Saturn transit in Pisces: ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ಮಿಥುನ ರಾಶಿ ಮೇಲೆ ಏನು ಪ್ರಭಾವ?
ಈ ಸಂಚಾರದೊಂದಿಗೆ ಹೊಸ ಹೊಸ ಸವಾಲುಗಳು ಮಿಥುನ ರಾಶಿಯವರ ಪಾಲಿಗೆ ಉದ್ಭವಿಸಲಿದೆ. ಅಂದ ಹಾಗೆ ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ. ಮಾರ್ಚ್ ನಲ್ಲಿ ಶನಿ ಗ್ರಹವಾದರೆ, ಮೇ ತಿಂಗಳಲ್ಲಿ ಗುರು, ರಾಹು- ಕೇತುಗಳು ಸಂಚಾರದಲ್ಲಿ ಬದಲಾವಣೆಯಿದೆ.

2025ನೇ ಮಾರ್ಚ್ ತಿಂಗಳ 29ನೇ ತಾರೀಕು ಶನಿ ಗ್ರಹವು ಕುಂಭ ರಾಶಿಯಿಂದ ಮೀನಕ್ಕೆ ಪ್ರವೇಶಿಸುತ್ತದೆ. ಅದೇ ರಾಶಿಯಲ್ಲಿ ಜೂನ್ 3, 2027ರ ತನಕ ಇರುತ್ತದೆ. ಈ ಸಂಚಾರದೊಂದಿಗೆ ಹೊಸ ಹೊಸ ಸವಾಲುಗಳು ಮಿಥುನ ರಾಶಿಯವರ ಪಾಲಿಗೆ ಉದ್ಭವಿಸಲಿದೆ. ಅಂದ ಹಾಗೆ ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ. ಮಾರ್ಚ್ ನಲ್ಲಿ ಶನಿ ಗ್ರಹವಾದರೆ, ಮೇ ತಿಂಗಳಲ್ಲಿ ಗುರು, ರಾಹು- ಕೇತುಗಳು ಸಂಚಾರದಲ್ಲಿ ಬದಲಾವಣೆಯಿದೆ.
ಇನ್ನು ಶನಿ ಗ್ರಹಕ್ಕೆ ಮಕರ ಹಾಗೂ ಕುಂಭ ರಾಶಿಗಳು ಸ್ವಕ್ಷೇತ್ರವಾಗುತ್ತವೆ. ತುಲಾ ರಾಶಿಯು ಉಚ್ಚ ಕ್ಷೇತ್ರ ಮತ್ತು ಮೇಷ ರಾಶಿಯು ನೀಚ ಕ್ಷೇತ್ರವಾಗುತ್ತದೆ. ಮೀನ ರಾಶಿಯ ಅಂತಿಮ ಡಿಗ್ರಿಗಳಿಗೆ ತಲುಪುತ್ತಿದ್ದಂತೆಯೇ ಮೇಷ ರಾಶಿಯ ನೀಚಸ್ಥ ಫಲವನ್ನು ಶನಿ ಗ್ರಹ ನೀಡಲು ಆರಂಭಿಸುತ್ತದೆ.
ಹನ್ನೆರಡು ರಾಶಿಗಳ ಮೇಲೂ ಈ ಶನಿ ಸಂಚಾರದ ಫಲ ಇರಲಿದ್ದು, ಇದೀಗ ಮಿಥುನ ರಾಶಿಯ ಮೇಲೆ ಏನು ಪ್ರಭಾವ ಆಗಲಿದೆ ಎಂಬ ವಿವರ ಇಲ್ಲಿದೆ.
ನಿಮ್ಮ ರಾಶಿಗೆ ಹತ್ತನೇ ಮನೆಗೆ ಶನಿ ಗ್ರಹದ ಪ್ರವೇಶ ಆಗುತ್ತದೆ. ಇದು ಕರ್ಮ ಸ್ಥಾನ. ಉದ್ಯೋಗ ಮಾಡುತ್ತಿರುವವರು ಬಹಳ ಒತ್ತಡವನ್ನು ಎದುರಿಸಬೇಕಾಗುತ್ತದೆ. ಕೆಲಸವೇ ಬೇಡ ಎಂದೆನಿಸುವ ಮಟ್ಟಿಗೆ ರೇಜಿಗೆ ಆಗುತ್ತದೆ. ನಿಮ್ಮಲ್ಲಿ ಬಹುತೇಕರಿಗೆ ಉದ್ಯೋಗ ಸ್ಥಳದಲ್ಲಿ ವಿಪರೀತ ಹಿಂಸೆಯಾಗುತ್ತದೆ. ನೀವು ಮಾಡುವ ಕೆಲಸ- ಕಾರ್ಯಗಳಿಗೆ ಇ-ಮೇಲ್ ಮೂಲಕ ಒಪ್ಪಿಗೆ ಪಡೆದುಕೊಂಡ ನಂತರವೇ ಮುಂದುವರಿಯಿರಿ. ಬರೀ ಬಾಯಿ ಮಾತಿನಲ್ಲಿ ಹೇಳಿದರು ಎಂಬ ಕಾರಣಕ್ಕೆ ನೀವು ಮುಂದುವರಿದಲ್ಲಿ ಸಮಸ್ಯೆಗೆ ಸಿಲುಕಿಕೊಳ್ಳಲಿದ್ದೀರಿ.
ಇಷ್ಟು ಸಮಯ ನಿಮ್ಮ ಕಷ್ಟ ಕಾಲದಲ್ಲಿ ಸಹಾಯ ಮಾಡುತ್ತಿದ್ದವರು- ಸಲಹೆ ನೀಡುತ್ತಿದ್ದವರ ನೆರವು ಸಹ ದೊರೆಯದಂತೆ ಆಗುತ್ತದೆ. ಹಣಕಾಸಿನ ವಿಚಾರಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರುವ, ಕೋರ್ಟ್- ಕಚೇರಿ ಅಂತ ಅಲೆದಾಡುವ ಸನ್ನಿವೇಶಗಳು ಸೃಷ್ಟಿ ಆಗಲಿವೆ. ಒಂದು ವೇಳೆ ನೀವೇನಾದರೂ ಜಾಮೀನಾಗಿ ನಿಂತು, ಯಾರಿಗಾದರೂ ಸಾಲ ಕೊಡಿಸಿದ್ದಲ್ಲಿ ಅದನ್ನು ವಾಪಸ್ ಕೊಡಿಸುವುದಕ್ಕೆ ಪ್ರಯತ್ನಿಸಿ. ಇನ್ನು ಈ ಸಮಯದಲ್ಲಿ ನೀವು ಬೇರೆಯವರ ಸಾಲಕ್ಕೋ ಅಥವಾ ಅವರು ಪಡೆದುಕೊಳ್ಳುವ ಹಣಕ್ಕೋ ಜಾಮೀನಾಗಿ ನಿಲ್ಲುವುದಕ್ಕೆ ಹೋಗಬೇಡಿ. ಒಂದು ವೇಳೆ ಬಾಯಿ ಮಾತಿಗೆ ಅಂತ ಹೇಳಿದ್ದರೂ ಅದು ನಿಮ್ಮ ಪಾಲಿಗೆ ಸಮಸ್ಯೆ ಆಗಲಿದೆ.
ನಯವಾಗಿ ಮಾತನಾಡಿಕೊಂಡು, ಯಾವುದೇ ರಗಳೆ ಇಲ್ಲದೆ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಬಿಡೋಣ ಎಂದು ನೀವು ಅಂದುಕೊಂಡರೂ ಅದು ಹಲವರ ಚರ್ಚೆಗೆ ಗ್ರಾಸವಾಗಲಿದೆ. ಈ ಹಿಂದಿನಂತೆ ನಿಮ್ಮ ಮಾತಿಗೆ ಗೌರವ ಕೂಡ ಸಿಗುವುದಿಲ್ಲ. ಯಾರನ್ನು ನೀವು ಬಹಳ ನಂಬಬಹುದು ಎಂದುಕೊಂಡು ಎಲ್ಲ ವಿಚಾರಗಳನ್ನು ಹಂಚಿಕೊಂಡಿರುತ್ತೀರೋ ಅವರೇ ನಿಮಗೆ ದ್ರೋಹ ಬಗೆಯಲಿದ್ದಾರೆ.
ರಾಜಕಾರಣಿಗಳು ತಮ್ಮ ಹುದ್ದೆಯನ್ನು ಕಳೆದುಕೊಂಡು, ಅವಮಾನಕ್ಕೆ ಗುರಿ ಆಗಬೇಕಾಗುತ್ತದೆ. ಹಗರಣಗಳು- ತಪ್ಪುಗಳಲ್ಲಿ ಸಿಲುಕಿಕೊಂಡು, ಗೌರವ- ಮರ್ಯಾದೆಗಳನ್ನು ಕಳೆದುಕೊಳ್ಳುವಂಥ ಸನ್ನಿವೇಶ ಎದುರಾಗಲಿದೆ. ಈ ಹಿಂದಿನ ಆರೋಗ್ಯ ಸಮಸ್ಯೆಗಳು, ಆಪರೇಷನ್ ಮಾಡಿಸಿದ್ದಲ್ಲಿ ಅವು ದೈಹಿಕವಾಗಿ ಹಿಂಸೆ ನೀಡುವುದಕ್ಕೆ ಆರಂಭಿಸುತ್ತವೆ. ತಂದೆ ಅಥವಾ ತಂದೆ ಸಮಾನರ ಸಹಾಯ ನಿಮ್ಮ ಕಷ್ಟ ಕಾಲಕ್ಕೆ ದೊರೆಯದಂತೆ ಆಗುತ್ತದೆ. ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಹೆಸರಿಗೆ ಕಳಂಕ ಬಂದು, ವರ್ಚಸ್ಸಿಗೆ ಹಾನಿ ಆಗುತ್ತದೆ.
-ಸ್ವಾತಿ ಎನ್.ಕೆ.




