
ಬಾಗಲಕೋಟೆ, (ಜುಲೈ 07): ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಕೇಳರಿಯದ ಮಳೆ (Rain) ಆಗ್ತಿದೆ. ಅದೇ ನೀರು ಕೃಷ್ಣೆಯ ಒಡಲು ಸೇರಿದ್ದು, ರಾತ್ರೋರಾತ್ರಿ ಕೃಷ್ಣಾ ನದಿ (Krishna River) ನೀರಿನ ಮಟ್ಟ 1 ಲಕ್ಷ ಕ್ಯೂಸೆಕ್ ದಾಟಿದೆ. ಜಸ್ಟ್ ನಾಲ್ಕು ದಿನಗಳ ಹಿಂದಷ್ಟೇ ಕೃಷ್ಣಾ ನದಿ ಒಣಗಿ ಹೋಗಿದ್ದು, ಜಮೀನಿನಲ್ಲಿನ ಬೆಳೆಗಳು ಕೂಡಾ ಒಣಗಿ ಹೋಗಿದ್ದವು. ಆದ್ರೆ ನಾಲ್ಕೇ ದಿನದಲ್ಲಿ ಕೃಷ್ಣಾ ನದಿ ಪಾತ್ರದ ಚಿತ್ರಣವೇ ಬದಲಾಗಿದೆ. ಕಬ್ಬು, ಜೋಳ ಸೇರಿದಂತೆ ಬೆಳೆಗಳೆಲ್ಲಾ ನದಿ ಒಡಲು ಸೇರಿವೆ. ಇನ್ನೊಂದೆಡೆ ಬಾಗಲಕೋಟೆ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದು, ಬರದ ಛಾಯೆ ಆವರಿಸಿದೆ. ಆದ್ರೆ, ಮಹಾರಾಷ್ಟ್ರದ ಪಶ್ಚಿಮ ಘಟ್ಟ ಮತ್ತು ಬೆಳಗಾವಿ ಭಾಗದಲ್ಲಿ ಸುರಿದ ನಿರಂತರ ಮಳೆ ಜಲಮೂಲ ಭರ್ತಿಯಾಗಿವೆ. ಖಾಲಿಯಾಗಿದ್ದ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಬೊರ್ಗರೆದು ಹರಿಯುತ್ತಿವೆ. ಆದ್ರೆ, ರೈತರ ಬೆಳೆಗಳಿಗೆ ಸರಿಯಾಗಿ ನೀರಿಲ್ಲ.
ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ಹಾಗೂ ಘಟಪ್ರಭಾ ನದಿಗೆ ಜೀವ ಕಳೆ ಬಂದಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್ ವ್ಯಾಪ್ತಿಯಲ್ಲಿ ಕೃಷ್ಣಾ ನದಿ ರೌದ್ರ ರಮಣೀಯವಾಗಿ ಬೊರ್ಗರೆದು ಹರಿಯುತ್ತಿದೆ.ಬ್ಯಾರೇಜ್ಗೆ ಒಳಹರಿವು 77,100 ಕ್ಯೂಸೆಕ್ ಇದ್ದು, ಹೊರಹರಿವು 75,500 ಕ್ಯೂಸೆಕ್ ಇದೆ. ಹೀಗಾಗಿ ಹಿಪ್ಪರಗಿ ಬ್ಯಾರೇಜ್ನ 10 ಗೇಟ್ಗಳನ್ನು ಓಪನ್ ಮಾಡಲಾಗಿದ್ದು, ನದಿ ದಡದ ಅಕ್ಕಪಕ್ಕದಲ್ಲಿರುವ ನೂರಾರು ಮೋಟಾರ್ ಪಂಪ್ ಸೆಟ್ಗಳು ಮುಳುಗಡೆ ಆತಂಕ ಎದುರಾಗಿದ್ದು, ಇದರಿಂದ ರೈತರು, ಜಮೀನಿಗೆ ನೀರು ಹರಿಸಲು ಅಳವಡಿಸಿದ್ದ ಪಂಪ್ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ.
ಇತ್ತ ಮುಧೋಳ ಭಾಗದಲ್ಲೂ ಘಟಪ್ರಭಾ ನದಿಗೆ 11,100 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮುಧೋಳ ಹೊರವಲಯದ ಸಿದ್ದೇಶ್ವರ ಕಿರುಸೇತುವೆ ಸಂಪೂರ್ಣ ಜಲಾವೃತವಾಗಿದೆ. ಆದರೆ ಇದೇ ಸ್ಥಳದಲ್ಲಿ ಪೈಪ್ಲೈನ್ ಮೂಲಕ ನದಿಗೆ ನೊರೆ ಸಹಿತ ವಿಷಕಾರಿ ಮಲಿನ ನೀರು ಸೇರುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ನದಿ ತೀರದ ರೈತರು ಇಷ್ಟು ದಿನ ನದಿಯಲ್ಲಿ ಹನಿ ನೀರೇ ಇರಲಿಲ್ಲ. ಖಾಲಿಯಾದ ನದಿ ನೋಡಿ ಬಹಳ ಬೇಸರಗೊಂಡಿದ್ದರು. ಜನ ಜಾನುವಾರುಗಳಿಗೆ, ಕೃಷಿಗೆ ನೀರಿಲ್ಲದ ಚಿಂತೆ ಕಾಡುತ್ತಿತ್ತು. ಇದೀಗ ಎಲ್ಲೋ ಆದ ಮಳೆಯಿಂದ ನದಿಗಳಿಗೆ ಜೀವಕಳೆ ಬಂದಿದ್ದು, ರೈತರು ಸಂತಸಗೊಂಡಿದ್ದಾರೆ.
ನದಿಗಳು ತುಂಬಿ ಹರಿಯುತ್ತಿದ್ದರೂ ಸಹ ರೈತರ ಬೆಳೆಗಳಿಗೆ ಸರಿಯಾಗಿ ನೀರು ಸಿಗುತ್ತಿಲ್ಲ ಎನ್ನುವ ಆತಂಕ ರೈತರಲ್ಲಿದೆ. ನದಿ ತುಂಬಿದರೂ ಅಧಿಕಾರಿಗಳು ನದಿ ದಡದ ಮೋಟಾರ್ ಪಂಪ್ಗಳಿಗೆ ಕರೆಂಟ್ ನೀಡುತ್ತಿಲ್ಲ. ಮೊದಲು ಕುಡಿಯುವ ನೀರಿಗೆ ಮಾತ್ರ ಆದ್ಯತೆ ಎನ್ನುತ್ತಿದ್ದಾರೆ. ಈಗಾಗಲೇ ಮಳೆಯಿಲ್ಲದೆ ಬೆಳೆ ಒಣಗುತ್ತಿರುವುದರಿಂದ ಕೂಡಲೇ ಕರೆಂಟ್ ಸೌಲಭ್ಯ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.