
ಮೈಸೂರು, (ಜುಲೈ 27): ವಿಶ್ವವಿಖ್ಯಾತ ಮೈಸೂರು ದಸರಾ 2026ರ (Mysuru Dasara 2026) ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 11ಕ್ಕೆ ಉದ್ಘಾಟನೆ ಹಾಗೂ ಅಕ್ಟೋಬರ್ 21ಕ್ಕೆ ಜಂಬೂ ಸವಾರಿ ನಡೆಯಲಿದೆ. ಹೀಗಾಗಿ ಈಗಿನಿಂದಲೆ ಸಕಲ ತಯಾರಿಗಳು ನಡೆದಿವೆ. ಈ ಸಂಬಂಧ ಸಚಿವ ಯತೀಂದ್ರ ಸಿದ್ದರಾಮಯ್ಯನವರು (yathindra siddaramaiah )(ಜುಲೈ 27) ಮೈಸೂರಿನಲ್ಲಿ ದಸರಾ ಕಾರ್ಯಕಾರಿ ಸಭೆ ಮಾಡಿದ್ದು, ಈ ಬಾರಿ 17 ಉಪ ಸಮಿತಿಗಳನ್ನು ರಚನೆ ಮಾಡಲು ನಿರ್ಧಾರ ಮಾಡಲಾಗಿದೆ. ಇನ್ನು ಈ ಸಭೆಯಲ್ಲಿ ಕಂಬಳ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಬದಲಿಗೆ ಸಿಎಂ ಡಿಕೆ ಶಿವಕುಮಾರ್ ನಿರ್ಧಾರಕ್ಕೆ ಬಿಡಲಾಗಿದೆ. ಇನ್ನು ಈ ಬಾರಿಯ ದಸರಾ ಉದ್ಘಾಟನೆ ಯಾರು ಮಾಡುತ್ತಾರೆ ಎನ್ನುವ ಕುತೂಹಲ ಇದ್ದು, ಇಬ್ಬರು ಮಾಜಿ ಕ್ರಿಕೆಟರ್ಸ್ ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್ ಹೆಸರು ಕೇಳಿಬಂದಿವೆ.
ದಸರಾ ಕಾರ್ಯಕಾರಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ,
ದಸರಾ ಕುರಿತು ಕಾರ್ಯಕಾರಿ ಸಭೆ ನಡೆಸಿದ್ದು, ಉಪ ಸಮಿತಿಗಳ ರಚನೆ ಕುರಿತು ಸಲಹೆಗಳನ್ನು ಪಡೆದಿದ್ದೇವೆ
17 ಉಪ ಸಮಿತಿಗಳನ್ನು ಈ ಬಾರಿ ರಚನೆ ಮಾಡಲು ನಿರ್ಧಾರ ಮಾಡಿದ್ದೇವೆ.ಕಂಬಳ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಕಂಬಳ ಫೈನಲ್ ಆದರೆ ಇನ್ನೊಂದು ಉಪ ಸಮಿತಿ ಆಗತ್ತದೆ. ಕಂಬಳ ಮಾಡಿದರೆ ಸಾತಗಳ್ಳಿ ಅಲ್ಲೇ ಮಾಡುತ್ತಾರೆ. ಆದ್ರೆ ಸಿಎಂ ಇನ್ನೂ ಆ ಬಗ್ಗೆ ಫೈನಲ್ ಮಾಡಿಲ್ಲ. ಎಲ್ಲವೂ ಕೂಡ ಅವರ ಕೈನಲ್ಲಿ ಇದೆ ಎಂದು ಮಾಹಿತಿ ನೀಡಿದರು.
ಇನ್ನು ಪ್ರಮುಖವಾಗಿ ಈ ಬಾರಿ ಮೈಸೂರು ದಸರಾವನ್ನು ಯಾರು ಉದ್ಘಾಟನೆ ಮಾಡುತ್ತಾರೆ ಎನ್ನುವುದು ತೀವ್ರ ಕುತೂಲಕ ಮೂಡಿಸಿದ್ದು, ಇದರ ಮಧ್ಯೆ ಇಬ್ಬರು ಮಾಜಿ ಕ್ರಿಕೆಟರ್ಸ್ ಹೆಸರುಗಳು ಕೇಳಿಬಂದಿವೆ. ಈ ಬಗ್ಗೆ ಯತೀಂದ್ರ ಪ್ರತಿಕ್ರಿಯಿಸಿದ್ದು, ದಸರಾ ಉದ್ಘಾಟಕರ ಆಯ್ಕೆ ಮಾಡಬೇಕೆನ್ನುವುದು ಸಿಎಂ ನಿರ್ಧಾರವೇ ಅಂತಿಮ. ನಾವೆಲ್ಲರೂ ಉದ್ಘಾಟಕರ ಆಯ್ಕೆ ಅವರಿಗೆ ಬಿಟ್ಟಿದ್ದೇವೆ. ಶಾಸಕರು ಒಂದಷ್ಟು ಸಲಹೆ ಕೊಟ್ಟಿದ್ದಾರೆ. ದಸರಾ ಉದ್ಘಾಟನೆಗೆ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹೆಸರು ಮುಂಚೂಣಿಯಲ್ಲಿ ಎಂಬ ವಿಚಾರ
ನಾನು ಈಗಾಗಲೇ ಹೇಳಿದ್ದೇನೆ. ಯಾವುದೇ ಹೆಸರನ್ನು ಆಯ್ಕೆ ಮಾಡಿದ್ರು ಸಿಎಂ ಆಯ್ಕೆ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಇನ್ನು ದಸರಾ ಪಾಸ್ ಬಗ್ಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ದಸರಾ ಪಾಸ್ ವಿಚಾರವಾಗಿ ಕಳೆದ ಬಾರಿ ಗೊಂದಲ ಇತ್ತು. ಈ ಬಾರಿ ಯಾವುದೇ ಗೊಂದಲ ಆಗಬಾರದು ಅಂತ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಪಾಸ್ ವಿಚಾರದಲ್ಲಿ ಸಮಸ್ಯೆ ಆಗದಂತೆ ಕ್ರಮ ಆಗುತ್ತದೆ. ಪಾಸ್ ಬೇಡ ಎಂದು ಶಾಸಕರು ಹೇಳಿದ್ದಾರೆ. ಈ ವಿಚಾರವನ್ನು ಸಿಎಂಗೆ ತಿಳಿಸಿದ್ದು, ಆ ಬಗ್ಗೆ ಸೂಕ್ತ ತೀರ್ಮಾನ ಆಗುತ್ತದೆ. ಗೋಲ್ಡ್ ಕಾರ್ಡ್ ಜನರಿಗೆ ಮಾತ್ರ ಲಭ್ಯವಾಗಲಿದೆ. ಈ ಬಾರಿ ಗೋಲ್ಡ್ ಆಸನಗಳು ಎಷ್ಟಿರುತ್ತದೆ ಅಷ್ಟೇ ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ.
ಇನ್ನು ಜಂಬುಸವಾರಿಗೆ ಆನೆಗಳ ಆಯ್ಕೆ ಪ್ರಕ್ರಿಯೆಯು ನಡೆಯುತ್ತಿದೆ. ಯಾವುದೇ ತೊಂದರೆ ಇಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ವರದಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಆನೆಗಳ ಪಟ್ಟಿ ಬಿಡುಗಡೆಯಾಗುತ್ತೆ ಎಂದು ವಿವರಿಸಿದರು.