ಹೊಟ್ಟೆಪಾಡಿಗಾಗಿ ಗುಳೆ ಹೋಗುತ್ತಿರುವ ಬಾಗಲಕೋಟೆಯ ಈ ಗ್ರಾಮದ ಜನರು; ನೀರಾವರಿ ವ್ಯವಸ್ಥೆ ಕಲ್ಪಿಸಲು ಆಗ್ರಹ

ಲಿಂಗಾಪುರ ಗ್ರಾಮದ ಪ್ರತಿಶತ 80 ರಷ್ಟು ಮನೆಗಳಿಗೆ ಬೀಗ ಬಿದ್ದಿದ್ದು, ಎಲ್ಲರೂ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಮನೆ ಮಂದಿಯೆಲ್ಲಾ ಊರು ಕೇರಿಯನ್ನೇ ಬಿಟ್ಟು ಗುಳೆ ಹೋಗಿದ್ದಾರೆ. ಲಿಂಗಾಪುರ ಗ್ರಾಮದ ಪ್ರತಿಶತ 80ರಷ್ಟು ಗ್ರಾಮಸ್ಥರು ಮಂಗಳೂರು, ಉಡುಪಿ, ಗೋವಾ ರಾಜ್ಯಕ್ಕೆ ಗುಳೆ ಹೋಗಿದ್ದಾರೆ.

ಹೊಟ್ಟೆಪಾಡಿಗಾಗಿ ಗುಳೆ ಹೋಗುತ್ತಿರುವ ಬಾಗಲಕೋಟೆಯ ಈ ಗ್ರಾಮದ ಜನರು; ನೀರಾವರಿ ವ್ಯವಸ್ಥೆ ಕಲ್ಪಿಸಲು ಆಗ್ರಹ
ಬಾಗಿಲು ಮುಚ್ಚಿರುವ ಮನೆಗಳು
sandhya thejappa

Updated on: Mar 23, 2021 | 12:39 PM

ಬಾಗಲಕೋಟೆ: ಬಾದಾಮಿ ತಾಲೂಕಿನ ಲಿಂಗಾಪುರ ಗ್ರಾಮದ ಮನೆಮಂದಿ ಮಾಯವಾಗಿದ್ದಾರೆ. ಗ್ರಾಮದ ಪ್ರತಿಶತ 80 ರಷ್ಟು ಮನೆಗಳಿಗೆ ಬೀಗ ಜಡಿಯಲಾಗಿದೆ. ಊರಿನಲ್ಲಿ ವೃದ್ದರು ಮತ್ತು ಪುಟಾಣಿ ಮಕ್ಕಳನ್ನು ಬಿಟ್ಟರೆ ಯುವಕರು, ರೈತರು ಕಾಣೆಯಾಗಿದ್ದಾರೆ. ಊರಿನ ರಸ್ತೆಗಳು ಬಿಕೋ ಎನ್ನುತ್ತಿವೆ. ಬಾದಾಮಿ ತಾಲುಕಿನ ಲಿಂಗಾಪುರ ಗ್ರಾಮದ ಪರಿಸ್ಥಿತಿ ಕಂಡರೆ ಎಂತವರ ಮನಸ್ಸು ಕೂಡ ಕರಗುತ್ತದೆ. ಗ್ರಾಮದಲ್ಲಿ ಎಲ್ಲ ಮನೆಗಳಿಗೆ ಬೀಗ ಹಾಕಿದೆಯಲ್ಲ ಎಂದು ಅಚ್ಚರಿ ಪಡುತ್ತಾರೆ. ಪರ ಊರಿನಿಂದ ಬಂದವರು ಬೀಗ ಹಾಕಿಕೊಂಡು ಹೊಲಗಳಿಗೆ ಹೋಗಿರಬಹುದು ಅಂದುಕೊಳ್ಳುತ್ತಾರೆ. ಆದರೆ ಗ್ರಾಮದ ಮನೆಗಳಿಗೆ ಬಿದ್ದಿರುವುದು ಶಾಶ್ವತ ಬೀಗ.

ಲಿಂಗಾಪುರ ಗ್ರಾಮದ ಪ್ರತಿಶತ 80 ರಷ್ಟು ಮನೆಗಳಿಗೆ ಬೀಗ ಬಿದ್ದಿದ್ದು, ಎಲ್ಲರೂ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಮನೆ ಮಂದಿಯೆಲ್ಲಾ ಊರು ಕೇರಿಯನ್ನೇ ಬಿಟ್ಟು ಗುಳೆ ಹೋಗಿದ್ದಾರೆ. ಲಿಂಗಾಪುರ ಗ್ರಾಮದ ಪ್ರತಿಶತ 80ರಷ್ಟು ಗ್ರಾಮಸ್ಥರು ಮಂಗಳೂರು, ಉಡುಪಿ, ಗೋವಾ ರಾಜ್ಯಕ್ಕೆ ಗುಳೆ ಹೋಗಿದ್ದಾರೆ. ಮನೆಯಲ್ಲಿ ವೃದ್ದ ತಂದೆ ತಾಯಿಗಳ ಹತ್ತಿರ ತಮ್ಮ ಮಕ್ಕಳನ್ನು ಬಿಟ್ಟ ರೈತರು ಹೊಟ್ಟೆಪಾಡಿಗಾಗಿ ಗುಳೆ ಹೋಗಿದ್ದಾರೆ. ಸರಿಯಾಗಿ ಬೆಳೆ ಬರುವುದಿಲ್ಲ. ದುಡಿಯಲು ಸಮರ್ಪಕ ಕೆಲಸವಿಲ್ಲ. ಹೊಟ್ಟೆಪಾಡಿಗಾಗಿ ಏನಾದರು ಮಾಡಬೇಕಲ್ಲ. ಅದಕ್ಕಾಗಿ ಮಕ್ಕಳು ದುಡಿಯುವುದಕ್ಕೆ ಹೋಗಿದ್ದಾರೆ ಎಂದು ಹಿರಿ ಜೀವಗಳು ಹೇಳುತ್ತಿದ್ದಾರೆ.

ಲಿಂಗಾಪುರ ಗ್ರಾಮದಲ್ಲಿ ಒಟ್ಟು 250 ಮನೆಗಳಿದ್ದು, ಇದರಲ್ಲಿ ಪ್ರತಿಶತ 80ರಷ್ಟು ಮನೆಗಳಿಗೆ ಬೀಗ ಜಡಿಯಲಾಗಿದೆ. ಗ್ರಾಮಕ್ಕೆ ಕಾಲಿಟ್ಟರೆ ಸಾಕು ಕಣ್ಣಿಗೆ ಕೇವಲ ಬೀಗ ಹಾಕಿದ ಮನೆಗಳೆ ಸ್ವಾಗತ ಮಾಡುತ್ತವೆ. ಗ್ರಾಮದ ಬೀದಿ ಬೀದಿ ಹಿಡಿದು ಹೊರಟರೆ ರಸ್ತೆಗಳು ಬಿಕೋ ಎನ್ನುತ್ತಿವೆ. ಮನೆ ಮುಂದಿನ ಕಟ್ಟೆಗಳ ಮೇಲೆ ಕೇವಲ ವೃದ್ದ ಜೀವಿಗಳು, ಪುಟಾಣಿ ಮಕ್ಕಳು ಕಂಡುಬರುತ್ತಾರೆ. ಬಾದಾಮಿ ತಾಲೂಕಿನ ಲಿಂಗಾಪುರ ಗ್ರಾಮ ಅಷ್ಟೇ ಅಲ್ಲದೆ ಬಾದಾಮಿ ಕ್ಷೇತ್ರದ ಕೆಲವಡಿ ತಿಮ್ಮಸಾಗರ, ಹಂಸನೂರು ಸೇರಿದಂತೆ ಹದಿನೈದಕ್ಕೂ ಹೆಚ್ಚು ಗ್ರಾಮದ ರೈತರು, ಕೂಲಿ ಕಾರ್ಮಿಕರು ಮಂಗಳೂರು, ಚಿಕ್ಕಮಗಳೂರು, ಉಡುಪಿ ಗೋವಾ ರಾಜ್ಯಕ್ಕೆ ಹೋಗಿದ್ದಾರೆ. ಕೊರೊನಾ ಹಿನ್ನೆಲೆ ಕಳೆದ ವರ್ಷ ವಾಪಸ್ ಆಗಿದ್ದವರು ಪುನಃ ಹೊಟ್ಟೆಪಾಡಿಗಾಗಿ ಮರಳಿ ಬಸ್ ಹತ್ತಿದ್ದಾರೆ.

ಮನೆಯ ಮುಂದಿನ ಕಟ್ಟೆ ಮೆಲೆ ಕುಳಿತಿರುವ ಮಕ್ಕಳು

ಖಾಲಿ ಖಾಲಿಯಾಗಿರುವ ಲಿಂಗಾಪುರ ಗ್ರಾಮ

ಸಿದ್ದರಾಮಯ್ಯನವರಿಗೆ ಗ್ರಾಮಸ್ಥರ ಆಗ್ರಹ
ಲಿಂಗಾಪುರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕ್ಷೇತ್ರವಾಗಿದ್ದು, ಲಿಂಗಾಪುರ ಸೇರಿದಂತೆ ಈ ಭಾಗದ ಹದಿನೈದಕ್ಕೂ ಹೆಚ್ಚು ಗ್ರಾಮಸ್ಥರಿಗೆ ಗುಳೆ ಹೋಗದೆ ಜೀವನಕ್ಕೆ ಗತಿಯಿಲ್ಲ. ಯುವಕರಿಗೂ ಕೆಲಸವಿಲ್ಲ. ರೈತರ ಕೃಷಿಗೂ ನೀರಾವರಿಯಿಲ್ಲ. ಆದ್ದರಿಂದ ಗ್ರಾಮಸ್ಥರು ನಮ್ಮ ಭಾಗದಲ್ಲಿ ಮಲಪ್ರಭಾ-ಘಟಪ್ರಭಾ ಕಾಲುವೆಗಳಿದ್ದು, ಪ್ರಯೋಜನವಾಗಿಲ್ಲ. ಸಿದ್ದರಾಮಯ್ಯನವರು ನಮ್ಮ ಕೃಷಿಗೆ ನೀರಾವರಿ ಕಲ್ಪಿಸಬೇಕು. ಈ ಭಾಗದಲ್ಲಿ ಕೈಗಾರಿಕೆಗಳನ್ನು ಆರಂಭಿಸಬೇಕು. ಇದರಿಂದ ರೈತರಿಗೂ ಕೃಷಿಗೆ ಅನುಕೂಲಕರವಾಗುತ್ತದೆ. ಯುವಕರಿಗೂ ಉದ್ಯೋಗ ಸಿಗುತ್ತದೆ ಎಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.

ಬೀಗ ಜಡಿದ ಮನೆ

ಇದನ್ನೂ ಓದಿ

ಬೀದರ್​ನಲ್ಲಿ ಸರ್ಕಾರಿ ಆಸ್ಪತ್ರೆಗಳಿದ್ದರೂ ಪ್ರಯೋಜನವಿಲ್ಲ; ಸೂಕ್ತ ಚಿಕಿತ್ಸೆ ಸಿಗದೆ ಜನರ ಪರದಾಟ

SC on loan moratorium: ಸಾಲ ವಿನಾಯಿತಿ ವಿಸ್ತರಣೆ, ಬಡ್ಡಿ ಮನ್ನಾ ಎರಡೂ ಬಿಲ್ಕುಲ್​ ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

sandhya thejappa
Follow Us