2025ರ ಮಾರ್ಚ್ 30ರ ಭಾನುವಾರ ಚಾಂದ್ರಮಾನ ಯುಗಾದಿ ಇದೆ. ಅಂದಿನಿಂದ ವಿಶ್ವಾವಸು ಸಂವತ್ಸರದ ಆರಂಭವಾಗುತ್ತದೆ. ಈ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ಎಂಬುದರ ವಿವರ ಇಲ್ಲಿದೆ. ಇದಕ್ಕಾಗಿ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನೆನಪಿರಲಿ, ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.
ಈ ಸಂವತ್ಸರದ ಗ್ರಹಸ್ಥಿತಿಗಳು ಹೀಗಿವೆ: ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕಿನಂದು ಶನಿ ಗ್ರಹ ಮೀನ ರಾಶಿ ಪ್ರವೇಶ ಮಾಡುತ್ತದೆ. ಮೇ 14ಕ್ಕೆ ಗುರು ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇನ್ನು ಮೇ ಹದಿನೆಂಟನೇ ತಾರೀಕಿನಂದು ರಾಹು ಗ್ರಹವು ಕುಂಭ ರಾಶಿಯಲ್ಲೂ ಹಾಗೂ ಕೇತು ಗ್ರಹವು ಸಿಂಹ ರಾಶಿಯಲ್ಲೂ ಸಂಚರಿಸುತ್ತದೆ. ಗುರು ಗ್ರಹ ಅಕ್ಟೋಬರ್ 18ನೇ ತಾರೀಕಿನಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿ, ಡಿಸೆಂಬರ್ 5ನೇ ತಾರೀಕಿನಂದು ಮತ್ತೆ ಮಿಥುನ ರಾಶಿಯಲ್ಲಿ ಸಂಚರಿಸುತ್ತಾ ಸಂವತ್ಸರ ಪರ್ಯಂತವಾಗಿ ಅದೇ ರಾಶಿಯಲ್ಲಿ ಇರುತ್ತದೆ.
ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅದು ಬಹಳ ಕಠಿಣವಾಗುತ್ತಾ ಬರಲಿದೆ. ಅನಾರೋಗ್ಯಕ್ಕಾಗಿ ವೈದ್ಯರ ಬಳಿ ತೋರಿಸಿಕೊಂಡರೂ ಅದರಿಂದ ನಿಮಗೆ ಆತ್ಮವಿಶ್ವಾಸ ಬರುವ ಮಟ್ಟಕ್ಕೆ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ನಿಮ್ಮಲ್ಲಿ ಯಾರು ಆಸ್ತಿ ಮಾರಾಟಕ್ಕೆ ಇಡುತ್ತೀರಿ ಅಥವಾ ಇಟ್ಟಿದ್ದೀರಿ ಅಂಥವರಿಗೆ ನಿರೀಕ್ಷಿತ ಮಟ್ಟದಲ್ಲಿ ಬೆಲೆ ದೊರೆಯುವುದಿಲ್ಲ. ಯಾವುದೋ ಕಾಗದ- ಪತ್ರಗಳ ಕಾರಣಕ್ಕೋ ಅಥವಾ ವಾಸ್ತು ಇನ್ಯಾವುದಾದರೂ ಕಾರಣವನ್ನು ನೀಡಿ ಬಹಳ ಕಡಿಮೆ ಬೆಲೆಗೆ ಆಸ್ತಿಯನ್ನು ಖರೀದಿಗೆ ಕೇಳಲಿದ್ದಾರೆ. ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ವಹಿಸಿ. ನೀವಾಗಿಯೇ ಮೇಲುಬಿದ್ದು ವಹಿಸಿಕೊಂಡ ಜವಾಬ್ದಾರಿಗೆ ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ.
ವಿಲಾಸಿ ವಸ್ತುಗಳಿಗೆ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಶತ್ರುಗಳು ನಿಮಗೆ ತೊಂದರೆ ನೀಡಬಹುದು ಅಥವಾ ನಿಮ್ಮ ವೃತ್ತಿಯಲ್ಲೇ ಇರುವ ಪ್ರತಿಸ್ಪರ್ಧಿಗಳು ಸಮಸ್ಯೆಗಳು ಮಾಡಬಹುದು ಎಂಬ ಆತಂಕದಲ್ಲಿ ವಿಪರೀತವಾಗಿ ಹಣ ಖರ್ಚು ಮಾಡುವಂತಾಗುತ್ತದೆ. ಅದೃಷ್ಟವನ್ನು ನಂಬಿಕೊಂಡು ನೀವು ಮಾಡಿದ್ದ ಹೂಡಿಕೆಯಲ್ಲಿ ನಷ್ಟವನ್ನು ಕಾಣುವಂತಾಗುತ್ತದೆ. ಕೊನೆಗೆ ನೀವು ಹೂಡಿಕೆ ಮಾಡಿದ್ದ ಅಸಲು ಸಿಕ್ಕರೆ ಸಾಕು ಎಂಬ ಸ್ಥಿತಿಗೆ ಬರುತ್ತೀರಿ. ನಿಮ್ಮಲ್ಲಿ ಕೆಲವರು ಅಸಲಿಗಿಂತ ಕಡಿಮೆ ಮೊತ್ತಕ್ಕೆ ಸಮಾಧಾನ ಮಾಡಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ.
ಇದನ್ನೂ ಓದಿ: ವೃಷಭ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ಚರ್ಮದ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಜೊತೆಗೆ ಕಿಡ್ನಿ ಸ್ಟೋನ್, ಗಾಲ್ ಬ್ಲಾಡರ್ ಸಮಸ್ಯೆ, ಮೂತ್ರ ಸೋಂಕು ಮೊದಲಾದ ತೊಂದರೆಗಳು ಎದುರಾಗಬಹುದು. ನಿಮ್ಮ ಉದ್ಯೋಗ ಅಥವಾ ವೃತ್ತಿಯಲ್ಲಿ ಹಿರಿಯರಾದವರು ನಿಮ್ಮ ಮೇಲೆ ದ್ವೇಷ ಸಾಧನೆಗೆ ನಿಲ್ಲಲಿದ್ದಾರೆ. ನೀವು ಸಹ ಇತರರಿಗೆ ತೊಂದರೆ ನೀಡುವ ಸಲುವಾಗಿ ಚಾಡಿ ಹೇಳುತ್ತೀರಿ. ಹಾಗೆ ಹೇಳುವಂತೆ ಮನಸ್ಥಿತಿ ಸೃಷ್ಟಿಯಾಗಲಿದೆ. ಈ ಎಲ್ಲ ಕಾರಣದಿಂದ ನಿಮಗೆ ಇರುವ ಗೌರವ- ಮರ್ಯಾದೆಗಳನ್ನು ಕಳೆದುಕೊಳ್ಳುವಂತಾಗುತ್ತದೆ.
ದುರ್ಗಾ ಸೂಕ್ತ, ದುರ್ಗಾ ಸುಳಾದಿ ಶ್ರವಣ- ಪಠಣವನ್ನು ಮಾಡಿ. ಸಾಧ್ಯವಿದ್ದಲ್ಲಿ ದುರ್ಗಾವನ್ನು ಹೋಮವನ್ನು ಮಾಡಿಕೊಳ್ಳಿ. ಗಣಪತಿ ದೇವರ ಆರಾಧನೆಯನ್ನು ಮಾಡಿ.
ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Sat, 29 March 25