ವೈದ್ಯ ರಾಕಿ ಕಥೇರಿಯಾ ಸಮಯಪ್ರಜ್ಞೆಯಿಂದ ಹೃದಯಾಘಾತದಿಂದ ಬದುಕುಳಿದ ಜೀವ !

67 ವರ್ಷದ ವ್ಯಕ್ತಿಯೊಬ್ಬರು ಮೂರು ದಿನಗಳಿಂದ ಹೃದಯಲ್ಲಿ ನೋವು ಅನುಭವಿಸುತ್ತಿದ್ದರು. ಗ್ಯಾಸ್ಟ್ರಿಕ್‌ ಸಮಸ್ಯೆ ಎಂದುಕೊಂಡು ಕೊಂಚ ನಿರ್ಲಕ್ಷವನ್ನೂ ಮಾಡಿದ್ದಾರೆ. ಆದರೆ ಸಮಸ್ಯೆ ಅಸಹನೀಯ ಎನಿಸಿದಾಗ ವೈದ್ಯರನ್ನು ಕಾಣಲು ಮಣಿಪಾಲ ಆಸ್ಪತ್ರೆಗೆ ಬಂದಿದ್ದಾರೆ. ರಿಸೆಪ್ಶನ್‌ನಲ್ಲಿ ವೈದ್ಯರ ಭೇಟಿಗೆ ಕಾಯುತ್ತಿರುವಾಗ ದಿಢೀರ್‍‌ ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲೇ ಇದ್ದ ಹೃದ್ರೋಗ ತಜ್ಞರಾದ ಡಾ. ರಾಕಿ ಕಥೇರಿಯಾ ಅವರು ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು ತಕ್ಷಣ ಸಿಪಿಆರ್‍‌ ಮಾಡಿದ್ದಾರೆ.

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಂತಹ (Heart attack)  ಪ್ರಕರಣಗಳು ಹೆಚ್ಚಾಗುತ್ತಿವೆ. ಹೃದಯ ಸಂಬಂಧಿ ಕಾಯಿಲೆಗೆ ಎಷ್ಟು ಬೇಗ ವೈದ್ಯಕೀಯ ನೆರವು ಸಿಗುವುದೋ ಅಷ್ಟೇ ಫಲಕಾರಿಯಾಗಿ ಜೀವವನ್ನು ರಕ್ಷಿಸಬಹುದು ಎಂಬುದಕ್ಕೆ ವರ್ತೂರು ರಸ್ತೆಯ ಮಣಿಪಾಲ್‌ ಆಸ್ಪತ್ರೆಯಲ್ಲಿ ನಡೆದ ಘಟನೆ ಉದಾಹರಣೆಯಾಗಿದೆ. ಹೃದ್ರೋಗ ತಜ್ಞರಾದ ಡಾ. ರಾಕಿ ಕಥೇರಿಯಾ ಅವರ ಸಮಯಪ್ರಜ್ಞೆಯಿಂದ ವ್ಯಕ್ತಿಯೊಬ್ಬರ ಪ್ರಾಣ ಉಳಿದಿದೆ.

67 ವರ್ಷದ ವ್ಯಕ್ತಿಯೊಬ್ಬರು ಮೂರು ದಿನಗಳಿಂದ ಹೃದಯಲ್ಲಿ ನೋವು ಅನುಭವಿಸುತ್ತಿದ್ದರು. ಗ್ಯಾಸ್ಟ್ರಿಕ್‌ ಸಮಸ್ಯೆ ಎಂದುಕೊಂಡು ಕೊಂಚ ನಿರ್ಲಕ್ಷವನ್ನೂ ಮಾಡಿದ್ದಾರೆ. ಆದರೆ ಸಮಸ್ಯೆ ಅಸಹನೀಯ ಎನಿಸಿದಾಗ ವೈದ್ಯರನ್ನು ಕಾಣಲು ಮಣಿಪಾಲ ಆಸ್ಪತ್ರೆಗೆ ಬಂದಿದ್ದಾರೆ. ರಿಸೆಪ್ಶನ್‌ನಲ್ಲಿ ವೈದ್ಯರ ಭೇಟಿಗೆ ಕಾಯುತ್ತಿರುವಾಗ ದಿಢೀರ್‍‌ ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲೇ ಇದ್ದ ಹೃದ್ರೋಗ ತಜ್ಞರಾದ ಡಾ. ರಾಕಿ ಕಥೇರಿಯಾ ಅವರು ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು ತಕ್ಷಣ ಸಿಪಿಆರ್‍‌ ( ಕಾರ್ಡಿಯೊ ಪಲ್ಮನರಿ ರಿಸಸಿಟೆಶನ್‌) ನೀಡಲು ಆರಂಭಿಸಿದ್ದಾರೆ. ಅಲ್ಲೇ ಇದ್ದ ಸಿಬ್ಬಂದಿಗಳು ವೀಲ್‌ ಬೆಡ್‌ ಮೂಲಕ ರೋಗಿಯನ್ನು ತುರ್ತ ನಿಗಾ ಘಟಕಕ್ಕೆ ಶಿಫ್ಟ್‌ ಮಾಡಿದ್ದಾರೆ. ವೈದ್ಯರು ಐಸಿಯುಗೆ ಕರೆದುಕೊಂಡು ಹೋಗುವ ಮಾರ್ಗದಲ್ಲೂ ಸಿಪಿಆರ್‍‌ ಮುಂದುವರೆಸಿದ್ದು , ವ್ಯಕ್ತಿಯ ಜೀವ ಉಳಿದಿದೆ.

ಇಸಿಜಿ ಹಾಗೂ ಕಾರ್ಡಿಯಾಕ್‌ ಸ್ಕ್ಯಾನ್‌ನಲ್ಲಿ ರೋಗಿಗೆ ಹೃದಯಾಘಾತವಾಗಿದ್ದು ದೃಢಪಟ್ಟಿದೆ. ಪರಿಸ್ಥಿತಿ ಮತ್ತಷ್ಟು ಹದಗೆಡುವುದನ್ನು ತಪ್ಪಿಸಲು ವೈದ್ಯರು ಎಂಜಿಯೊಪ್ಲ್ಯಾಸ್ಟಿ ವಿಧಾನವನ್ನು ಅನುಸರಿಸಲಾಗಿದೆ. ಸದ್ಯ ರೋಗಿಯ ಸ್ಥಿತಿ ನಿಯಂತ್ರಣದಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಚಿಕಿತ್ಸೆ ಬಳಿಕ ಮಾತನಾಡಿದ ಡಾ.ರಾಕಿ ಕಥೇರಿಯಾ “ ರೋಗಿಯು ಹೆಚ್ಚಾಗಿ ಧೂಮಪಾನ ಮಾಡುತ್ತಿದ್ದು, ಡಯಾಬಿಟಿಸ್‌ ಸಮಸ್ಯೆ ಕೂಡ ಇತ್ತು. ಹಾಗೇ ನಿಯಮಿತವಾಗಿ ಯಾವುದೇ ಆರೋಗ್ಯ ತಪಾಸಣೆಯೂ ಮಾಡಿಸಿಲ್ಲ. ಹೃದಯಾಘಾತದ ಆರಂಭಿಕ ಲಕ್ಷಣವನ್ನೂ ಕಡೆಗಣಿಸಿದ್ದಾರೆ. ಆಸ್ಪತ್ರೆಯಲ್ಲಿ ಕುಸಿದು ಬಿದ್ದಾಗ , ಅವರ ನಾಡಿ ಬಡಿತವೂ ನಿಂತಿತ್ತು , ಪ್ರಜ್ಞೆಯೂ ಇರಲಿಲ್ಲ. ಹೃದಯಬಡಿತವನ್ನು ಪುನಃ ಸ್ಥಾಪಿಸಲು ಕಷ್ಟವಾಯಿತು. ಆದರೆ ನಿಧಾನವಾಗಿ ಚಿಕಿತ್ಸೆಗೆ ಸ್ಪಂದಿಸಲು ಆರಂಭಿಸಿದರು.

ಇದನ್ನೂ ಓದಿ
ಮಲಬದ್ಧತೆಯಿಂದ ಮುಕ್ತಿ ಪಡೆಯಲು ಈ ಎಲೆಯ ರಸ ಸೇವನೆ ಮಾಡಿ ಸಾಕು!
ಇದಕ್ಕೆ ಹೇಳೋದು ವಾರದಲ್ಲಿ ಒಮ್ಮೆಯಾದರೂ ಮಶ್ರೂಮ್ ತಿನ್ನಿ ಅಂತ
ಪಾಪ್‌ಕಾರ್ನ್ vs ಬಾಳೆಹಣ್ಣಿನ ಚಿಪ್ಸ್ ಯಾವುದು ಆರೋಗ್ಯಕರ?
ಮಧುಮೇಹದಿಂದ ಮಲಬದ್ಧತೆವರೆಗೆ ಎಲ್ಲಾ ಸಮಸ್ಯೆಗೂ ಈ ಬಳ್ಳಿಯೇ ಅಮೃತ

ಮೊದಲೇ ಸಮಸ್ಯೆ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಆರಂಭಿಸಿದ್ದಲ್ಲಿ ಹೃದಯಾಘಾತದಂತಹ ಪರಿಸ್ಥಿತಿಯನ್ನು ತಡೆಯಬಹುದಾಗಿತ್ತು. ಆಸ್ಪತ್ರೆಯಲ್ಲಿ ಪರಿಣಿತ ತಜ್ಷರು ಹಾಗೂ ಉತ್ತಮ ತರಬೇತಿ ಪಡೆದ ಸಿಬ್ಬಂದಿಗಳು ಇರುವ ಕಾರಣ ತಕ್ಷಣ ಚಿಕಿತ್ಸೆ ದೊರೆತಿದೆ. ಇದೇ ಘಟನೆ ಹೊರಗಡೆ ನಡೆದಿದ್ದಲ್ಲಿ ಪ್ರಾಣಕ್ಕೆ ಅಪಾಯವಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ

ಘಟನೆ ಕುರಿತು ಮಾತನಾಡಿದ ರೋಗಿಯ ಮಗ “ ಆಸ್ಪತ್ರೆಯ ವೈದ್ಯರು ಹೋಗಿರುವ ಪ್ರಾಣವನ್ನು ರಕ್ಷಿಸಿದ್ದಾರೆ. ತುಂಬಾ ದಿನದಿಂದ ಎದೆ ನೋವು ಎನ್ನುತ್ತಿದ್ದರು ಆದರೆ ನಿರ್ಲಕ್ಷ್ಯ ಮಾಡಿಬಿಟ್ಟಿದ್ದಾರೆ. ಎಲ್ಲರಲ್ಲೂ ವಿನಂತಿ, ಎಂದೂ ಆರೋಗ್ಯ ಸಮಸ್ಯೆಯನ್ನು ಕಡೆಗಣಿಸಬೇಡಿ, ಸಮಸ್ಯೆಗೆ ಸಂಬಂಧಿಸಿದ ವಿಭಾಗದ ವೈದ್ಯರಿಂದ ತಕ್ಷಣ ಚಿಕಿತ್ಸೆ ಪಡೆಯಿರಿ” ಎಂದು ತಿಳಿಸಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us