ಉಕ್ಕಿ ಹರಿಯುತ್ತಿರೋ ಘಟಪ್ರಭಾ ನದಿ; ಮುಧೋಳ, ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ ಹೆಚ್ಚಿದ ಆತಂಕ

ಇತ್ತೀಚೆಗೆ ತಾನೆ ಪ್ರವಾಹದಿಂದ ಮುಕ್ತವಾಗಿದ್ದ ಘಟಪ್ರಭಾ ನದಿ ತೀರದ ಜನರು. ಪ್ರವಾಹ ನಿಂತಿದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ಆ ನದಿ ಆರ್ಭಟ ಜೋರಾಗಿದೆ. ದೇವರಿಗೆ ದಿಗ್ಬಂಧನ ಹಾಕಿದ ನದಿ, ಬೆಳೆಗಳನ್ನು ನುಂಗಿ ಹಾಕುತ್ತಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಉಕ್ಕಿ ಹರಿಯುತ್ತಿರೋ ಘಟಪ್ರಭಾ ನದಿ; ಮುಧೋಳ, ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ ಹೆಚ್ಚಿದ ಆತಂಕ
ಉಕ್ಕಿ ಹರಿಯುತ್ತಿರೋ ಘಟಪ್ರಭಾ ನದಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 30, 2024 | 8:49 PM

ಬಾಗಲಕೋಟೆ, ಆ.30: ಜಿಲ್ಲೆಯ ಮುಧೋಳ, ರಬಕವಿ ಬನಹಟ್ಟಿ ತಾಲ್ಲೂಕಿನ ಘಟಪ್ರಭಾ ತೀರದಲ್ಲಿ ಮತ್ತೆ ಪ್ರವಾಹ ಆತಂಕ ಶುರುವಾಗಿದೆ. ಹೌದು, ಮಹಾರಾಷ್ಟ್ರದಲ್ಲಿ ಆಗುತ್ತಿರುವ ‌ಮಳೆಯಿಂದ ಘಟಪ್ರಭಾ ‌ನದಿ(Ghataprabha River) ಉಕ್ಕಿ ಹರಿಯುತ್ತಿದ್ದು, ಘಟಪ್ರಭಾ ನದಿಯಲ್ಲಿ ನೀರಿನ ‌ಪ್ರಮಾಣ ಬಾರಿ ಹೆಚ್ಚಾಗಿದೆ. ಇದರಿಂದ ಮಾಚಕನೂರು ಗ್ರಾಮದಲ್ಲಿರುವ ಹೊಳೆಬಸವೇಶ್ವರ ದೇವಸ್ಥಾನಕ್ಕೆ ಜಲದಿಗ್ಬಂಧನ ಆಗಿದೆ. ಅಷ್ಟೇ ಅಲ್ಲ, ದೇವಸ್ಥಾನದೊಳಗೆ 10 ಅಡಿಯಷ್ಟು ನೀರಿದ್ದು, ದೇವರ ದರ್ಶನ ಬಂದ ಮಾಡಲಾಗಿದೆ.

ಹೀಗಾಗಿ ನದಿ ದಡದಲ್ಲಿ ಹೊಳೆಬಸವೇಶ್ವರ ಉತ್ಸವ ಮೂರ್ತಿ ಪ್ರತಿಷ್ಟಾಪನೆ ಮಾಡಿ‌ ಪೂಜಿಸಲಾಗುತ್ತಿದೆ. ಶ್ರಾವಣ ಕೊನೆ ಶುಕ್ರವಾರದ ಪೂಜೆ ನದಿ ದಡದಲ್ಲೆ‌ ನಡೆಯುತ್ತಿದೆ. ಇನ್ನು ತುಂಬಿದ ನದಿಯಲ್ಲಿ ಕೆಲವರು ಈಜಿ ದೇವಸ್ಥಾನ ಕಡೆ ಹೊರಡೋದು. ಉಕ್ಕಿ ಹರಿಯುವ ನದಿಯಲ್ಲಿ ಮಕ್ಕಳು ನೀರಾಟ ಆಡುತ್ತಾ ದುಸ್ಸಾಹಸ ಮೆರೆಯುತ್ತಿದ್ದಾರೆ.

ಇದನ್ನೂ ಓದಿ:ಬಾಗಲಕೋಟೆ: ಘಟಪ್ರಭಾ ‌ನದಿ ಘರ್ಜನೆ, ರೈತರ ಬೆಳೆಗೆ ಕಂಟಕ ತಂದ ಪ್ರವಾಹ

ನೂರಾರು ಎಕರೆ ಬೆಳೆ ಜಲಾವೃತ

ಇದು ಒಂದು ಕಡೆ ಆದರೆ, ಬೊರ್ಗರೆದು ಹರಿಯುತ್ತಿರುವ ಘಟಪ್ರಭಾ ‌ನದಿಯಿಂದ ಅಕ್ಕ-ಪಕ್ಕದ ನೂರಾರು ಎಕರೆ ಬೆಳೆ ಜಲಾವೃತವಾಗಿದೆ. ಇದೆ ತಿಂಗಳ ಆರಂಭದಲ್ಲಿ ನಿರಂತರ ಹದಿನೈದು ದಿನಗಳ ಕಾಲ ನೀರಲ್ಲಿ ನಿಂತು ಹಾಳಾದ ಕಬ್ಬು ಈಗ ಮತ್ತೆ ಮುಳುಗಡೆಯಾಗಿದೆ‌. ಮೇಲಿಂದ‌ ಮೇಲೆ ಪ್ರವಾಹದ ಹೊಡೆತ‌ದಿಂದ ರೈತರು ಕಂಗಾಲಾಗಿದ್ದಾರೆ. ಕಳೆದ ಬಾರಿ ಪ್ರವಾಹದ ಕಲೆ ಮಾಸುವ ಮುನ್ನ ಮತ್ತೆ ಪ್ರವಾಹ ಆತಂಕ ಶುರುವಾಗಿದೆ.

ಘಟಪ್ರಭಾ ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರಿನ ವೇಗ ಹೆಚ್ಚುತ್ತಿದ್ದು, ಮಾಚಕನೂರು ಚಿಕ್ಕೂರು ಮಧ್ಯದ ಘಟಪ್ರಭಾ ಸೇತುವೆ ಜಲಾವೃತ ಹಂತಕ್ಕೆ ಬಂದಿದೆ. ಮುಳುಗಡೆಯಾಗಲು ಅರ್ಧ ಅಡಿಯಿಂದ ಒಂದು ಅಡಿ ಮಾತ್ರ‌ ಬಾಕಿ ಇದೆ. ಸೇತುವೆ ಮುಳುಗಿದರೆ ಮಾಚಕನೂರು ಚಿಕ್ಕೂರು ಬಂಟನೂರ ಲೋಕಾಪುರ ಸಂಪರ್ಕ ಕಡಿತವಾಗಲಿದೆ. ನದಿ ಅಕ್ಕಪಕ್ಕದ ರೈತರ ಮೋಟರ್ ಪಂಪ್ ಗಳು ಕೂಡ ಜಲಾವೃತವಾಗಿವೆ. ಮೇಲಿಂದ ಮೇಲೆ ಬೆಳೆ ಹಾನಿ ಅನುಭವಿಸುತ್ತಿದ್ದೇವೆ. ನಮಗೆ ಶಾಶ್ವತ ಪರಿಹಾರ ನೀಡಿ ಎಂದು ರೈತರು ಆಗ್ರಹ ಮಾಡುತ್ತಿದ್ದಾರೆ.

ಪ್ರವಾಹ ಅಂತ್ಯವಾಯಿತು ಎಂದು ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೆ ಪ್ರವಾಹ ಆರಂಭದ ಲಕ್ಷಣಗಳು ಶುರುವಾಗಿವೆ.ಇದರಿಂದ ಘಟಪ್ರಭಾ ತೀರದಲ್ಲಿ ಪುನಃ ಪ್ರವಾಹ ಆತಂಕ ಎದುರಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ