116ರ ಹರೆಯದಲ್ಲೂ ಕೋಲು ಹಿಡಿದು ಅಲಿಪಿರಿ ಮೆಟ್ಟಿಲು ಹತ್ತಿ ತಿರುಪತಿ ತಲುಪಿದ ಕರ್ನಾಟಕದ ಭೀಮವ್ವ
ಕರ್ನಾಟಕದ 116 ವರ್ಷದ ಭೀಮವ್ವ ಅವರು ತಿರುಪತಿಯ ಅಲಿಪಿರಿ ಮೆಟ್ಟಿಲುಗಳನ್ನು ಯಾರ ಸಹಾಯವಿಲ್ಲದೆ ಏರಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ದೈಹಿಕ ದೌರ್ಬಲ್ಯವನ್ನು ಮೀರಿ, 'ಗೋವಿಂದಾ' ನಾಮಸ್ಮರಣೆ ಮಾಡುತ್ತಾ 3,550 ಮೆಟ್ಟಿಲುಗಳನ್ನು ಹತ್ತಿದ ಇವರ ಅಚಲ ಭಕ್ತಿ ಮತ್ತು ದೃಢಸಂಕಲ್ಪ ಸಾವಿರಾರು ಜನರಿಗೆ ಸ್ಫೂರ್ತಿಯಾಗಿದೆ. ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ.

ಮುಖ್ಯಾಂಶಗಳು
- ಕರ್ನಾಟಕದ 116 ವರ್ಷದ ವೃದ್ಧೆಯೊಬ್ಬರ ದೈಹಿಕ ಸಂಕಲ್ಪ ಮತ್ತು ಅಚಲ ಭಕ್ತಿ
- 116 ವರ್ಷದ ವೃದ್ಧೆ, ಯಾವುದೇ ಸಹಾಯವಿಲ್ಲದೆ ತಿರುಪತಿಯ ಅತ್ಯಂತ ಕಠಿಣವಾದ ಅಲಿಪಿರಿ ಮೆಟ್ಟಿಲು ಏರಿದ ಅಜ್ಜಿ
- ಲ್ನಡಿಗೆ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಎಲ್ಲರಿಗೂ ಅಚ್ಚರಿಯನ್ನು ತಂದಿದೆ
ತಿರುಪತಿ, ಜು.4: ವಯಸ್ಸು ಹೆಚ್ಚಾಗುತ್ತಿದ್ದಂತೆ 60 ಅಥವಾ 70 ದಾಟಿದ ತಕ್ಷಣವೇ ಅನೇಕರು ಮಂಡಿ ನೋವು, ಆಯಾಸ ಮತ್ತು ದೈಹಿಕ ದೌರ್ಬಲ್ಯದಿಂದ ಬಳಲುತ್ತಾರೆ. ಕನಿಷ್ಠ ನಾಲ್ಕು ಅಡಿ ನಡೆಯಲೂ ಪರದಾಡುವ ಇಂದಿನ ದಿನಗಳಲ್ಲಿ, ಕರ್ನಾಟಕದ 116 ವರ್ಷದ ವೃದ್ಧೆಯೊಬ್ಬರ ದೈಹಿಕ ಸಂಕಲ್ಪ ಮತ್ತು ಅಚಲ ಭಕ್ತಿ ಈಗ ದೇಶಾದ್ಯಂತ ಎಲ್ಲರನ್ನೂ ಬೆರಗುಗೊಳಿಸಿದೆ. ಕರ್ನಾಟಕದ ಹಳ್ಳಿಯೊಂದರ ನಿವಾಸಿಯಾದ ಲಕ್ಷ್ಮವ್ವ (ಸ್ಥಳೀಯವಾಗಿ ಇವರನ್ನು ಭೀಮವ್ವ ಎಂದೂ ಕರೆಯುತ್ತಾರೆ) ಎಂಬ 116 ವರ್ಷದ ವೃದ್ಧೆ, ಯಾವುದೇ ಸಹಾಯವಿಲ್ಲದೆ ತಿರುಪತಿಯ ಅತ್ಯಂತ ಕಠಿಣವಾದ ಅಲಿಪಿರಿ ಮೆಟ್ಟಿಲುಗಳನ್ನು ಕಾಲ್ನಡಿಗೆ ಮೂಲಕ ಹತ್ತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಯಾರ ನೆರವೂ ಇಲ್ಲದೆ 3,550 ಮೆಟ್ಟಿಲು ಹತ್ತಿದ ವೃದ್ಧೆ:
ವರದಿಗಳ ಪ್ರಕಾರ ಅವರ ವಯಸ್ಸಿನ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲದಿದ್ದರೂ, ಅವರ ಕುಟುಂಬದವರ ಪ್ರಕಾರ ಮತ್ತು ಅವರ ಶಾರೀರಿಕ ಸ್ಥಿತಿಯನ್ನು ನೋಡಿದರೆ ಅವರು ಶತಾಯುಷಿ ಎಂಬುದು ಸ್ಪಷ್ಟ ಕಾಣುತ್ತದೆ. ಈ ಇಳಿವಯಸ್ಸಿನಲ್ಲೂ ಅವರು ತಿರುಪತಿ ತಿರುಮಲದ ಅಲಿಪಿರಿ ಕಾಲ್ನಡಿಗೆ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಎಲ್ಲರಿಗೂ ಅಚ್ಚರಿಯನ್ನು ತಂದಿದೆ. ಸುಮಾರು 3,550 ಮೆಟ್ಟಿಲುಗಳಿರುವ ಈ ಅತ್ಯಂತ ಕಠಿಣ ಹಾದಿಯನ್ನು, ಅವರು ಯಾರ ಸಹಾಯವೂ ಇಲ್ಲದೆ, ಕೇವಲ ಕೈಯಲ್ಲೊಂದು ಕೋಲನ್ನು ಆಸರೆಯಾಗಿ ಹಿಡಿದು, ‘ಗೋವಿಂದಾ… ಗೋವಿಂದಾ…’ ಎಂದು ಸ್ವಾಮಿಯ ನಾಮಸ್ಮರಣೆ ಮಾಡುತ್ತಾ ಯಶಸ್ವಿಯಾಗಿ ಏರಿ ತಿರುಮಲ ತಲುಪಿದ್ದಾರೆ.
ಇಲ್ಲಿದೆ ನೋಡಿ ಪೋಸ್ಟ್:
ಭೀಮವ್ವ ಅವರ ಈ ಅದ್ಭುತ ದೃಢಸಂಕಲ್ಪ, ಆತ್ಮವಿಶ್ವಾಸ ಮತ್ತು ಭಕ್ತಿಯನ್ನು ಕಂಡು ದಾರಿಯುದ್ದಕ್ಕೂ ಇದ್ದ ಸಹಯಾತ್ರಿಕರು ಮತ್ತು ಭಕ್ತರು ಅಚ್ಚರಿಯಿಂದ ಎಲ್ಲರೂ ನೋಡಿದ್ದಾರೆ. ವಯಸ್ಸು ಕೇವಲ ದೇಹಕ್ಕೆ ಮಿತಿಗಳನ್ನು ವಿಧಿಸಬಹುದೇ ಹೊರತು, ಮನಸ್ಸು ಬಲವಾಗಿದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು ಎಂಬುದನ್ನು ಭೀಮವ್ವ ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಹೊಸ ಪ್ಲ್ಯಾನ್: ಬಸ್ಸಿನೊಳಗೆ ಸ್ಪೀಕರ್ ಮೂಲಕ ಜಾಹೀರಾತು ನೀಡಲು ಮುಂದು, ಪ್ರಯಾಣಿಕರು ಗರಂ!
ಈ ವೃದ್ಧಾಪ್ಯದಲ್ಲೂ ಅವರಿಗೆ ಇಷ್ಟೊಂದು ದೈಹಿಕ ಮತ್ತು ಮಾನಸಿಕ ಶಕ್ತಿ ಲಭಿಸಿರುವುದು ಸಾಕ್ಷಾತ್ ವೆಂಕಟೇಶ್ವರ ಸ್ವಾಮಿಯ ಅನುಗ್ರಹವೇ ಸರಿ ಎಂದು ಅನೇಕ ಭಕ್ತರು ಭಾವಪರವಶರಾಗಿ ಕೈಮುಗಿದಿದ್ದಾರೆ. ಒಟ್ಟಿನಲ್ಲಿ 116ನೇ ವಯಸ್ಸಿನಲ್ಲಿ ಅಲಿಪಿರಿ ಮೆಟ್ಟಿಲು ಹತ್ತಿದ ಭೀಮವ್ವ ಅವರು ಈಗ ಸಾವಿರಾರು ಜನರಿಗೆ ದೊಡ್ಡ ಸ್ಫೂರ್ತಿಯಾಗಿ ನಿಂತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Sat, 4 July 26




