ಟಿಕೆಟ್ ವಂಚನೆ ಕೇಸ್​: ಚೈತ್ರಾ ಕುಂದಾಪುರ ಕಾರನ್ನು ತಂದಿಟ್ಟುಕೊಂಡಿದ್ದ ಕಿರಣ್​ ಗಣಪ್ಪಗೋಳ ಹೇಳಿದ್ದಿಷ್ಟು

ಚೈತ್ರಾ ಕುಂದಾಪುರ ಡೀಲ್ ಲಿಂಕ್ ಈಗ ಬಾಗಲಕೋಟೆ ಜಿಲ್ಲೆಗೂ ವ್ಯಾಪಿಸಿದೆ. ಜಿಲ್ಲೆಯ ಮುಧೋಳ ನಗರದಲ್ಲಿ ಕಿಯಾ ಕಾರು ಪತ್ತೆಯಾಗಿದೆ. ಚೈತ್ರಾ ಕುಂದಾಪುರ ಕಾರನ್ನು ತಂದಿಟ್ಟುಕೊಂಡಿದ್ದ ಕಿರಣ್​ ಗಣಪ್ಪಗೋಳ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಚೈತ್ರಾ ಕುಂದಾಪುರ ನಾಲ್ಕು ವರ್ಷದಿಂದ ‌ನನಗೆ ಪರಿಚಯ.​ ಇಂತಹ ಕೆಲಸದಲ್ಲಿ ಭಾಗಿಯಾಗುತ್ತಾರೆ ಅಂತಾ ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

ಟಿಕೆಟ್ ವಂಚನೆ ಕೇಸ್​: ಚೈತ್ರಾ ಕುಂದಾಪುರ ಕಾರನ್ನು ತಂದಿಟ್ಟುಕೊಂಡಿದ್ದ ಕಿರಣ್​ ಗಣಪ್ಪಗೋಳ ಹೇಳಿದ್ದಿಷ್ಟು
ಕಿರಣ್​ ಗಣಪ್ಪಗೋಳ, ಚೈತ್ರಾ ಕುಂದಾಪುರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 17, 2023 | 8:06 PM

ಬಾಗಲಕೋಟೆ, ಸೆಪ್ಟೆಂಬರ್​​ 17: ಚೈತ್ರಾ ಕುಂದಾಪುರ (Chaitra Kundapura) ನಾಲ್ಕು ವರ್ಷದಿಂದ ‌ನನಗೆ ಪರಿಚಯ.​ ಈವರೆಗೂ ಎರಡು ಬಾರಿ ನಾನು ಚೈತ್ರಾಳನ್ನು ಮುಧೋಳಕ್ಕೆ ಕರೆಸಿದ್ದೇನೆ. ಚೈತ್ರಾ ಇಂತಹ ಕೆಲಸದಲ್ಲಿ ಭಾಗಿಯಾಗುತ್ತಾರೆ ಅಂತಾ ನನಗೆ ಗೊತ್ತಿರಲಿಲ್ಲ ಎಂದು ಚೈತ್ರಾ ಕುಂದಾಪುರ ಕಾರನ್ನು ತಂದಿಟ್ಟುಕೊಂಡಿದ್ದ ಕಿರಣ್​ ಗಣಪ್ಪಗೋಳ ಹೇಳಿದ್ದಾರೆ. ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಟಿವಿ9ಗೆ ಪ್ರತಿಕ್ರಿಯಿಸಿದ್ದು, ನನ್ನ, ಚೈತ್ರಾ ಕುಂದಾಪುರ ಮಧ್ಯೆ ಯಾವುದೇ ಹಣದ ವ್ಯವಹಾರ ನಡೆದಿಲ್ಲ. ಎಲ್ಲಾ ವಿಚಾರಗಳ ಬಗ್ಗೆ‌ ಸಿಸಿಬಿ ಪೊಲೀಸರು ಮಾಹಿತಿ ಕೇಳಿದರು. ನಾನು ಯಾವುದೇ ತನಿಖೆಗೂ ಸಿದ್ಧ ಎಂದು ಹೇಳಿದ್ದಾರೆ.

ನಾನು ಹಿಂದೂ ಕಾರ್ಯಕರ್ತ, ತಿಲಕ್​ ಫೌಂಡೇಷನ್​ ನಡೆಸುತ್ತಿದ್ದೇನೆ. ಒಳ್ಳೆಯ ವಾಗ್ಮಿ ಅಂತಾ 2019, 2022ರಲ್ಲಿ ಚೈತ್ರಾ ಕುಂದಾಪುರ ಕರೆಸಿದ್ದೆ. ಮುಧೋಳಕ್ಕೆ ಬಂದಿದ್ದಾಗ ನಮ್ಮ ಮನೆಗೂ ಚೈತ್ರಾಳನ್ನು ಕರೆಸಿದ್ದೆ. ಇಂತಹ ಕೆಲಸ ಮಾಡುತ್ತಾರೆ ಅಂತಾ ಗೊತ್ತಿದ್ದರೆ ಸಹವಾಸ ಮಾಡುತ್ತಿರಲಿಲ್ಲ ಎಂದರು.

ಇದನ್ನೂ ಓದಿ: ಚಿಕ್ಕಮಗಳೂರು: ಚೈತ್ರಾ ಕುಂದಾಪುರ ಪೋಲಿಸರ ಬಲೆಗೆ; ಆಕೆ ಓಡಾಡಿದ ಜಾಗವನ್ನ ತೀರ್ಥ ಹಾಕಿ ಶುದ್ಧ ಮಾಡಿದ ಗ್ರಾಮಸ್ಥರು

ನನಗೆ ಚೈತ್ರಾ ಕುಂದಾಪುರ ಪಿಎ ಶ್ರೀಕಾಂತ್ ಕರೆ ಮಾಡಿದ್ದ. ಸೊಲ್ಲಾಪುರದಲ್ಲಿ ಕಾರು ಇದೆ ತೆಗೆದಿಟ್ಟುಕೊ ಎಂದು ನನಗೆ ಹೇಳಿದ್ದ. ಅದಕ್ಕಾಗಿ ನಾನು ಕಾರು ತೆಗೆದುಕೊಂಡು ಇಟ್ಟಿದ್ದೆ. ಕಾರು ತೆಗೆದುಕೊಂಡು ಬಂದಿದ್ದೇ ಇಷ್ಟೊಂದು ಆರೋಪಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟಿಕೆಟ್ ವಂಚನೆ ಪ್ರಕರಣ: ಚೈತ್ರಾ ಕುಂದಾಪುರಳ ಮತ್ತೊಂದು ಆಡಿಯೋ ಬಹಿರಂಗ

ಚೈತ್ರಾ ಬಾಲಕೃಷ್ಣ ಕುಂದಾಪುರ ಹೆಸರಲ್ಲಿ ಕಾರು ಇದ್ದು, ಇದೇ ವರ್ಷದಲ್ಲೇ ಖರೀದಿ ಮಾಡಲಾಗಿದೆ. ಕಿಯಾ ಕಾರು ಮುಧೋಳ‌ ನಗರದ ಹಿಂದು ಕಾರ್ಯಕರ್ತ ಕಿರಣ ಗಣಪ್ಪಗೋಳ ಡ್ರೈವಿಂಗ್ ಸ್ಕೂಲ್​ ನಲ್ಲಿ ಪತ್ತೆಯಾಗಿದೆ. ಕಿರಣ ಮುಧೋಳ ನಗರದ ‌ಮಲ್ಲಮ್ಮ ನಗರ ನಿವಾಸಿ. ನಗರದಲ್ಲಿ ತಿಲಕ್ ಪೌಂಡೇಶನ್ ನ ಸದಸ್ಯ ಕೂಡ ಆಗಿದ್ದಾನೆ. ಆ ಮೂಲಕ ಸಾಮಾಜಿಕ‌ ಕಾರ್ಯ ಮಾಡುತ್ತಾನೆ. ಹಿಂದುಪರ ಸಂಘಟನೆಯಲ್ಲೂ ಗುರುತಿಸಿಕೊಂಡಿದ್ದು, ಹಿಂದೆ‌‌ ಮುಧೋಳ ನಗರ ಹಾಗೂ‌ ಮುಧೋಳ ತಾಲ್ಲೂಕಿನ ಬರಗಿ ಗ್ರಾಮಕ್ಕೆ ಚೈತ್ರಾ ಕುಂದಾಪುರ ಅವರನ್ನು ಕರೆಸಿದ್ದ.

ಇದರಿಂದ ಇಬ್ಬರ ಮಧ್ಯೆ ಪರಿಚಯ ಸಂಪರ್ಕ ಏರ್ಪಟ್ಟಿತು. ಸೆಪ್ಟೆಂಬರ್ 9 ರಂದು ಚೈತ್ರಾಳ ಪಿಎ ಶ್ರೀಕಾಂತ್ ಕಿರಣಗೆ ಕರೆ ಮಾಡಿ ಕಾರು ತೆಗೆದುಕೊಂಡು ಹೋಗಲು ತಿಳಿಸಿದ್ದ. ಆ ಪ್ರಕಾರ‌‌ ಮಹಾರಾಷ್ಟ್ರದ ಸೊಲ್ಲಾಪುರ ‌ನಗರದ ಬಾರ್ ಆ್ಯಂಡ್ ರೆಸ್ಟೊರೆಂಟ್ ಮುಂದೆ ಇದ್ದ ಕಾರನ್ನು ಕಿರಣ ತಂದು ಮುಧೋಳ ನಗರದಲ್ಲಿ ಇಟ್ಕೊಂಡಿದ್ದ. ಕರೆ ಆಧಾರದ ಮೇಲೆ ಈ ಬಗ್ಗೆ ತಿಳಿದುಕೊಂಡ ಸಿಸಿಬಿ ಪೊಲೀಸರು ನಿನ್ನೆಯೇ ಬಂದು ಕಾರು ಜಪ್ತಿ‌ ಮಾಡಿಕೊಂಡು ಕಿರಣನನ್ನು‌ ವಶಕ್ಕೆ ಪಡೆದು ವಿಚಾರಣೆ ‌ನಡೆಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.