
ಇತ್ತೀಚಿನ ದಿನಗಳಲ್ಲಿ, ಅನೇಕ ದಂಪತಿ ಗರ್ಭಧರಿಸುವುದಕ್ಕೆ ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ. ಹಿಂದಿನ ಕಾಲಕ್ಕೆ ಹೋಲಿಸಿದರೆ ಬಂಜೆತನದ ಪ್ರಕರಣಗಳು ಕೂಡ ಗಮನಾರ್ಹವಾಗಿ ಹೆಚ್ಚಿವೆ. ಆದರೆ ಈ ರೀತಿಯಾಗಲು ವೈದ್ಯಕೀಯ ಕಾರಣ ಮಾತ್ರವಲ್ಲ, ದಿನನಿತ್ಯ ಅನುಸರಿಸುವ ಕಳಪೆ ಆಹಾರ ಪದ್ಧತಿ, ಮಾನಸಿಕ ಒತ್ತಡ ಮತ್ತು ಅನಾರೋಗ್ಯಕರ ಜೀವನಶೈಲಿಯೂ (Lifestyle) ಸಹ ಗರ್ಭಧಾರಣೆಗೆ ಅಡ್ಡಿಪಡಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇಂತಹ ಸಂದರ್ಭಗಳಲ್ಲಿ, ಮಹಿಳೆ ಗರ್ಭಧರಿಸಲು (Conceiving) ಸರಿಯಾದ ದಿನಚರಿಯನ್ನು ಪಾಲಿಸುವುದರ ಜೊತೆ ಜೊತೆಗೆ, ಅವಳು ಕೆಲವು ಮುಖ್ಯವಾದ ವಿಷಯಗಳ ಕಡೆಗೆ ಗಮನ ಕೊಡಬೇಕಾಗುತ್ತದೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಅದು ಹೇಗೆ ಮತ್ತು ಯಾವ ರೀತಿ ಎಂಬುದನ್ನು ವೈದ್ಯರು ನೀಡಿರುವ ಈ ಮಾಹಿತಿಯಿಂದ ತಿಳಿದುಕೊಳ್ಳಿ.
ಸ್ತ್ರೀರೋಗ ತಜ್ಞೆ ಡಾ. ಚಂಚಲ್ ಶರ್ಮಾ ಹೇಳುವ ಪ್ರಕಾರ, ಗರ್ಭಧಾರಣೆಗೆ ಮಹಿಳೆಯರು ಮತ್ತು ಪುರುಷರು ಇಬ್ಬರೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರುವುದು ಬಹಳ ಅವಶ್ಯಕವಾಗುತ್ತದೆ. ಆಯುರ್ವೇದದ ಪ್ರಕಾರ, ಇಂತಹ ಸಮಯದಲ್ಲಿ ಹಲವಾರು ವಿಷಯಗಳಿಗೆ ಗಮನ ಕೊಡುವುದು ಮುಖ್ಯ. ಮೊದಲನೆಯದಾಗಿ, ಸೂರ್ಯೋದಯಕ್ಕೆ ಮುಂಚಿತವಾಗಿ ಎಚ್ಚರಗೊಳ್ಳಬೇಕಾಗುತ್ತದೆ. ಇದು ನಿಮಗೆ ಕೇಳುವುದಕ್ಕೆ ಬಹಳ ಆಶ್ಚರ್ಯ ಉಂಟುಮಾಡಬಹುದು. ಆದರೆ ಈ ಅಭ್ಯಾಸ ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮಹಿಳೆಯ ಅಂಡೋತ್ಪತ್ತಿ ಚಕ್ರ ಮತ್ತು ಪುರುಷನ ವೀರ್ಯದ ಗುಣಮಟ್ಟ ಎರಡಕ್ಕೂ ಪ್ರಯೋಜನಕಾರಿಯಾಗಿದೆ. ಇದರ ಜೊತೆಗೆ ಮಹಿಳೆ ಮತ್ತು ಪುರುಷರಿಬ್ಬರೂ ಪ್ರತಿದಿನ ಕನಿಷ್ಠ 30 ನಿಮಿಷಗಳ ಲಘು ವ್ಯಾಯಾಮ ಅಥವಾ ಯೋಗ ಮಾಡುವುದು ಬಹಳ ಉತ್ತಮ.
ಡಾ. ಶರ್ಮಾ ಅವರ ಪ್ರಕಾರ, ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವವರು ಯಾವಾಗಲೂ ತಾಜಾ ಮತ್ತು ಹಗುರವಾದ ಆಹಾರವನ್ನು ಮಾತ್ರ ಸೇವನೆ ಮಾಡಬೇಕು. ಹಸಿರು ತರಕಾರಿಗಳು, ಬೇಳೆ ಕಾಳುಗಳು, ಎಳ್ಳು, ತುಪ್ಪ ಮತ್ತು ಹಾಲು ಮುಂತಾದವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಯಾವುದೇ ರೀತಿಯ ಫಾಸ್ಟ್ ಫುಡ್, ಎಣ್ಣೆಯುಕ್ತ ಪದಾರ್ಥಗಳ ಸೇವನೆಯನ್ನು ಆದಷ್ಟು ತಪ್ಪಿಸಬೇಕು. ಮಾತ್ರವಲ್ಲ ಆರೋಗ್ಯಕರ ಡಯಟ್ ಚಾರ್ಟ್ ತಯಾರಿಸಲು ವೈದ್ಯರನ್ನು ಸಂಪರ್ಕಿಸುವುದು ಬಹಳ ಉತ್ತಮ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಸುಧಾರಿಸುವ ಮತ್ತು ಮಹಿಳೆಯರಲ್ಲಿ ಉತ್ತಮ ಅಂಡೋತ್ಪತ್ತಿಯನ್ನು ಉತ್ತೇಜಿಸುವ ಆಹಾರವನ್ನು ಸೇವಿಸಿ. ಇದರೊಂದಿಗೆ, ದೇಹವನ್ನು ಶುದ್ಧೀಕರಿಕೊಳ್ಳಬಹುದು. ಆಯುರ್ವೇದದಲ್ಲಿಯೂ, ಗರ್ಭಧಾರಣೆಯ ಮೊದಲು ದೇಹವನ್ನು ಶುದ್ಧೀಕರಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇದಕ್ಕಾಗಿ ನೀವು ಪಂಚಕರ್ಮವನ್ನು ಬಳಸಬಹುದು. ಇದು ದೇಹದಿಂದ ವಿಷವನ್ನು ತೆಗೆದುಹಾಕಿ, ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪುರುಷರು ಬಿಗಿಯಾದ ಬೆಲ್ಟ್ ಧರಿಸುವುದರಿಂದ ಬಂಜೆತನ ಕಾಡುವುದು ಖಂಡಿತ: ತಜ್ಞರು ಹೇಳೋದೇನು?
ಬಂಜೆತನ ಹೆಚ್ಚುತ್ತಿರುವುದಕ್ಕೆ ಮಾನಸಿಕ ಒತ್ತಡವೂ ಒಂದು ಪ್ರಮುಖ ಕಾರಣವಾಗಿದೆ. ಅಂತಹ ಸಂದರ್ಭಗಳಲ್ಲಿ, ಒತ್ತಡ ಕಡಿಮೆ ಮಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗುತ್ತದೆ. ಇದಕ್ಕಾಗಿ, ಪ್ರತಿದಿನ 15 ನಿಮಿಷಗಳ ಕಾಲ ಧ್ಯಾನ ಮಾಡಿ ಅಥವಾ ಮೈಂಡ್ಫುಲ್ನೆಸ್ ಅನ್ನು ಅಭ್ಯಾಸ ಮಾಡಿ. ಸಂಜೆ, ಹಿತವಾದ ಸಂಗೀತವನ್ನು ಆಲಿಸಿ. ಸಾಕಷ್ಟು ನಿದ್ರೆ ಮಾಡಿ, ಪ್ರತಿದಿನ ಕನಿಷ್ಠ 7- 8 ಗಂಟೆಗಳ ಕಾಲ ನಿದ್ರೆ ಮಾಡುವುದು ಬಹಳ ಅವಶ್ಯಕ. ಇವೆಲ್ಲವೂ ನಿಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ