Raj B Shetty: ದರ್ಶನ್ ನೋಡಲು ಜೈಲಿಗೆ ಹೋಗುವುದಿಲ್ಲ: ರಾಜ್ ಬಿ ಶೆಟ್ಟಿ

|

Updated on: Jul 29, 2024 | 7:15 PM

ಕೊಲೆ ಆರೋಪಿ ದರ್ಶನ್ ಅನ್ನು ಕಾಣಲು ಹಲವು ಸೆಲೆಬ್ರಿಟಿಗಳು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬರುತ್ತಿದ್ದಾರೆ. ಅದೊಂದು ಪ್ರಚಾರ ಕ್ರಿಯೆಯೂ ಆಗಿಬಿಟ್ಟಿದೆ. ಈ ನಡುವೆ ರಾಜ್ ಬಿ ಶೆಟ್ಟಿ ಅವರನ್ನು ದರ್ಶನ್ ಭೇಟಿಗೆ ಜೈಲಿಗೆ ಹೋಗ್ತೀರ ಎಂಬ ಪ್ರಶ್ನೆ ಎದುರಾಗಿದೆ. ಪ್ರಶ್ನೆಗೆ ದಿಟ್ಟ ಮತ್ತು ಪ್ರಾಮಾಣಿಕ ಉತ್ತರ ನೀಡಿದ್ದಾರೆ ಶೆಟ್ಟರು.

Raj B Shetty: ದರ್ಶನ್ ನೋಡಲು ಜೈಲಿಗೆ ಹೋಗುವುದಿಲ್ಲ: ರಾಜ್ ಬಿ ಶೆಟ್ಟಿ
Follow us on

ದರ್ಶನ್ ತೂಗುದೀಪ ಅವರನ್ನು ಕಾಣಲು ಕೆಲವು ನಟರು, ಆತ್ಮೀಯರು, ಕುಟುಂಬದವರು ಪರಪ್ಪನ ಅಗ್ರಹಾರ ಜೈಲಿಗೆ ಹೋಗುತ್ತಿದ್ದಾರೆ. ಕೆಲವು ಸೆಲೆಬ್ರಿಟಿಗಳಂತೂ ಮಾಧ್ಯಮಗಳಿಗೆ ಮುಂಚಿತವಾಗಿ ಮಾಹಿತಿ ನೀಡಿಯೇ ಪರಪ್ಪನ ಅಗ್ರಹಾರ ಜೈಲಿನ ಬಳಿ ಹೋಗುತ್ತಿದ್ದಾರೆ. ಆ ನಟ ದರ್ಶನ್ ಅನ್ನು ನೋಡಲು ಹೋಗಿದ್ದಾನೆಂದು ಇನ್ನೊಬ್ಬ ನಟ ತಾನೂ ಮಾಧ್ಯಮಗಳಿಗೆ ಹೇಳಿ ದರ್ಶನ್ ಅನ್ನು ನೋಡಲು ಹೋಗುತ್ತಿದ್ದಾರೆ ದರ್ಶನ್ ಅನ್ನು ನೋಡಲು ಹೋಗುವುದು ಒಂದು ಪ್ರಚಾರದ ತಂತ್ರವಾಗಿಯೂ ಮಾರ್ಪಟ್ಟಿದೆ. ಕೆಲ ಮಾಧ್ಯಮಗಳು ಸಹ ನಟ-ನಟಿಯರಿಗೆ ನೀವು ದರ್ಶನ್ ಅನ್ನು ನೋಡಲು ಹೋಗುವುದಿಲ್ಲವಾ? ಎಂದು ಪ್ರಶ್ನಿಸಲು ಆರಂಭಿಸಿವೆ. ಇಂಥಹುದೇ ಪ್ರಶ್ನೆಯೊಂದನ್ನು ಉತ್ತರಿಸಿರುವ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ದಿಟ್ಟ ಉತ್ತರವನ್ನೇ ಕೊಟ್ಟಿದ್ದಾರೆ.

ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ನೀವು ದರ್ಶನ್ ಅನ್ನು ನೋಡಲು ಹೋಗುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಜ್ ಬಿ ಶೆಟ್ಟಿ, ‘ನಾನು ನನ್ನ ವೃತ್ತಿ ಜೀವನದಲ್ಲಿ ದರ್ಶನ್ ಅವರನ್ನು ವೇದಿಕೆಯೊಂದರಲ್ಲಿ ಕೇವಲ ಒಮ್ಮೆ ಮಾತ್ರ ಭೇಟಿ ಆಗಿದ್ದೇನೆ. ಅವರೊಂದಿಗೆ ಅಂಥಹಾ ಪರಿಚಯವೂ ಇಲ್ಲ. ಕೇವಲ ಒಮ್ಮೆ ಭೇಟಿ ಆಗಿರುವ ವ್ಯಕ್ತಿ ಈಗ ಜೈಲಿಗೆ ಹೋಗಿದ್ದಾರೆಂದರೆ ನಾನು ಏಕೆ ನೋಡಲು ಹೋಗಲಿ. ಕೇವಲ ಒಂದು ಬಾರಿ ಮಾತ್ರ ಭೇಟಿಯಾದ ವ್ಯಕ್ತಿ ಜೈಲಿಗೆ ಹೋದರೆ ನಾನು ಹೋಗಿ ಭೇಟಿ ಆಗಬೇಕ? ನಾನು ಯಾಕೆ ಹೋಗಬೇಕು ಎಂದು ನನಗೆ ಗೊತ್ತಿಲ್ಲ’ ಎಂದು ರಾಜ್ ಬಿ ಶೆಟ್ಟಿ ಮರುಪ್ರಶ್ನೆ ಹಾಕಿದ್ದಾರೆ.

ಇದನ್ನೂ ಓದಿ:ದರ್ಶನ್​ಗೆ ಊಟ, ಹಾಸಿಗೆ, ಅರ್ಜಿ ಹಿಂಪಡೆದ ವಕೀಲರು, ಕಾರಣ?

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆಯೂ ಮಾತನಾಡಿರುವ ನಟ ರಾಜ್ ಬಿ ಶೆಟ್ಟಿ, ‘ಆ ರೀತಿಯ ಘಟನೆ ಆಗಬಾರದಿತ್ತು ಆಗಿ ಹೋಗಿದೆ. ಅದರ ಬಗ್ಗೆ ಮಾತನಾಡಿ-ಮಾತನಾಡಿ ಹೆಚ್ಚು ಪ್ರಯೋಜನ ಇಲ್ಲ. ಒಂದು ಮುನ್ನೆಚ್ಚರಿಕೆ ಬೇಕು ಬಾಕಿ ನಟರಿಗೆ ಸಹ, ಯಾವುದೇ ರೀತಿ ಕಾನೂನನ್ನು ನಾವು ಕೈಗೆ ತೆಗೆದುಕೊಳ್ಳಲು ಆಗುವುದಿಲ್ಲ, ಹಾಗೆ ತೆಗೆದುಕೊಳ್ಳುವುದು ತಪ್ಪು ಎಂಬುದು ಎಲ್ಲರಿಗೂ ಅರಿವಾಗಬೇಕು. ತಪ್ಪು ಮಾಡಿದ ಯಾರೇ ಆದರೂ ಶಿಕ್ಷೆ ಅನುಭವಿಸಲೇ ಬೇಕು. ಪೊಲೀಸರು ಆ ಪ್ರಕರಣವನ್ನು ಹ್ಯಾಂಡಲ್ ಮಾಡಿರುವ ರೀತಿ ಸಹ ಬಹಳ ಚೆನ್ನಾಗಿದೆ. ಶಕ್ತಿಶಾಲಿ, ಪ್ರಭಾವಶಾಲಿ ವ್ಯಕ್ತಿಗಳಿಗೆ ಶಿಕ್ಷೆ ಆಗಲ್ಲ ಎಂಬ ಅಭಿಪ್ರಾಯ ಜನರಲ್ಲಿ ಇದೆ. ಈಗ ದರ್ಶನ್ ಆರೋಪಿ ಸ್ಥಾನದಲ್ಲಿದ್ದಾರೆ. ಅವರು ಅಪರಾಧಿ ಆಗುತ್ತಾರಾ ಇಲ್ಲವಾ ನೋಡೋಣ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ