ನಿಮ್ಮ ಪಾದಗಳಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿರ್ಲಕ್ಷ್ಯ ಮಾಡಬೇಡಿ! ಇದು ಹೃದಯಾಘಾತದ ಮುನ್ಸೂಚನೆಯಾಗಿರಬಹುದು
ನಮ್ಮ ದೇಹವು ನೀಡುವ ಸಣ್ಣ ಸಣ್ಣ ಸಂಕೇತಗಳನ್ನು ನಾವು ಹಗುರವಾಗಿ ಪರಿಗಣಿಸಬಾರದು. ಅದೇ ರೀತಿ ಪಾದಗಳು ಊದಿಕೊಂಡಂತಾಗಿ ಭಾರವಾದರೆ ಅಥವಾ ನೋವು ಕಂಡುಬಂದು ಮರಗಟ್ಟಿದಂತಾದರೆ ಅಥವಾ ಪಾದಗಳ ಬಣ್ಣ ಬದಲಾದರೆ ಅಂತಹ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಇವು ಹೃದಯಾಘಾತ ಅಥವಾ ಪಾರ್ಶ್ವವಾಯುವಿನಂತಹ ಜೀವಕ್ಕೆ ಅಪಾಯಕಾರಿಯಾದಂತಹ ಆರೋಗ್ಯ ಸಮಸ್ಯೆಗಳು ಕಂಡುಬರುವ ಸೂಚಕವಾಗಿರಬಹುದು. ಹಾಗಾದರೆ ಯಾವ ಸಮಯದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು ಈ ರೀತಿ ಪಾದಗಳಲ್ಲಿ ಆಗುವ ಬದಲಾವಣೆಗೆ ಕಾರಣಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳಿ.

ನಮ್ಮ ದೇಹವು ನೀಡುವ ಸಣ್ಣ ಸಣ್ಣ ಸಂಕೇತಗಳನ್ನು ಅಥವಾ ಕೆಲವು ಎಚ್ಚರಿಕೆಯ ಸಂದೇಶಗಳನ್ನು ನಾವು ಹೆಚ್ಚಾಗಿ ನಿರ್ಲಕ್ಷಿಸುತ್ತೇವೆ. ಆದರೆ ಕೆಲವು ಲಕ್ಷಣಗಳು ಪದೇ ಪದೇ ಕಾಣಿಸಿಕೊಂಡರೆ, ಅವುಗಳನ್ನು ನಿರ್ಲಕ್ಷಿಸುವುದು ತುಂಬಾ ಅಪಾಯಕಾರಿ ಎಂಬುದನ್ನು ಮರೆಯಬೇಡಿ. ಯಾವುದೇ ಕಾಯಿಲೆಯಾಗಲಿ ಒಂದೇ ಸಲ ಬಂದು ನಮ್ಮನ್ನು ಅಟ್ಯಾಕ್ ಮಾಡುವುದಿಲ್ಲ. ಬದಲಾಗಿ ಅದು ಹತ್ತಾರು ಸುಳಿವುಗಳನ್ನು, ಕೆಲವು ರೀತಿಯ ಸಂದೇಶಗಳನ್ನು ನೀಡುತ್ತದೆ. ಆದರೆ ನಮಗೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ವಿವೇಚನೆ ಇರಬೇಕಾಗುತ್ತದೆ. ಅದಕ್ಕಾಗಿಯೇ ದೇಹದಲ್ಲಿ ಯಾವುದೇ ರೀತಿಯ ಬದಲಾವಣೆಗಳಾದರೂ ಕೂಡ ಅದನ್ನು ನಿರ್ಲಕ್ಷ್ಯ ಮಾಡುವ ಬದಲು ಅದು ಯಾಕಾಗಿ ಕಂಡುಬರುತ್ತಿದೆ, ಅದಕ್ಕೆ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇದೇ ರೀತಿ ನಮ್ಮ ದೇಹದಲ್ಲಿ ರಕ್ತ ಪರಿಚಲನೆ (Blood Circulation) ಸರಿಯಾಗಿ ಆಗದಿದ್ದಲ್ಲಿ ಅದು ಜೀವಕ್ಕೆ ಅಪಾಯಕಾರಿಯಾಗುವಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ರೀತಿ ರಕ್ತ ಪರಿಚಲನೆ ಸರಿಯಾಗಿ ಆಗದಿದ್ದಾಗ ನಮ್ಮ ಪಾದಗಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗಾದರೆ ಪಾದಗಳು (Foot) ನಮಗೆ ಯಾವ ರೀತಿಯ ಸೂಚನೆಗಳನ್ನು ನೀಡುತ್ತದೆ, ಯಾವ ಸಮಯದಲ್ಲಿ ವೈದ್ಯರನ್ನು ಸಂಪರ್ಕ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಪಾದಗಳಲ್ಲಿ ಊತ ಮತ್ತು ಭಾರ
ಸಾಮಾನ್ಯವಾಗಿ ಸಂಜೆಯಾಗುತ್ತಿದ್ದಂತೆ ಅಥವಾ ದೀರ್ಘಕಾಲ ನಿಂತುಕೊಂಡೆ ಇದ್ದಾಗ ನಿಮ್ಮ ಪಾದ ಮತ್ತು ಕಾಲುಗಳು ಊದಿಕೊಂಡರೆ, ಅದು ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುತ್ತಿಲ್ಲ ಎಂಬುದರ ಸಂಕೇತವಾಗಿದೆ. ವೈದ್ಯಕೀಯ ಪರಿಭಾಷೆಯಲ್ಲಿ, ಇದನ್ನು ಎಡಿಮಾ ಎಂದು ಕರೆಯಲಾಗುತ್ತದೆ. ನಿಧಾನಗೊಂಡ ರಕ್ತ ಪರಿಚಲನೆಯಿಂದಾಗಿ, ರಕ್ತ ಮತ್ತು ಇತರ ದ್ರವಗಳು ಪಾದಗಳಲ್ಲಿ ಸಂಗ್ರಹವಾಗುತ್ತವೆ, ಅವು ಭಾರ ಮತ್ತು ಊತಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ, ಬಿಗಿಯಾಗಿರುವ ಚಪ್ಪಲಿ ಅಥವಾ ಬೂಟುಗಳನ್ನು ಧರಿಸುವುದರಿಂದಲೂ ಕೂಡ ರಕ್ತ ಪರಿಚಲನೆಗೆ ಅಡ್ಡಿಯಾಗಬಹುದು.
ಕಾಲು ನೋವು, ಮರಗಟ್ಟುವಿಕೆ
ನಡೆದುಕೊಂಡು ಹೋಗುವಾಗ ಅಥವಾ ರಾತ್ರಿ ನಿದ್ರೆ ಮಾಡುವ ಸಮಯದಲ್ಲಿ ಕಾಲುಗಳಲ್ಲಿ ನೋವು, ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ ಅನುಭವಕ್ಕೆ ಬರುತ್ತಿದ್ದರೆ ಅದಕ್ಕೆ ಕಾರಣ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗದಿರುವುದಾಗಿರಬಹುದು. ರಕ್ತನಾಳಗಳಲ್ಲಿ ರಕ್ತದ ಹರಿವು ಸರಿಯಾಗಿಲ್ಲದಿದ್ದಾಗ, ಸ್ನಾಯುಗಳು ಸಾಕಷ್ಟು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪಡೆಯುವುದಿಲ್ಲ. ಇದು ನೋವು ಮತ್ತು ಮರಗಟ್ಟುವಿಕೆಗೆ ಕಾರಣವಾಗುತ್ತದೆ. ನಡೆಯುವಾಗ ನಿಮ್ಮ ಕಾಲುಗಳಲ್ಲಿ ನೋವು ಅನುಭವಕ್ಕೆ ಬಂದು, ನೀವು ನಡೆಯುವುದನ್ನು ನಿಲ್ಲಿಸಿದ ತಕ್ಷಣ ಅದು ಕಡಿಮೆಯಾದರೆ, ಅದನ್ನು ಕ್ಲಾಡಿಕೇಶನ್ ಎಂದು ಕರೆಯಲಾಗುತ್ತದೆ. ಇದು ಕಳಪೆ ರಕ್ತ ಪರಿಚಲನೆಯ ಸಾಮಾನ್ಯ ಲಕ್ಷಣವಾಗಿದೆ.
ಇದನ್ನೂ ಓದಿ: Health Tips: ಪಾದ ಪದೇ ಪದೇ ಊದಿಕೊಳ್ಳುತ್ತಿದ್ದರೆ, ಉರಿಯುತ್ತಿದ್ದರೆ ಏನರ್ಥ ತಿಳಿದುಕೊಳ್ಳಿ
ಪಾದಗಳ ಬಣ್ಣ ಬದಲಾವಣೆ
ನಿಮ್ಮ ಪಾದಗಳು, ಅದರಲ್ಲಿಯೂ ಕಾಲ್ಬೆರಳುಗಳು ತಣ್ಣಗಾಗಿದ್ದರೆ ಅಥವಾ ಪಾದಗಳ ಬಣ್ಣ ನೀಲಿ, ನೇರಳೆ ಅಥವಾ ಕೆಂಪು ಬಣ್ಣಕ್ಕೆ ಬದಲಾದರೆ, ಇವು ರಕ್ತ ಪರಿಚಲನೆ ಕಳಪೆಯಾಗಿದೆ ಎಂಬುದರ ಲಕ್ಷಣಗಳಾಗಿವೆ. ರಕ್ತ ಪರಿಚಲನೆ ಸರಿಯಾಗಿಲ್ಲದಿದ್ದಾಗ, ಪಾದಗಳು ಸಾಕಷ್ಟು ಉಷ್ಣತೆಯನ್ನು ಪಡೆಯುವುದಿಲ್ಲ, ಅದಕ್ಕಾಗಿಯೇ ಅವು ತಣ್ಣಗಾಗುತ್ತವೆ. ಇದೆಲ್ಲದರ ಜೊತೆಗೆ ಪಾದದ ಮೇಲಿನ ಗಾಯವು ಗುಣವಾಗಲು ಬಹಳ ಸಮಯ ತೆಗೆದುಕೊಂಡರೆ, ಜಾಗರೂಕರಾಗಿರುವುದು ಮುಖ್ಯ. ಗಾಯವು ಗುಣವಾಗಲು ಅಗತ್ಯವಾದ ಆಮ್ಲಜನಕ ಮತ್ತು ಪೋಷಕಾಂಶಗಳ ಕೊರತೆಯೇ ಇದಕ್ಕೆ ಕಾರಣವಾಗಿರುತ್ತದೆ.
ಹಾಗಾಗಿ ಈ ಲಕ್ಷಣಗಳು ನಿಮಗೆ ನಿರಂತರವಾಗಿ ಕಂಡುಬಂದರೆ, ಅವುಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಿ. ದೇಹದಲ್ಲಿ ರಕ್ತ ಪರಿಚಲನೆಯು ಸರಿ ಇಲ್ಲದಿದ್ದರೆ ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು ಅಥವಾ ಗ್ಯಾಂಗ್ರೀನ್ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಸಮಯಕ್ಕೆ ಸರಿಯಾಗಿ ಗುರುತಿಸಿಕೊಂಡು ಅದಕ್ಕೆ ಸೂಕ್ತವಾದ ಔಷಧಿಗಳನ್ನು ತೆಗೆದುಕೊಳ್ಳಿ. ಇದರಿಂದ ಆರೋಗ್ಯ ಹದಗೆಡದಂತೆ ರಕ್ಷಿಸಿಕೊಳ್ಳಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
