
ಬದಲಾಗುತ್ತಿರುವ ಹವಾಮಾನದಲ್ಲಿ, ಮಕ್ಕಳ ರೋಗನಿರೋಧಕ ಶಕ್ತಿ, ಅಂದರೆ ಅವರ ದೇಹದ ರಕ್ಷಣಾ ಶಕ್ತಿ ಬೇಗನೆ ದುರ್ಬಲಗೊಳ್ಳಬಹುದು ಬಹಳ ಸಾಮಾನ್ಯ. ತಾಪಮಾನದಲ್ಲಿ ಆಗುವಂತ ಹಠಾತ್ ಬದಲಾವಣೆ ಮತ್ತು ಗಾಳಿಯಲ್ಲಿ ಕಂಡುಬರುವ ಹೆಚ್ಚಿದ ಧೂಳು ಮಕ್ಕಳಲ್ಲಿ ಕೆಮ್ಮು ಮತ್ತು ಕಫದ ಅಪಾಯವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಶಾಲೆಗೆ ಹೋದಾಗ ಪರಸ್ಪರ ಭೇಟಿ, ಜನದಟ್ಟಣೆಯ ಸ್ಥಳಗಳಿಗೆ ಹೋಗುವುದು ಮತ್ತು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವ ಮಕ್ಕಳ ಬಳಿ ಇರುವುದು ಸೇರಿದಂತೆ ಇತ್ಯಾದಿ ಅಂಶಗಳು ಸಹ ಸೋಂಕುಗಳು ವೇಗವಾಗಿ ಹರಡುವುದಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲ ಕೆಲವು ಮಕ್ಕಳಲ್ಲಿ ಹವಾಮಾನ ಬದಲಾವಣೆಯಿಂದ ಗಂಟಲಿನಲ್ಲಿ ಉರಿಯೂತ ಮತ್ತು ಜಿಗುಟಾದ ಲೋಳೆಯು ಸಂಗ್ರಹವಾಗಬಹುದು, ಇದರಿಂದಾಗಿ ಮಗುವಿಗೆ ಪದೇ ಪದೇ ಕೆಮ್ಮು (Cough) ಬರಬಹುದು. ಅದರಲ್ಲಿಯೂ ಅಲರ್ಜಿ ಅಥವಾ ಆಗಾಗ ಶೀತದಿಂದ ಬಳಲುವ ಮಕ್ಕಳಿಗೆ, ಈ ಹವಾಮಾನವು ಇನ್ನಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಪೋಷಕರು ಕೆಮ್ಮನ್ನು ಸಾಮಾನ್ಯವೆಂದು ಪರಿಗಣಿಸಿ ನಿರ್ಲಕ್ಷಿಸುವುದು ಸರಿಯಲ್ಲ. ನಿರಂತರ ಕೆಮ್ಮುವಿಕೆಯೊಂದಿಗೆ, ಕಿರಿಕಿರಿ ಮತ್ತು ಗಂಟಲು ನೋವು ಹೆಚ್ಚಾಗುತ್ತದೆ. ಸೋಂಕು ಎದೆಗೆ ಇಳಿಯಬಹುದು, ಮಗುವಿಗೆ ಉಸಿರಾಡಲು ಕಷ್ಟವಾಗಬಹುದು, ನಿದ್ರೆಯ ತೊಂದರೆ, ಆಯಾಸ ಮತ್ತು ದೌರ್ಬಲ್ಯವನ್ನು ಉಂಟುಮಾಡಬಹುದು. ಅಷ್ಟೇ ಅಲ್ಲ, ದೀರ್ಘಕಾಲದ ಕೆಮ್ಮು ಹಸಿವನ್ನು ಕೂಡ ಕಡಿಮೆ ಮಾಡುತ್ತದೆ, ಇದರಿಂದ ಮಗು ಆಹಾರ ಸೇವನೆ ಮಾಡುವ ಪ್ರಮಾಣ ಕಡಿಮೆಯಾಗುತ್ತದೆ. ಇವೆಲ್ಲವೂ ದೇಹ ಸರಿಯಾದ ಶಕ್ತಿಯನ್ನು ಪಡೆಯುವುದನ್ನು ತಡೆಯುತ್ತದೆ. ಆಗಾಗ, ಕೆಮ್ಮುವಿಕೆಯ ಜೊತೆಗೆ, ಮೂಗು ಕಟ್ಟಿಕೊಳ್ಳುವುದು, ಕಿವಿ ನೋವು, ಸೈನಸ್ ಸಮಸ್ಯೆಗಳು, ಜ್ವರ ಮತ್ತು ತೀವ್ರ ಗಂಟಲು ಊತದಂತಹ ಸಮಸ್ಯೆಗಳು ಸಹ ಉದ್ಭವಿಸಬಹುದು. ಅದಲ್ಲದೆ ಅದನ್ನು ನಿರ್ಲಕ್ಷಿಸುವುದರಿಂದ ಪರಿಸ್ಥಿತಿ ಗಂಭೀರವಾಗಬಹುದು.
ಇದನ್ನೂ ಓದಿ: ಕೆಮ್ಮು, ಕಫಕ್ಕೆ ಅಜ್ಜಿ ಮಾಡುವ ಈ ಮನೆಮದ್ದನ್ನು ನೀವೂ ಟ್ರೈ ಮಾಡಿ, ಕ್ಷಣದಲ್ಲಿ ಪರಿಹಾರ ಕಂಡುಕೊಳ್ಳಿ
ಆಯುರ್ವೇದದಲ್ಲಿ ಮಕ್ಕಳ ಕೆಮ್ಮಿಗೆ, ದೇಹದ ಸಮತೋಲನ, ಉಷ್ಣತೆಯನ್ನು ಕಾಪಾಡಿಕೊಳ್ಳುವುದು ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ, ತುಳಸಿ ಎಲೆಗಳನ್ನು ಸ್ವಲ್ಪ ನೀರಿನಲ್ಲಿ ಕುದಿಸಿ, ಅದಕ್ಕೆ ಸ್ವಲ್ಪ ಅರಿಶಿನ ಮತ್ತು ಜೇನುತುಪ್ಪ ಮತ್ತು ಸ್ವಲ್ಪ ಶುಂಠಿ ರಸ ಸೇರಿಸಿ ಮಕ್ಕಳಿಗೆ ಕೊಡಿ. ಇದರಿಂದ ಗಂಟಲು ನೋವು ಶಮನವಾಗುತ್ತದೆ ಮಾತ್ರವಲ್ಲ, ಇದು ಕಫವನ್ನು ತೆಳುಗೊಳಿಸಿ ಅದನ್ನು ಹೊರಹಾಕಲು ಸಹಾಯ ಮಾಡುತ್ತದೆ. ಆದರೆ ಈ ಸಮಯದಲ್ಲಿ ಮಕ್ಕಳಿಗೆ ತುಂಬಾ ತಣ್ಣನೆಯ ವಸ್ತುಗಳು, ಐಸ್, ರೆಫ್ರಿಜರೇಟರ್ ನೀರು ಅಥವಾ ಹುರಿದ ಆಹಾರವನ್ನು ನೀಡಬಾರದು, ಏಕೆಂದರೆ ಅವು ಶೀತ ಮತ್ತು ಕೆಮ್ಮನ್ನು ಮತ್ತಷ್ಟು ಹೆಚ್ಚಿಸಬಹುದು. ಹಾಗಾಗಿ ಇವುಗಳನ್ನು ಮಕ್ಕಳಿಗೆ ನೀಡುವ ಬದಲು ಬೆಚ್ಚಗಿನ ನೀರು, ಸರಳ ಆಹಾರ, ಅನ್ನದೊಂದಿಗೆ ಬೇಳೆ ಸಾರು, ಮನೆಯಲ್ಲಿ ತಯಾರಿಸಿದ ಬೆಚ್ಚಗಿನ ಸೂಪ್ ಮತ್ತು ಕಾಲೋಚಿತ ಹಣ್ಣುಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹವು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವಾಗ ಅಜ್ವೈನ್ ನೊಂದಿಗೆ ಸಾಸಿವೆ ಎಣ್ಣೆಯನ್ನು ಬೆರೆಸಿ ಲಘುವಾಗಿ ಬಿಸಿ ಮಾಡಿ ಅದನ್ನು ಮಗುವಿನ ಎದೆ ಅಥವಾ ಬೆನ್ನಿನ ಮೇಲೆ ಹಚ್ಚುವುದರಿಂದಲೂ ಪರಿಹಾರ ಸಿಗುತ್ತದೆ. ಕೆಮ್ಮು 3- 4 ದಿನಗಳಲ್ಲಿ ಕಡಿಮೆಯಾಗದಿದ್ದರೆ ಅಥವಾ ಉಸಿರಾಟದ ತೊಂದರೆ ಕಂಡುಬಂದರೆ, ತಕ್ಷಣ ವೈದ್ಯರ ಸಲಹೆಯನ್ನು ಪಡೆಯುವುದು ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:27 am, Tue, 4 November 25