
ಬಾಗಲಕೋಟೆ, ಮೇ 27: ನಾಳೆ (ಮೇ 28) ನಾಡಿನಾದ್ಯಂತ ಬಕ್ರೀದ್ (Bakrid) ಹಬ್ಬದ ಸಂಭ್ರಮ. ಮುಸ್ಲಿಂ ಸಮಾಜದ ಬಾಂಧವರು ಸಂಭ್ರಮದಿಂದ ಬಕ್ರೀದ್ ಆಚರಣೆಗೆ ಸಿದ್ದರಾಗಿದ್ದಾರೆ. ಆದರೆ ಈ ವೇಳೆ ಯಾವುದೇ ಕಾರಣಕ್ಕೂ ಗೋತ್ಯೆಗೆ ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಪ್ರತಿಭಟನೆ ಮೂಲಕ ಪೊಲೀಸ್ ಮೇಲಾಧಿಕಾರಿಗಳಿಗೆ ಮನವಿ ನೀಡಿದ್ದು, ಆ ಮೂಲಕ ಗೋಹತ್ಯೆ ತಡೆಗೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ಕಸಾಯಿಖಾನೆಗಳ ಪಟ್ಟಿ ಮಾಡಿ ಬಂದ್ಗೆ ಒತ್ತಾಯಿಸಿದ್ದಾರೆ.
ನಾಳೆ ಎಲ್ಲೆಡೆ ಬಕ್ರೀದ್ ಹಬ್ಬದ ಸಂಭ್ರಮ. ಮುಸ್ಲಿಂ ಸಮುದಾಯದವರು ಅದ್ಧೂರಿಯಾಗಿ ಹಬ್ಬ ಆಚರಣೆಗೆ ಮುಂದಾಗಿದ್ದಾರೆ. ಬಾಗಲಕೋಟೆಯಲ್ಲಿ ಹಿಂದೂಪರ ಸಂಘಟನೆಗಳು ಬಕ್ರೀದ್ ಹಬ್ಬದ ವೇಳೆ ಯಾವುದೇ ಕಾರಣಕ್ಕೂ ಗೋ ಹತ್ಯೆಗೆ ಅವಕಾಶ ನೀಡಬಾರದು ಎಂದು ಪ್ರತಿಭಟಿಸಿದ್ದಾರೆ. ಶ್ರೀರಾಮ ಸೇನೆಯ ಸಂಘಟನೆಯ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಿ ಡಿಸಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಹಿಂದೂ ಜಾಗರಣವೇದಿಕೆ ಕಾರ್ಯಕರ್ತರು ಗೋ ಅಕ್ರಮ ಸಾಗಾಣಿಕೆ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. 2023ರ ಗೋಹತ್ಯೆ ನಿಷೇಧ ಕಾಯ್ದೆ ಬಾಗಲಕೋಟೆಯಲ್ಲಿ ಪಾಲನೆಯಾಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಗಿರೀಶ್ ಫೌಂಡೇಶನ್ ಎಂಬ ಎನ್ಜಿಒ ಮೂಲಕ ಎಸ್ಪಿ ಅವರಿಗೆ ಗೋ ಹತ್ಯೆ ತಡೆಯುವಂತೆ ಮನವಿ ಸಲ್ಲಿಸಲಾಗಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಬಾಗಲಕೋಟೆ ಜಿಲ್ಲಾದ್ಯಂತ ಕಸಾಯಿಖಾನೆಗಳಿಗೆ ಸಾಗಿಸುವ ಗೋವುಗಳ ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ. ಬಾಗಲಕೋಟೆ ಜಿಲ್ಲಾದ್ಯಂತ 60ಕ್ಕೂ ಹೆಚ್ಚು ಕಸಾಯಿಖಾನೆಗಳಿವೆ. ಅದರ ಜೊತೆಗೆ ಪರ ಜಿಲ್ಲೆ, ಪರ ರಾಜ್ಯಗಳಿಗೆ ಕೂಡ ಗೋವುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ಮುಸ್ಲಿಂ ಸಂಘಟನೆಯಿಂದ ಪ್ರತಿಭಟನೆ
ಈ ಬಗ್ಗೆ ವಿಡಿಯೋ ಸಾಕ್ಷಿ ಸಮೇತ ಕೊಟ್ಟರು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ, ಕಾಟಾಚಾರಕ್ಕೆ ಭೇಟಿ ನೀಡ್ತಾರೆ ಎಂದು ಕೂಡ ಆಕ್ರೋಶ ಹೊರಹಾಕಿದ್ದಾರೆ. ಆಯಾ ಠಾಣೆ ವ್ಯಾಪ್ತಿಯ ಪೊಲೀಸರಿಗೆ ಪೊಲೀಸ್ ಮೇಲಾಧಿಕಾರಿಗಳು ಸ್ಪಷ್ಟವಾಗಿ ನಿರ್ದೇಶನ ಕೊಡಬೇಕು. ದೂರು ನೀಡಿದ ತಕ್ಷಣ ಗೋ ಹತ್ಯೆ ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಗಲಕೋಟೆ ಎಸ್ಪಿ ಸಿದ್ದಾರ್ಥ್ ಗೋಯೆಲ್, ಗೋ ಸಾಗಾಣಿಕೆ ತಡೆಯಲು 26 ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ದಾಖಲಾತಿ ಇಲ್ಲದೆ ಗೋಸಾಗಾಣಿಕೆ ಹಿನ್ನೆಲೆ ಎರಡು ಕೇಸ್ ದಾಖಲಿಸಲಾಗಿದೆ. ಗೋಸಾಗಾಣಿಕೆ ಬಗ್ಗೆ ಕಂಟ್ರೋಲ್ ರೂಮ್ಗೂ ಕರೆ ಮಾಡಬಹುದು. ಕೂಡಲೇ ಕ್ರಮಕೈಗೊಳ್ಳುತ್ತೇವೆ. ಇನ್ನು ಬಕ್ರೀದ್ ಹಬ್ಬದ ಭದ್ರತೆಗೆ 600 ಜನ ಪೊಲೀಸ್, 300 ಜನ ಹೋಮ್ ಗಾರ್ಡ್, 3 ಕೆಎಸ್ಆರ್ಪಿ, 10 ಡಿಎಆರ್ ತುಕಡಿ ನಿಯೋಜಿಸಲಾಗಿದೆ. 147 ಕಡೆ ಪ್ರಾರ್ಥನೆ ನಡೆಯಲಿದ್ದು, 18 ಕಡೆ ಮೆರವಣಿಗೆ ಇದೆ. 6 ಕಡೆ ಸೂಕ್ಷ್ಮ ಸ್ಥಳ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಗೋ ಹತ್ಯೆ ಮಾಡುವವರನ್ನು ಗುಂಡಿಕ್ಕಬೇಕು: ಸಚಿವ ಮಂಕಾಳು ವೈದ್ಯ ಹೇಳಿಕೆಗೆ ಪರಮೇಶ್ವರ ಹೇಳಿದ್ದಿಷ್ಟು
ಒಟ್ಟಿನಲ್ಲಿ ಒಂದು ಕಡೆ ಬಕ್ರೀದ್ ಹಬ್ಬಕ್ಕೆ ಮುಸ್ಲಿಮರು ಸಜ್ಜಾಗಿದ್ದರೆ, ಹಿಂದೂ ಕಾರ್ಯಕರ್ತರು ಬಕ್ರೀದ್ ವೇಳೆ ಗೋಹತ್ಯೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.