ಬೆಂಗಳೂರಿನಲ್ಲಿ ಹೆಚ್ಚಿದ ಚಿರತೆ ಭೀತಿ: ಬ್ಯಾಡರಹಳ್ಳಿಯಲ್ಲಿ ಚಿರತೆ ಇದೆ ಎಚ್ಚರಿಕೆ ಬೋರ್ಡ್, ಬನಶಂಕರಿಯಲ್ಲೂ ಪ್ರತ್ಯಕ್ಷ!
Leopard spotted in Bangaluru: ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಬ್ಯಾಡರಹಳ್ಳಿಯ ಭಾರತ ನಗರ 2ನೇ ಹಂತದಲ್ಲಿ ಕಳೆದ ಹದಿನೈದು ದಿನಗಳಿಂದ ಒಂಟಿ ಚಿರತೆಯೊಂದು ಸತತವಾಗಿ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರ ನಿದ್ದೆಗೆಡಿಸಿದೆ. ಜನರು ತಮ್ಮ ಮನೆ ಮುಂದೆ ಚಿರತೆ ಇದೆ ಎಚ್ಚರಿಕೆ ಎಂಬ ಬೋರ್ಡ್ ಕೂಡ ಹಾಕಿದ್ದಾರೆ. ಈ ಮಧ್ಯೆ ಇತ್ತ ಬನಶಂಕರಿಲ್ಲೂ ಚಿರತೆ ಪ್ರತ್ಯಕ್ಷವಾಗಿದೆ.

ಮುಖ್ಯಾಂಶಗಳು
- ಬ್ಯಾಡರಹಳ್ಳಿ ನಿವಾಸಿಗಳಿಗೆ ತಪ್ಪದ ಚಿರತೆ ಕಾಟ
- ಕಳೆದ ಹದಿನೈದು ದಿನದಿಂದ ಸೆರೆಯಾಗದ ಚಿರತೆ
- ಬನಶಂಕರಿ 6ನೇ ಹಂತದಲ್ಲೂ ಚಿರತೆ ಪ್ರತ್ಯಕ್ಷ
ಬೆಂಗಳೂರು, ಜುಲೈ 26: ಕಳೆದ 15 ದಿನಗಳಿಂದ ಬ್ಯಾಡರಹಳ್ಳಿಯ ಭಾರತ ನಗರದಲ್ಲಿ ಒಂಟಿ ಚಿರತೆ (leopard) ಕಾಣಿಸಿಕೊಳ್ಳುತ್ತಿದ್ದು, ಇದರಿಂದ ನಿವಾಸಿಗಳು ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದಾರೆ. ಹೀಗಾಗಿ ಮನೆಯ ಎದುರು ಚಿರತೆ ಇದೆ ಎಚ್ಚರಿಕೆ ಎನ್ನುವ ಬೋರ್ಡ್ ಕೂಡ ಹಾಕಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಅರಣ್ಯ ಇಲಾಖೆ ಮಾತ್ರ ಆ ಒಂಟಿ ಚಿರತೆಯನ್ನು ಸೆರೆ ಹಿಡಿಯಲು ಮುಂದಾಗುತ್ತಿಲ್ಲ.
15 ದಿನದಿಂದ ಸೆರೆಯಾಗದ ಚಿರತೆ
ಯಶವಂತಪುರ ವಿಧಾನಸಭಾ ಕ್ಷೇತ್ರದ ಬ್ಯಾಡರಹಳ್ಳಿಯ ಭಾರತ ನಗರದ 2ನೇ ಹಂತದಲ್ಲಿ ಕಳೆದ 15 ದಿನಗಳಿಂದ ಚಿರತೆ ಕಾಟ ಎದುರಾಗಿದೆ. ಬೀದಿನಾಯಿಗಳ ಮೇಲೆ ಅಟ್ಯಾಕ್ ಮಾಡುತ್ತಿದೆ. ಈಗಾಗಲೇ ಭಾರತ್ ನಗರದಲ್ಲಿ ಬೀದಿನಾಯಿಗಳು ಕಾಣೆ ಆಗುತ್ತಿವೆ. ಕಳೆದ ವಾರವೂ ಚಿರತೆ ಬೀದಿನಾಯಿ ಮೇಲೆ ಅಟ್ಯಾಕ್ ಮಾಡಲು ಮುಂದಾಗಿತ್ತು, ಆದರೆ ನಾಯಿ ಎಸ್ಕೇಪ್ ಆಗಿತ್ತು. ರಾತ್ರಿಯಾದರೆ ಈ ಒಂಟಿ ಚಿರತೆ ಪ್ರತ್ಯಕ್ಷವಾಗುತ್ತಿದೆ.
ಮನೆಗಳ ಮುಂದೆ ಚಿರತೆ ಇದೆ ಎಚ್ಚರಿಕೆ ಎಂಬ ಬೋರ್ಡ್
ಚಿರತೆ ಕಂಡ ತಕ್ಷಣ ಬೀದಿನಾಯಿಗಳು ಜೋರಾಗಿ ಬೊಗಳುತ್ತವೆ. ಇದರಿಂದ ಫುಲ್ ಭಯದಲ್ಲಿರುವ ಭಾರತ ನಗರದ ನಿವಾಸಿಗಳು ತಮ್ಮ ಮನೆಗಳ ಮುಂದೆ ಚಿರತೆ ಇದೆ ಎಚ್ಚರಿಕೆ ಎಂದು ಬೋರ್ಡ್ ಹಾಕಿದ್ದಾರೆ. ಇನ್ನೂ ಕೆಲ ಮನೆ ಮಾಲೀಕರು ತಮ್ಮ ಮನೆಯ ಮುಂಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ಭಾರತ್ ನಗರದಲ್ಲಿ ಚಿರತೆ ಕಾಣಿಸಿಕೊಂಡ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಒಂದೇ ಒಂದು ಬೋನ್ ಇಟ್ಟಿದ್ದರು. ಅದರಲ್ಲಿ ಒಂದು ಕೋಳಿಯನ್ನು ಇಟ್ಟಿದ್ದರು. ಆದರೆ ಈಗ ಕೋಳಿ ಕೂಡ ಬೋನ್ನಲ್ಲಿ ಇಲ್ಲ. ಅರಣ್ಯ ಇಲಾಖೆ ಚಿರತೆ ಹಿಡಿಯಲು ಯಾವುದೇ ಪ್ರಯತ್ನ ಕೂಡ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಕಳೆದ ಹದಿನೈದು ದಿನಗಳಿಂದ ಚಿರತೆ ಭಾರತ ನಗರದ ನಿವಾಸಿಗಳಿಗೆ ವಿಪರೀತ ಭಯ ಹುಟ್ಟಿಸಿದ್ದು, ಜೀವ ಕೈಯಲ್ಲಿ ಹಿಡಿದು ಜೀವನ ಮಾಡುತ್ತಿದ್ದಾರೆ. ಇನ್ನು ನಗರಕ್ಕೆ ಸಂಬಂಧಿಕರು ಬರಲು ಹಿಂದೇಟು ಹಾಕುತ್ತಿದ್ದಾರಂತೆ. ಮಕ್ಕಳು ಆಟವಾಡಲು ಹೊರಗೆ ಕಳಿಸಲು ಮತ್ತು ವಾಕಿಂಗ್ ಹೋಗಲು ಭಯ ಆಗುತ್ತಿದೆ ಎಂದು ನಿವಾಸಿ ಗೋಪಾಲ್ ಅವರ ಮಾತು.
ಬನಶಂಕರಿ 6ನೇ ಹಂತದಲ್ಲೂ ಚಿರತೆ ಪ್ರತ್ಯಕ್ಷ
ಇನ್ನೊಂದೆಡೆ, ನಗರದ ಬನಶಂಕರಿ 6ನೇ ಹಂತದ 2ನೇ ಬ್ಲಾಕ್ನಲ್ಲಿಯೂ ಇಂದು ಸಂಜೆ ಸುಮಾರು 7 ಗಂಟೆಯ ವೇಳೆಗೆ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಏಕಾಏಕಿ ಚಿರತೆ ಕಾಣಿಸಿಕೊಂಡಿದ್ದರಿಂದ ಸ್ಥಳೀಯ ನಿವಾಸಿಗಳು ಕಂಗಾಲಾಗಿದ್ದಾರೆ.
ಇದನ್ನೂ ಓದಿ: Leopard In Bengaluru: 5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಒಟ್ಟಿನಲ್ಲಿ ಒಂಟಿ ಚಿರತೆ ಜನರಲ್ಲಿ ಸಾಕಷ್ಟು ಭಯ ಹುಟ್ಟಿಸಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಕಾರ್ಯಾಚರಣೆ ನಡೆಸಿ ಎರಡೂ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆಗಳನ್ನು ಸೆರೆಹಿಡಿಯಬೇಕೆಂದು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಚಿರತೆ ಸೆರೆಗೆ ಏನು ಕ್ರಮಕೈಗೊಳ್ಳುತ್ತದೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




