Numerology Prediction: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 6ರಿಂದ 12ರ ತನಕ ವಾರಭವಿಷ್ಯ
ಸಂಖ್ಯಾಶಾಸ್ತ್ರವು ಪ್ರತಿ ವ್ಯಕ್ತಿತ್ವದ ತಿರುಳನ್ನು ಕಂಡುಹಿಡಿಯುವುದರ ಮೇಲೆ ಒತ್ತು ನೀಡುವ ಒಂದು ಹಳೆಯ ಅಧ್ಯಯನ ಪದ್ಧತಿಯಾಗಿದೆ. ಇದು ನಿಮ್ಮ ಜೀವನದ ಉದ್ದೇಶಗಳನ್ನು ಹಾಗೂ ನೀವು ಎದುರಿಸಬಹುದಾದ ಸಮಸ್ಯೆಗಳು, ತೊಡಕುಗಳು ಮತ್ತು ಅವಕಾಶಗಳನ್ನು ಸೂಚಿಸಲು ಸಹಾಯ ಮಾಡುತ್ತದೆ. ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 6ರಿಂದ 12ರ ತನಕ ವಾರಭವಿಷ್ಯ ಹೇಗಿದೆ ಎಂಬ ಕುರಿತು ಮಾಹಿತಿ ಇಲ್ಲಿದೆ.

Weekly Numerology Prediction: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 6ರಿಂದ 12ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಶ್ಚಿತವಾದ ಆದಾಯ ಬರುವುದಕ್ಕೆ ಏನು ಮಾಡಬೇಕೋ ಅವೆಲ್ಲವನ್ನೂ ನಿಮ್ಮ ಸಾಮರ್ಥ್ಯವನ್ನು ಮೀರಿ ಮಾಡುವುದಕ್ಕೆ ಪ್ರಯತ್ನವನ್ನು ಶುರು ಮಾಎಲಿದ್ದೀರಿ. ಅದಕ್ಕಾಗಿಯೇ ಹೂಡಿಕೆ ವಿಚಾರದಲ್ಲಿ ತುಂಬ ಮುಖ್ಯ ಎನಿಸುವಂಥ ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದೀರಿ. ಇದರ ಜೊತೆಗೆ ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ನೀವು ಅಂದುಕೊಂಡ ಬೆಳವಣಿಗೆಗಳು ಆಗಲಿವೆ. ನೀವು ನಿರೀಕ್ಷೆ ಮಾಡಿದಂತೆ ಹಣಕಾಸು ಆದಾಯ ಮೂಲಗಳು ಜಾಸ್ತಿ ಆಗಲಿವೆ. ತಾಯಿಯ ಕಡೆ ಸಂಬಂಧಿಕರ ಅನಾರೋಗ್ಯ ಚಿಂತೆಗೆ ಕಾರಣ ಆಗಲಿದೆ. ಹಳೇ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವುದು ಸೂಕ್ತ. ಅಂದರೆ ಒಟ್ಟಾರೆಯಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ. ನೀವು ಇತರರಿಂದ ಸಹಾಯ ಬಯಸುತ್ತಿದ್ದೀರಿ ಎಂದಾದಲ್ಲಿ ಕೇಳುವುದಕ್ಕೆ ಸಂಕೋಚ ಮಾಡಿಕೊಳ್ಳಬೇಡಿ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಈ ವಾರ ಮನಸ್ಸಿಗೆ ಒಪ್ಪುವಂಥ ಸಂಬಂಧಗಳು ದೊರೆಯುವ ಅವಕಾಶಗಳಿವೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಅಂದುಕೊಂಡ ಗುರಿಯನ್ನು ನಿಗದಿತವಾದ ಸಮಯಕ್ಕಿಂತ ಬೇಗನೇ ತಲುಪಲಿದ್ದೀರಿ. ವಿದೇಶಗಳಲ್ಲಿ ಉನ್ನತಾಭ್ಯಾಸಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅಗತ್ಯ ನೆರವು ದೊರೆಯಲಿದೆ. ಬ್ಯಾಂಕ್ ನಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿದ್ದಲ್ಲಿ ಅದರಲ್ಲೂ ಅನುಕೂಲ ಆಗಲಿದೆ. ಕೃಷಿಕರಿಗೆ ಏಕಾಂಗಿತನ ಕಾಡಬಹುದು. ಆದರೆ ಇದು ಖಿನ್ನತೆಗೆ ತಿರುಗದಂತೆ ನೋಡಿಕೊಳ್ಳಿ. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರದ ಬಗ್ಗೆ ಪರಾಮರ್ಶೆ ಮಾಡಲಿದ್ದೀರಿ. ಇನ್ನು ಮನೆಯಿಂದ ದೂರದಲ್ಲಿ ಇದ್ದು, ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಿರುವವರಿಗೆ ಒತ್ತಡದ ಸನ್ನಿವೇಶ ಇರಲಿದೆ. ಸಾಲವನ್ನಾದರೂ ಪಡೆದು ಕುಟುಂಬದ ಸದಸ್ಯರ ಸಲುವಾಗಿ ಕೆಲವು ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ಮಧುಮೇಹ- ರಕ್ತದೊತ್ತಡ ಈಗಾಗಲೇ ಇದ್ದಲ್ಲಿ ಆಹಾರ ಸೇವನೆ ಮಾಡುವಾಗ ನಿಮಗೆ ಅಲರ್ಜಿ ಆಗುವಂಥ ಪದಾರ್ಥಗಳಿಂದ ದೂರವಿರಿ. ವೃತ್ತಿನಿರತರಿಗೆ ಹೆಚ್ಚಾಗಿರುವ ಸ್ಪರ್ಧೆಗೆ ಸೂಕ್ತ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದೀರಿ. ಈಗ ಮಾಡುತ್ತಿರುವ ವೃತ್ತಿಯ ಜತೆಗೆ ಹೊಸ ವ್ಯವಹಾರ ಕೂಡ ಶುರು ಮಾಡಬೇಕು ಎಂದು ಆಲೋಚಿಸಲಿದ್ದೀರಿ. ಇದಕ್ಕಾಗಿ ಬೇಕಾದಂಥ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಯಾರು ಕಾರು ಅಥವಾ ಎಲೆಕ್ಟ್ರಿಕಲ್ ಸ್ಕೂಟರ್ ಖರೀದಿ ಮಾಡಬೇಕು ಎಂದಿದ್ದೀರಿ ಅದಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆ ಹಾಕಲಿದ್ದೀರಿ ಮತ್ತು ನಿಮ್ಮಲ್ಲಿ ಕೆಲವರು ಅದಕ್ಕಾಗಿ ಅಡ್ವಾನ್ಸ್ ನೀಡುವ ಸಾಧ್ಯತೆ ಕೂಡ ಇದೆ. ವಿದ್ಯಾರ್ಥಿಗಳು ನಿಮಗೆ ಇಷ್ಟವಿರುತ್ತದೋ ಇಲ್ಲವೋ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಆದರೆ ಅಂತಿಮವಾಗಿ ಇದರಿಂದ ನಿಮಗೆ ಲಾಭವಾಗಲಿದೆ. ಈ ಹಿಂದೆ ಅಭಿಪ್ರಾಯ ಭೇದಗಳು, ಜಗಳ- ಕಲಹ ಏನೇ ಆಗಿದ್ದರೂ ಅದನ್ನು ನಿವಾರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ದೈಹಿಕ ದೃಢತೆ ಕಾಪಾಡಿಕೊಳ್ಳುವ ಸಲುವಾಗಿ ಜಿಮ್, ಯೋಗ ಅಥವಾ ಇಂಥ ಯಾವುದಾದರೂ ಒಂದರಲ್ಲಿ ತೊಡಗಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಮಹಿಳೆಯರಿಗೆ ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳು ದೊರೆಯುವ ಅವಕಾಶಗಳು ಹೆಚ್ಚಿವೆ. ಕುಟುಂಬ ಸದಸ್ಯರ ಬೆಂಬಲ ಕೂಡ ನಿಮ್ಮ ಪಾಲಿಗೆ ದೊರೆಯಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮ ಸಿಕ್ಸ್ತ್ ಸೆನ್ಸ್ ಬಹಳ ಚೆನ್ನಾಗಿ ಸಲಹೆ ನೀಡಲಿದೆ. ಮೊದಮೊದಲಿಗೆ ಅನಿಸಿದ್ದನ್ನು ಜಾರಿಗೆ ತರುವುದಕ್ಕೆ ಪ್ರಯತ್ನಿಸಿದಲ್ಲಿ ಒಳ್ಳೆ ಫಲಿತಾಂಶವನ್ನು ಕಾಣಬಹುದು. ಖಾಸಗಿ ಸಂಸ್ಥೆಗಳಲ್ಲಿ ಅಡ್ಮಿನ್, ಎಚ್ಆರ್ ಅಥವಾ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವಿರೋ ಅಂಥವರು ಉದ್ಯೋಗ ಬದಲಾವಣೆಗಾಗಿ ಪ್ರಯತ್ನವನ್ನು ಮಾಡುತ್ತಿದ್ದಲ್ಲಿ ಅಂಥವರಿಗೆ ಬಹಳ ಉತ್ತಮವಾದ ಸಮಯ ಇದು. ಈಗಾಗಲೇ ಉಳಿತಾಯ ಮಾಡಿದಂಥ ಹಣವನ್ನು ತೆಗೆದು, ಬೇರೆ ಕಡೆಗೆ ಹೂಡಿಕೆ ಮಾಡಲಿದ್ದೀರಿ. ಯಾರು ವೃತ್ತಿಪರರು ಇದ್ದೀರೋ ಅಂಥವರಿಗೆ ಹೊಸದಾಗಿ ದೊಡ್ಡ ಸಂಸ್ಥೆಗಳ ಜತೆಗೆ ಕೆಲಸಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಬಹುದು. ಈ ವಾರದಲ್ಲಿ ನಿಮ್ಮ ಸ್ನೇಹಿತರು ತರುವಂಥ ರೆಫರೆನ್ಸ್ ಗಳ ಬಗ್ಗೆ ಗಂಭೀರವಾಗಿ ಪರಿಗಣಿಸುವುದು ಒಳ್ಳೆಯದು. ಇದರಿಂದ ನಿಮಗೆ ಆದಾಯ ಅಥವಾ ಲಾಭ ಹೆಚ್ಚಳ ಆಗಲಿದೆ. ಜಠರಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಈಗಾಗಲೇ ಇದೆ ಎಂದಾದಲ್ಲಿ ಅದು ಉಲ್ಬಣಿಸಬಹುದು ಅಥವಾ ಜಾಂಡೀಸ್ ಕಾಣಿಸಿಕೊಳ್ಳಬಹುದು. ನಿಮ್ಮಲ್ಲಿ ಕೆಲವರು ಮನೆಗೆ ಟೀವಿ, ಸೋಫಾ, ಗೃಹೋಪಯೋಗಿ ವಸ್ತುಗಳು ಮೊದಲಾದ ವಸ್ತುಗಳನ್ನು ಖರೀದಿಸಿ ತರಬೇಕು ಎಂಬ ಉದ್ದೇಶ ಏನಾದರೂ ಇದ್ದಲ್ಲಿ ಈ ವಾರ ಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಸಮರ್ಪಣಾ ಭಾವಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ. ನಿಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದವರು ಬೆರಗುಗಣ್ಣಿನಿಂದ ನೋಡುವಂತಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಅಲ್ಪ ಕಾಲಕ್ಕಾದರೂ ಉದ್ಯೋಗ ನಿಮಿತ್ತವಾಗಿ ವಿದೇಶಕ್ಕೆ ತೆರಳುವಂಥ ಅವಕಾಶ ಬರಬಹುದು. ಕೃಷಿಕರು ಮನೆಗೆ ರಾಸುಗಳನ್ನು ಖರೀದಿಸಿ ತರುವಂಥ ಯೋಗ ಇದೆ. ಯಾರು ಈಗಾಗಲೇ ಡೇರಿ ವ್ಯವಹಾರಗಳನ್ನು ಮಾಡುತ್ತಾ ಇರುವವರು ಅದರ ವಿಸ್ತರಣೆಗಾಗಿ ಹೂಡಿಕೆಯನ್ನು ಮಾಡಲಿದ್ದೀರಿ. ಹಣ್ಣು- ಹೂವಿನ ಬೆಳೆಯನ್ನು ಬೆಳೆಯುವಂಥವರಿಗೆ ಆದಾಯವು ಹೆಚ್ಚಾಗಲಿದೆ. ಕೃಷಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿರುವಂಥವರು, ಅಂಥ ವಿಚಾರಗಳಿಗೆ ಇರುವಂಥ ಸೋಷಿಯಲ್ ಮೀಡಿಯಾ ಪೇಜ್ ನಿರ್ವಹಣೆ ಮಾಡುವಂಥವರಿಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ಮಾತುಗಳನ್ನು ಕೇಳಿಸಿಕೊಳ್ಳಲಿದ್ದೀರಿ. ವೃತ್ತಿನಿರತರು ಸೋಷಿಯಲ್ ಕಾಂಟ್ಯಾಕ್ಟ್ ಗಳನ್ನು ಹೆಚ್ಚು ಮಾಡಿಕೊಳ್ಳಲಿದ್ದೀರಿ. ಪಾರ್ಟಿ ಹಾಗೂ ಗೆಟ್ ಟು ಗೆದರ್ ಗಳಲ್ಲಿ ಭಾಗವಹಿಸಲಿದ್ದು, ಅಲ್ಲಿ ಹೊಸದಾಗಿ ಪರಿಚಯ ಆದವರು ನಿಮ್ಮ ವೃತ್ತಿಗೆ ಅನುಕೂಲ ಆಗುವಂಥ ಸಹಾಯ ಮಾಡಲಿದ್ದಾರೆ. ರಿಸ್ಕ್ ಇರುವಂಥ ಕೆಲಸವನ್ನು ಧೈರ್ಯ ಮಾಡಿ, ಮುಗಿಸಲಿದ್ದೀರಿ. ವಿದ್ಯಾರ್ಥಿಗಳು ಗುರು ಗ್ರಹದ ಆರಾಧನೆಯನ್ನು ಮಾಡಿದಲ್ಲಿ ನೆನಪಿನ ಶಕ್ತಿ ವೃದ್ಧಿ ಆಗಲಿದೆ. ಇನ್ನು ಹಳದಿ ಬಣ್ಣದ ತುಂಡು ಬಟ್ಟೆಯೊಂದನ್ನು ನಿಮ್ಮ ಬಳಿ ಇರಿಸಿಕೊಳ್ಳುವುದು ಸಹ ಉತ್ತಮ ಫಲಿತಾಂಶವನ್ನು ನೀಡಲಿದೆ. ಮಹಿಳೆಯರು ತೀರ್ಥಕ್ಷೇತ್ರಗಳ ದರ್ಶನ ಮಾಡುವಂಥ ಯೋಗ ಇದೆ. ಸಂಬಂಧಿಕರ ಜತೆಗೂಡಿ ತೆರಳಬಹುದು. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಪದೋನ್ನತಿ ಆಗಬಹುದು. ಮತ್ತು ಅರೆಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಉದ್ಯೋಗ ಕಾಯಂ ಆಗಬಹುದು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಕೆಲವು ಅಹಿತಕರವಾದ ಹಾಗೂ ಆತಂಕ ಹುಟ್ಟಿಸುವಂಥ ಸುದ್ದಿ ಕಿವಿಗೆ ಬೀಳುವಂತಾಗುತ್ತದೆ. ಯಾರನ್ನು ಬಹಳ ಧೈರ್ಯವಂತರು ಅಂದುಕೊಂಡಿರುತ್ತೀರೋ ಅಂಥವರೇ ಕೆಲವು ವಿಪರೀತದ ತೀರ್ಮಾನಗಳನ್ನು ತೆಗೆದುಕೊಳ್ಳುವುದರಿಂದ ಹೀಗೆ ಅನಿಸಲಿದೆ. ಇನ್ನು ಆಸ್ತಿ ಮಾರಾಟಕ್ಕೆ ಅಂತ ಇಟ್ಟವರಿಗೆ ಗೊಂದಲ ಶುರುವಾಗುತ್ತದೆ. ಸ್ನೇಹಿತರು- ಸಂಬಂಧಿಕರಿಗೆ ನಿಮ್ಮ ಪರಿಸ್ಥಿತಿ ಅರ್ಥವೇ ಆಗುತ್ತಿಲ್ಲ ಎಂದು ಪೇಚಾಡಿಕೊಳ್ಳುವಂತಾಗುತ್ತದೆ. ಇನ್ನು ಈ ಹಿಂದಿನ ವಾರಗಳಲ್ಲಿ ಮದುವೆಗಾಗಿ ವಧು ಅಥವಾ ವರ ನೋಡಿಕೊಂಡು ಬಂದಿದ್ದಲ್ಲಿ ಆ ಸಂಬಂಧ ಮುಂದುವರಿಸುವುದಕ್ಕೆ ಸಂಬಂಧಿಸಿದಂತೆ ಉತ್ತಮ ಬೆಳವಣಿಗೆಗಳನ್ನು ನಿರೀಕ್ಷೆ ಮಾಡಬಹುದು. ವಿದೇಶಗಳಿಗೆ ತೆರಳುವಂಥ ಅವಕಾಶ ನಿಮ್ಮಲ್ಲಿ ಕೆಲವರಿಗೆ ದೊರೆಯುವ ಸುಳಿವು ಸಿಗಲಿದೆ. ಅಥವಾ ಈ ಹಿಂದೆಯೇ ಪ್ರಯತ್ನ ಮಾಡಿದ್ದಿರಿ, ನಾನಾ ಕಾರಣಗಳಿಗೆ ಆ ಬಗ್ಗೆ ಅಲ್ಲಿಂದ ಯಾವುದೇ ಬೆಳವಣಿಗೆ ಆಗಿರಲಿಲ್ಲ ಎಂದಾದಲ್ಲಿ ಈ ವಾರ ನಿಮಗೆ ಅಪ್ ಡೇಟ್ ಸಿಗಲಿದೆ. ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಏನಾದರೂ ಕಾಡುತ್ತಿದ್ದಲ್ಲಿ ಅದರ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ. ಒಂದು ವೇಳೆ ಈಗಾಗಲೇ ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದೀರಿ ಅಂತಾದಲ್ಲಿ ಬೇರೆ ವೈದ್ಯರ ಬಳಿ ಹೋಗುವುದಕ್ಕೋ ಅಥವಾ ಈಗ ಪಡೆಯುತ್ತಿರುವ ಔಷಧ ಪದ್ಧತಿಯನ್ನು ಬದಲಾಯಿಸುವುದಕ್ಕೋ ಹೋಗಬೇಡಿ. ಒಂದು ವೇಳೆ ನೀವು ಹಾಗೇನಾದರೂ ಮಾಡಿದಲ್ಲಿ ಅಲರ್ಜಿಗಳಾಗಬಹುದು, ಜಾಗ್ರತೆಯಿಂದ ಇರುವುದು ಒಳ್ಳೆಯದು. ಕೃಷಿ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂಥ ಸಮಯ. ಇದಕ್ಕಾಗಿ ಹಣ, ಸಮಯ ಮೀಸಲಿಡಲಿದ್ದೀರಿ. ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವಂಥ ಯೋಗ ಇದೆ. ಇದಕ್ಕಾಗಿ ಬ್ಯಾಂಕ್ ಅಥವಾ ಸಹಕಾರ ಸಂಘಗಳಿಂದ ಸಾಲ ಪಡೆದುಕೊಳ್ಳುವಂಥ ಸಾಧ್ಯತೆ ಇದೆ. ನಿಮ್ಮ ಪ್ರಯತ್ನಕ್ಕೆ ಪ್ರಭಾವಿಗಳ ಶಿಫಾರಸು ಸಹ ದೊರೆಯಲಿದೆ. ವೃತ್ತಿ ನಿರತರಿಗೆ ನಿಮ್ಮ ಆತ್ಮವಿಶ್ವಾಸವೇ ಕಡಿಮೆ ಆಗುವಂಥ ಬೆಳವಣಿಗೆಗಳು ಆಗಬಹುದು. ಬ್ಯಾಂಕ್ ವ್ಯವಹಾರಗಳಲ್ಲಿ ಕೆಲವು ತಪ್ಪುಗಳಾಗಿ, ಇತರರಿಂದ ಬೈಗುಳವನ್ನು ಕೇಳಬೇಕಾಗುತ್ತದೆ. ಇತರರಿಂದ ಆರ್ಡರ್ ಪಡೆದು, ಕೆಲಸ ಮಾಡಿಕೊಡುತ್ತಿರುವವರಿಗೆ ಹೇಳಿದ ಸಮಯಕ್ಕೆ ಕೆಲಸ ಮುಗಿಸುವುದು ಅಸಾಧ್ಯವಾಗುತ್ತದೆ. ಜತೆಯಲ್ಲಿ ಕೆಲಸ ಮಾಡುವವರು, ನಿಮಗಿಂತ ಮೇಲಿನ ಹಂತದಲ್ಲಿ ಇರುವವರು ತಾವು ತಪ್ಪು ಮಾಡಿ, ನಿಮ್ಮ ಕೆಲಸದಲ್ಲೇ ಏನೋ ಲೋಪ ಇದೆ ಎಂಬಂತೆ ಗಾಬರಿ ಹುಟ್ಟಿಸಬಹುದು. ಬಿಡುವಿಲ್ಲದಷ್ಟು ಕೆಲಸ ಇರುತ್ತದೆ. ಕುಟುಂಬ ಸದಸ್ಯರ ಜತೆಗೆ ಸ್ವಲ್ಪ ಸಮಯ ಕಳೆಯೋಣ ಅಂದುಕೊಂಡರೂ ಸಾಧ್ಯ ಇರದ ಮಟ್ಟಿಗೆ ನಿಮ್ಮ ಹೆಗಲ ಮೇಲೆ ಕೆಲಸಗಳು ಬೀಳುತ್ತವೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಉತ್ತಮ ಅಂಕ, ಸ್ನೇಹಿತರ ಮಧ್ಯೆ ನಿಮ್ಮ ಬಗ್ಗೆ ಉತ್ತಮವಾದ ಗೌರವ ದೊರೆಯಲಿದೆ. ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಇರುವಂಥವರಿಗೆ ಹೆಚ್ಚಿನ ಹುದ್ದೆ, ಜವಾಬ್ದಾರಿಗಳು ದೊರೆಯಲಿವೆ. ಅನಿರೀಕ್ಷಿತವಾಗಿ ದೊಡ್ಡ ಮೊತ್ತ ಸಹ ನಿಮ್ಮ ಕೈ ಸೇರುವಂತಹ ಯೋಗ ಕಂಡು ಬಡುತ್ತಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮಲ್ಲಿ ಕೆಲವರು ಹಿಲ್ ಸ್ಟೇಷನ್, ನದಿ- ಸಮುದ್ರಗಳು ಇರುವಂಥ ಸ್ಥಳಗಳಿಗೆ ಪ್ರವಾಸಕ್ಕೆ ತೆರಳುವ ಯೋಗ ಇದೆ. ಇನ್ನು ಈ ವಾರ ನಿಮ್ಮ ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳುವುದಕ್ಕೆ ಮಾರ್ಗ ಗೋಚರಿಸುತ್ತದೆ. ಮದುವೆ, ಮಕ್ಕಳ ಶಿಕ್ಷಣ, ಮನೆ ನಿರ್ಮಾಣ ಸೇರಿದಂತೆ ಯಾವುದಾದರೂ ಒಳ್ಳೆ ಉದ್ದೇಶಗಳಿಗೆ ಹಣಕಾಸನ್ನು ಹೊಂದಿಸುವುದು ನಿಮಗೆ ಮುಖ್ಯವಾಗುತ್ತದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕಾಗಿ ತೀವ್ರವಾದ ಪ್ರಯತ್ನ ಮಾಡುವ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರು ಪ್ರಭಾವಿಗಳ ನೆರವನ್ನು ಸಹ ಪಡೆಯುವ ಬಗ್ಗೆ ಆಲೋಚನೆಯನ್ನು ಮಾಡುತ್ತೀರಿ. ನಿಮ್ಮಲ್ಲಿ ಕೆಲವರಿಗೆ ನೀವು ಖರೀದಿ ಮಾಡಬೇಕು ಎಂದಿದ್ದ ಸೈಟು ಅಥವಾ ಸೆಕೆಂಡ್ ಹ್ಯಾಂಡ್ ವಾಹನವನ್ನೇ ನಿಮಗೆ ಆಪ್ತರಾದವರು ಅಥವಾ ಸ್ನೇಹಿತರಾದವರೂ ಕೊಳ್ಳಬೇಕು ಎಂದು ಪ್ರಯತ್ನ ಮಾಡುತ್ತಿರುವುದು ಗೊತ್ತಾಗುತ್ತದೆ. ಈ ಕಾರಣಕ್ಕೆ ಸಣ್ಣ ಮಟ್ಟದ ಅಸಮಾಧಾನ ಉದ್ಭವಿಸುವ ಸಾಧ್ಯತೆಗಳಿವೆ. ಯಾವುದೇ ವಿಚಾರವಾದರೂ ಸರಿ, ಮುಕ್ತವಾಗಿ ಮಾತನಾಡುವುದು ಮುಖ್ಯವಾಗುತ್ತದೆ. ಇನ್ನು ಹೂಡಿಕೆ ಮಾಡಬೇಕು ಎಂದಿರುವವರು ಯಾವುದೇ ಕಾರಣಕ್ಕೂ ನಿಮ್ಮ ಬಳಿ ಇರುವ ಬಜೆಟ್ ಮೀರಿ ಪ್ರಯತ್ನ ಮಾಡುವುದಕ್ಕೆ ಹೋಗಬೇಡಿ. ಕುಟುಂಬ ಸದಸ್ಯರು, ಸಂಗಾತಿ ನೀಡುವಂಥ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಕೃಷಿಕರಾಗಿರುವವರಿಗೆ ನೀವಾಗಿಯೇ ಒಪ್ಪಿಕೊಂಡ ಜವಾಬ್ದಾರಿಯೊಂದನ್ನು ಯಾಕಾದರೂ ಒಪ್ಪಿಕೊಂಡೆನೋ ಎಂಬಂಥ ಸನ್ನಿವೇಶವನ್ನು ತಂದಿಡಲಿದೆ. ಗೊಂದಲ ಮೂಡಿಸುತ್ತಿದೆ ಎಂಬ ಕಾರಣಕ್ಕೆ ಸಮಜಾಯಿಷಿಯನ್ನು ನೀಡುವ ಸಲುವಾಗಿ ನೀವು ಮಾತನಾಡಿದಲ್ಲಿ ಅಹಂಕಾರಿ ಅಂತಲೂ ಅಥವಾ ಮಾತನಾಡದೆ ಸುಮ್ಮನಿದ್ದರೆ ನಿಮಗೆ ಬೇಜವಾಬ್ದಾರಿ ಅಂತಲೂ ಹಣೆಪಟ್ಟಿ ಕಟ್ಟುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ವಿಚಾರದಲ್ಲೂ ಸನ್ನಿವೇಶವನ್ನು ಗಮನಿಸಿ, ಏನು ಮಾಡಬೇಕು ಎಂಬುದನ್ನು ನಿರ್ಧರಿಸಿ. ವೃತ್ತಿನಿರತರಾದವರಿಗೆ ನೀವಾಗಿಯೇ ಮಾಡಿಕೊಂಡ ಕೆಲವು ಕಟ್ಟುಪಾಡುಗಳನ್ನು ಮುರಿಯುವುದು ಅನಿವಾರ್ಯ ಎಂಬಂತಾಗುತ್ತದೆ. ಜೊತೆಗೆ ಈ ಹಿಂದೆ ಯಾವಾಗಲೋ ನಿಮ್ಮಿಂದ ಆದ ತಪ್ಪಿಗೆ ಒಂದೋ ದೂಷಣೆಗೆ ಗುರಿಯಾಗಬೇಕಾಗುತ್ತದೆ ಅಥವಾ ದಂಡವನ್ನು ತೆರಬೇಕಾಗುತ್ತದೆ. ಹೂಡಿಕೆ ಮಾಡಿ, ಅದು ನಷ್ಟದಲ್ಲಿದೆ ಎಂಬ ಕಾರಣಕ್ಕೆ ಬಹುತೇಕ ಮರೆತೇ ಹೋಗಿದ್ದಂತಹ ಇನ್ವೆಸ್ಟ್ ಮೆಂಟ್ ನೀವು ಅಂದುಕೊಂಡಂತೆ ಅಸಲಿಗಾದರೂ ಅಥವಾ ಅಸಲಿಗೆ ಸ್ವಲ್ಪ ಕಡಿಮೆಯಾದರೂ ಮೊತ್ತ ಸಿಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆಗಳು ಈಗಾಗಲೇ ಇದ್ದಲ್ಲಿ ಸೂಕ್ತ ವೈದ್ಯೋಪಚಾರಗಳಿಗೆ ಮಾರ್ಗದರ್ಶನ ದೊರೆಯಲಿದೆ. ಶತ್ರುಗಳನ್ನು ಎದುರಿಸುವ ನಿಮ್ಮ ಸಾಮರ್ಥ್ಯ ಹೆಚ್ಚಾಗಲಿದೆ. ವ್ಯಾಸಂಗಕ್ಕೆ ಸಹಾಯ ಆಗುತ್ತದೆ ಎಂಬ ಕಾರಣಕ್ಕೆ ವಾಹನ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಅನುಕೂಲವಿದೆ. ಇನ್ನು ಹೊಸದಾಗಿ ಆಗುವ ಸ್ನೇಹಿತೆಯರು- ಸ್ನೇಹಿತರಿಂದ ನಿಮ್ಮ ಓದಿಗೂ ದೊಡ್ಡ ಮಟ್ಟದಲ್ಲಿ ಸಹಾಯ ದೊರೆಯಲಿದೆ. ಮಹಿಳೆಯರಿಗೆ ಉಷ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಲಿವೆ. ಮನಸ್ಸಿಗೆ ಬೇಸರ, ಖಿನ್ನತೆ ಕಾಡಲಿದೆ. ಮನೆಯಲ್ಲಿ ಮಿಕ್ಸಿ, ಮೈಕ್ರೋವೇವ್ ಓವನ್, ಎಲೆಕ್ಟ್ರಿಕಲ್ ಸ್ಟೌ- ಕುಕ್ಕರ್ ಇತ್ಯಾದಿಗಳನ್ನು ಬಳಸುವಾಗ ಸಾಮಾನ್ಯವಾಗಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ವಿದ್ಯುತ್ ಅವಘಡಗಳು ಸಂಭವಿಸಬಹುದು, ಜಾಗ್ರತೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಯಾರಿಗೇ ಆಗಲಿ ಎದ್ದುಬಿದ್ದು ಸಹಾಯ ಮಾಡುವುದಕ್ಕೆ ಹೋಗಬಾರದು ಎಂಬ ನಿಲುವು ನಿಮ್ಮದಾಗಲಿದೆ. ಅಗತ್ಯ ಇರುವವರು ತಾವಾಗಿಯೇ ಬರಲಿ ಎಂಬ ಧೋರಣೆ ಈ ವಾರ ನಿಮ್ಮಲ್ಲಿ ಇರಲಿದೆ. ಅದು ಹಣಕಾಸಿನ ವಿಚಾರ ಇರಬಹುದು, ಉದ್ಯಮ- ವ್ಯಾಪಾರ- ವ್ಯವಹಾರ, ಉದ್ಯೋಗ ಇರಬಹುದು. ಒಟ್ಟಿನಲ್ಲಿ ಅಗತ್ಯ ಇರುವವರು ತಾವಾಗಿ ಬರಲಿ ಎಂದುಕೊಳ್ಳುತ್ತೀರಿ. ಮನೆ ನಿರ್ಮಾಣಕ್ಕೆ ಆಲೋಚನೆ ಮಾಡುತ್ತಿರುವವರು ಇದರ ಸಲುವಾಗಿಯೇ ಉಳಿತಾಯದ ಹಣವನ್ನು ವಾಪಸ್ ಪಡೆಯುವುದಕ್ಕೆ ಅಂತ ಕುಟುಂಬದ ಸದಸ್ಯರು, ಸ್ನೇಹಿತರೊಡೆ ಚರ್ಚೆ ಮಾಡಲಿದ್ದೀರಿ. ನೆನಪಿಡಿ, ಇದು ಈಗಾಗಲೇ ಸೈಟು ಇದೆ ಅನ್ನುವವರಿಗೆ ಅನ್ವಯ ಆಗುವಂಥ ವಿಷಯವಾಗಿದೆ. ಸರ್ಕಾರಕ್ಕೆ ಸಲ್ಲಿಸಬೇಕಾದ ಮಾಹಿತಿಗಳನ್ನು ಒಂದಕ್ಕೆ ನಾಲ್ಕು ಬಾರಿ ಎಂಬಂತೆ ಪರಿಶೀಲನೆ ನಡೆಸಿ, ಆ ನಂತರ ಮುಂದುವರಿಯುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಯಾವುದಾದರೂ ಮುಖ್ಯ ಮಾಹಿತಿಯೇ ಬಿಟ್ಟುಹೋಗಿ, ಆ ನಂತರ ಚಿಂತೆ ಮಾಡುವಂತೆ ಆಗುತ್ತದೆ. ನಿಮ್ಮ ಸ್ವಂತ ಊರಿನಿಂದ ದೂರ ಇದ್ದು ಕೆಲಸ ಮಾಡುತ್ತಿರುವವರಿಗೆ ಕುಟುಂಬದಲ್ಲಿನ ಕೆಲವು ಬದಲಾವಣೆಗಳು ಅಚ್ಚರಿ ಹಾಗೂ ಆತಂಕ ಎರಡೂ ಉಂಟು ಮಾಡುತ್ತದೆ. ಚೀಟಿಯಲ್ಲಿ ಹಣ ಹಾಕುತ್ತಿರುವವರು, ಅದನ್ನು ತೆಗೆದುಕೊಂಡಿಲ್ಲ ಅಂತಾದಲ್ಲಿ ಹಿಂತೆಗೆದುಕೊಳ್ಳುವ ಬಗ್ಗೆ ಆಲೋಚಿಸುತ್ತೀರಿ. ಕೃಷಿಕರಿಗೆ ಬಹುಕಾಲದ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳುವ ವಾರ ಇದಾಗಿರುತ್ತದೆ. ಭೂಮಿ ಅಥವಾ ಜಾನುವಾರು ಖರೀದಿ ಮಾಡುವಂತೆ ಕೆಲವರು ಕೇಳಿಕೊಳ್ಳಬಹುದು. ಅನಿರೀಕ್ಷಿತವಾಗಿ ಹಣಕಾಸಿನ ಅನುಕೂಲ ಒದಗಿಬಂದು, ಖರೀದಿ ಮಾಡಿಯೂ ಬಿಡುವಂಥ ಯೋಗಗಳಿವೆ. ಆಹಾರ ಪಥ್ಯದ ವಿಚಾರದಲ್ಲಿ ಮಾಮೂಲಿಗಿಂತ ಹೆಚ್ಚು ಜಾಗ್ರತೆ ವಹಿಸುವುದು ಮುಖ್ಯ, ಇಲ್ಲದಿದ್ದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದೇ ರೀತಿ ನೀರಿಗೆ ಸಂಬಂಧಿಸಿದಂತೆಯೂ ಅಗತ್ಯವಾದ ಮುಂಜಾಗ್ರತೆಯನ್ನು ತೆಗೆದುಕೊಳ್ಳಿ. ವೃತ್ತಿನಿರತರಿಗೆ ತಾಂತ್ರಿಕ ಜ್ಞಾನವನ್ನು ಇತರರು ಬೆರಗಿನಿಂದ ನೋಡುವಂತಾಗುತ್ತದೆ. ಉದ್ಯೋಗದ ನಿಮಿತ್ತವಾಗಿ ಕೆಲ ಕಾಲ ದೂರ ಪ್ರದೇಶಗಳಿಗೆ ತೆರಳುವಂತೆ ಸೂಚಿಸುವ ಸಾಧ್ಯತೆಗಳು ಹೆಚ್ಚಿವೆ. ಸಂಗಾತಿಗೆ ಬರುವ ಅನುಕೂಲದ ಬಹುಪಾಲು ಪ್ರಯೋಜನ ನಿಮಗೇ ಆಗಲಿದೆ. ನಿಮ್ಮ ವೃತ್ತಿಗೆ ಸಂಬಂಧಿಸಿದ ಸಂಘ- ಸಂಸ್ಥೆಗಳಲ್ಲಿ ಸ್ಥಾನ- ಮಾನಗಳು ಈಗಾಗದಲೇ ಇದ್ದಲ್ಲಿ ಪದೋನ್ನತಿ ಆಗಬಹುದು. ಕಂಪನಿಗಳಲ್ಲಿ ಷೇರು, ಲಾಭದ ಪಾಲು ಇತ್ಯಾದಿ ದೊರೆಯುವಂತಾಗುತ್ತದೆ. ಈ ಹಿಂದೆ ನೀವು ಆರಂಭಿಸಿದ್ದ ವ್ಯವಹಾರ, ಮಾಡಿದ್ದ ಹೂಡಿಕೆ, ಪಟ್ಟ ಶ್ರಮ ಫಲ ನೀಡುವುದಕ್ಕೆ ಆರಂಭಿಸುತ್ತದೆ. ವಿದೇಶ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ವಿದ್ಯಾರ್ಥಿಗಳು ಗ್ಯಾಜೆಟ್ ಗಳನ್ನು ಖರೀದಿಸುವಂಥ ಯೋಗ ಇದೆ. ಮಹಿಳೆಯರಿಗೆ ನಿಮಗೆ ಹಲವು ಬಗೆಯಲ್ಲಿ ಲಾಭ ದೊರೆಯುವಂತಹ ಸಾಧ್ಯತೆಗಳನ್ನು ಸೂಚಿಸುತ್ತಿದೆ. ಇಷ್ಟು ಸಮಯ ನೀವು ಪಟ್ಟ ಶ್ರಮಕ್ಕೆ ಫಲಿತಾಂಶ ದೊರೆಯುವುದಕ್ಕೆ ಶುರು ಆಗುತ್ತದೆ. ನಿಮ್ಮದೇ ವೃತ್ತಿಯಲ್ಲಿ ಇರುವಂಥವರು ಪ್ರತಿಭೆಯನ್ನು ಮೆಚ್ಚಿಕೊಳ್ಳಲಿದ್ದಾರೆ. ಅನಿರೀಕ್ಷಿತವಾಗಿ ಆದಾಯದ ಮೂಲಗಳಲ್ಲಿ ಜಾಸ್ತಿ ಆಗಲಿದೆ. ಈ ಅವಧಿಯಲ್ಲಿ ಸಾಂಸಾರಿಕವಾಗಿಯೂ ನೆಮ್ಮದಿ, ಶಾಂತಿ ನೆಲೆಸಿರುತ್ತದೆ. ಈ ಕಾರಣಕ್ಕೆ ಇತರ ಕೆಲಸಗಳನ್ನು ಹೆಚ್ಚು ಆಸಕ್ತಿ, ಪರಿಣಾಮಕಾರಿಯಾಗಿ ಮಾಡಬಹುದು.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಭಾರೀ ಆತ್ಮವಿಶ್ವಾಸದಿಂದ ನೀವಾಡಿದ್ದ ಮಾತುಗಳು ಹಾಗೂ ನೀಡಿದ್ದ ಭರವಸೆಯಿಂದ ಸಮಸ್ಯೆಗಳನ್ನು ಎದುರಿಸಬೇಕಾಗಲಿದೆ. ಹಣ ಅಥವಾ ಮನೆಯ ವಿಚಾರಕ್ಕೆ ನಿಮ್ಮ ಮಾತನ್ನು ನಂಬಿ, ಒಪ್ಪಿದ್ದೇ ತಪ್ಪಾಯಿತು ಎನ್ನಬಹುದು. ಇನ್ನು ನಿಮ್ಮ ನಿರ್ಧಾರಕ್ಕೆ ಕುಟುಂಬ ಸದಸ್ಯರು, ಸಂಬಂಧಿಕರು ಆಕ್ಷೇಪ ವ್ಯಕ್ತಪಡಿಸಬಹುದು. ಏಕೆಂದರೆ ನೀವು ಈ ಹಿಂದೆ ಹೂಡಿಕೆ ಮಾಡಿದ್ದ ಹಣವು ಅಂದುಕೊಂಡಂಥ ರಿಟರ್ನ್ ನೀಡುವುದಿಲ್ಲ ಎಂಬ ಸಂಗತಿ ಆತಂಕಕ್ಕೆ ಕಾರಣವಾಗಲಿದೆ. ಬೇರೆ ಸ್ಥಳ ತೆಗೆದುಕೊಳ್ಳೋಣ ಎಂದುಕೊಂಡು, ನೀವೇನಾದರೂ ಒಂದು ವೇಳೆ ಸೈಟು, ಮನೆ ಅಥವಾ ಅಪಾರ್ಟ್ ಮೆಂಟ್ ಮಾರಾಟಕ್ಕೆ ಇಟ್ಟಿದ್ದಲ್ಲಿ ಹಿನ್ನಡೆ ಅನುಭವಿಸುವಂತಾಗುತ್ತದೆ. ಈ ಹಿಂದೆ ನಿಮಗೆ ಸಹಾಯ ಮಾಡಿದ್ದವರು ಈಗ ನಿಮ್ಮಿಂದ ಸಹಾಯ ಕೇಳಿಕೊಂಡು ಬರಲಿದ್ದು, ಇದರಿಂದ ಒತ್ತಡ ಹೆಚ್ಚಾಗಲಿದೆ. ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ, ಪರವಾನಗಿ ಮೊತ್ತ, ದಂಡ ಶುಲ್ಕ ಹೀಗೆ ಯಾವುದೇ ಬಾಕಿ ಇದ್ದರೂ ಈ ವಾರ ಸರಿಯಾಗಿ ಗಮನಿಸಿಕೊಂಡು, ಪಾವತಿ ಮಾಡುವುದು ಉತ್ತಮ. ಇಲ್ಲದಿದ್ದರೆ ಸಮಸ್ಯೆಗೆ ಸಿಲುಕಿಕೊಳ್ಳುವಂತಾಗುತ್ತದೆ. ಕೃಷಿಕರಾಗಿರುವವರು ಈ ವಾರ ಪಟ್ಟು ಹಿಡಿದು ಕೆಲಸಗಳನ್ನು ಮಾಡಿಸಲಿದ್ದೀರಿ. ಅದು ಯಾವುದೇ ಕಾರ್ಯ ಇರಬಹುದು ಅಥವಾ ಸರ್ಕಾರಕ್ಕೆ ಸಂಬಂಧಪಟ್ಟಂತಹ ವಿಚಾರಗಳಿರಬಹುದು. ಇನ್ನು ಯಾವುದೇ ವಿಷಯ ಅಥವಾ ವಿಚಾರ ಇರಲಿ, ಗಡುವಿನ ತನಕ ಕಾಯುವುದಕ್ಕೆ ಹೋಗಬೇಡಿ. ಅದೇ ರೀತಿ ನಿಮ್ಮಲ್ಲಿ ಕೆಲವರಿಗೆ ಮಕ್ಕಳ ಶಿಕ್ಷಣದ ವಿಚಾರಕ್ಕೆ ಸ್ವಲ್ಪ ಮಟ್ಟಿಗೆ ಆತಂಕಕ್ಕೆ ಕಾರಣ ಆಗಬಹುದು. ಈಗ ಹೋಗುತ್ತಿರುವ ಶಿಕ್ಷಣ ಸಂಸ್ಥೆಯಿಂದ ಬದಲಾವಣೆ ಮಾಡುವುದಕ್ಕೆ ತುಂಬಾ ಗಟ್ಟಿಯಾಗಿ ನಿರ್ಧಾರ ಮಾಡುವ ಸಾಧ್ಯತೆಗಳಿವೆ. ಅದನ್ನು ಹೊರತುಪಡಿಸಿದರೆ ಯಾರು ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಅಂತಹವರಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಮನೆಯಿಂದ ಹೊರಡುವ ಮೊದಲಿಗೆ ಮನಸ್ಸಿನಲ್ಲಿ ಧರ್ಮಸ್ಥಳದ ಮಂಜುನಾಥನನ್ನು ಸ್ಮರಿಸಿಕೊಳ್ಳಿ. ವೃತ್ತಿನಿರತರಿಗೆ ಈ ಹಿಂದೆ ನೀವೇ ಆಡಿದಂಥ ಮಾತುಗಳನ್ನು ಎತ್ತಾಡಿ, ಮನಸ್ಸಿಗೆ ನೋವು ಮಾಡುವವರ ಸಂಖ್ಯೆ ಈ ದಿನ ಜಾಸ್ತಿ ಇರಲಿದೆ. ನಿಮಗೆ ಸಂಬಂಧವೇ ಪಡದಂತಹ ವಿಚಾರವೊಂದಕ್ಕೆ ನೀವಾಗಿಯೇ ಹೋಗಿ ತಗುಲಿ ಹಾಕಿಕೊಳ್ಳಲಿದ್ದೀರಿ. ಅತ್ಯುತ್ಸಾಹದಿಂದ ಯಾರಿಗೂ ಗಡುವನ್ನು ನೀಡಿ, ಮಾತು ನೀಡಲು ಹೋಗಬೇಡಿ. ಸಂಬಂಧಿಕರ ಮನೆಯ ಕಾರ್ಯಕ್ರಮಗಳಿಗೆ ಭೇಟಿ ನೀಡುವಂತಹವರು ಆರ್ಥಿಕ ವಿಚಾರದ ಬಗ್ಗೆ ಚರ್ಚೆ ಮಾಡದಿರುವುದು ಕ್ಷೇಮ. ಇದನ್ನು ಮೀರಿ ಮಾತನಾಡಿದಲ್ಲಿ ಅವಮಾನದ ಪಾಲಾಗುತ್ತೀರಿ. ವಿದ್ಯಾರ್ಥಿಗಳಿಗೆ ಪರಿಸ್ಥಿತಿ, ಸನ್ನಿವೇಶ, ವ್ಯಕ್ತಿಗಳು ಎಲ್ಲರೂ- ಎಲ್ಲವೂ ನಿಮ್ಮ ವಿರುದ್ಧ ಕೆಲಸ ಮಾಡುತ್ತಿದೆಯೇನೋ ಎಂದು ಬಲವಾಗಿ ಅನಿಸಲಿದೆ. ಬೇರೆಯವರ ಒಳತಿಗಾಗಿ ನೀವು ನೀಡಿದ ಸಲಹೆ ಅಥವಾ ಆ ಸಂದರ್ಭಕ್ಕೆ ಸೂಕ್ತವಾದಂತಹ ಮಾರ್ಗೋಪಾಯಗಳನ್ನು ತಪ್ಪಾಗಿ ಗ್ರಹಿಸುವಂತಹ ಸಾಧ್ಯತೆಗಳು ಹೆಚ್ಚಿವೆ. ಮಹಿಳೆಯರಿಗೆ ಭವಿಷ್ಯದ ಬಗ್ಗೆ ಬಹಳ ಚಿಂತೆಯು ಕಾಡಲಿದೆ. ಇನ್ನು ಹಣಕಾಸಿನ ವಿಚಾರದಲ್ಲಿ ಖರ್ಚು ಕೈ ಮೀರಿ ಹೋಗುತ್ತಿದೆ ಎಂದೇನಾದರೂ ಆತಂಕಕ್ಕೆ ಒಳಗಾಗಿದ್ದಲ್ಲಿ ಅದು ಈ ವಾರ ನಿವಾರಣೆಯಾಗಲಿದೆ. ನೀವು ಯಾವಾಗಲೋ ಸಾಲ ಎಂದು ಕೊಟ್ಟಿದ್ದನ್ನು ಸಾಲ ಪಡೆದವರು ಹಿಂತಿರುಗಿಸುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಬೇರೆಯವರ ನಿರ್ಧಾರಗಳನ್ನು ಸಹ ನೀವೇ ತೆಗೆದುಕೊಳ್ಳುವಂಥ ಸಂದರ್ಭ ಬಂದಲ್ಲಿ ಜಾಗ್ರತೆಯನ್ನು ವಹಿಸಿ. ನೀವು ಯಾರಿಂದಲೂ ಹೊಗಳಿಕೆ ಅಥವಾ ಮೆಚ್ಚುಗೆಯನ್ನೋ ನಿರೀಕ್ಷೆ ಮಾಡುವುದಕ್ಕೆ ಹೋಗಬೇಡಿ. ತಮಾಷೆಗೆಂದು ಹೇಳಿದ್ದರೋ ಅಥವಾ ನಿಜವಾಗಿಯೂ ಎದುರಿಗಿರುವ ವ್ಯಕ್ತಿಗೆ ಬೈಯ್ಯಬೇಕು ಅನ್ನುವ ಉದ್ದೇಶದಿಂದ ಹಾಗೆ ಮಾಡಿದ್ದರೋ ಒಟ್ಟಿನಲ್ಲಿ ಈ ಹಿಂದಿನ ಸಂಗತಿಯೊಂದನ್ನು ಮುಂದೆ ಮಾಡಿಕೊಂಡು ನಿಮ್ಮದೇ ಸ್ನೇಹಿತರು, ಸಂಬಂಧಿಕರು ಅಥವಾ ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಲಿದ್ದಾರೆ. ನೀವು ಅಹಂಕಾರಿ ಎಂದು ಮುಖಕ್ಕೆ ಹೊಡೆದಂತೆ ಹೇಳಲೂ ಬಹುದು. ಒಟ್ಟಾರೆಯಾಗಿ ಈ ಬೆಳವಣಿಗೆಗಳು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವಂತೆ ಮಾಡುತ್ತವೆ. ನೀವು ಬಹಳ ನಂಬಿಕೆ ಇಟ್ಟು, ಹಣ ನೀಡಿದ್ದ ವ್ಯಕ್ತಿಯೋ ಅಥವಾ ಹಣವನ್ನು ಇಟ್ಟಿರುವ ಸಂಸ್ಥೆಯಲ್ಲಿಯೋ ಎಲ್ಲವೂ ಸರಿಯಿಲ್ಲ ಎಂಬ ವಿದ್ಯಮಾನ ಬರಬಹುದು. ಅಥವಾ ನಿಮಗೆ ಅಂಥದ್ದೊಂದು ಅನುಭವ ಆಗಬಹುದು. ಈಗ ಅದನ್ನು ವಾಪಸ್ ಪಡೆಯುವುದು ಹೇಗೆ ಎಂಬ ವಿಚಾರವೋ ಕೊರೆಯಲು ಶುರುವಾಗಲಿದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡುವುದರಿಂದ ಕೆಲಸದ ಒತ್ತಡ ಹೆಚ್ಚಾಗಲಿದೆ. ಯಾವುದನ್ನೂ ನಿರ್ಧಾರಿತ ಧ್ವನಿಯಲ್ಲಿ ಬೇಕು- ಬೇಡ ಎಂದು ಹೇಳುವುದಕ್ಕೆ ಕೂಡ ನಿಮಗೆ ಅವಕಾಶ ನೀಡದ ಕಾರಣಕ್ಕೆ ಕೆಲವು ವ್ಯಕ್ತಿಗಳ ಬಗ್ಗೆ ನಿಮಗೆ ಅಸಮಾಧಾನ ಸಹ ಆಗಲಿದೆ. ಕೃಷಿಕರಿಗೆ ಡೇರಿ ವ್ಯವಹಾರ ಕೈ ಹಿಡಿಯಲಿದೆ. ಪಶು ಸಾಕಣೆಯನ್ನು ಮಾಡುತ್ತಿರುವವರಿಗೆ ಲಾಭದ ಪ್ರಮಾಣವು ಹೆಚ್ಚಾಗಲಿದೆ. ಇನ್ನು ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಉದ್ದೇಶದಿಂದಲೇ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದೀರಿ. ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಪ್ರತಿಷ್ಠಿತ ಕಂಪನಿಯ ಜತೆಗೆ ವ್ಯವಹಾರದ ಮಾತುಕತೆಗಳು ನಡೆಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಚೌಕಾಶಿಗೆ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಗಾತಿಯ ಮಾತನ್ನು ಕೇಳಿಸಿಕೊಳ್ಳಿ. ಅವರು ನೀಡುವ ಸಲಹೆಗಳನ್ನು ಪಾಲಿಸುವ ಬಗ್ಗೆ ಗಂಭೀರವಾಗಿ ಆಲೋಚಿಸಿ. ವೃತ್ತಿನಿರತರು ನಿಮಗೆ ಅಗತ್ಯವೇ ಇಲ್ಲದಿದ್ದರೂ ಕೂಡಿಟ್ಟ ಹಣ ಅಚಾನಕ್ ಆಗಿ ಖರ್ಚು ಮಾಡುವ ಸಾಧ್ಯತೆ ಇದೆ ಅಥವಾ ನೀವಾಗಿಯೇ ಬೇಡದ ಜವಾಬ್ದಾರಿ ಅಥವಾ ಉಸಾಬರಿಯನ್ನು ತಲೆ ಮೇಲೆ ಹಾಕಿಕೊಂಡು, ಖರ್ಚು ಮಾಡಿಬಿಡುವಂಥ ಸಾಧ್ಯತೆ ಇದೆ. ಆದ್ದರಿಂದ ಮನಸ್ಸಿನ ಮೇಲೆ ಹತೋಟಿ ಸಾಧಿಸುವುದಕ್ಕೆ ಪ್ರಯತ್ನಿಸಿ. ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಅಂತಾದರೆ ಖರ್ಚಿನ ವಿಚಾರದಲ್ಲಿ ಇನ್ನೂ ಹೆಚ್ಚು ಜಾಗ್ರತೆಯಿಂದ ಇರುವುದು ಅತ್ಯವಶ್ಯ. ವಿದ್ಯಾರ್ಥಿಗಳು ನೀವು ತೆಗೆದುಕೊಂಡಿರುವ ಕೋರ್ಸ್ ಅನ್ನು ಬದಲಾಯಿಸಿಕೊಳ್ಳಬೇಕು ಎಂದಿದ್ದರೆ ಏಕಾಏಕಿ ದೊಡ್ಡ ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿ. ಇದರಿಂದ ಆ ನಂತರ ಬೇಸರ ಪಡುವಂತಾಗುತ್ತದೆ. ಯಾವುದೇ ಮುಖ್ಯ ತೀರ್ಮಾನವನ್ನು ತೆಗೆದುಕೊಳ್ಳುವ ಮುನ್ನ ಅನುಭವಿಗಳು- ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಮಹಿಳೆಯರು ನಿಮ್ಮ ಸಾಮರ್ಥ್ಯಕ್ಕೂ ಮೀರಿದ ಕೆಲಸ ವಹಿಸಿಕೊಂಡ ಪರಿಣಾಮವನ್ನು ಈ ವಾರ ಎದುರಿಸಲಿದ್ದೀರಿ. ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವಂಥವರು ಮುಖ್ಯ ವಸ್ತುಗಳ ಬಗ್ಗೆ ಜಾಗ್ರತೆಯನ್ನು ವಹಿಸಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಯಾವುದನ್ನು ನಿಮ್ಮ ಹುಂಬತನ ಎಂದು ಇತರರು ಆಡಿಕೊಂಡಿರುತ್ತಾರೋ ಅದು ಹಾಗಲ್ಲ ಎಂಬ ಸಂಗತಿ ಪ್ರಚಾರಕ್ಕೆ ಬರಲಿದೆ. ಅದು ಹೇಗೆಂದರೆ ಬೇರೆಯವರ ಎಚ್ಚರಿಕೆ ಹಾಗೂ ಬುದ್ಧಿವಾದದ ನಂತರವೂ ಅವರ ಮಾತನ್ನು ನಿರಾಕರಿಸಿ, ನೀವು ಬಹಳ ಭರವಸೆ ಇಟ್ಟು ಮಾಡಿದ ಕೆಲಸಗಳು ಅಂದುಕೊಂಡಂಥ ದಿಕ್ಕಿನಲ್ಲೇ ಫಲಿತಾಂಶ ನೀಡುವುದಕ್ಕೆ ಆರಂಭಿಸುವುದರಿಂದ ಮನಸ್ಸಿಗೆ ಸಮಾಧಾನ ಆಗಲಿದೆ. ನಿಮ್ಮ ಮಾತು, ಪ್ರಭಾವ, ಸಹಾಯದಿಂದ ಇತರರಿಗೆ ಕೂಡ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಅಗತ್ಯವಾದ ನೆರವು ದೊರೆಯಲಿದೆ. ಈ ಹಿಂದೆ ನಿಮಗೆ ಇಷ್ಟವಾಗಿದ್ದ ವೈವಾಹಿಕ ಸಂಬಂಧಗಳೋ ಅಥವಾ ಆಸ್ತಿಯ ವಿಚಾರವೋ ಮತ್ತೆ ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ ಅಥವಾ ನೀವು ಹುಡುಕಾಡುವಾಗ ಅದೇ ಮತ್ತೆ ಗಟ್ಟಿಯಾಗುವ ಸಾಧ್ಯತೆಗಳು ಹೆಚ್ಚಿವೆ. ನಿಮ್ಮ ಪಾಲಿಗೆ ಯಾವುದು ಒಳ್ಳೆಯದು ಅಥವಾ ಯಾವುದು ಅಲ್ಲ ಎಂಬುದನ್ನು ನಿರ್ಧರಿಸುವುದರಲ್ಲಿ ಒಂದಿಷ್ಟು ಗೊಂದಲಗಳಾಗಬಹುದು. ಆದರೆ ಆತಂಕಗೊಳ್ಳುವ ಅಗತ್ಯವಿಲ್ಲ. ಏಕೆಂದರೆ ನಿಮಗೆ ಒಳ್ಳೆಯದು ಆಗುವಂಥದ್ದನ್ನೇ ಆಯ್ಕೆ ಮಾಡಿಕೊಳ್ಳಲಿದ್ದೀರಿ. ನಿಮ್ಮ ಆತ್ಮವಿಶ್ವಾಸ ಕುಂದದ ರೀತಿಯಲ್ಲಿ ಎಚ್ಚರಿಕೆಯನ್ನು ತೆಗೆದುಕೊಳ್ಳಿ. ಆರಂಭದಲ್ಲಿ ಬೇಸರ ಆಯಿತು ಅಂತಲೋ ಅಥವಾ ನಿಮ್ಮ ಮನಸ್ಸಿಗೆ ಹಿತವಲ್ಲದ ಘಟನೆಗಳು ನಡೆಯಿತು ಎಂಬ ಕಾರಣಕ್ಕೋ ಉದ್ದೇಶದಿಂದ ದೂರ ನಿಲ್ಲಬೇಡಿ. ಕೃಷಿಕರಿಗೆ ಈಗ ಇರುವ ಮನೆ ಅಥವಾ ಊರು ಅಥವಾ ಕನಿಷ್ಠ ಆ ಬೀದಿಯನ್ನಾದರೂ ಬದಲಾಯಿಸಬೇಕು ಎಂದು ಬಲವಾಗಿ ಕಾಡಲಿದೆ. ಈ ಬಗ್ಗೆ ನಿಮ್ಮ ಆಪ್ತೇಷ್ಟರ ಜತೆಗೆ ಚರ್ಚೆ ಮಾಡುವ ಸಾಧ್ಯತೆಗಳು ಸಹ ಇವೆ. ನಿಮಗೆ ಇತರರ ಬಗ್ಗೆ ಏನಾದರೂ ಹೇಳಿಕೊಳ್ಳಬೇಕು ಎಂಬ ಭಾವನೆ ಇದ್ದಲ್ಲಿ ಒಂದೇ ಸಲಕ್ಕೆ ಹೇಳಿಕೊಂಡು ಬಿಡಬೇಡಿ. ಏಕೆಂದರೆ ಮೊದಲಿಗೆ ಅವರಿಗೆ ನಿಮ್ಮ ಬಗ್ಗೆ ಆ ನಿರ್ದಿಷ್ಟ ವಿಚಾರದ ಬಗ್ಗೆ ಎಂಥ ಅಭಿಪ್ರಾಯ ಇದೆ ಎಂಬುದನ್ನು ತಿಳಿಯುವುದಕ್ಕೆ ಪ್ರಯತ್ನಿಸಿ. ವೃತ್ತಿನಿರತರು ನೀವು ಯಾವ ಕೆಲಸವನ್ನು ಮಾಡಬೇಕು ಎಂದು ಬಹಳ ಸಲ ಪ್ರಯತ್ನಪಟ್ಟು ಅರ್ಧಕ್ಕೆ ನಿಂತಿರುತ್ತದೋ ಅಥವಾ ಆರಂಭವನ್ನೇ ಕಂಡಿರುವುದಿಲ್ಲವೋ ಅಂತಹದ್ದು ಈ ವಾರ ಚಾಲನೆ ಪಡೆದುಕೊಳ್ಳಲಿದೆ. ನೀವು ತುಂಬಾ ದೊಡ್ಡ ಮೊತ್ತ ಖರ್ಚಾಗಬಹುದು ಎಂದುಕೊಂಡಿದ್ದ ಕೆಲಸ ಒಂದರಲ್ಲಿ ತುಂಬಾ ಹಣ ಉಳಿಸಲಿದ್ದೀರಿ. ವೃತ್ತಿ ವಿಸ್ತರಣೆಗಾಗಿ ಪ್ರಯತ್ನ ಪಡಬೇಕು ಎಂದುಕೊಳ್ಳುತ್ತಿರುವವರಿಗೆ ಸೂಕ್ತ ಅನುಕೂಲಗಳು ಒದಗಿ ಬರಲಿವೆ. ಕುಟುಂಬ ಸದಸ್ಯರಿಗಾಗಿ ವಸ್ತ್ರಾಭರಣಗಳನ್ನು ಖರೀದಿಸುವಂತಹ ಯೋಗ ಈ ವಾರ ಇದೆ. ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರದಲ್ಲಿ ಸರಿಯಾದ ತೀರ್ಮಾನ ಮಾಡುವುದು ಮುಖ್ಯವಾಗುತ್ತದೆ. ಎಲ್ಲರಿಗೂ ಆಗಿದ್ದು ನನಗೂ ಆಗಲಿದೆ ಎಂಬ ಉಡಾಫೆ ಮಾಡದೆ ಯಾವುದೇ ವಿಚಾರದಲ್ಲಿ ಮುಂಜಾಗ್ರತೆ ಏನು ತೆಗೆದುಕೊಳ್ಳಬೇಕು ಎಂಬುದನ್ನು ತೀರ್ಮಾನಿಸಿ. ಮಹಿಳೆಯರು ಮನೆಯ ಹೊರಗೆ ಹಾಸ್ಟೆಲ್ ಗಳಲ್ಲಿ, ಪಿಜಿಗಳಲ್ಲಿ ಅಥವಾ ಸ್ನೇಹಿತೆಯರ ಜತೆಗೂಡಿ ಇರುವಂಥವರಿಗೆ ಬದಲಾವಣೆಯ ಯೋಗವಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಇಷ್ಟು ದಿನ ಸಹಿಸಿಕೊಂಡು ಬಂದಿದ್ದನ್ನೆಲ್ಲ ಈ ವಾರ ಹೊರಗೆ ಹಾಕಲಿದ್ದೀರಿ. ಇದು ನಾನಾ ರೀತಿಯಲ್ಲಿ ಪರಿಣಾಮ ಬೀರಲಿದೆ. ಯಾರದೋ ಮೇಲಿನ ಸಿಟ್ಟಿಗೆ ನಿಮಗೆ ಕೆಲಸ- ಕಾರ್ಯಗಳಲ್ಲಿ ಆಸಕ್ತಿ ಕಡಿಮೆ ಆಗುತ್ತದೆ. ಕೆಲವರ ಜೊತೆಗೆ ಮಾತುಕತೆ ಸಹ ನಿಲ್ಲಿಸಿ ಬಿಡೋಣ ಎಂದು ಆಲೋಚನೆ ಮೂಡಲಿದೆ. ಅಂತಿಮವಾಗಿ ಈ ವಾರ ತುಂಬ ಆರಾಮವಾಗಿ ಇದ್ದುಬಿಡೋಣ ಎಂದೆನಿಸಲಿದೆ. ಆ ಕಾರಣಕ್ಕಾಗಿ ಕೆಲವು ಕೆಲಸಗಳನ್ನು ಮುಂದಕ್ಕೆ ಹಾಕುವಂತಾಗುತ್ತದೆ. ಆದ್ದರಿಂದ ನಿಮಗೆ ನೀಡುವ ಪ್ರಮುಖವಾದ ಎಚ್ಚರಿಕೆ ಏನೆಂದರೆ, ಅದು ಯಾವುದೇ ಕೆಲಸದಲ್ಲೂ ಆಲಸ್ಯ ಮಾಡಬೇಡಿ. ನೀವೇ ಮಾಡಬೇಕಾದ ಕೆಲಸಗಳು ಯಾವ್ಯಾವು ಬಾಕಿ ಇವೆಯೋ ಅವುಗಳನ್ನು ಮಾಡಿ ಮುಗಿಸುವುದಕ್ಕೆ ಒಂದು ವೇಳಾಪಟ್ಟಿ ಹಾಕಿಕೊಳ್ಳಬೇಕಾಗುತ್ತದೆ. ಮೇಲಧಿಕಾರಿಗಳ ಜತೆಗೆ ಯಾವುದೇ ಮುಖ್ಯ ವಿಚಾರವನ್ನು ಮಾತನಾಡುತ್ತಿದ್ದೀರಿ ಅಂತಾದರೆ ಇ- ಮೇಲ್ ಮೂಲಕ ಸಂವಹನ ಮಾಡುವುದು ಉತ್ತಮ. ಈ ಹಿಂದೆ ನಿಮ್ಮ ಕೈಯಿಂದ ದುಡ್ಡು ಹಾಕಿ ಮಾಡಿಕೊಟ್ಟ ಕೆಲಸದಲ್ಲಿ ಬಾಕಿ ಬರಬೇಕಿದ್ದಲ್ಲಿ ಈಗ ಪ್ರಯತ್ನಿಸಿದರೆ ಆ ಹಣ ಬರುವಂಥ ಸಾಧ್ಯತೆಗಳಿವೆ. ಇನ್ನು ಮನೆಯಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ಆರಂಭವಾಗಲಿದೆ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸಬೇಕೆಂದು ಇರುವವರು ಅಥವಾ ಪರ್ಸನಲ್ ಲೋನ್ ಮಾಡಬೇಕು ಎಂದು ಇರುವವರಿಗೆ ಹಣಕಾಸಿನ ವ್ಯವಸ್ಥೆ ಸುಲಭವಾಗಿ ಆಗುತ್ತದೆ. ಆದರೆ ಆತುರ ಮಾಡಲಿಕ್ಕೆ ಹೋಗಬಾರದು. ಜತೆಗೆ ಮನೆಗೆ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ಖರೀದಿಸಿ, ತರುವುದಕ್ಕೆ ಮನಸ್ಸು ಮಾಡಲಿದ್ದೀರಿ. ಇದರ ಜತೆಗೆ ಶಾಪಿಂಗ್ ಮಾಡುವ ಸಲುವಾಗಿ ನೀವಿರುವ ಸ್ಥಳದಿಂದ ಬೇರೆಡೆಗೆ ತೆರಳುವಂಥ ಸಾಧ್ಯತೆ ಇದೆ. ಈ ವಾರದಲ್ಲಿ ನೀವು ಕಾರು- ಬೈಕ್ ಚಲಾಯಿಸುವಾಗ ಬಹಳ ಜಾಗ್ರತೆಯಿಂದ ಇರಬೇಕು. ಅವುಗಳ ಸರ್ವೀಸ್ ಸಮಯಕ್ಕೆ ಸರಿಯಾಗಿ ಆಗಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಕೃಷಿಕರಿಗೆ ದೇವತಾರಾಧನೆ, ಹೋಮ- ಹವನ, ಪೂಜೆಗಳಿಗೆ ಹಣ ಖರ್ಚು ಮಾಡುವಂಥ ಯೋಗ ಇದೆ. ಮನೆಗೆ ಸಂಬಂಧಿಕರು ಸಹ ಭೇಟಿ ನೀಡಲಿದ್ದು, ಇದರಿಂದ ಖರ್ಚಿನ ಪ್ರಮಾಣ ಜಾಸ್ತಿ ಆಗಲಿದೆ. ಒಂದಿಷ್ಟು ಒತ್ತಡದ ಸನ್ನಿವೇಶಗಳು ಎದುರಿಸಬೇಕಾಗುತ್ತದೆ. ವೃತ್ತಿನಿರತರಿಗೆ ನಿಶ್ಚಿತ ಖರ್ಚುಗಳ ಹೊರೆ ಜಾಸ್ತಿ ಆಗಲಿದೆ. ಬಾಡಿಗೆ ಜಾಸ್ತಿ ಮಾಡಬಹುದು, ಈಗಾಗಲೇ ನಿಮ್ಮ ಬಳಿ ಕೆಲಸ ಮಾಡುತ್ತಿರುವವರು ಹೆಚ್ಚಿನ ವೇತನಕ್ಕೆ ಬೇಡಿಕೆ ಇಟ್ಟು, ಅದನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಒತ್ತಡ ಸೃಷ್ಟಿ ಆಗುತ್ತದೆ. ಕೆಲವು ವಿಷಯಗಳ ವ್ಯಾಸಂಗ ಕಷ್ಟ ಎಂದು ಬಹಳ ಅನಿಸತೊಡಗುತ್ತದೆ. ಈಗ ಮಾಡುತ್ತಿರುವಂಥ ಕೋರ್ಸ್ ಬದಲಾವಣೆ ಮಾಡುವುದಕ್ಕೋ ಅಥವಾ ಅರ್ಧಕ್ಕೆ ನಿಲ್ಲಿಸುವುದಕ್ಕೋ ಮುಂದಾಗಲಿದ್ದೀರಿ. ಮಹಿಳೆಯರಿಗೆ ತವರು ಮನೆ ಕಡೆಯಿಂದ ಬರಬೇಕಾದ ಆಸ್ತಿಗಳು ಏನಾದರೂ ಇದ್ದಲ್ಲಿ ಅದು ಬರುವಂಥ ಯೋಗ ಇದೆ. ಇನ್ನು ಸಂಬಂಧಿಕರು, ಸ್ನೇಹಿತರಿಂದ ಶುಭ ಕಾರ್ಯಗಳಿಗೆ ಆಹ್ವಾನ ಬರಲಿದೆ.