Coal Crisis: ಕಲ್ಲಿದ್ದಲು ಅಭಾವದಿಂದ ವಿದ್ಯುತ್ ಉತ್ಪಾದನೆ ಕುಸಿತ; ಅರ್ಧ ರಾಜ್ಯಕ್ಕೆ ಕತ್ತಲಿನ ಭೀತಿ

| Updated By: shivaprasad.hs

Updated on: Oct 10, 2021 | 9:20 AM

Coal shortage in Karnataka: ಕಲ್ಲಿದ್ದಲು ಅಭಾವದ ಬಿಸಿ ಕರ್ನಾಟಕ್ಕೆ ಜೋರಾಗಿ ತಟ್ಟಿದೆ. ಇದರಿಂದಾಗಿ ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ವಿದ್ಯುತ್ ಪೂರೈಸುವ ರಾಯಚೂರು ಹಾಗೂ ಬಳ್ಳಾರಿಯ ಶಾಖೋತ್ಪನ್ನ ವಿದ್ಯುತ್ ಘಟಕಗಳು ಕಾರ್ಯ ನಿಲ್ಲಿಸುವ ಆತಂಕ ಎದುರಾಗಿದೆ. ಕಲ್ಲಿದ್ದಲ್ಲಿನ ಕೊರತೆಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದೇನು? ಸಂಪೂರ್ಣ ವರದಿ ಇಲ್ಲಿದೆ.

Coal Crisis: ಕಲ್ಲಿದ್ದಲು ಅಭಾವದಿಂದ ವಿದ್ಯುತ್ ಉತ್ಪಾದನೆ ಕುಸಿತ; ಅರ್ಧ ರಾಜ್ಯಕ್ಕೆ ಕತ್ತಲಿನ ಭೀತಿ
ಸಾಂದರ್ಭಿಕ ಚಿತ್ರ
Follow us on

ಬಳ್ಳಾರಿ: ಕಲ್ಲಿದ್ದಲು ಅಭಾವದಿಂದ ವಿದ್ಯುತ್ ಉತ್ಪಾದನೆ ಕುಸಿತಗೊಂಡಿದ್ದು, ಅರ್ಧ ಕರ್ನಾಟಕ ಕತ್ತಲಾಗುವ ಭೀತಿ ಎದುರಾಗಿದೆ. ರಾಜ್ಯಕ್ಕೆ ಕಲ್ಲಿದ್ದಲು ಕೊರತೆ ಹಿನ್ನಲೆಯಲ್ಲಿ ಬಳ್ಳಾರಿಯ ಕುಡುತಿನಿ ಬಳಿಯ ಬಿಟಿಪಿಎಸ್​ಗೂ (ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್) ಕಲ್ಲಿದ್ದಲು ಕೊರತೆ ಬಿಸಿ ತಟ್ಟಿದೆ. ಕಲ್ಲಿದ್ದಲು ಕೊರತೆಯಿಂದ ಬಿಟಿಪಿಎಸ್​​ನ ಮೂರು ಘಟಕಗಳ ಪೈಕಿ 500 ಮೆಗಾ ವ್ಯಾಟ್ ಉತ್ಪಾದನೆಯ ಒಂದು ಘಟಕದಲ್ಲಿ ಮಾತ್ರ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಉಳಿದ 500 ಮೆ.ವ್ಯಾ ಹಾಗೂ 700 ಮೆ.ವ್ಯಾ ವಿದ್ಯುತ್ ಉತ್ಪಾದನೆಯ ಎರಡು ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿನಿತ್ಯ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಅವಶ್ಯಕತೆ ಇದ್ದು, ಈಗ ಪ್ರತಿನಿತ್ಯ 800 ಸಾವಿರ ಮೆಟ್ರಿಕ್ ಕಲ್ಲಿದ್ದಲು ಮಾತ್ರ ಪೂರೈಕೆಯಾಗುತ್ತಿದೆ. ಜೊತೆಗೆ ಪ್ರತಿ ಬಾರಿ 2 ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕಲ್ಲಿದ್ದಲು ಸಂಗ್ರಹದಲ್ಲಿಲ್ಲ.

ವಿದ್ಯುತ್ ಉತ್ಪಾದನಾ ಘಟಕಗಳಾದ YTPS ,RTPS, VTPSಗಳಲ್ಲಿ ಪರಿಸ್ಥಿತಿ ಹೇಗಿದೆ?:
YTPS ,RTPS, VTPS ಈ ಮೂರು ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ 13 ಯೂನಿಟ್ಸ್​ಗಳಿವೆ. ಅವುಗಳಲ್ಲಿ ನಿರ್ವಹಣೆ ಮಾಡಲು ಆಗದೆ ಈಗಾಗಲೇ ಎರಡು ಯೂನಿಟ್ ಬಂದ್ ಆಗಿವೆ. ಕಲ್ಲಿದ್ದಲು ಕೊರತೆಯಿಂದ ಮೂರು ಯೂನಿಟ್‌ಗಳು ಕ್ಲೋಸ್ ಆಗಿವೆ. ಒಟ್ಟು 5,400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಅದಕ್ಕಾಗಿ ದಿನಕ್ಕೆ 40-45 ಸಾವಿರ ಟನ್ ಕಲ್ಲಿದ್ದಲು ಅವಶ್ಯಕತೆ ಇದೆ. ಕಲ್ಲಿದ್ದಲ್ಲಿನ ಕೊರತೆಯಿಂದ 300ರಿಂದ 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಕೊರತೆಯಾಗಲಿದೆ. ಕಲ್ಲಿದ್ದಲಿನ ಕೊರತೆ ಮುಂದುವರೆದಲ್ಲಿ ಮತ್ತೊಂದಷ್ಟು ಉತ್ಪಾದನಾ ಘಟಕ ನಿಲ್ಲಿಸುವ ಪರಿಸ್ಥಿತಿ ತಲೆದೋರಲಿದ್ದು, ಭಾರಿ ಪ್ರಮಾಣ ವಿದ್ಯುತ್ ಕೊರತೆಯಾಗಲಿದೆ. ಆಗ ಜಲ ವಿದ್ಯುತ್, ಸೌರ ವಿದ್ಯುತ್, ಪವನ್ ವಿದ್ಯುತ್ ರಿಂದ ನಿರ್ವಹಣೆ ಮಾಡುವ ಪರಿಸ್ಥಿತಿ ಉಂಟಾಗಲಿದೆ.

ರಾಯಚೂರಿನ RTPSಗೂ ಕಲ್ಲಿದ್ದಲು ಕೊರತೆಯ ಬಿಸಿ; ವಿದ್ಯುತ್ ಉತ್ಪಾದನೆ ಬಂದ್ ಆಗುವ ಆತಂಕ:
ರಾಯಚೂರು: ರಾಜ್ಯದ ವಿದ್ಯುತ್ ಬೇಡಿಕೆಯಲ್ಲಿ ಸುಮಾರು 45% ಉತ್ಪಾದಿಸುವ ರಾಯಚೂರು ಜಿಲ್ಲೆಯ ಯರಮರಸ್ ಬಳಿ ಇರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಕಲ್ಲಿದ್ದಲು ಅಭಾವ ಸೃಷ್ಟಿಯಾಗಿದೆ. ಕಲ್ಲಿದ್ದಲು ಕೊರತೆಯಿಂದಾಗಿ ಆರ್ಟಿಪಿಎಸ್ ವಿದ್ಯುತ್ ಉತ್ಪಾದನೆ ಮೇಲೆ ಕರಿ‌ನೆರಳು ಬಿದ್ದಂತಾಗಿದೆ. ಎಂಟು ಘಟಕಗಳಿಂದ 1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿರುವಲ್ಲಿ ಸದ್ಯ ನಾಲ್ಕು ಘಟಕಗಳಿಂದ 480 ರಿಂದ 500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಎಂಟು ಘಟಕಗಳ ವಿದ್ಯುತ್ ಉತ್ಪಾದನೆಗೆ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕಿದ್ದು, ಇಂದಿಗೆ 12,010 ಮೆಟ್ರಿಕ್ ಟನ್ ಕಲ್ಲಿದ್ದಲು ಮಾತ್ರ ಸ್ಟಾಕ್ ಇದೆ. ಈಗಾಗಲೇ RTPS ನಾಲ್ಕು ಘಟಕಗಳು ಸ್ಥಗಿತವಾಗಿದ್ದು, ಕಾರ್ಯನಿರ್ವಹಿಸುತ್ತಿರುವ ಉಳಿದ 4 ಘಟಕಗಳೂ ಬಂದ್ ಆಗುವ ಆತಂಕ ಎದುರಾಗಿದೆ.

ಇದುವರೆಗೆ ಸಿಂಗರೇಣಿ, ಮಹಾನದಿ ಮತ್ತು ವೆಸ್ಟರ್ನ್ ಗಣಿಯಿಂದ ದಿನಕ್ಕೆ 8 ರಿಂದ 9 ರೇಕು ಕಲ್ಲಿದ್ದಲು ಬರುತ್ತಿತ್ತು. ಆದರೆ ಪ್ರಸ್ತುತ ದಿನಕ್ಕೆ ಕೇವಲ 3 ರಿಂದ 4 ರೇಕು ಕಲ್ಲಿದ್ದಲು ಬರುತ್ತಿದೆ. ಇಂದಿಗೆ ಕಲ್ಲಿದ್ದಲು ಸಂಪೂರ್ಣ ಮುಗಿದಿದ್ದು, ಸದ್ಯ ವಿದ್ಯುತ್ ಉತ್ಪಾದಿಸುತ್ತಿರುವ ಈ 4 ಘಟಕಗಳು ಕೂಡ ಬಂದ್ ಆಗುವ ಆತಂಕ ಎದುರಾಗಿದೆ. ಇನ್ನು ವೈಟಿಪಿಎಸ್​ನಲ್ಲೂ ಒಂದೇ ಘಟಕದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಅಲ್ಲೂ ಸಹ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಸ್ಟಾಕ್ ಇದ್ದು, ಎರಡು ದಿನಕ್ಕೆ ಮಾತ್ರ ಸಾಕಾಗಲಿದೆ.

ಕಲ್ಲಿದ್ದಲು ಕೊರತೆಗೆ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದೇನು?
ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿದ್ದರು. ಈ ವೇಳೆ ಕಲ್ಲಿದ್ದಲು ಕೊರತೆಯಾಗದಂತೆ ಪೂರೈಸಲು ಮನವಿ ಮಾಡಿರುವುದಾಗಿ ತಿಳಿಸಿದ್ದರು. ‘‘ಕಲ್ಲಿದ್ದಲು ಕಡಿಮೆಯಾಗಬಾರದು ಎಂಬ ದೃಷ್ಟಿಯಿಂದ ಕೇಂದ್ರ ಗಣಿ ಸಚಿವರನ್ನು ಭೇಟಿ ಮಾಡಿದ್ದೇನೆ. ನಮ್ಮ ಬೇಡಿಕೆ ಏನಿದೆ ಎಂದು ಅವರ ಬಳಿ ಹೇಳಿದ್ದೇವೆ. ಒಟ್ಟು ನಮಗೆ 10 ರೇಕ್ ಕಲ್ಲಿದ್ದಲು ಬರುತ್ತಿದೆ. ಅದನ್ನು 14 ರೇಕ್​ಗೆ ಏರಿಕೆ ಮಾಡಿದರೆ ನಮಗೆ ಸರಿ ಹೋಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಎರಡು ಮೂರು ಗಣಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಚನೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಕಲ್ಲಿದ್ದಲು ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ’’ ಎಂದು ಬೊಮ್ಮಾಯಿ ನುಡಿದಿದ್ದಾರೆ.

ಇದನ್ನೂ ಓದಿ:

Coal Shortage: ವಿದ್ಯುತ್ ಉತ್ಪಾದನೆ ಘಟಕಗಳಲ್ಲಿ ಕಲ್ಲಿದ್ದಲು ಕೊರತೆಗೆ ಕಾರಣ ತೆರೆದಿಟ್ಟ ವಿದ್ಯುತ್ ಸಚಿವಾಲಯ

ಕಲ್ಲಿದ್ದಲು, ಕೊರೊನಾ ಲಸಿಕೆ ಪೂರೈಸಲು ಮನವಿ; ದೆಹಲಿ ಪ್ರವಾಸ ಯಶಸ್ವಿಯಾಗಿದೆ ಎಂದ ಬಸವರಾಜ ಬೊಮ್ಮಾಯಿ

Coal Crisis: ದೇಶದ ಕಲ್ಲಿದ್ದಲು ಸಂಗ್ರಹ 4 ದಿನಗಳಿಗೆ ಇಳಿಕೆ; ಭಾರತದಲ್ಲೂ ಎದುರಾಗುತ್ತಾ ವಿದ್ಯುತ್ ಬಿಕ್ಕಟ್ಟು?

Published On - 9:03 am, Sun, 10 October 21