ಅಮಿತ್ ಶಾ ಭೇಟಿ ಬಳಿಕ ಯಡಿಯೂರಪ್ಪ, ವಿಜಯೇಂದ್ರ ಚಟುವಟಿಕೆಗಳಲ್ಲಿ ಬದಲಾವಣೆ! ಕಾರಣ ಇಲ್ಲಿದೆ
ಇನ್ನು ಮುಂದೆ ಪ್ರತಿದಿನ ಬಿಜೆಪಿ ರಾಜ್ಯ ಕಚೇರಿಗೆ ಬರುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶನಿವಾರ ಕೂಡ ಜಗನ್ನಾಥ ಭವನಕ್ಕೆ ಬಂದು ಹೋಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ ಬಳಿಕ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಚಟುವಟಿಕೆಗಳಲ್ಲಿ ಬದಲಾವಣೆ ಕಾಣಿಸಿಕೊಂಡಿದೆ.

ಬೆಂಗಳೂರು, ಜೂನ್ 21: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬೆಂಗಳೂರಿಗೆ ಬಂದು ಹೋದಾಗಲೆಲ್ಲ ರಾಜ್ಯ ಬಿಜೆಪಿಗೊಂದು ಇಂಜೆಕ್ಷನ್ ಕೊಟ್ಟು ಹೋಗುತ್ತಾರೆ ಎಂಬುದು ಪಕ್ಷದ ಪಡಸಾಲೆಯಲ್ಲಿ ಹಿಂದಿನಿಂದಲೂ ಇರುವ ಮಾತು. ಮತ್ತೊಮ್ಮೆ ಅದಕ್ಕೆ ಪೂರಕವಾದ ಬೆಳವಣಿಗೆಗಳು ನಡೆದಿವೆ. ಈವರೆಗೆ ಕೋರ್ ಕಮಿಟಿ ಸಭೆಗಳಿಗಷ್ಟೇ ಬಿಜೆಪಿ (BJP) ಕಚೇರಿಗೆ ಬರುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa), ಗುರುವಾರ ಅಮಿತ್ ಶಾ ಭೇಟಿ ಮಾಡಿದ ಬಳಿಕ ಬದಲಾಗಿದ್ದಾರೆ. ಶುಕ್ರವಾರದಿಂದ ಸತತವಾಗಿ ಎರಡು ದಿನ ಬಂದು ಎರಡೆರಡು ಗಂಟೆಗಳ ಕಾಲ ಕುಳಿತು ಹೋಗಿದ್ದಾರೆ. ಗುರುವಾರ ರಾತ್ರಿಯ ಭೇಟಿ ವೇಳೆ ಅಮಿತ್ ಶಾ ನೀಡಿದ್ದ ಸಲಹೆಯಂತೆ ಯಡಿಯೂರಪ್ಪ ಬಿಜೆಪಿ ಕಚೇರಿಗೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಅಮಿತ್ ಶಾ ಭೇಟಿ ಮಾಡಿದ ಬಳಿಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ವಿಜಯೇಂದ್ರ ಚಹಾದೊಂದಿಗೆ ಒಂದೂವರೆ ಗಂಟೆ ಕಾಲ ಹೋಟೆಲ್ನಲ್ಲೇ ಕುಳಿತು ಮಾತನಾಡಿದ್ದಾರೆ. ಹಿರಿಯರ ಜೊತೆಗಿನ ಸಮನ್ವಯತೆ ಮತ್ತು ಅಸಮಾಧಾನಿತರನ್ನು ಖುದ್ದಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡಿ ಪರಿಹರಿಸಿಕೊಳ್ಳಲು ಆರ್ಎಸ್ಎಸ್ ಮತ್ತು ಅಮಿತ್ ಶಾ ಕಡೆಯಿಂದ ವಿಜಯೇಂದ್ರಗೆ ನಿರ್ದೇಶನ ಸಿಕ್ಕಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ಜೊತೆ ಚರ್ಚೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸ್ವತಃ ವಿಜಯೇಂದ್ರ ಕೂಡಾ ಅಮಿತ್ ಶಾ ಸೂಚನೆಯ ಬಗ್ಗೆ ಮಾತನಾಡಿದ್ದಾರೆ.
ಈಶ್ವರಪ್ಪ ವಾಪಸ್ ಕರೆಸಿಕೊಳ್ಳುವ ಬಗ್ಗೆ ಚರ್ಚೆ
ಈ ಮಧ್ಯೆ, ಪಕ್ಷದಿಂದ ಉಚ್ಛಾಟಿತರಾಗಿರುವ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರನ್ನು ವಾಪಸ್ ಕರೆತರುವ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ಆಗಿವೆ ಎನ್ನಲಾಗಿದೆ. ತಪ್ಪು ಒಪ್ಪಿಕೊಂಡು ವಾಪಸ್ ಬಂದರೆ ಒಟ್ಟಾಗಿ ಹೋಗುವುದಾಗಿ ವಿಜಯೇಂದ್ರ ಹೇಳಿದ್ದಾರೆ. ಆದರೆ, ಬಿಜೆಪಿ ಶುದ್ಧೀಕರಣವಾಗದೇ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ, ತಪ್ಪು ಏನು ಎಂಬುದಾಗಿ ಹೇಳಿ ಎಂದು ವಿಜಯೇಂದ್ರಗೆ ಈಶ್ವರಪ್ಪ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ಬಂದ ಅಮಿತ್ ಶಾ: ಬಿಜಿಎಸ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಉದ್ಘಾಟನೆಯಲ್ಲಿ ಭಾಗಿ
ಒಂದೆಡೆ ಯಡಿಯೂರಪ್ಪ ಮತ್ತೆ ಜಗನ್ನಾಥ ಭವನದತ್ತ ಮುಖ ಮಾಡಿದ್ದರೆ, ಅಸಮಾಧಾನಿತರು ತಮ್ಮ ಹಕ್ಕೊತ್ತಾಯ ಮಂಡಿಸುತ್ತಲೇ ಇದ್ದಾರೆ. ಇದರ ನಡುವೆ ಅಸಮಾಧಾನಿತರ ಮನವೊಲಿಸುವ ಕಾರ್ಯಕ್ಕೂ ಚಾಲನೆ ಸಿಕ್ಕಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳು ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನದ ಸುತ್ತಲೇ ಗಿರಕಿ ಹೊಡೆಯುತ್ತಿವೆ.