ಮಳೆಗಾಲದಲ್ಲಿ ಔಷಧಿಗಳಷ್ಟೇ ಅಲ್ಲ, ಆರೋಗ್ಯ ಕಾಪಾಡಿಕೊಳ್ಳಲು ಈ ಹಣ್ಣುಗಳು ಕೂಡ ಸಹಾಯ ಮಾಡುತ್ತದೆ!
ಮಳೆಗಾಲ ಆರಂಭವಾದಾಗ ಹವಾಮಾನ ತಣ್ಣಗಿದ್ದು ಆಹ್ಲಾದಕರವಾಗಿರುತ್ತದೆ. ಆದರೆ ಈ ಸಮಯದಲ್ಲಿ, ಬ್ಯಾಕ್ಟೀರಿಯಾ ಮತ್ತು ವೈರಸ್ಗಳು ಗಾಳಿ ಮತ್ತು ನೀರಿನಲ್ಲಿ ವೇಗವಾಗಿ ಹರಡುತ್ತವೆ. ಅದರಲ್ಲಿಯೂ ರೋಗನಿರೋಧಕ ಶಕ್ತಿ ಸ್ವಾಭಾವಿಕವಾಗಿ ಸ್ವಲ್ಪ ದುರ್ಬಲಗೊಳ್ಳುವುದರಿಂದ ಕಾಲೋಚಿತ ಕಾಯಿಲೆಗಳು ಬರುತ್ತದೆ. ಇದು ಸಹಜವಾಗಿದ್ದರೂ ಕೂಡ ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಕೇವಲ ಔಷಧಿಗಳ ಮೊರೆ ಹೋಗುವ ಬದಲು ಋತುಮಾನಕ್ಕೆ ತಕ್ಕ ಹಣ್ಣುಗಳನ್ನು ಸೇವನೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು.

ಮುಖ್ಯಾಂಶಗಳು
- ವೈರಲ್ ಸೋಂಕುಗಳಿಂದ ದೂರ ಇರಲು ಈ ಹಣ್ಣುಗಳನ್ನು ಪ್ರತಿದಿನ ಸೇವಿಸಿ
- ಮಳೆಗಾಲದಲ್ಲಿ ಕೆಲವು ಹಣ್ಣುಗಳ ಸೇವನೆ ಮಾಡುವುದರಿಂದ ಇಮ್ಯುನಿಟಿ ಬಲಪಡಿಸಿಕೊಳ್ಳಬಹುದು
- ಮಳೆಗಾಲದಲ್ಲಿ ಹಣ್ಣು ತಿನ್ನುವ ಮುನ್ನ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ
ಮಳೆಗಾಲ (Rainy Season) ಆರಂಭವಾಗುತ್ತಿದ್ದಂತೆ ಜ್ವರ, ಶೀತ, ಗಂಟಲು ನೋವು, ವೈರಲ್ ಸೋಂಕು, ಹೊಟ್ಟೆ ಸಂಬಂಧಿತ ತೊಂದರೆಗಳು ಹೆಚ್ಚಾಗುವುದು ಸಾಮಾನ್ಯ. ಈ ಸಮಯದಲ್ಲಿ ಔಷಧಿಗಳಷ್ಟೇ ಅಲ್ಲ, ಪೌಷ್ಟಿಕ ಆಹಾರ ಮತ್ತು ಋತುಮಾನಕ್ಕೆ ತಕ್ಕ ಹಣ್ಣು, ತರಕಾರಿಗಳ ಸೇವನೆ ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲಿಯೂ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್, ಫೈಬರ್ ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿರುವ ಕೆಲವು ಹಣ್ಣುಗಳು ದೇಹವನ್ನು ಸೋಂಕುಗಳಿಂದ ರಕ್ಷಿಸಲು ನೆರವಾಗುತ್ತವೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.
ನೇರಳೆ ಹಣ್ಣು (Jamun)
ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ, ಕಬ್ಬಿಣ, ಫೋಲೇಟ್ ಹಾಗೂ ಆ್ಯಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿವೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಕಾರಿ. ಮಧುಮೇಹ ಇರುವವರು ಈ ಹಣ್ಣನ್ನು ವೈದ್ಯರ ಸಲಹೆ ಪಡೆದು ಮಿತ ಪ್ರಮಾಣದಲ್ಲಿ ಸೇವಿಸಬಹುದು.
ದಾಳಿಂಬೆ
ಸಾಮಾನ್ಯವಾಗಿ ದಾಳಿಂಬೆ ಪಾಲಿಫಿನಾಲ್ ಹಾಗೂ ವಿಟಮಿನ್ ಸಿಯ ಉತ್ತಮ ಮೂಲವಾಗಿದೆ. ಇದು ದೇಹದಲ್ಲಿನ ಉರಿಯೂತ ಕಡಿಮೆ ಮಾಡಲು, ರಕ್ತಸಂಚಾರ ಸುಧಾರಿಸಲು ಮತ್ತು ವೈರಲ್ ಸೋಂಕಿನ ವಿರುದ್ಧ ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಸೇಬು
ಪ್ರತಿದಿನ ಒಂದು ಸೇಬು ಸೇವಿಸುವುದರಿಂದ ಫೈಬರ್, ವಿಟಮಿನ್ ಹಾಗೂ ಆ್ಯಂಟಿಆಕ್ಸಿಡೆಂಟ್ಗಳು ದೊರೆಯುತ್ತವೆ. ಮಳೆಗಾಲದಲ್ಲಿ ನಿಧಾನವಾಗುವ ಜೀರ್ಣಕ್ರಿಯೆಯನ್ನು ಸುಧಾರಿಸಲು ಹಾಗೂ ಹೊಟ್ಟೆಯ ಆರೋಗ್ಯ ಕಾಪಾಡಲು ಇದು ನೆರವಾಗಬಹುದು.
ಇದನ್ನೂ ಓದಿ: ಬಿಂಬಳಕಾಯಿಯನ್ನು ಅಡುಗೆಯಲ್ಲಿ ಮಾತ್ರವಲ್ಲ, ಜೀರ್ಣಕ್ರಿಯೆಯನ್ನು ಸುಧಾರಿಸಲು ಕೂಡ ಬಳಸಬಹುದು!
ಪೇರಳೆ (Guava)
ವಿಟಮಿನ್ ಸಿ ಅತಿ ಹೆಚ್ಚು ಇರುವ ಹಣ್ಣುಗಳಲ್ಲಿ ಪೇರಳೆ ಪ್ರಮುಖ. ಕಿತ್ತಳೆಗಿಂತಲೂ ಹೆಚ್ಚಿನ ವಿಟಮಿನ್ ಸಿ ಹೊಂದಿರುವ ಈ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಗಂಟಲಿಗೆ ಸಂಬಂಧಪಟ್ಟ ಸೋಂಕು ಮತ್ತು ಸಾಮಾನ್ಯ ಶೀತದ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಪೀಚ್ ಮತ್ತು ಪ್ಲಮ್
ಈ ಹಣ್ಣುಗಳಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ಸಮೃದ್ಧವಾಗಿದೆ. ಚರ್ಮದ ಆರೋಗ್ಯ ಕಾಪಾಡುವುದರ ಜೊತೆಗೆ ದೇಹದ ರೋಗನಿರೋಧಕ ಪ್ರತಿಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.
ಇನ್ನೂ ಯಾವ ಹಣ್ಣುಗಳನ್ನು ಸೇವಿಸಬಹುದು?
ಪಪ್ಪಾಯಿ, ಕಿವಿ, ಕಿತ್ತಳೆ ಹಾಗೂ ಸೀಬೆಹಣ್ಣುಗಳಂತಹ ಋತುಮಾನಕ್ಕೆ ತಕ್ಕ ಹಣ್ಣುಗಳನ್ನು ಮಿತ ಪ್ರಮಾಣದಲ್ಲಿ ಸೇವಿಸಬಹುದು. ಇವುಗಳಲ್ಲಿ ಇರುವ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಕರುಳಿನ ಆರೋಗ್ಯವನ್ನು ಸುಧಾರಿಸಿ, ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತವೆ.
ಮಳೆಗಾಲದಲ್ಲಿ ಹಣ್ಣು ತಿನ್ನುವಾಗ ಈ ಮುನ್ನೆಚ್ಚರಿಕೆ ಅಗತ್ಯ
- ಹಣ್ಣುಗಳನ್ನು ಉಪ್ಪು ನೀರು ಅಥವಾ ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆದು ಸೇವಿಸಿ.
- ರಸ್ತೆ ಬದಿಯಲ್ಲಿ ಕತ್ತರಿಸಿ ಇಟ್ಟಿರುವ ಹಣ್ಣುಗಳನ್ನು ಸೇವಿಸಬೇಡಿ.
- ಕತ್ತರಿಸಿದ ಹಣ್ಣುಗಳನ್ನು ಹೆಚ್ಚು ಸಮಯ ಹೊರಗೆ ಇಡಬೇಡಿ.
- ಮಕ್ಕಳಿಗೆ ಹಾಗೂ ವೃದ್ಧರಿಗೆ ಯಾವಾಗಲೂ ತಾಜಾ ಹಣ್ಣುಗಳನ್ನೇ ನೀಡಿ.
- ಜ್ವರ, ಮಧುಮೇಹ ಅಥವಾ ಅಲರ್ಜಿ ಇರುವವರು ವೈದ್ಯರ ಸಲಹೆಯಂತೆ ಆಹಾರ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಸೂಚನೆ: ಹಣ್ಣುಗಳು ಆರೋಗ್ಯಕರ ಆಹಾರದ ಭಾಗವಾಗಿದ್ದರೂ, ಯಾವುದೇ ಹಣ್ಣು ವೈರಲ್ ಸೋಂಕನ್ನು ಸಂಪೂರ್ಣವಾಗಿ ತಡೆಯುತ್ತದೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಆದರೆ ಸಮತೋಲನ ಆಹಾರ, ಸಾಕಷ್ಟು ನಿದ್ರೆ, ಶುದ್ಧ ನೀರು ಮತ್ತು ವೈಯಕ್ತಿಕ ಸ್ವಚ್ಛತೆಯೊಂದಿಗೆ ಹಣ್ಣುಗಳನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




