
ಮಧುಮೇಹ ಇರುವವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಔಷಧಿಗಳ ಜೊತೆಗೆ ಆಹಾರ ಮತ್ತು ಜೀವನಶೈಲಿಯಲ್ಲಿಯ ಬದಲಾವಣೆಗಳಿಗೂ ಗಮನ ಕೊಡುತ್ತಾರೆ. ಅದರಲ್ಲಿ ಮೆಂತ್ಯೆ ಬೀಜಗಳ ಬಳಕೆಯೂ ಒಂದು. ಈ ಬಗ್ಗೆ ಸಾಕಷ್ಟು ರೀತಿಯ ಚರ್ಚೆಗಳು ನಡೆಯುತ್ತದೆ ಆದರೆ ಇದರ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಮೆಂತ್ಯೆಯಲ್ಲಿ ನಾರಿನಾಂಶ ಸೇರಿದಂತೆ ಕೆಲವು ಸಸ್ಯ ಸಂಯುಕ್ತಗಳಿದ್ದು, ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣಕ್ಕೆ ಇದು ಕೆಲವು ಮಟ್ಟಿಗೆ ಸಹಾಯ ಮಾಡಬಹುದು ಎಂಬ ಅಧ್ಯಯನಗಳಿವೆ. ಆದರೆ ಮೆಂತ್ಯೆ ಪುಡಿ ಸೇವಿಸಿದರೆ ಡಯಾಬಿಟಿಸ್ ಸಂಪೂರ್ಣ ಗುಣವಾಗುತ್ತದೆ ಎಂದು ಹೇಳುವುದು ತಪ್ಪು. ಹಾಗಾದರೆ ಇದು ಯಾವ ರೀತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದನ್ನು ಹೇಗೆ ಬಳಕೆ ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಮೆಂತ್ಯೆ ಬೀಜಗಳಲ್ಲಿ ನಾರಿನಾಂಶವಿದ್ದು, ಆಹಾರದಲ್ಲಿರುವ ಕಾರ್ಬೋಹೈಡ್ರೇಟ್ಗಳ ಜೀರ್ಣಕ್ರಿಯೆ ಮತ್ತು ಗ್ಲೂಕೋಸ್ ಹೀರಿಕೊಳ್ಳುವುದರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದರಿಂದ ಊಟದ ನಂತರ ರಕ್ತದಲ್ಲಿನ ಸಕ್ಕರೆ ಏರಿಕೆಯನ್ನು ನಿಯಂತ್ರಿಸಲು ಸಹಾಯವಾಗಬಹುದು. ಕೆಲವು ಸಣ್ಣ ಅಧ್ಯಯನಗಳಲ್ಲಿ ಮೆಂತ್ಯೆ ಸೇವನೆಯಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. ಆದರೆ ಇದರ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದ್ದರಿಂದ ವೈದ್ಯರು ಸೂಚಿಸಿರುವ ಡಯಾಬಿಟಿಸ್ ಔಷಧಿಗಳಿಗೆ ಮೆಂತ್ಯೆಯನ್ನು ಪರ್ಯಾಯವಾಗಿ ಬಳಸಬಾರದು.
ಮೆಂತ್ಯೆಯನ್ನು ಸ್ವಲ್ಪ ಹುರಿದು ತಣ್ಣಗಾದ ನಂತರ ಪುಡಿ ಮಾಡಿಕೊಳ್ಳಬಹುದು. ಈ ಪುಡಿಯನ್ನು ಅಡುಗೆಯಲ್ಲಿ ಮಸಾಲೆಯಂತೆ ಕಡಿಮೆ ಪ್ರಮಾಣದಲ್ಲಿ ಸೇರಿಸಬಹುದು. ಉದಾಹರಣೆಗೆ ತರಕಾರಿ, ಬೇಳೆ ಅಥವಾ ಇತರ ಆಹಾರಗಳೊಂದಿಗೆ ಬಳಸಬಹುದು. ಮೆಂತ್ಯೆಯ ರುಚಿ ಕಹಿಯಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಅಗತ್ಯವಿಲ್ಲ.
ಇದನ್ನೂ ಓದಿ: ಮಲಬದ್ಧತೆಯಿಂದ ಕಂಗೆಟ್ಟಿರುವವರಿಗೆ ಕಾಮಕಸ್ತೂರಿ ಬೀಜಗಳನ್ನು ಈ ರೀತಿ ಸೇವಿಸಿದರೆ ಜೀರ್ಣಕ್ರಿಯೆ ಸರಿಯಾಗಿ ಆಗಬಹುದು!
ಡಯಾಬಿಟಿಸ್ ನಿಯಂತ್ರಣ ಮಾಡಲು ಒಂದು ಪದಾರ್ಥದ ಮೇಲೆ ಮಾತ್ರ ಅವಲಂಬಿಸುವುದಕ್ಕಿಂತ ಸಂಪೂರ್ಣ ಆಹಾರ ಕ್ರಮವನ್ನು ಅನುಸರಿಸುವುದು ಬಹಳ ಮುಖ್ಯ. ಹೆಚ್ಚು ತರಕಾರಿ, ಬೇಳೆಕಾಳುಗಳು, ಸಂಪೂರ್ಣ ಧಾನ್ಯಗಳು, ಬೀಜಗಳು ಮತ್ತು ಸೂಕ್ತ ಪ್ರಮಾಣದ ಪ್ರೋಟೀನ್ ಒಳಗೊಂಡ ಸಮತೋಲಿತ ಆಹಾರ ಸೇವಿಸುವುದು ಉತ್ತಮ. ಅನ್ನವನ್ನು ಸಂಪೂರ್ಣವಾಗಿ ಸೇವನೆ ಮಾಡುವುದನ್ನು ಬಿಟ್ಟು ಬಿಡುವ ಬದಲು ಅದರ ಪ್ರಮಾಣವನ್ನು ಗಮನಿಸಿ, ರಾಗಿ, ಜೋಳ, ಸಿರಿಧಾನ್ಯಗಳು ಅಥವಾ ಇತರ ಸಂಪೂರ್ಣ ಧಾನ್ಯಗಳನ್ನು ಆಹಾರದಲ್ಲಿ ವೈವಿಧ್ಯವಾಗಿ ಸೇರಿಸಬಹುದು. ಜೊತೆಗೆ ನಿಯಮಿತ ದೈಹಿಕ ಚಟುವಟಿಕೆಯೂ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಾಯಕ.
ಸಾಮಾನ್ಯವಾಗಿ ಮೆಂತ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಕೆಲವರಿಗೆ ಗ್ಯಾಸ್, ಹೊಟ್ಟೆ ಉಬ್ಬರ ಅಥವಾ ಅತಿಸಾರದಂತಹ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಡಯಾಬಿಟಿಸ್ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ಮೆಂತ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ತುಂಬಾ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಗರ್ಭಿಣಿಯರು ಔಷಧೀಯ ಪ್ರಮಾಣದಲ್ಲಿ ಮೆಂತ್ಯೆ ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ. ಮೆಂತ್ಯೆ ಆಹಾರದ ಭಾಗವಾಗಿ ಕೆಲವರಿಗೆ ಪ್ರಯೋಜನಕಾರಿಯಾಗಬಹುದು. ಆದರೆ ಡಯಾಬಿಟಿಸ್ ಒಂದು ದೀರ್ಘಕಾಲೀನ ಆರೋಗ್ಯ ಸಮಸ್ಯೆಯಾಗಿದ್ದು, ಮೆಂತ್ಯೆ ಪುಡಿ ಮಾತ್ರದಿಂದ ಅದು ಗುಣವಾಗುವುದಿಲ್ಲ. ವೈದ್ಯರು ಸೂಚಿಸಿದ ಔಷಧಿ, ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ತೂಕ ನಿರ್ವಹಣೆ ಮತ್ತು ರಕ್ತದಲ್ಲಿನ ಸಕ್ಕರೆಯ ತಪಾಸಣೆ ಮುಖ್ಯ.
ವೈದ್ಯರ ಸಲಹೆಯಿಲ್ಲದೆ ಡಯಾಬಿಟಿಸ್ ಮಾತ್ರೆಗಳನ್ನು ಕಡಿಮೆ ಮಾಡುವುದು ಅಥವಾ ನಿಲ್ಲಿಸುವುದು ಅಪಾಯಕಾರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ