ಯೋತಿಷಿಗಳನ್ನು ಭೇ ಟಿ ಮಾಡುತ್ತಿದ್ದಾರೆ. ಅಷ್ಟಕ್ಕೂ ಈಗ ಅಲ್ಲು ಅರ್ಜುನ್ ಹೆಸರು ಬದಲಾವಣೆ ಮಾಡಿಕೊಳ್ಳುತ್ತಿರುವುದು ಏಕೆ?

ಅಲ್ಲು ಅರ್ಜುನ್ (Allu Arjun), ಪ್ಯಾನ್ ಇಂಡಿಯಾ (Pan India) ಸ್ಟಾರ್ ನಟ. ‘ಪುಷ್ಪ 2’ (Pushpa 2) ಸಿನಿಮಾಕ್ಕೆ ಇಡೀ ಭಾರತದ ಇನ್ಯಾವ ನಟನೂ ಪಡೆಯದೇ ಇರುವಷ್ಟು ದುಬಾರಿ ಸಂಭಾವನೆ ಪಡೆದಿದ್ದಾರೆ. ಅಲ್ಲು ಅರ್ಜುನ್ ನಟಿಸಿರುವ ಮೂರು ಸಿನಿಮಾಗಳು ಸತತವಾಗಿ ಬ್ಲಾಕ್ ಬಸ್ಟರ್ ಆಗಿವೆ. ಅದಕ್ಕೆ ಮುಂಚೆ ಸಹ ಅಲ್ಲು ಅರ್ಜುನ್ ಸೋತಿದ್ದು ಬಹಳ ವಿರಳ. ಅದೃಷ್ಟ ಮತ್ತು ಪರಿಶ್ರಮದ ಸರಿಯಾದ ಪ್ಯಾಕೇಜ್ ಆಗಿದ್ದಾರೆ ಅಲ್ಲು ಅರ್ಜುನ್. ಹಿಟ್ ಮೇಲೆ ಹಿಟ್ ನೀಡುತ್ತಿರುವ ಈ ಹೊತ್ತಿನಲ್ಲೇ ಅಲ್ಲು ಅರ್ಜುನ್ ತಮ್ಮ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ.
ಹೌದು, ಅಲ್ಲು ಅರ್ಜುನ್ ತಮ್ಮ ಹೆಸರು ಬದಲಾವಣೆ ಮಾಡಿಕೊಳ್ಳಲಿದ್ದಾರಂತೆ. ಜ್ಯೋತಿಷಿಗಳು ಹಾಗೂ ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಈ ನಿರ್ಧಾರಕ್ಕೆ ಬಂದಿದ್ದಾರೆ ಅಲ್ಲು ಅರ್ಜುನ್. ಹೆಸರು ಬದಲಾವಣೆ ಎಂದ ಕೂಡಲೇ ತಮ್ಮ ಮೂಲ ಹೆಸರು ಬಿಟ್ಟು ಬೇರೆ ಹೆಸರನ್ನೇ ಇಟ್ಟುಕೊಳ್ಳುತ್ತಾರೆ ಎಂದೇನೂ ಇಲ್ಲ. ಆದರೆ ತಮ್ಮ ಈಗಿರುವ ಹೆಸರಿನ ಸ್ಪೆಲ್ಲಿಂಗ್ ಬದಲಾವಣೆ ಮಾಡಲಿದ್ದಾರೆ. ಆ ಮೂಲಕ ಸಂಖ್ಯಾಶಾಸ್ತ್ರಕ್ಕೆ ಅನುಗುಣವಾಗಿ ಸ್ಪೆಲ್ಲಿಂಗ್ ಇರುವಂತೆ ನೋಡಿಕೊಳ್ಳಲಿದ್ದಾರೆ.
ಕೆಲ ವರದಿಗಳ ಪ್ರಕಾರ ಅಲ್ಲು ಅರ್ಜುನ್ ತಮ್ಮ ಈಗಿರುವ ಹೆಸರಿಗೆ ಇನ್ನೊಂದು ಅಕ್ಷರವನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲಿದ್ದಾರಂತೆ. ಹೆಚ್ಚುವರಿ ಅಕ್ಷರ ಸೇರಿಸಿಕೊಂಡರೂ ಸಹ ಹೆಸರಿನ ಉಚ್ಛಾರಣೆ ಹಾಗೆಯೇ ಉಳಿಸಿಕೊಳ್ಳಲಿದ್ದಾರಂತೆ. ಅಲ್ಲು ಅರ್ಜುನ್ ಜ್ಯೋತಿಷಿಗಳನ್ನು ಸಹ ಸಂಪರ್ಕ ಮಾಡಿದ್ದು ಕೆಲವು ವಿಶೇಷ ಪೂಜೆಗಳನ್ನು ಸಹ ಮಾಡಿಸುತ್ತಿದ್ದಾರೆ. ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಎಚ್ಚರಿಕೆಯ ಹೆಜ್ಜೆಗಳನ್ನಿಡಲು ಸಿದ್ಧವಾಗುತ್ತಿದ್ದಾರೆ.
ಇದನ್ನೂ ಓದಿ:‘ಪುಷ್ಪ 3’ನಲ್ಲಿ ಅಲ್ಲು ಅರ್ಜುನ್ ಜೊತೆ ಇನ್ನಿಬ್ಬರು ಸ್ಟಾರ್ ಹೀರೋಗಳು
ಅಲ್ಲು ಅರ್ಜುನ್ ‘ಪುಷ್ಪ 2’ ಸಿನಿಮಾ ಮೂಲಕ ಭಾರಿ ಯಶಸ್ಸನ್ನೇನೋ ಗಳಿಸಿದರು. ಆದರೆ ಅದಾದ ಬಳಿಕ ವಿನಾಕಾರಣ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದರು. ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಒಂದು ದಿನ ಜೈಲಿಗೂ ಸಹ ಹೋಗಿ ಬಂದರು. ಅದಾದ ಬಳಿಕವೂ ಸಹ ಭಾರಿ ಟೀಕೆಗಳಿಗೆ ಗುರಿಯಾದರು. ಅದಕ್ಕೂ ಮುನ್ನ ಪವನ್ ಕಲ್ಯಾಣ್ ಎದುರಾಳಿ ಪರವಾಗಿ ಚುನಾವಣಾ ಪ್ರಚಾರ ಮಾಡಿ ವಿವಾದ ಮಾಡಿಕೊಂಡರು. ಪವನ್ ಕಲ್ಯಾಣ್ ಸಹ ಪರೋಕ್ಷವಾಗಿ ಅಲ್ಲು ಅರ್ಜುನ್ ಅನ್ನು ಟೀಕೆ ಮಾಡಿದರು. ಅಲ್ಲು ಅರ್ಜುನ್ ಮನೆ ಮೇಲೆ ರಾಜಕೀಯ ಪಕ್ಷದ ಕಾರ್ಯಕರ್ತರು ದಾಳಿ ಸಹ ಮಾಡಿದರು. ಇದೆಲ್ಲದನ್ನು ಗಮನದಲ್ಲಿಟ್ಟುಕೊಂಡು ಅಲ್ಲು ಅರ್ಜುನ್ ಸಂಖ್ಯಾಶಾಸ್ತ್ರರ ಭೇಟಿಯಾಗಿದ್ದು, ಅವರ ಸಲಹೆಯಂತೆ ಹೆಸರು ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:18 am, Thu, 3 April 25