ಬೇಸಿಗೆಯಲ್ಲೂ ಬತ್ತದ ದಕ್ಷಿಣ ಕಾಶಿಯ ಪುಷ್ಕರಣಿ: ಸಾವಿರ ವರ್ಷ ಕಳೆದ್ರೂ ಕಮ್ಮಿಯಾಗದ ಹೊಂಡದ ನೀರು

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟ ಪುಣ್ಯಕ್ಷೇತ್ರ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿದೆ. ಇಲ್ಲಿರುವ ಚಾಲುಕ್ಯರ ಕಾಲದ ಪುಷ್ಕರಣಿ ಬರಗಾಲದಲ್ಲೂ ಬತ್ತಿರುವ ಇತಿಹಾಸವಿಲ್ಲ. ಇಲ್ಲಿಗೆ ಭೇಟಿ ನೀಡುವ ಭಕ್ತರು ಪುಷ್ಕರಣಿಯಲ್ಲಿ ಮಿಂದೇಳುತ್ತಿದ್ದಾರೆ. ಭೀಕರ ಬರಗಾಲದಲ್ಲೂ ನೀರು ಖಾಲಿಯಾಗದಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ.

ಬೇಸಿಗೆಯಲ್ಲೂ ಬತ್ತದ ದಕ್ಷಿಣ ಕಾಶಿಯ ಪುಷ್ಕರಣಿ: ಸಾವಿರ ವರ್ಷ ಕಳೆದ್ರೂ ಕಮ್ಮಿಯಾಗದ ಹೊಂಡದ ನೀರು
ಮಹಾಕೂಟ ಕ್ಷೇತ್ರ
Image Credit source: tv9 kannada
Edited By:

Updated on: May 17, 2026 | 8:47 PM

ಬಾಗಲಕೋಟೆ, ಮೇ 17: ರಾಜ್ಯಾದ್ಯಂತ ಬಿರುಬಿಸಿಲಿನ ಬೇಗೆ (heatwaves) ಜೋರಾಗಿದೆ. ನದಿ, ಕೆರೆ, ಕಟ್ಟೆಗಳು ಸೇರಿದಂತೆ ಬಹುತೇಕ ಜಲಮೂಲಗಳು ಸಂಪೂರ್ಣವಾಗಿ ಒಣಗುತ್ತಿವೆ. ಎಲ್ಲೆಡೆ ಬರದ ಭೀಕರ ಚಿತ್ರಣ ಕಣ್ಣೆದುರು ಬರ್ತಿದೆ. ಆದರೆ, ಇಂತಹ ಕಡು ಬೇಸಿಗೆಯಲ್ಲೂ ಮಹಾಕೂಟ (Mahakuta) ಪುಣ್ಯಕ್ಷೇತ್ರದ ಪವಿತ್ರ ಪುಷ್ಕರಣಿ ಮಾತ್ರ ಇದುವರೆಗೂ ಒಮ್ಮೆಯೂ ಬತ್ತಿಲ್ಲ. ಬಿರುಬಿಸಿಲಿನಲ್ಲೂ ಸದಾ ಕಾಲ ಕಣ್ಣು ತುಂಬಿಕೊಳ್ಳುವಂತೆ ಕಂಗೊಳಿಸುತ್ತಿದ್ದು, ಭಕ್ತರು ಪುಣ್ಯಸ್ನಾನದಲ್ಲಿ ಮಿಂದೇಳುತ್ತಿದ್ದಾರೆ.

ಮುಖ್ಯಾಂಶಗಳು

  • ಸಾವಿರ ವರ್ಷ ಕಳೆದ್ರೂ ಕಮ್ಮಿಯಾಗದ ಹೊಂಡದ ನೀರು
  • ಚರ್ಮರೋಗ ನೀಗಿಸುವ ಮಹಾಕೂಟದ ಪವಿತ್ರ ತೀರ್ಥ
  • ಪುಣ್ಯಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ಭಕ್ತರು ಆಕ್ರೋಶ

ಒಂದೇ ಒಂದು ಬಾರಿಯೂ ಬತ್ತದ ಪುಷ್ಕರಣಿ 

ಚಾಲುಕ್ಯರ ಐತಿಹಾಸಿಕ ತಾಣ, ‘ದಕ್ಷಿಣ ಕಾಶಿ’ ಎಂದೇ ಮಹಾಕೂಟ ಕ್ಷೇತ್ರ ಪ್ರಸಿದ್ಧಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟ ಪುಣ್ಯಕ್ಷೇತ್ರಕ್ಕೆ ರಾಜ್ಯ, ಹೊರರಾಜ್ಯ ಮಾತ್ರವಲ್ಲದೇ ದೇಶ-ವಿದೇಶಗಳಿಂದಲೂ ಪ್ರವಾಸಿಗರು ಲಗ್ಗೆ ಇಡುತ್ತಾರೆ. ಇಲ್ಲಿಗೆ ಬರುವ ಭಕ್ತರನ್ನು ಪ್ರಮುಖವಾಗಿ ಆಕರ್ಷಿಸುವುದೇ ಈ ಪುಷ್ಕರಣಿ ಹೊಂಡ. ಈಗ ರಾಜ್ಯದ ಎಲ್ಲೆಡೆ ಭೀಕರ ಬರಗಾಲವಿದ್ದರೂ, ಈ ಪವಿತ್ರ ಹೊಂಡದ ನೀರು ಮಾತ್ರ ಇದುವರೆಗೂ ಒಂದೇ ಒಂದು ಬಾರಿಯೂ ಬತ್ತಿದ ಇತಿಹಾಸವಿಲ್ಲ.

ಇದನ್ನೂ ಓದಿ: ಬಿಸಿಲ ಝಳಕ್ಕೆ ಭಣಗುಡುತ್ತಿವೆ ಐತಿಹಾಸಿಕ ತಾಣಗಳು: ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಪ್ರವಾಸಿಗರ ಬರ

ಚಾಲುಕ್ಯರ ಕಾಲದಲ್ಲಿ ಅತ್ಯಂತ ವೈಜ್ಞಾನಿಕವಾಗಿ ಮತ್ತು ಕಲಾತ್ಮಕವಾಗಿ ನಿರ್ಮಾಣವಾಗಿರುವ ಈ ಪುಷ್ಕರಣಿ ಹೊಂಡ ಮಹಾಕೂಟೇಶ್ವರ ದೇವಸ್ಥಾನದ ಪಕ್ಕದಲ್ಲೇ ಇದೆ. ದೇವಸ್ಥಾನಕ್ಕೆ ಬರುವ ಭಕ್ತರು ಮೊದಲು ಈಶ್ವರನ ದರ್ಶನ ಪಡೆದು, ನಂತರ ಈ ಹೊಂಡದಲ್ಲಿ ಮಿಂದೇಳುತ್ತಾರೆ. ಈ ಪುಷ್ಕರಣಿಯ ನೀರಿನ ವಿಶೇಷತೆ ಎಂದರೆ, ಇಲ್ಲಿ ಒಮ್ಮೆ ಇಳಿದರೆ ಸಾಕು ವಾಪಸ್ ಹೊರಗೆ ಬರಲು ಮನಸ್ಸೇ ಒಪ್ಪುವುದಿಲ್ಲ. ಅಷ್ಟೊಂದು ಸುಮಧುರ ಮತ್ತು ತಂಪಾದ ಅನುಭವ ಭಕ್ತರಿಗೆ ಸಿಗುತ್ತದೆ.

ಮೈಕೈ ನೋವು; ಚರ್ಮ ರೋಗಗಳು ದೂರ

ಸಾವಿರಾರು ವರ್ಷಗಳ ಇತಿಹಾಸವಿರುವ ಈ ಹೊಂಡಕ್ಕೆ ಕಾಶಿಯಿಂದಲೇ ಗಂಗಾ ನದಿ ಅಂತರ್ಜಲದ ರೂಪದಲ್ಲಿ ಹರಿದು ಬರುತ್ತದೆ ಎಂಬ ಬಲವಾದ ನಂಬಿಕೆ ಇದೆ. ಅಲ್ಲದೇ ಈ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದರೆ ಮೈಕೈ ನೋವು ದೂರವಾಗುವುದರ ಜೊತೆಗೆ, ಚರ್ಮ ರೋಗಗಳೂ ವಾಸಿಯಾಗುತ್ತವೆ ಎಂಬುದು ಭಕ್ತರ ಅಪಾರ ವಿಶ್ವಾಸ.

ಮೂಲಭೂತ ಸೌಕರ್ಯಗಳ ಕೊರತೆ

ಇಷ್ಟೆಲ್ಲಾ ಇತಿಹಾಸ ಮತ್ತು ಮಹತ್ವ ಹೊಂದಿರುವ ಈ ಪ್ರವಾಸಿ ತಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ಮಾತ್ರ ಬೇಸರದ ಸಂಗತಿ. ಇಲ್ಲಿಗೆ ಬರುವ ಮಹಿಳಾ ಪ್ರವಾಸಿಗರಿಗೆ ಬಟ್ಟೆ ಬದಲಿಸಲು ಸೂಕ್ತ ಕೊಠಡಿಗಳಿಲ್ಲ ಹಾಗೂ ಶೌಚಾಲಯದ ವ್ಯವಸ್ಥೆಯೂ ಸರಿಯಾಗಿಲ್ಲ. ಹೀಗಾಗಿ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ತಕ್ಷಣವೇ ಗಮನಹರಿಸಿ, ಈ ಐತಿಹಾಸಿಕ ಸ್ಥಳಕ್ಕೆ ಇನ್ನಷ್ಟು ಮೆರುಗು ನೀಡಬೇಕೆಂದು ಭಕ್ತರಾದ ವಿನುತಾ ಮತ್ತು ಲೀಲಾ ಅವರು ಆಗ್ರಹಿಸಿದರು.

ಪವಿತ್ರ ಪುಷ್ಕರಣಿ

ಒಟ್ಟಿನಲ್ಲಿ, ಬಿಸಿಲ ನಾಡಿನ ಬರದ ಬೇಗೆಯ ನಡುವೆಯೂ ಮಹಾಕೂಟದ ಈ ಪುಷ್ಕರಣಿ ಹೊಂಡ ಭಕ್ತರ ಮೈಗೆ ತಂಪು ಎರೆೆಯುತ್ತಾ, ಮನಸ್ಸಿಗೆ ನೆಮ್ಮದಿ ನೀಡುವ ದಿವ್ಯ ತಾಣವಾಗಿ ಕಂಗೊಳಿಸುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:43 pm, Sun, 17 May 26

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us