
ಬಳ್ಳಾರಿ, ಡಿ.11: ಇಂದಿನ ಕಾಲದಲ್ಲಿ ಕಣ್ಣು ಬಿಟ್ಟು ಪರೀಕ್ಷೆ ಬರೆಯುವುದೇ ಕಷ್ಟ, ಅಂತಹದರಲ್ಲಿ ಬಳ್ಳಾರಿ ವಿದ್ಯಾರ್ಥಿನಿಯೊಬ್ಬಳು, ಕಲಿಯುಗದ ಗಾಂಧಾರಿಯಂತೆ ಕಣ್ಣಿಗೆ ಬಟ್ಟೆ ಕಟ್ಟಿ ಪರೀಕ್ಷೆ (blindfolded exam student) ಬರೆದಿದ್ದಾಳೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕ ಕಡೆ ವಿಡಿಯೋ ವೈರಲ್ ಆಗಿದೆ. ಬಳ್ಳಾರಿಯ ಕುರವಳ್ಳಿ ತಿಮ್ಮಪ್ಪ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಈ ಘಟನೆ ನಡೆದಿದೆ. ಎಂಟನೇ ತರಗತಿ ವಿದ್ಯಾರ್ಥಿನಿ ಹಿಮಬಿಂದು, ಸಮಾಜ ವಿಜ್ಞಾನ ಪರೀಕ್ಷೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿ ಬರೆದಿದ್ದಾಳೆ.
ಕಣ್ಣಿಗೆ ಕಾಟನ್ ಇಟ್ಟು ಅದರ ಮೇಲೆ ಕಪ್ಪು ಬಟ್ಟೆ ಕಟ್ಟಿ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಪೋಷಕರು, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿದ್ಯಾರ್ಥಿನಿ ಕಣ್ಣಿಗೆ ಬಟ್ಟೆಕಟ್ಟಿಯೇ ಪೋಟೋಗಳನ್ನು ಗುರುತಿಸುತ್ತಾಳೆ ಎಂದು ಶಿಕ್ಷಕರು ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಆಂಜನೇಯಸ್ವಾಮಿ, ಶ್ರೀ ಕನಕದಾಸರು ಹೀಗೆ ಅನೇಕ ಮಹಾನೀಯರ ಫೋಟೋಗಳನ್ನು ಬೇಗನೆ ಗುರುತಿಸುತ್ತಾಳೆ. ಇದು ಮಾತ್ರವಲ್ಲ ಟೆಕ್ ವಿಚಾರದಲ್ಲೂ ಕೂಡ ಮುಂದು ಎಂದು ಪೋಷಕರು ಹೇಳಿದ್ದಾರೆ. ಕಣ್ಣು ಮುಚ್ಚಿಕೊಂಡು ಮೊಬೈಲ್ನಲ್ಲಿರುವ ಅಕ್ಷರಗಳನ್ನು ತಕ್ಷಣ ಹೇಳುತ್ತಾಳೆ. ಹನ್ನೊಂದು ವರ್ಷದವಳಿದ್ದಾಗಿನಿಂದಲೂ ಗಾಂಧಾರಿ ವಿದ್ಯೆ ಕರಗತ ಮಾಡಿಕೊಂಡಿರುವ ವಿದ್ಯಾರ್ಥಿನಿ ಎಂಟನೇ ತರಗತಿಯ ಎಲ್ಲಾ ಪರೀಕ್ಷೆಗಳನ್ನ ಕಣ್ಣಿಗೆ ಬಟ್ಟೆಕಟ್ಟಿಯೇ ಬರೆಯಲು ನಿರ್ಧಾರಿಸಿದ್ದಾಳೆ.
ವಿದ್ಯಾರ್ಥಿನಿ ಹಿಮಬಿಂದು ಚಿಕ್ಕ ವಯಸ್ಸಿನಿಂದಲ್ಲೇ ಗಾಂಧಾರಿ ವಿದ್ಯೆ ಕಲಿತುಕೊಂಡ ಕಾರಣ ಎಲ್ಲವನ್ನು ಕಣ್ಣು ಮುಚ್ಚಿಕೊಂಡೆ ಲೀಲಾಜಾಲವಾಗಿ ಹೇಳುತ್ತಾಳೆ. ಆಕೆಯ ಸಾಧನೆಗೆ ಅವರ ಶಿಕ್ಷಕರು ಹಾಗೂ ಪೋಷಕರ ಕೂಡ ಸಾಥ್ ನೀಡಿದ್ದಾರೆ. ಇನ್ನು ಈ ವಿದ್ಯಾರ್ಥಿನಿ 8ನೇ ತರಗತಿ ಆಗಿರುವ ಕಾರಣ ಕಣ್ಣಿಗೆ ಬಟ್ಟೆಕಟ್ಟಿ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿದೆ. ಎಸ್ಎಲ್ಸಿ ಅಥವಾ ಪಿಯುವ ಅಂತಹ ಪ್ಲಬಿಷ್ ಪರೀಕ್ಷೆಗಳನ್ನು ಹೀಗೆ ಬರೆಯಲು ಅವಕಾಶ ಇರುವುದಿಲ್ಲ. ಇನ್ನು ಶಾಲಾ ಆಡಳಿಯ ಮಂಡಳಿಯೂ ಇದಕ್ಕೆ ಅನುಮತಿಯನ್ನು ನೀಡಿತ್ತು.
“ನಾನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಬರೆಯವ ಅಭ್ಯಾಸವನ್ನು ಚಿಕ್ಕ ವಯಸ್ಸಿನಿಂದ ಮಾಡಿಕೊಂಡಿದ್ದೇನೆ. ಪರೀಕ್ಷೆ ಬರೆಯುವ ಮೊದಲು ಒಂದು ಗೌಪ್ಯವಾದ ಮಂತ್ರವನ್ನು ಹೇಳುತ್ತೇನೆ. ಅದನ್ನು ಯಾರಿಗೂ ನಾನು ಹೇಳುವುದಿಲ್ಲ. ಒಟ್ಟು ಹೀಗೆ 25 ಕಾರ್ಯಕ್ರಮಗಳನ್ನು ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಈ ವಿದ್ಯೆಯನ್ನು ಗುರುಗಳು ಕಳಿಸಿದ್ದು, ಮೂರನೇ ಕಣ್ಣಿನಲ್ಲಿ ಎಲ್ಲವೂ ನನಗೆ ತಿಳಿಯುತ್ತದೆ. ಅದಕ್ಕಾಗಿ ಒಂದು ಪ್ರಾಣಾಯಾಮ ಹೇಳಿಕೊಟ್ಟಿದ್ದಾರೆ” ಎಂದು ವಿದ್ಯಾರ್ಥಿನಿ ಹಿಮಬಿಂದು ಹೇಳಿದ್ದಾಳೆ.
ಇದನ್ನೂ ಓದಿ: ಮೈಸೂರಿನಲ್ಲಿ ಮುಂದುವರಿದ ಹುಲಿ ಸೆರೆ ಕಾರ್ಯಚರಣೆ: ಜಿಲ್ಲೆಯ ಹಲವು ಕಡೆ ಒಂದು ತಿಂಗಳಿನಲ್ಲಿ 25 ಹುಲಿಗಳ ರಕ್ಷಣೆ
ಹಿಮಬಿಂದು ಒಂದನೇ ತರಗತಿಯಿಂದಲ್ಲೇ ಈ ಅಭ್ಯಾಸವನ್ನು ಮಾಡಿಕೊಂಡಿದ್ದಾಳೆ. ಇದನ್ನು ಆನ್ಲೈನ್ ಕ್ಲಾಸ್ನಲ್ಲಿ ತರಬೇತಿ ಪಡೆದಿದ್ದಾಳೆ. ಪ್ರತಿದಿನ ನಮ್ಮ ಮುಂದೆ ಇಂತಹ ಸಾಹಸಗಳನ್ನು ಅವಳು ಮಾಡುತ್ತಾಳೆ. ಮನೆಯಲ್ಲೂ ಕೂಡ ಇದನ್ನು ಕಲಿಯುತ್ತಾಳೆ. ಈ ಬಗ್ಗೆ ಅವಳ ಶಾಲೆಗೂ ಕೂಡ ಮೆಚ್ಚುಗೆ ಇದೆ. ಎಲ್ಲ ಕಡೆ ಆಕೆ ಸಾಧನೆಯ ಬಗ್ಗೆ ಮಾತನಾಡುತ್ತಾರೆ ಎಂದು ವಿದ್ಯಾರ್ಥಿನಿಯ ತಂದೆ ರಾಮಾಂಜನೇಯ ರೆಡ್ಡಿ ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:10 pm, Thu, 11 December 25