Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 3ರಿಂದ ಆಗಸ್ಟ್ 9ರ ತನಕ ವಾರಭವಿಷ್ಯ  

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 3ರಿಂದ ಆಗಸ್ಟ್ 9ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 3ರಿಂದ ಆಗಸ್ಟ್ 9ರ ತನಕ ವಾರಭವಿಷ್ಯ  
ಸಂಖ್ಯಾಶಾಸ್ತ್ರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 04, 2024 | 12:15 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 3ರಿಂದ ಆಗಸ್ಟ್ 9ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಯಾವುದು ಅಭಾವ ಆಗಬಹುದು ಅಂದುಕೊಂಡಿರುತ್ತೀರೋ ಹಾಗೆ ಆಗದೆ ಅನುಕೂಲಗಳು ಒದಗಿ ಬರಲಿದೆ. ಇಷ್ಟು ಸಮಯ ನಿಂತುಹೋಗಿದ್ದ ಕೆಲಸ- ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಮನೆಯಲ್ಲಿ ಶುಭ ಕಾರ್ಯಗಳ ಆಯೋಜನೆಗಾಗಿ ಸಿದ್ಧತೆಯನ್ನು, ಹಣಕಾಸಿನ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗಲಿದೆ. ಮದುವೆ ವಯಸ್ಕರಾಗಿದ್ದು, ವಧು ಅಥವಾ ವರಾನ್ವೇಷಣೆಯಲ್ಲಿ ತೊಡಗಿರುವವರಿಗೆ ಸಂಬಂಧಿಕರಲ್ಲಿಯೇ ದೊರೆಯುವ ಅವಕಾಶಗಳು ಹೆಚ್ಚಿವೆ. ಅಚಾನಕ್ ಆಗಿ ಮಾತುಕತೆ ಸಂದರ್ಭದಲ್ಲಿ ಪ್ರಸ್ತಾವ ಆಗುವ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದರಿಂದ ಕೆಲಸ- ಕಾರ್ಯಗಳಲ್ಲಿ ಅನುಕೂಲಗಳು ಒದಗಿ ಬರಲಿವೆ. ಈ ಹಿಂದೆ ಯಾವಾಗಲೋ ಮಾಡಬೇಕಲ್ಲ ಎಂಬ ಒಂದೇ ಕಾರಣದಿಂದ ಕೈಗೊಂಡಂಥ ಕಾರ್ಯಗಳಿಂದ ಈ ವಾರ ಅನುಕೂಲಗಳು ಆಗಲಿವೆ. ಕೃಷಿ ಜಮೀನು ಖರೀದಿ ಮಾಡಬೇಕು ಅಂದುಕೊಂಡಿರುವವರಿಗೆ ಮನಸ್ಸಿಗೆ ಒಪ್ಪುವಂಥ ಸ್ಥಳವು ದೊರೆಯಲಿದೆ. ಅಥವಾ ಈಗಾಗಲೇ ಜಮೀನು ಇರುವಂಥವರು ಅಲ್ಲಿ ಆಗಬೇಕಾದ ಮೋಟಾರ್ ಪಂಪ್, ತಂತಿ- ಬೇಲಿ ಇತರ ಕೆಲಸಗಳನ್ನು ಮಾಡಿಸುವುದಕ್ಕೆ ಹಣ ಖರ್ಚು ಮಾಡಬೇಕಾಗಲಿದೆ. ರಾಜಕಾರಣದ ವಿಷಯಗಳಿಗೆ ಸಮಯ ವ್ಯರ್ಥ ಮಾಡಿಕೊಳ್ಳಲಿದ್ದೀರಿ. ಆದ್ದರಿಂದ ನಿಮ್ಮ ಅಭಿಮಾನ, ಗೌರವ ಏನಿದ್ದರೂ ಮನಸ್ಸಿನಲ್ಲಿ ಇರಲಿ. ಅದನ್ನು ಸಾರ್ವಜನಿಕವಾಗಿ ತೋರಿಸಬೇಕು, ಯಾರೊಂದಿಗೋ ವಾದ ಮಾಡಬೇಕು ಎಂದೇನಿಲ್ಲ. ನಿಮ್ಮ ಬಳಿ ಇರುವ ಹಣವನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡುವ ಬಗ್ಗೆ ಸೂಕ್ತವಾದ ನಿರ್ಧಾರವೊಂದನ್ನು ಮಾಡಿ. ಯಾವುದೇ ಕಾರಣಕ್ಕೂ ಬಡ್ಡಿಗೆ ಹಣವನ್ನು ನೀಡುವುದಕ್ಕೆ ಹೋಗದಿರಿ. ಹಾಗೊಂದು ವೇಳೆ ನೀಡಿದಲ್ಲಿ ನಷ್ಟವನ್ನು ಅನುಭವಿಸಬೇಕಾದೀತು, ಜಾಗ್ರತೆ. ಇನ್ನು ವೃತ್ತಿ ನಿರತರಿಗೆ ದಿಢೀರನೇ ಆದಾಯದಲ್ಲಿ ಇಳಿಕೆ ಆಗಲಿದೆ. ಸ್ವಂತ ಸ್ಥಳದಲ್ಲಿಯೇ ಕಚೇರಿ ಆರಂಭಿಸಬೇಕು, ನಿಮ್ಮ ಎಲ್ಲ ವ್ಯವಹಾರಗಳನ್ನು ಒಂದೇ ಸ್ಥಳದಲ್ಲಿ ಶುರು ಮಾಡಬೇಕು ಎಂಬ ಉದ್ದೇಶ ಇರುವವರಿಗೆ ಈಡೇರುವುದಕ್ಕೆ ಬೇಕಾದ ವೇದಿಕೆ ದೊರೆಯಲಿದೆ. ಅಂದಹಾಗೆ ಯಾವುದಾದರೂ ಪ್ರಾಣಿಗಳಿಂದ ದಾಳಿ ಅಥವಾ ಕಡಿತಕ್ಕೆ ಗುರಿ ಆಗಬಹುದು. ಆದ್ದರಿಂದ ಸಾಕು ಪ್ರಾಣಿಗಳಿಂದ ಕೂಡ ಬಹಳ ಜಾಗ್ರತೆ ವಹಿಸಬೇಕು. ಇಲ್ಲದಿದ್ದರೆ ಸಣ್ಣ ನಿರ್ಲಕ್ಷ್ಯಕ್ಕೂ ದೊಡ್ಡ ಬೆಲೆ ತೆರಬೇಕಾದಂಥ ಪರಿಸ್ಥಿತಿ ಬರುತ್ತದೆ.  ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿಯಲಿದ್ದೀರಿ. ಅದಕ್ಕಾಗಿ ಆನ್ ಲೈನ್ ಕೋರ್ಸ್ ಸೇರ್ಪಡೆ ಆಗುವಂಥ ಯೋಗ ಇದೆ. ಇದಕ್ಕಾಗಿ ಸ್ವಲ್ಪ ಮಟ್ಟಿಗೆ ಹಣವು ಸಹ ಖರ್ಚಾಗಲಿದೆ. ಮಹಿಳೆಯರಿಗೆ ಈ ಹಿಂದೆ ತಾವು ಮಾಡಿದ ತ್ಯಾಗ ಹಾಗೂ ಪಟ್ಟ ಶ್ರಮಕ್ಕೆ ಗೌರವಾದರಗಳು ದೊರೆಯಲಿವೆ. ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅದರಲ್ಲಿ ಯಶಸ್ಸು ದೊರೆಯುವಂಥ ಅವಕಾಶಗಳಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನೀವು ಎಷ್ಟೇ ಬುದ್ಧಿವಂತರಾದರೂ ಎಷ್ಟೇ ಅನುಕೂಲಸ್ಥರಾದರೂ ಅದನ್ನು ಎಲ್ಲರ ಕಣ್ಣಿಗೂ ಬಾರದಂತೆ ನೋಡಿಕೊಳ್ಳಿ. ಈ ವಾರ ನಿಮಗೆ ದೃಷ್ಟಿ ದೋಷ ತಾಗುವಂಥ ಸಾಧ್ಯತೆಗಳಿವೆ. ಆದ್ದರಿಂದ ಸಾಧ್ಯವಾದಷ್ಟೂ ಕಪ್ಪು ಬಣ್ಣದ ಬಟ್ಟೆ, ವಾಹನ ಇತ್ಯಾದಿಗಳನ್ನು ಬಳಸುವುದಕ್ಕೆ ಹೋಗಬೇಡಿ. ಅಂತರಂಗದ ವಿಚಾರ ಎಂಬುದು ಏನಿರುತ್ತದೆ, ಅದನ್ನು ಎಲ್ಲರ ಜತೆಗೆ ಹೇಳಿಕೊಂಡು ಬರಬೇಡಿ. ಇನ್ನು ನಿಮ್ಮ ಶ್ರಮಕ್ಕೆ. ಸಂಪೂರ್ಣ ಪ್ರತಿಫಲ ಕೈಗೆ ಸೇರುವ ತನಕ ಸಂಭ್ರಮಾಚರಣೆಯಲ್ಲಿ ತೊಡಗಿಕೊಳ್ಳಬೇಡಿ. ಏಕೆಂದರೆ, ಎಲ್ಲವೂ ಆಗಿದೆ, ಇನ್ನೇನು ಕೈಗೆ ಬಂತು ಅನ್ನೋಷ್ಟರಲ್ಲಿ.ಅದು ಹಾಗೇ ಜಾರಿ ಹೋಯಿತು ಎಂಬ ಅನುಭವ ನಿಮಗಾಗಲಿದೆ. ಇನ್ನೇನು ಎಲ್ಲ ಮಾತುಕತೆ ಆಗಿಹೋಗಿದೆ, ಒಪ್ಪಂದ ಆಗಬೇಕಷ್ಟೇ ಅಂದುಕೊಂಡಿದ್ದ ವ್ಯವಹಾರ ಕೊನೆ ಕ್ಷಣದಲ್ಲಿ ಕೈ ತಪ್ಪಿ ಹೋಗಲಿದೆ. ಆದ್ದರಿಂದ ನಿಮ್ಮ ಕೈಗೆ ಬಾರದ ಹಣಕ್ಕೆ ಮುಂಚಿತವಾಗಿ ಏನಾದರೂ ಖರ್ಚನ್ನು ಲೆಕ್ಕ ಹಾಕಿಟ್ಟುಕೊಳ್ಳಬೇಡಿ. ಕೃಷಿಕ ವರ್ಗದವರು ಉಳಿತಾಯಕ್ಕೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಹತ್ವವಾದ ನಿರ್ಧಾರವೊಂದನ್ನು ಕೈಗೊಳ್ಳಬೇಕಾಗುತ್ತದೆ. ಇನ್ನು ಹೆಲ್ತ್ ಇನ್ಷೂರೆನ್ಸ್ ಬಗ್ಗೆ ಕೂಡ ಕುಟುಂಬ ಸದಸ್ಯರ ಜತೆಗೆ ಮಾತುಕತೆ ನಡೆಸಲಿದ್ದೀರಿ. ಹೊಸಬರೊಂದಿಗೆ ವ್ಯವಹಾರ ಮಾಡುವಾಗ ಜಾಗ್ರತೆಯಿಂದ ಇರಿ. ಆಕರ್ಷಕವಾದ ಲಾಭ ಬರುತ್ತದೆ ಎಂದು ಆಸೆ ತೋರಿಸಿ, ನಿಮಗೇ ಸಂಪೂರ್ಣ ನಂಬಿಕೆ ಇರದಂಥ ಕಡೆಗೆ ವ್ಯಕ್ತಿಯೊಬ್ಬರು ಹಣ ತೊಡಗಿಸುವಂತೆ ಮಾಡಬಹುದು. ಆದ್ದರಿಂದ ಅತಿಯಾದ ಲಾಭದ ಆಸೆ ಬೀಳಬೇಡಿ. ವೃತ್ತಿ ನಿರತರಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದ ಸ್ನೇಹಿತರು- ಹಿತೈಶಿಗಳು ಈಗ ತಮಗೆ ನೆರವು ನೀಡುವಂತೆ ಹುಡುಕಿಕೊಂಡು ಬರಬಹುದು. ನಿಮ್ಮಿಂದ ಅವರಿಗೆ ಸಹಾಯ ಮಾಡುವುದಕ್ಕೆ ಸಾಧ್ಯವಾದಲ್ಲಿ ಖಂಡಿತವಾಗಿ ನೆರವಾಗಿ. ಏಕೆಂದರೆ ಇದರಿಂದ ಭವಿಷ್ಯದಲ್ಲಿ ನಿಮಗೆ ಮತ್ತೊಮ್ಮೆ ಅವರಿಂದ ಅನುಕೂಲ ಆಗಲಿದೆ. ಕೆಲವು ಜಾಗಗಳಲ್ಲಿ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಮಾತನಾಡುವುದು ಕ್ಷೇಮ. ಒಂದು ವೇಳೆ ನಿಮಗೆ ಬೇಡದ ಉಸಾಬರಿಗೆ ತಲೆ ಹಾಕಿದಲ್ಲಿ ವೃತ್ತಿಪರವಾಗಿ ನಿಮ್ಮ ಹೆಸರು ಹಾಳಾಗಬಹುದು, ಜಾಗ್ರತೆ. ಇನ್ನು  ವಿದ್ಯಾರ್ಥಿಗಳು ಸೈಕಲ್, ಮೊಪೆಡ್ ಇತ್ಯಾದಿ ವಾಹನಗಳನ್ನು ಖರೀದಿ ಮಾಡುವುದಕ್ಕೆ ಮನೆಯಲ್ಲಿ ಪೋಷಕರ ಬಳಿ ದುಂಬಾಲು ಬೀಳಲಿದ್ದಾರೆ. ಒಂದು ವೇಳೆ ಮನೆಯಲ್ಲಿ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಿದಲ್ಲಿ ಮತ್ತೆ ಮತ್ತೆ ಒತ್ತಾಯಿಸಬೇಡಿ. ಮಹಿಳೆಯರು ಸಂಸಾರದ ವಿಷಯಗಳನ್ನು, ಅಂತರಂಗದ ವಿಚಾರವನ್ನು ಮೂರನೇ ವ್ಯಕ್ತಿಯ ಜತೆಗೆ ಚರ್ಚಿಸಬೇಡಿ, ಇದರಿಂದ ಅವಮಾನದ ಪಾಲಾಗುತ್ತೀರಿ. ಇನ್ನು ನಿಮ್ಮ ಬಗ್ಗೆ ಸಂಬಂಧಿಕರು, ಸ್ನೇಹಿತರೇ ಅಪಪ್ರಚಾರ ಮಾಡುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಇತರರಿಗೆ ಒಳ್ಳೆಯದು ಬಯಸುವುದು ತಪ್ಪಲ್ಲ. ಆದರೆ ಏನು ಹೇಳುತ್ತೀರಿ ಎಂಬುದು ಮುಖ್ಯವಾಗುತ್ತದೆ. ನಾನು ನೋಡಿಕೊಳ್ಳುತ್ತೇನೆ ಎಂಬ ಮಾತನ್ನು ನೀವು ಯಾರಿಗೇ ಹೇಳುವ ಮುನ್ನ ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಆಲೋಚನೆಯನ್ನು ಮಾಡುವುದು ಒಳ್ಳೆಯದು. ಇನ್ನು ನಿಮ್ಮ ಜತೆಯಲ್ಲಿ ಕೆಲಸ ಮಾಡುವವರು, ನಿಮಗಿಂತ ಮೇಲಿನ ಹಂತದಲ್ಲಿ ಇರುವವರು ತಾವು ತಪ್ಪು ಮಾಡಿ, ನಿಮ್ಮ ಕೆಲಸದಲ್ಲೇ ಏನೋ ಲೋಪ ಇದೆ ಎಂಬಂತೆ ಗಾಬರಿ ಹುಟ್ಟಿಸಬಹುದು. ಒಂದು ವೇಳೆ ಈ ರೀತಿಯ ಸನ್ನಿವೇಶ ಉದ್ಭವಿಸಿದಲ್ಲಿ ಧೈರ್ಯಗುಂದಬೇಡಿ. ಎಲ್ಲಿ ತಪ್ಪಾಗಿದೆ ಎಂಬುದನ್ನು ತೋರಿಸುವುದಕ್ಕೆ ಹೇಳಿ, ಮತ್ತು ಅದು ನಿಜವೇ ಎಂಬುದನ್ನು ನೀವೊಮ್ಮೆ ಪರೀಕ್ಷಿಸಿಕೊಳ್ಳಿ. ನಿಮ್ಮ ಆತ್ಮವಿಶ್ವಾಸವೇ ನಿಮ್ಮನ್ನು ಕಾಪಾಡಲಿದೆ. ನಿಮಗೆ ಸರಿ ಎಂದು ಗೊತ್ತಿದ್ದ ವಿಚಾರವನ್ನು ಹೇಳುವುದಕ್ಕೆ ಹಿಂದೆ ಮುಂದೆ ಆಲೋಚಿಸಬೇಡಿ. ವೇತನ ಹೆಚ್ಚಳವೋ ಅಥವಾ ನಿಮಗೆ ಬೇಕು ಎನಿಸಿದಂಥ ವಿಭಾಗಕ್ಕೆ ವರ್ಗಾವಣೆ ಕೇಳುವುದಕ್ಕೆ ಮನಸ್ಸು ಮಾಡಲಿದ್ದೀರಿ. ಈ ಬಗ್ಗೆ ಮೇಲಧಿಕಾರಿಗಳ ಜತೆಗೆ ಮುಖ್ಯವಾದ ಚರ್ಚೆಗಳು ಏರ್ಪಾಡಾಗಬಹುದು. ಈ ವೇಳೆ ನೀವು ಮಾಡುತ್ತಿರುವ ಕೆಲಸದ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡಿ. ಕೃಷಿ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂಥ ಸಮಯ. ಇದಕ್ಕಾಗಿ ಹಣ, ಸಮಯ ಮೀಸಲಿಡಲಿದ್ದೀರಿ. ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವಂಥ ಯೋಗ ಇದೆ. ಇದಕ್ಕಾಗಿ ಬ್ಯಾಂಕ್ ಅಥವಾ ಸಹಕಾರ ಸಂಘಗಳಿಂದ ಸಾಲ ಪಡೆದುಕೊಳ್ಳುವಂಥ ಸಾಧ್ಯತೆ ಇದೆ. ನಿಮ್ಮ ಪ್ರಯತ್ನಕ್ಕೆ ಪ್ರಭಾವಿಗಳ ಶಿಫಾರಸು ಸಹ ದೊರೆಯಲಿದೆ. ವೃತ್ತಿ ನಿರತರಿಗೆ ಬಿಡುವಿಲ್ಲದಷ್ಟು ಕೆಲಸ ಇರುತ್ತದೆ. ಕುಟುಂಬ ಸದಸ್ಯರ ಜತೆಗೆ ಸ್ವಲ್ಪ ಸಮಯ ಕಳೆಯೋಣ ಅಂದುಕೊಂಡರೂ ಸಾಧ್ಯ ಇರದ ಮಟ್ಟಿಗೆ ನಿಮ್ಮ ಹೆಗಲ ಮೇಲೆ ಕೆಲಸಗಳು ಬೀಳುತ್ತವೆ. ಇದೇ ವಿಷಯಕ್ಕೆ ಕುಟುಂಬದಲ್ಲಿ ಮನಸ್ತಾಪ, ಬೇಸರ ಆಗುವಂಥ ಸಾಧ್ಯತೆಗಳಿವೆ. ಮಕ್ಕಳಿಗಾಗಿ ಮ್ಯೂಚುವಲ್ ಫಂಡ್, ಷೇರುಗಳು ಇಂಥವುಗಳಲ್ಲಿ ಹೂಡಿಕೆ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಬಾಡಿಗೆ ಆದಾಯ ತರುವಂಥ ವಾಣಿಜ್ಯ ಸ್ವತ್ತುಗಳಲ್ಲಿ ಹೂಡಿಕೆ ಮಾಡುವಂಥ ಯೋಗ ಇದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಉತ್ತಮ ಅಂಕ, ಸ್ನೇಹಿತರ ಮಧ್ಯೆ ನಿಮ್ಮ ಬಗ್ಗೆ ಉತ್ತಮವಾದ ಗೌರವ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಕಿರು ಪ್ರವಾಸವಾದರೂ ತೆರಳುವಂಥ ಯೋಗ ಇದೆ. ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಇರುವಂಥವರಿಗೆ ಹೆಚ್ಚಿನ ಹುದ್ದೆ, ಜವಾಬ್ದಾರಿಗಳು ದೊರೆಯಲಿವೆ. ಅನಿರೀಕ್ಷಿತವಾಗಿ ದೊಡ್ಡ ಮೊತ್ತ ಸಹ ನಿಮ್ಮ ಕೈ ಸೇರುವಂತಹ ಯೋಗ ಕಂಡುಬರುತ್ತಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮಗೆ ಕೊಟ್ಟಿದ್ದ ಮಾತಿನಂತೆಯೇ ಎಲ್ಲರೂ ನಡೆದುಕೊಳ್ಳುತ್ತಾರೆ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ಎಲ್ಲವೂ ಅಂದುಕೊಂಡಂತೆ ಆಗಲಿದೆ ಎಂದು ಭರವಸೆ ನೀಡಿದ್ದ ವ್ಯಕ್ತಿಗಳು ಏಕಾಏಕಿ ತಮ್ಮ ಮಾತನ್ನು ಬದಲಿಸಲಿದ್ದಾರೆ. ತಾವೇ ಗೊಂದಲದಲ್ಲಿ ಇರುವಂತೆ ಹಾಗೂ ಈ ರೀತಿಯ ಯಾವ ಭರವಸೆಯನ್ನೂ ನೀಡಿಲ್ಲ ಎಂದು ಹೇಳುವುದಕ್ಕೆ ಶುರು ಮಾಡುತ್ತಾರೆ. ಇಂಥ ಘಟನೆಗಳಿಂದ ನಿಮಗೆ ಇತರರ ಮೇಲೆ ನಂಬಿಕೆ ಕಡಿಮೆ ಆಗುತ್ತಾ ಬರಲಿದೆ. ನಿಮ್ಮ ಮುಂದೆ ಒಂದು ರೀತಿಯಲ್ಲಿ ಇದ್ದು, ಬೆನ್ನ ಹಿಂದೆ ಇನ್ನೊಂದು ಮಾತನಾಡುತ್ತಾರೆ ಎಂಬ ಅನಿಸಿಕೆ ಬಲವಾಗಿ ಮನಸ್ಸಿನಲ್ಲಿ ಕೂರಲಿದೆ. ಇದರ ಜತೆಗೆ ಕುಟುಂಬ ಸದಸ್ಯರು ಹಾಗೂ ಸಂಬಂಧಿಗಳ ಬಗ್ಗೆ ಬೇಸರ ಉಂಟಾಗಲಿದೆ. ಅದಕ್ಕೆ ಕಾರಣ ಏನೆಂದರೆ, ನಾನು ಬೇರೆಯವರ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತೇನೆಯೇ ವಿನಾ ನನ್ನ ಕಷ್ಟ- ಸುಖಗಳಿಗೆ ಯಾರೂ ಆಗುವುದಿಲ್ಲ ಎಂದು ಅನಿಸುವುದಕ್ಕೆ ಶುರು ಆಗುತ್ತದೆ. ನೀವು ಕೆಲವು ಹಾಗೂ ಖಂಡಿತಾ ಮಾಡಬಹುದಾದ ನೆರವನ್ನೇ ಕೇಳಿದರೂ ಅವರು ಇಲ್ಲ ಎನ್ನುವುದರೊಂದಿಗೆ ಇನ್ನಷ್ಟು ಸಿಟ್ಟಿಗೇಳುವಂತೆ ಆಗುತ್ತದೆ. ಬ್ಯಾಂಕ್ ನಲ್ಲಿ ಎಫ್ ಡಿ ಮಾಡಿರುವವರು ಆ ಹಣ ಹಿಂತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಹೂಡಿಕೆಗಾಗಿ ನಿಮ್ಮಲ್ಲಿ ಕೆಲವರು ಭೂಮಿ, ಸೈಟಿಗಾಗಿ ಹುಡುಕಾಟವನ್ನು ಶುರು ಮಾಡಲಿದ್ದೀರಿ. ಕೃಷಿ ಹಾಗೂ ಕೃಷಿಗೆ ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸರ್ಕಾರದ ಕೆಲಸಗಳಲ್ಲಿ ಭಾರೀ ನಿಧಾನ ಆಗಲಿದೆ. ಅಥವಾ ಈಗಾಗಲೇ ನೀವು ಸಲ್ಲಿಸಿದ ದಾಖಲಾತಿಗಳು ಕಳೆದುಹೋಗುವಂಥ ಸಾಧ್ಯತೆಗಳು ಹೆಚ್ಚಿಗೆ ಇವೆ. ವೃತ್ತಿನಿರತರು ಯಾವುದೋ ಕೆಲಸದ ನಿಮಿತ್ತವಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ಆದರೆ ಇದರಿಂದ ಆಗಬೇಕಾದ ಕೆಲಸವು ಪೂರ್ಣ ಪ್ರಮಾಣದಲ್ಲಿ ಆಗದೆ ಮತ್ತೊಮ್ಮೆ ಹೋಗಲೇಬೇಕಾದ ಸನ್ನಿವೇಶವು ಉದ್ಭವಿಸುತ್ತದೆ. ಆದ್ದರಿಂದ ಸರಿಯಾಗಿ ಲೆಕ್ಕಾಚಾರ ಹಾಕಿಕೊಂಡು, ಸೂಕ್ತ ಸಿದ್ಧತೆ ಮಾಡಿಕೊಂಡು ಹೋಗಿ. ನಿಮ್ಮಲ್ಲಿ ಕೆಲವರು ವೃತ್ತಿಗೆ ಸಂಬಂಧಿಸಿದಂತೆ ತರಬೇತಿಗೋ ಅಥವಾ ಕೋರ್ಸ್ ಗೋ ಸೇರ್ಪಡೆ ಆಗುವಂಥ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಈ ವಾರ ಮಿಶ್ರ ಫಲಿತಾಂಶ ಕಾಣುವ ಯೋಗ ಇದೆ. ನಿಮ್ಮ ಜೀವನದ ಗುರಿಯನ್ನೇ ಬದಲಾಯಿಸುವಂಥ ವ್ಯಕ್ತಿಯೊಬ್ಬರನ್ನು ಭೇಟಿ ಆಗಲಿದ್ದೀರಿ. ನಿಮ್ಮ ನಿರ್ಧಾರಗಳಿಗೆ ಮನೆಯಲ್ಲಿ ಒಪ್ಪಿಗೆ ಸಿಗದೇ ಹೋಗಬಹುದು. ಮಹಿಳೆಯರಿಗೆ ರಕ್ತಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಲಿವೆ. ಹೊಟ್ಟೆನೋವು, ಬೆನ್ನು ಹುರಿ ಸಮಸ್ಯೆ ಸಹ ಕಾಡಬಹುದು. ವೈದ್ಯರು ನೀಡುವ ಔಷಧಿಯನ್ನು ಸರಿಯಾಗಿ ತೆಗೆದುಕೊಳ್ಳುವ ಕಡೆಗೆ ಲಕ್ಷ್ಯ ನೀಡಿ. ಅವಧಿ ಮುಗಿದಂತೆ ಔಷಧ ಸೇವಿಸಿ, ಸಮಸ್ಯೆಗಳಾಗುವ ಯೋಗ ಇರುವುದರಿಂದ ಅದರಿಂದಲೂ ಎಚ್ಚರಿಕೆಯನ್ನು ವಹಿಸಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಏನೇನು ಕಲಿಯಬೇಕು ಎಂದುಕೊಂಡಿದ್ದಿರೋ ಆ ಎಲ್ಲವನ್ನೂ ಕಲಿಯುವುದಕ್ಕೆ ಅವಕಾಶ ದೊರೆಯಲಿದೆ. ಇದರ ಜೊತೆಗೆ ನಿಮಗೆ ಇಷ್ಟು ಸಮಯ ಹವ್ಯಾಸ ಆಗಿರುವಂಥದ್ದು ಹಣಕಾಸಿನ ಉತ್ತಮ ಆದಾಯ ತರುವಂಥ ವೃತ್ತಿಯೇ ಆಗುವಂಥ ಸಾಧ್ಯತೆಗಳಿವೆ. ಉದ್ಯೋಗ ಸ್ಥಳದಲ್ಲೋ ಅಥವಾ ಸೆಮಿನಾರ್ ಗಳಲ್ಲಿ ಭಾಗವಹಿಸುತ್ತಿರುವವರು ಅಚ್ಚರಿಯಾದ ಬೆಳವಣಿಗೆಯನ್ನು ನಿರೀಕ್ಷೆ ಮಾಡಬಹುದು. ಇನ್ನೊಂದು ವಿಚಾರ ಕೂಡ ಈ ಸಂದರ್ಭದಲ್ಲಿ ನೆನಪಿನಲ್ಲಿರಲಿ, ಪ್ರೀತಿ- ಪ್ರೇಮದ ವಿಚಾರಗಳಿಗೆ ಪ್ರಾಮುಖ್ಯ ಬಂದು, ಬಹಳ ವೇಗವಾಗಿ ಈ ವಾರ ಕಳೆದು ಹೋಗಲಿದೆ. ಇನ್ನು ನೀವು ಬಹಳ ಕಾಲದಿಂದ ಮನಸ್ಸಿನಲ್ಲಿ ಯಾರನ್ನಾದರೂ ಇಷ್ಟ ಪಡುತ್ತಿದ್ದಲ್ಲಿ ಅವರ ಬಳಿ ಹೇಳಿಕೊಳ್ಳುವ ಸಾಧ್ಯತೆ ಇದೆ. ಆದರೆ ನೆನಪಿನಲ್ಲಿ ಇರಲಿ, ವಿಪರೀತ ನಿರೀಕ್ಷೆ ಇಟ್ಟುಕೊಂಡು, ಈ ಕೆಲಸ ಮಾಡಬೇಡಿ. ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಈ ಹಿಂದೆ ನಿರ್ದಿಷ್ಟ ಸಮಯದಲ್ಲಿ ಕೆಲಸ ಮಾಡಿಕೊಡುವುದಾಗಿ ಒಪ್ಪಿಕೊಂಡ ಕೆಲಸವನ್ನು ಮಾಡಿಕೊಡಲು ಸಾಧ್ಯವಾಗದೆ ನಿಮ್ಮ ಹೆಸರನ್ನು ಹಾಳು ಮಾಡಿಕೊಂಡಿದ್ದಲ್ಲಿ ವಹಿಸಿಕೊಂಡ ಕೆಲಸವನ್ನು ಹೇಳಿದ ಸಮಯದೊಳಗೆ ಮಾಡಿಕೊಡುವ ಕಡೆಗೆ ಗಮನ ನೀಡಿ. ಮನೆಯಲ್ಲಿ ಕುಟುಂಬ ಸದಸ್ಯರ ಆರೋಗ್ಯ, ಶಿಕ್ಷಣ ಅಥವಾ ಮತ್ಯಾವುದಾದರೂ ಕಾರಣಕ್ಕೆ ಹಣವನ್ನು ನೀಡಬೇಕಾಗಬಹುದು. ಇನ್ನು ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ವೃತ್ತಿಯಲ್ಲಿ ಇರುವವರು ಮನೆಗೆ ಪಶುಗಳನ್ನು ತರುವ ಸಾಧ್ಯತೆ  ಇದೆ. ಕೃಷಿ ಜಮೀನು ಇರುವಂಥವರು ಅದರಲ್ಲಿ ಕೆಲವು ಅಭಿವೃದ್ಧಿ ಕೆಲಸಗಳನ್ನು ಮಾಡಿಸಲಿದ್ದೀರಿ. ಸಾವಯವ ಕೃಷಿಯನ್ನು ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಮಾರ್ಗೋಪಾಯಗಳು ಗೋಚರ ಆಗಲಿವೆ. ಪ್ರತಿಷ್ಠಿತ ಮಾರಾಟ ಸಂಸ್ಥೆಗಳ ಜತೆಗೆ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ. ವೃತ್ತಿನಿರತರಿಗೆ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ನಿರ್ಧಾರ ಮಾಡುವಾಗ ಇತರರು ಹೇಳುವ ಮಾತನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಅವಕಾಶಗಳನ್ನು ಚೆನ್ನಾಗಿ ಬಳಸುವ ಕಡೆಗೆ ಗಮನವನ್ನು ನೀಡಿ. ವಿದ್ಯಾರ್ಥಿಗಳು ಹೊಸದಾಗಿ ಆಗುವ ಸ್ನೇಹಿತರ ಬಗ್ಗೆ ಜಾಗರೂಕತೆಯಿಂದ ಇರಿ. ಹೊಸಬರ ಜತೆಗೆ ನಿಮ್ಮ ವೈಯಕ್ತಿಕ ವಿಚಾರವನ್ನು ಹಂಚಿಕೊಳ್ಳಬೇಡಿ. ಮಹಿಳೆಯರಿಗೆ ಹೊಸ ಆದಾಯ ಮೂಲ ಮಾಡಿಕೊಳ್ಳುವುದಕ್ಕೆ ಅವಕಾಶಗಳು ಹುಡುಕಿಕೊಂಡು ಬರಲಿವೆ. ಷೇರು- ಮ್ಯೂಚುವಲ್ ಫಂಡ್ ಇಂಥದ್ದರಲ್ಲಿ ಈಗಾಗಲೇ ಹಣ ಹೂಡಿಕೆ ಮಾಡಿರುವಂಥವರು ಅದನ್ನು ಹಿಂಪಡೆದುಕೊಳ್ಳುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಉದ್ಯೋಗ- ವ್ಯಾಪಾರ ಮಾಡುತ್ತಿರುವವರಿಗೆ ಅಥವಾ ಮಾಡಬೇಕು ಎಂದಿರುವವರಿಗೆ ಸಂಬಂಧಿಕರು, ಸ್ನೇಹಿತರ ಬೆಂಬಲ ದೊರೆಯುವಂಥ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿ ಸ್ವಲ್ಪ ಮಟ್ಟಿಗೆ ಒತ್ತಡ ಆಗಬಹುದು. ಅದರಲ್ಲೂ ಪ್ರಮುಖ ಹುದ್ದೆಯಲ್ಲಿ ಇರುವಂಥವರು ನಿಮ್ಮ ಆಲೋಚನೆಯನ್ನು ಯಥಾವತ್ತಾಗಿ ಜಾರಿ ಮಾಡುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಅಥವಾ ನಿಮಗಿಂತ ಮೇಲಿನ ಹುದ್ದೆಯಲ್ಲಿ ಇರುವಂಥವರು ಎಲ್ಲ ನಿರ್ಧಾರಗಳಲ್ಲೂ ಮೂಗು ತೂರಿಸುತ್ತಾರೆ ಎಂಬ ಕಾರಣಕ್ಕೆ ಆಕ್ರೋಶ ಹಾಗೂ ಅಸಮಾಧಾನ ನಿಮ್ಮಲ್ಲಿ ಹುಟ್ಟಿಕೊಳ್ಳಲಿದೆ. ಇದರ ಪರಿಣಾಮವಾಗಿ ಯಾಕಾದರೂ ಕೆಲಸಕ್ಕೆ ಹೋಗಬೇಕೋ ಎಂಬಷ್ಟು ಬೇಸರ ಆಗಲಿದೆ. ಕೆಲಸ ಬಿಟ್ಟು ಸ್ವಂತ ವ್ಯವಹಾರವೋ- ವ್ಯಾಪಾರವೋ ಶುರು ಮಾಡಿಬಿಡೋಣ ಎಂದು ಸಹ ನಿಮ್ಮ ಮನಸ್ಸಿಗೆ ಬಲವಾಗಿ ಅನಿಸಲಿಕ್ಕೆ ಶುರು ಆಗಬಹುದು. ಅದಕ್ಕೆ ಕಾರಣ ಏನೆಂದರೆ ಉದ್ಯೋಗದಲ್ಲಿ ನಿಮ್ಮ ಮೇಲಧಿಕಾರಿಗಳ ಜತೆಗೆ ಸಣ್ಣ- ಪುಟ್ಟ ವಿಚಾರಗಳು ಸಹ ವ್ಯಾಜ್ಯದ ರೂಪ ಪಡೆದುಕೊಳ್ಳುತ್ತದೆ. ತುಂಬ ತುರ್ತಾಗಿ ರಜೆ ಬೇಕು ಎಂದರೂ ಸಹ ದೊರೆಯದೆ ಬಹಳ ಬೇಸರ ಆಗಲಿದೆ. ಇದಕ್ಕೂ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನೀವು ಆಡದಿರುವ ಮಾತುಗಳನ್ನು ನೀವೇ ಆಡಿದ್ದೀರಿ, ಇದು ನಾನೇ ಕೇಳಿಸಿಕೊಂಡಿದ್ದೀನೆಂದು ಕೆಲವರು ನಿಮ್ಮೊಂದಿಗೆ ವಾದಕ್ಕೆ ಇಳಿಯಬಹುದು. ಈ ಅವಧಿಯಲ್ಲಿ ಪ್ರತಿಯೊಂದಕ್ಕೆ ಸಮರ್ಥನೆ ನೀಡುತ್ತಾ ಹೋಗದಿರಿ. ಏಕೆಂದರೆ ನಿಮ್ಮನ್ನು ನಂಬಲೇಬಾರದು, ಮಾತು ಕೇಳಿಸಿಕೊಳ್ಳಲೇಬಾರದು ಎಂದು ನಿಶ್ಚಯಿಸಿದವರನ್ನು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಯಾರು ಕೃಷಿಗೆ ಸಂಬಂಧಿಸಿದ ವೃತ್ತಿಯಲ್ಲಿ ಇದ್ದೀರಿ ಅಥವಾ ಕೃಷಿಕರಿಗೆ ಭವಿಷ್ಯದ ಬಗ್ಗೆ ಚಿಂತೆ ಬಹಳವಾಗಿ ಕಾಡಲಿದೆ. ಅದರಲ್ಲೂ ಹೆಣ್ಣುಮಕ್ಕಳು ಇರುವಂಥವರು ಮದುವೆಗೆ ಹಣ ಹೊಂದಿಸುವ ಬಗ್ಗೆ ತೀರಾ ಗಂಭೀರವಾದ ಆಲೋಚನೆಯನ್ನು ಮಾಡಲಿದ್ದೀರಿ. ಇನ್ನು ವೃತ್ತಿನಿರತರಿಗೆ ಪ್ರತಿಸ್ಪರ್ಧಿಗಳು ಹೆಚ್ಚಾಗುತ್ತಿದ್ದಾರೆ ಎಂಬ ಭಾವವು ಮನಸ್ಸಿನಲ್ಲಿ ಗಾಢವಾಗಿ ಮೂಡುತ್ತದೆ. ನೀವು ವಿಧಿಸುವ ಶುಲ್ಕಕ್ಕಿಂತ ಬಹಳ ಕಡಿಮೆ ಮೊತ್ತಕ್ಕೆ ಕೆಲಸ ಮಾಡಿಕೊಡುತ್ತಾ ಜನರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. ವಿದ್ಯಾರ್ಥಿಗಳಿಗೆ ಕೆಲವು ಮುಖ್ಯ ವಿಚಾರಗಳು ಮರೆತು ಹೋಗಿ, ಸ್ನೇಹಿತರ ಮಧ್ಯೆ ನಗೆಪಾಟಲಿಗೆ ಗುರಿ ಆಗಬೇಕಾಗುತ್ತದೆ. ಮಹಿಳೆಯರಿಗೆ ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ, ಮಾತಿನ ಮೌಲ್ಯ ಹೆಚ್ಚಾಗಲಿದ್ದು, ಪ್ರಭಾ ವಲಯ ಸಹ ವಿಸ್ತರಿಸಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಮೇಲುನೋಟಕ್ಕೆ ಏನು ಕಾಣುತ್ತದೋ ಅದೇ ನಿಜವೆಂದು ಭ್ರಮಿಸುವುದನ್ನು ಬಿಡಬೇಕು. ಈ ವಾರದಲ್ಲಿ ನಿಮಗೆ ಗೊತ್ತಿರಬೇಕಾದ ಸಂಗತಿ ಏನೆಂದರೆ, ನೀವು ಕೆಲಸವೇ ಮಾಡದೆ ಸುಮ್ಮನಿದ್ದರೂ ಪರವಾಗಿಲ್ಲ, ಆದರೆ ಪೂರ್ತಿಯಾಗಿ ತಿಳಿದುಕೊಳ್ಳದೆ ಯಾವುದೇ ಕೆಲಸವನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ. ಅಂದರೆ ಇದನ್ನು ನೀವು ಹೇಗೆ ಅರ್ಥ ಮಾಡಿಕೊಳ್ಳಬೇಕು ಅಂದರೆ, ಒಂದು ಕೆಲಸವೋ ಪ್ರಾಜೆಕ್ಟೋ ಅಥವಾ ಇನ್ಯಾವುದೇ ವಿಚಾರ ಇರಬಹುದು, ಅದರಲ್ಲಿ ನಿಮ್ಮ ಪಾತ್ರ ಏನು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ತನಕ ಯಾವುದೇ ಮಾತುಗಳನ್ನು ಆಡದಿರಿ. ಹಣಕಾಸಿನ ವಿಚಾರದಲ್ಲಿಯಂತೂ ನಿಮ್ಮ ಅಭಿಪ್ರಾಯವನ್ನು ಹೇಳುವುದಕ್ಕೆ ಹೋಗಬೇಡಿ. ಇನ್ನು ನೀವು ಕಳಿಸುವ ಇಮೇಲ್, ವಾಟ್ಸ್ ಅಪ್ ಸಂದೇಶಗಳು ಕೂಡ ಅಷ್ಟೇ, ಅದರ ಫಲಿತಾಂಶ ಏನಾಗಬಹುದು ಎಂಬ ಬಗ್ಗೆ ಸಣ್ಣದೊಂದು ಆಲೋಚನೆಯನ್ನು ಇಟ್ಟುಕೊಂಡ ನಂತರವೇ ಮುಂದುವರಿಯಿರಿ. ಏಕೆಂದರೆ ಈ ಅವಧಿಯಲ್ಲಿ ನೀವಾಡಿದ ಮಾತು ನಿಮಗೇ ಬೂಮ್ ರಾಂಗ್ ಆಗುವ ಸಾಧ್ಯತೆಗಳಿವೆ. ಕಷ್ಟಪಟ್ಟು ಬೆಳೆಸಿಕೊಂಡಿದ್ದ ವರ್ಚಸ್ಸು, ರೂಢಿಸಿಕೊಂಡಿದ್ದ ಸಂಪರ್ಕ ಎಲ್ಲವೂ ಏಕಾಏಕಿ ಕಡಿತ ಆಗುವ ಸಾಧ್ಯತೆ ಇದೆ. ಆದ್ದರಿಂದ ಪಾರದರ್ಶಕವಾಗಿ ನಡೆದುಕೊಳ್ಳುವುದಕ್ಕೆ ಪ್ರಯತ್ನಿಸಿ. ನೀವು ಆಡಿದ ಮಾತುಗಳು, ವ್ಯಕ್ತಪಡಿಸಿದ ನಿಲುವುಗಳಿಂದ ಯಾರಿಗಾದರೂ ಬೇಸರ ಆದಲ್ಲಿ, ಒಂದು ವೇಳೆ ಕ್ಷಮೆ ಕೇಳಿದರೆ ಸಮಸ್ಯೆಗಳು ಬಗೆಹರಿಯುತ್ತದೆ ಎಂದಾದಲ್ಲಿ ಯಾವುದೇ ಅಹಂಕಾರ ಇಟ್ಟುಕೊಳ್ಳದೆ ಕ್ಷಮೆ ಕೇಳಿಬಿಡಿ. ಇನ್ನು ಕೃಷಿಕರಿಗೆ ಫಸಲು ನಷ್ಟ, ಮಾಡಿದ್ದ ಹೂಡಿಕೆಯಲ್ಲಿ ನಷ್ಟ, ಇತರರ ಚಾಡಿ ಮಾತಿನಿಂದ ಮನಸ್ಸಿಗೆ ಘಾಸಿ ಇತ್ಯಾದಿ ಅಶುಭ ಫಲಗಳು ಇವೆ. ಕುಟುಂಬ ಸದಸ್ಯರು ಆಸ್ತಿಯಲ್ಲಿ ಪಾಲು ಬೇಕೆಂದು ಪಟ್ಟು ಹಿಡಿದು ಕೇಳುವಂಥ ಸಾಧ‌್ಯತೆಗಳು ಹೆಚ್ಚಿವೆ. ಈ ಕಾರಣದಿಂದ ನಿಮಗೆ ಬಹಳ ಒತ್ತಡ ಎದುರಾಗುತ್ತದೆ. ವೃತ್ತಿ ನಿರತರಿಗೆ ದೀರ್ಘಕಾಲದಿಂದ ಕಾಡುತ್ತಿದ್ದ ಸವಾಲೊಂದು ರಾಜೀ- ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ಒದಗಿ ಬರುತ್ತದೆ. ಅನುಭವಿಗಳು, ನೀವು ಗೌರವಿಸುವಂಥ ವ್ಯಕ್ತಿಗಳು ಏನಾದರೂ ಸಲಹೆ ನೀಡಿದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ. ವಿದ್ಯಾರ್ಥಿಗಳು ಮುಖ್ಯವಾದ ಕೆಲಸಗಳನ್ನು ಮುಂದಕ್ಕೆ ಹಾಕುವುದಕ್ಕೆ ಹೋಗಬೇಡಿ. ಉನ್ನತ ವ್ಯಾಸಂಗ ಮಾಡಬೇಕು ಎಂದಿರುವವರಿಗೆ ಅನುಕೂಲ ಇದೆ. ಮಹಿಳೆಯರು ಚಿನ್ನಾಭರಣ, ವಸ್ತ್ರ ಇತ್ಯಾದಿಗಳನ್ನು ಖರೀದಿಸುವುದಕ್ಕೆ ಮನಸ್ಸು ಮಾಡಲಿದ್ದೀರಿ. ಇದಕ್ಕಾಗಿ ನಿಮ್ಮ ಸಂಗಾತಿಯಿಂದ ಹಣ ಪಡೆದುಕೊಳ್ಳಲಿದ್ದೀರಿ. ಉದ್ದೋಗಸ್ಥ ಮಹಿಳೆಯರಿಗೆ ಸಾಲ ಜಾಸ್ತಿ ಆಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮಗಿರುವ ಸಂಪೂರ್ಣ ಸಾಮರ್ಥ್ಯದ ಬಳಕೆಯನ್ನು ಮಾಡಿಕೊಳ್ಳುವುದಕ್ಕೆ ಬಹಳ ಒಳ್ಳೆಯ ಸಮಯ ಇದು. ಒಂದು ವೇಳೆ ನಿಮ್ಮ ಮೊಬೈಲ್ ಫೋನ್ ಸಮಸ್ಯೆ ಇದ್ದಲ್ಲಿ ಅಥವಾ ನಿಮ್ಮ ಸಿಮ್ ಕಾರ್ಡ್ ನದೇ ಸಮಸ್ಯೆ ಇರಬಹುದು ಅಥವಾ ನೀವು ಹೆಚ್ಚು ಸಮಯ ಇರುವಂಥ ಸ್ಥಳದಲ್ಲಿ ಕಾಲ್ ಸಿಗ್ನಲ್ ಅಥವಾ ಇಂಟರ್ ನೆಟ್ ಸಿಗ್ನಲ್ ಸರಿಯಾಗಿ ಬರುತ್ತಿಲ್ಲ ಎಂದಾದಲ್ಲಿ ಆ ಬಗ್ಗೆ ಹೆಚ್ಚಿನ ಗಮನ ವಹಿಸಿ, ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಏಕೆಂದರೆ ನಿಮ್ಮನ್ನು ಸಂಪರ್ಕಿಸುವುದಕ್ಕೆ, ತಲುಪುವುದಕ್ಕೆ ಇರುವಂಥ ಸಾಧನಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ. ಏಕೆಂದರೆ ಏಕಾಏಕಿ ಹಲವರಿಗೆ ನಿಮ್ಮ ನೆರವಿನ ಅಗತ್ಯ ಕಂಡುಬರುತ್ತದೆ. ನಿಮಗೇ ಅಚ್ಚರಿ ಆಗುವ ರೀತಿಯಲ್ಲಿ ಯಾರ್ಯಾರೋ ನಿಮ್ಮನ್ನು ಭೇಟಿ ಮಾಡುವುದಕ್ಕೆ, ಕರೆ ಮಾಡುವುದಕ್ಕೆ ಆರಂಭಿಸುತ್ತಾರೆ. ಅದರರ್ಥ ಏನೆಂದರೆ, ಉದ್ಯೋಗದಲ್ಲಾಗಲೀ ನಿಮ್ಮದೇ ವೃತ್ತಿಯಲ್ಲಾಗಲೀ ಬೇಡಿಕೆ ಹೆಚ್ಚಾಗಲಿದೆ. ನಿಮ್ಮನ್ನು ಹೊಗಳುವವರು ಸಹ ಹೆಚ್ಚಾಗಲಿದ್ದಾರೆ. ಆದರೆ ನೆನಪಿನಲ್ಲಿಡಿ, ಈ ಸಂದರ್ಭದಲ್ಲಿ ನೆಲದ ಮೇಲೆಯೇ ನಿಂತ ಕಾಲು ಹಾಗೇ ನೆಟ್ಟಿರಲಿ. ಅಹಂಕಾರ ಪಡದಿರಿ. ನಿಮ್ಮ ಕೆಲಸಕ್ಕೆ ಇರುವ ಬೇಡಿಕೆಯನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎಂಬ ಕಡೆಗೆ ನಿಮ್ಮ ಲಕ್ಷ್ಯ ಇರಲಿ. ಕೃಷಿಕರಿಗೆ ಅಧ್ಯಯನಕ್ಕಾಗಿ ಹೊಸ ಪ್ರದೇಶಗಳಿಗೆ ಪ್ರಯಾಣಕ್ಕೆ ತೆರಳುವಂಥ ಯೋಗ ಇದೆ. ಇದರ ಜತೆಗೆ ಮನೆಗೆ ಹೊಸ ಹೊಸ ವಸ್ತುಗಳನ್ನು ಖರೀದಿಸಿ ತರಲಿದ್ದೀರಿ. ಸರ್ಕಾರದ ಯೋಜನೆಗಳಿಂದ ಕೆಲವು ಪ್ರಯೋಜನಗಳು ನಿಮಗೆ ಆಗಲಿವೆ, ಸೋಷಿಯಲ್ ಮೀಡಿಯಾದಲ್ಲಿಯಾಗಲೀ ಅಥವಾ ಡಿಜಿಟಲ್ ಮಾಧ್ಯಮದಲ್ಲಾಗಲೀ ನಿಮ್ಮ ಬಗ್ಗೆ ಸುದ್ದಿ ಪ್ರಸಾರ ಆಗುವಂಥ ಯೋಗ ಇದೆ. ವೃತ್ತಿ ನಿರತರಿಗೆ ಬಹಳ ಸಮಯದಿಂದ ಎದುರು ನೋಡುತ್ತಿದ್ದ ಹುದ್ದೆ ಅಥವಾ ಜವಾಬ್ದಾರಿ ದೊರೆಯಲಿದೆ. ಇಷ್ಟು ಕಾಲ ಯಾರು ನಿಮ್ಮನ್ನು ತಿರಸ್ಕಾರದಿಂದ ನೋಡುತ್ತಿದ್ದರೋ ಅವರೇ ತಮ್ಮದೊಂದು ಕೆಲಸ ಆಗಬೇಕು ಎಂದು ಹುಡುಕಿಕೊಂಡು ಬರಲಿದ್ದಾರೆ. ಇನ್ನು ವಿದ್ಯಾರ್ಥಿಗಳಿಗೆ ಆಹಾರ- ನೀರಿನಲ್ಲಿ ಏರುಪೇರಾಗಿ, ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು. ಆದ್ದರಿಂದ ಶುಚಿಯಾದ ಆಹಾರ- ಶುದ್ಧವಾದ ನೀರಿನ ಸೇವನೆ ಕಡೆಗೆ ಗಮನವನ್ನು ನೀಡಿ. ಮಹಿಳೆಯರು ಇತರರ ಮದುವೆ ವಿಚಾರಕ್ಕೆ ಮಾತುಕತೆ ಆಡುವುದಕ್ಕೆ ತೆರಳುವಂಥ ಯೋಗ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ದೀರ್ಘಾವಧಿಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಸಮಯ ಇದಾಗಿರುತ್ತದೆ. ಇನ್ನು ಇದೇ ವೇಳೆ ಬಾಂಧವ್ಯಗಳು, ಸಂಬಂಧಗಳು ನಿಮಗೆ ಬಹಳ ಮುಖ್ಯವಾಗಲಿವೆ. ಸಾಮರ್ಥ್ಯವನ್ನು ಮೀರಿ ಪ್ರಯತ್ನಿಸಬೇಕು ಎಂಬ ಅರಿವಿದ್ದರೂ ಅದಕ್ಕಾಗಿ ಗಟ್ಟಿಯಾಗಿ ನಿಲ್ಲಲಿದ್ದೀರಿ. ಇನ್ನು ಇದೇ ಸಮಯದಲ್ಲಿ ಕುಟುಂಬದ ಸಲುವಾಗಿಯಾದರೂ ನಿಮ್ಮ ಜವಾಬ್ದಾರಿಗಳನ್ನು ಪೂರ್ಣಗೊಳಿಸಬೇಕಾದ ಸನ್ನಿವೇಶ ಎದುರಾಗಲಿದೆ. ಅದಕ್ಕೆ ನೀವೂ ಸಿದ್ಧರಾಗಲಿದ್ದೀರಿ. ಅದೇನೆಂದರೆ ಮನೆಯಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ಆರಂಭವಾಗಲಿದೆ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸಬೇಕೆಂದು ಇರುವವರು ಅಥವಾ ಪರ್ಸನಲ್ ಲೋನ್ ಮಾಡಬೇಕು ಎಂದು ಇರುವವರಿಗೆ ಹಣಕಾಸಿನ ವ್ಯವಸ್ಥೆ ಸುಲಭವಾಗಿ ಆಗುತ್ತದೆ. ಆದರೆ ಆತುರ ಮಾಡಲಿಕ್ಕೆ ಹೋಗಬಾರದು. ಜತೆಗೆ ಮನೆಗೆ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ಖರೀದಿಸಿ, ತರುವುದಕ್ಕೆ ಮನಸ್ಸು ಮಾಡಲಿದ್ದೀರಿ. ಇದರ ಜತೆಗೆ ಶಾಪಿಂಗ್ ಮಾಡುವ ಸಲುವಾಗಿ ನೀವಿರುವ ಸ್ಥಳದಿಂದ ಬೇರೆಡೆಗೆ ತೆರಳುವಂಥ ಸಾಧ್ಯತೆ ಇದೆ. ಈ ವಾರದಲ್ಲಿ ನೀವು ಕಾರು- ಬೈಕ್ ಚಲಾಯಿಸುವಾಗ ಬಹಳ ಜಾಗ್ರತೆಯಿಂದ ಇರಬೇಕು. ಅವುಗಳ ಸರ್ವೀಸ್ ಸಮಯಕ್ಕೆ ಸರಿಯಾಗಿ ಆಗಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಕೃಷಿಕರಿಗೆ ದೇವತಾರಾಧನೆ, ಹೋಮ- ಹವನ, ಪೂಜೆಗಳಿಗೆ ಹಣ ಖರ್ಚು ಮಾಡುವಂಥ ಯೋಗ ಇದೆ. ಮನೆಗೆ ಸಂಬಂಧಿಕರು ಸಹ ಭೇಟಿ ನೀಡಲಿದ್ದು, ಇದರಿಂದ ಖರ್ಚಿನ ಪ್ರಮಾಣ ಜಾಸ್ತಿ ಆಗಲಿದೆ. ಯಾರದೋ ಮೇಲಿನ ಕೋಪ ಇನ್ಯಾರ ಮೇಲೋ ತೋರಿಸಿದರು ಎಂಬಂತೆ ನಿಮ್ಮ ಅಸಹಾಯಕತೆಯನ್ನು ಆಪ್ತರ ಮೇಲೆ ಕೋಪವಾಗಿ ತೋರಿಸಲಿದ್ದೀರಿ. ವೃತ್ತಿನಿರತರಿಗೆ ನಿಶ್ಚಿತ ಖರ್ಚುಗಳ ಹೊರೆ ಜಾಸ್ತಿ ಆಗಲಿದೆ. ಬಾಡಿಗೆ ಜಾಸ್ತಿ ಮಾಡಬಹುದು, ಈಗಾಗಲೇ ನಿಮ್ಮ ಬಳಿ ಕೆಲಸ ಮಾಡುತ್ತಿರುವವರು ಹೆಚ್ಚಿನ ವೇತನಕ್ಕೆ ಬೇಡಿಕೆ ಇಟ್ಟು, ಅದನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಕನಿಷ್ಠ ಪಕ್ಷ ನೀವು ವಾಸ ಇರುವಂಥ ಅಪಾರ್ಟ್ ಮೆಂಟ್, ಕಚೇರಿ ಅಥವಾ ಯಾವುದೇ ಸ್ಥಳದ ನಿರ್ವಹಣೆ ಶುಲ್ಕವಾದರೂ ಜಾಸ್ತಿ ಆಗುವಂಥ ಅವಕಾಶಗಳು ಇವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಒತ್ತಡ ಸೃಷ್ಟಿ ಆಗುತ್ತದೆ. ಕೆಲವು ವಿಷಯಗಳ ವ್ಯಾಸಂಗ ಕಷ್ಟ ಎಂದು ಬಹಳ ಅನಿಸತೊಡಗುತ್ತದೆ. ಮಹಿಳೆಯರಿಗೆ ತವರು ಮನೆ ಕಡೆಯಿಂದ ಶುಭ ಕಾರ್ಯಗಳಿಗೆ ಆಹ್ವಾನ ಬರಲಿದೆ. ಈ ಸಂದರ್ಭದಲ್ಲಿ ಕೆಲವು ಅನುಕೂಲಗಳು ಸಹ ಒದಗಿ ಬರಬಹುದು.

ಲೇಖನ- ಎನ್‌.ಕೆ.ಸ್ವಾತಿ

ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ