ವಿಜಯ್ ದೇವರಕೊಂಡ ಸಿನಿಮಾದಿಂದ ಶ್ರೀಲೀಲಾ ಹೋರಹೋಗಿದ್ದು ಏಕೆ? ಬದಲಿ ನಟಿ ಯಾರು?

Sreeleela: ವಿಜಯ್ ದೇವರಕೊಂಡ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಆ ಸಿನಿಮಾದಿಂದ ಶ್ರೀಲೀಲಾರನ್ನು ಕೈಬಿಡಲಾಗಿದೆ. ಕಾರಣವೇನು?

ವಿಜಯ್ ದೇವರಕೊಂಡ ಸಿನಿಮಾದಿಂದ ಶ್ರೀಲೀಲಾ ಹೋರಹೋಗಿದ್ದು ಏಕೆ? ಬದಲಿ ನಟಿ ಯಾರು?

Updated on: Jan 23, 2024 | 3:26 PM

ಶ್ರೀಲೀಲಾ (Sreeleela) ತೆಲುಗು ಚಿತ್ರರಂಗದ ಸದ್ಯದ ಟಾಪ್ ನಟಿ. ಒಂದರ ಹಿಂದೊಂದು ದೊಡ್ಡ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಮಹೇಶ್ ಬಾಬು, ಬಾಲಕೃಷ್ಣ, ರವಿತೇಜ ಇನ್ನೂ ಹಲವು ಸ್ಟಾರ್ ನಟರ ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿ ಮಿಂಚಿದ್ದಾರೆ, ಮಿಂಚುವವರಿದ್ದಾರೆ. ಕೆಲ ತಿಂಗಳ ಹಿಂದೆ ಶ್ರೀಲೀಲಾ, ವಿಜಯ್ ದೇವರಕೊಂಡರ 12ನೇ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗಿತ್ತು. ಮುಹೂರ್ತ ಸಹ ನಡೆದು ಚಿತ್ರಗಳು ಸಹ ಹೊರಬಿದ್ದಿದ್ದವು. ಆದರೆ ಅಚಾನಕ್ಕಾಗಿ ಶ್ರೀಲೀಲಾ, ಆ ಸಿನಿಮಾದಿಂದ ಹೊರಬಂದರು.

ಶ್ರೀಲೀಲಾರನ್ನು ಚಿತ್ರತಂಡವೇ ಕೈಬಿಟ್ಟಿತು ಎನ್ನಲಾಗುತ್ತಿದೆ. ಶ್ರೀಲೀಲಾರ ಬ್ಯುಸಿ ಶೆಡ್ಯೂಲ್​ನಿಂದಾಗಿ ಡೇಟ್ಸ್ ಹೊಂದಾಣಿಕೆ ಆಗದ ಕಾರಣಕ್ಕೆ ಶ್ರೀಲೀಲಾರನ್ನು ಕೈಬಿಡಲಾಗಿದೆ ಎಂಬ ಮಾತುಗಳು ಆರಂಭದಲ್ಲಿ ಕೇಳಿ ಬಂತು. ಆದರೆ ಒಳಗಿನ ವಿಷಯ ಬೇರೆಯೇ ಇದೆ ಎಂಬ ಚರ್ಚೆ ಟಾಲಿವುಡ್​ನಲ್ಲಿ ಜೋರಾಗಿ ಹರಿದಾಡಿತು. ದೇವರಕೊಂಡ ಸಿನಿಮಾದ ಮುಹೂರ್ತ ನಡೆದ ಬಳಿಕ ಬಿಡುಗಡೆ ಆದ ಶ್ರೀಲೀಲಾ ನಟಿಸಿದ್ದ ಎರಡು ಸಿನಿಮಾಗಳು ಸೋತ ಕಾರಣ ಶ್ರೀಲೀಲಾರನ್ನು ಹೊರಗಿಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು.

ಆದರೆ ಈ ಸುದ್ದಿಯನ್ನು ಚಿತ್ರತಂಡ ತಳ್ಳಿ ಹಾಕಿದೆ. ಶ್ರೀಲೀಲಾ ಬಹಳ ಒಳ್ಳೆಯ ನಟಿ. ಅವರ ಸಿನಿಮಾಗಳು ಚೆನ್ನಾಗಿ ಪ್ರದರ್ಶನ ಕಾಣುತ್ತಿವೆ. ಅವರ ಸಿನಿಮಾಗಳು ಸೋಲುತ್ತಿವೆ ಎಂಬ ಕಾರಣಕ್ಕೆ ಅವರನ್ನು ನಾವು ಸಿನಿಮಾದಿಂದ ಹೊರಗಿಟ್ಟಿಲ್ಲ ಎಂದು ಸ್ಪಷ್ಟನೆ ನೀಡಿವೆ. ಈಗ ಹೊರಬಿದ್ದಿರುವ ಸುದ್ದಿಯ ಪ್ರಕಾರ, ವಿಜಯ್ ದೇವರಕೊಂಡರ ಸಿನಿಮಾದಲ್ಲಿ ನಾಯಕಿಯದ್ದು ಗೂಢಚಾರಿಯ ಪಾತ್ರವಂತೆ, ಈ ಪಾತ್ರಕ್ಕೆ ಗ್ಲಾಮರ್ ಅವಶ್ಯಕತೆ ಇಲ್ಲವಾದ ಕಾರಣ, ಗ್ಲಾಮರಸ್ ನಟಿಯಾದ ಶ್ರೀಲೀಲಾರನ್ನು ಕೈಬಿಟ್ಟು ಮತ್ತೊಬ್ಬ ನಟಿಗಾಗಿ ಹುಡುಕಾಟ ಮಾಡಲಾಗುತ್ತಿದೆ.

ಇದನ್ನೂ ಓದಿ:ಹೀರೋಗಳಿಗೆ ಭಯ ಹುಟ್ಟಿಸುತ್ತಾಳೆ ಈ ಹುಡುಗಿ: ಶ್ರೀಲೀಲಾ ಬಗ್ಗೆ ಹೀಗೇಕೆಂದರು ಮಹೇಶ್ ಬಾಬು

ಶ್ರೀಲೀಲಾ, ತಮ್ಮ ಗ್ಲಾಮರ್, ನೃತ್ಯಗಳಿಂದ ತೆಲುಗು ಚಿತ್ರರಂಗದಲ್ಲಿ ಸಖತ್ ಹೆಸರು ಮಾಡಿದ್ದಾರೆ. ದೇವರಕೊಂಡರ ಸಿನಿಮಾದಲ್ಲಿ ಗ್ಲಾಮರಸ್​ ನಾಯಕಿಯ ಅವಶ್ಯಕತೆ ಇಲ್ಲವಾದ ಕಾರಣ ಅವಕಾಶ ಶ್ರೀಲೀಲಾ ಕೈಯಿಂದ ಜಾರಿದೆ. ಶ್ರೀಲೀಲಾ ಬದಲಿಗೆ ಆ ಪಾತ್ರಕ್ಕೆ ‘ಅನಿಮಲ್’ ನಟಿ ತೃಪ್ತಿ ದಿಮ್ರಿಯನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚೆಗಳು ನಡೆದಿವೆ. ಅಲ್ಲದೆ, ರಕ್ಷಿತ್ ಶೆಟ್ಟಿ ಜೊತೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ನಟಿಸಿದ್ದ ರುಕ್ಮಿಣಿ ವಸಂತ್​ರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಇಬ್ಬರಲ್ಲಿ ಯಾರು ಆಯ್ಕೆ ಆಗುತ್ತಾರೆ ಕಾದು ನೋಡಬೇಕಿದೆ.

ಶ್ರೀಲೀಲಾ ನಟನೆಯ ‘ಗುಂಟೂರು ಖಾರಂ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಈ ಸಿನಿಮಾಕ್ಕೆ ಮಹೇಶ್ ಬಾಬು ನಾಯಕ. ಇದೀಗ ಪವನ್ ಕಲ್ಯಾಣ್ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಶ್ರೀಲೀಲಾ ನಟಿಸಿದ್ದು ಶೀಘ್ರವೇ ಈ ಸಿನಿಮಾ ಬಿಡುಗಡೆ ಆಗಲಿದೆ. ರವಿತೇಜರ ಹೊಸ ಸಿನಿಮಾಕ್ಕೂ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ರಾಮ್ ಚರಣ್​ರ ಹೊಸ ಸಿನಿಮಾಕ್ಕೂ ಶ್ರೀಲೀಲಾ ನಾಯಕಿ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us