
ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಅಧಿಕ ರಕ್ತದೊತ್ತಡ (High Blood Pressure) ಅಂದರೆ ಹೈ ಬಿಪಿಯನ್ನು ಮಾತ್ರ ಅಪಾಯಕಾರಿ ಎಂದು ಭಾವಿಸುತ್ತಾರೆ. ಆದರೆ ಅದು ಮಾತ್ರವಲ್ಲ, ಕಡಿಮೆ ರಕ್ತದೊತ್ತಡ ಅಂದರೆ ಲೋ ಬಿಪಿ (Low Blood Pressure) ಕೂಡ ತುಂಬಾ ಅಪಾಯಕಾರಿ. ಹೌದು, ಕೆಲವರಿಗೆ ಈ ಬಗ್ಗೆ ಅಷ್ಟಾಗಿ ಮಾಹಿತಿ ಇರುವುದಿಲ್ಲ. ಅದಕ್ಕಾಗಿಯೇ ಅವರು ಇಂತಹ, ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇದರಿಂದ ಸುಲಭವಾಗಿ, ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆ ಪರಿಹಾರ ಕಂಡುಕೊಳ್ಳಬಹುದು. ಆ ಮೂಲಕ ಇಂತಹ ಸಮಸ್ಯೆಯನ್ನು ತಡೆಗಟ್ಟಬಹುದು. ಇದರಿಂದ ಮುಕ್ತಿ ಪಡೆಯಲು ವಿವಿಧ ಔಷಧಿಗಳ ಮೊರೆ ಹೋಗುವ ಅಗತ್ಯವಿಲ್ಲ. ಬದಲಾಗಿ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಅಂದರೆ ಮನೆಮದ್ದುಗಳ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ಅಧಿಕ ರಕ್ತದೊತ್ತಡ (BP) ಕಡಿಮೆ ರಕ್ತದೊತ್ತಡಕ್ಕಿಂತ ಹೆಚ್ಚು ಅಪಾಯಕಾರಿ, ಏಕೆಂದರೆ ಇದು ಮೆದುಳಿನ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಕಡಿಮೆ ರಕ್ತದೊತ್ತಡವು ಅಧಿಕ ರಕ್ತದೊತ್ತಡದಷ್ಟೇ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕಡಿಮೆ ರಕ್ತದೊತ್ತಡವು ಮೆದುಳು ಮತ್ತು ಹೃದಯಕ್ಕೆ ರಕ್ತದ ಹರಿವಿಗೆ ಅಡ್ಡಿಪಡಿಸಬಹುದು ಮಾತ್ರವಲ್ಲ, ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿಯೂ ಸಹ ಕಡಿಮೆ ರಕ್ತದೊತ್ತಡ ಸಮಸ್ಯೆ ಕಂಡುಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕಳಪೆ ಜೀವನಶೈಲಿ. ಅಷ್ಟೇ ಅಲ್ಲ ದೀರ್ಘಕಾಲದ ಉಪವಾಸ, ಔಷಧಿಗಳ ಅಡ್ಡಪರಿಣಾಮ, ನಿರ್ಜಲೀಕರಣ, ಆಯಾಸ, ಒತ್ತಡ, ಯವಾಗಲೂ ಅತಿಯಾದ ಶಾಖ ವಾತಾವರಣದಲ್ಲಿ ಇರುವುದು ಅಥವಾ ಥೈರಾಯ್ಡ್, ಹೃದಯ ಅಥವಾ ಹಾರ್ಮೋನುಗಳ ಅಸಮತೋಲನದಿಂದಾಗಿ ಕಡಿಮೆ ರಕ್ತದೊತ್ತಡ ಅಂದರೆ ಲೋ ಬಿಪಿ ಉಂಟಾಗಬಹುದು. ಆದರೆ ಈ ಆರೋಗ್ಯ ಸಮಸ್ಯೆಯನ್ನು ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮತ್ತು ಕೆಲವು ಮನೆಮದ್ದುಗಳ ಸೇವನೆಯ ಮೂಲಕ ಕಡಿಮೆ ಮಾಡಿಕೊಳ್ಳಬಹುದು.
ಸಾಮಾನ್ಯವಾಗಿ ಸೈಂಧವ ಲವಣವು ಹಿಮಾಲಯದಿಂದ ಪಡೆದ ಕಲ್ಲು ಉಪ್ಪಾಗಿದ್ದು, ಇದರಲ್ಲಿ ಸೋಡಿಯಂ ಕ್ಲೋರೈಡ್ ಜೊತೆಗೆ 84 ಖನಿಜಗಳಿದ್ದು, ಉತ್ತಮ ಜೀರ್ಣಕ್ರಿಯೆ, ರಕ್ತದೊತ್ತಡ ನಿಯಂತ್ರಣ, ಮತ್ತು ಸ್ನಾಯು ಸೆಳೆತ ನಿವಾರಣೆ ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದನ್ನು ಸಾಮಾನ್ಯ ಉಪ್ಪಿನ ಬದಲಾಗಿ ಬಳಸಬಹುದು. ಮಾತ್ರವಲ್ಲ, ತಲೆ ತಿರುಗುವಿಕೆ ಮತ್ತು ಆಯಾಸ ಉಂಟಾದಾಗ ರಕ್ತದೊತ್ತಡ ಕಡಿಮೆಯಾಗಬಹುದು. ಅಂತಹ ಸಮಯದಲ್ಲಿ ಒಂದು ಲೋಟ ನೀರಿಗೆ ಒಂದು ಚಿಟಿಕೆ ಸಿಂಧವ್ ಉಪ್ಪನ್ನು ಬೆರೆಸಿ ಕುಡಿಯುವುದರಿಂದ ರಕ್ತದಲ್ಲಿ ಸೋಡಿಯಂ ಅನ್ನು ಹೆಚ್ಚಿಸುತ್ತದೆ, ಇದು ನೇರವಾಗಿ ಮೆದುಳಿಗೆ ತಲುಪುತ್ತದೆ ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದರ ಬದಲು ನೀವು ಕೊತ್ತಂಬರಿ ಮತ್ತು ಸಕ್ಕರೆಯನ್ನು ಕೂಡ ಸೇವಿಸಬಹುದು ಇದು ಕೂಡ ಬಹಳ ಪ್ರಯೋಜನಕಾರಿಯಾಗಿದೆ. ಕೊತ್ತಂಬರಿ ಮತ್ತು ಸಕ್ಕರೆಯ ದೈನಂದಿನ ಸೇವನೆಯು ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಹೊಟ್ಟೆಯಲ್ಲಿನ ಆಮ್ಲವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬಿಪಿ ಹೆಚ್ಚಿದ್ದರೆ ಶುಂಠಿ ಚಹಾ ಕುಡಿಯಬಹುದೇ? ಏನನ್ನುತ್ತೆ ಸಂಶೋಧನೆ ತಿಳಿದುಕೊಳ್ಳಿ
ಸಾಮಾನ್ಯವಾಗಿ ಒಣದ್ರಾಕ್ಷಿ ಸೇವನೆ ಎಲ್ಲರಿಗೂ ಇಷ್ಟವಿರುತ್ತದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ 10- 12 ಒಣದ್ರಾಕ್ಷಿಗಳನ್ನು ತಿನ್ನುವುದರಿಂದ ಕಡಿಮೆ ರಕ್ತದೊತ್ತಡಕ್ಕೆ ಪರಿಹಾರ ಸಿಗುತ್ತದೆ. ರಾತ್ರಿಯಿಡೀ 10- 12 ಒಣ ದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳ್ಳೆಯದು. ಒಣದ್ರಾಕ್ಷಿ ಮತ್ತು ಬಾದಾಮಿ ಲೋ ಬಿಪಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ರಾತ್ರಿಯಿಡೀ ನೀರಿನಲ್ಲಿ ಒಣದ್ರಾಕ್ಷಿ ಜೊತೆಗೆ ಬಾದಾಮಿಯನ್ನು ಕೂಡ ನೆನೆಸಿ ಬೆಳಿಗ್ಗೆ ಸಮಯದಲ್ಲಿ ಸೇವನೆ ಮಾಡಬಹುದು.
ನಿಯಮಿತವಾಗಿ ಲವಂಗ, ಶುಂಠಿ, ತುಳಸಿ ಎಲೆ ಮತ್ತು ಜೇನುತುಪ್ಪವನ್ನು ಸೇವನೆ ಮಾಡುವುದರಿಂದ ಲೋ ಬಿಪಿ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಸಾಮಾನ್ಯವಾಗಿ, ರಕ್ತ ದಪ್ಪವಾಗುವ ಅಪಾಯವು ಬೇಸಿಗೆಗಿಂತ ಚಳಿಗಾಲದಲ್ಲಿ ಹೆಚ್ಚಾಗಿರುತ್ತದೆ ಹಾಗಾಗಿ ಈ ರೀತಿಯ ಆಹಾರಗಳ ಸೇವನೆ ಬಹಳ ಮುಖ್ಯವಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ