
ಬೆಂಗಳೂರು: ಗೃಹ ಇಲಾಖೆಯಿಂದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಕೊವಿಡ್ಗೆ ಸಂಬಂಧಿಸಿದಂತೆ ಸರ್ಕಾರ ನಿರ್ಧಾರ ಮಾಡಿದಂತೆ ನಾವೂ ಸಂಪೂರ್ಣವಾಗಿ ಸಹಕಾರ ಮಾಡುತ್ತೇವೆ. ಗಡಿಭಾಗದಲ್ಲಿ ಬಿಗಿಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಹೊರಗಡೆಯಿಂದ ಬರುವವರಿಗೆ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಆರೋಗ್ಯ ಇಲಾಖೆ ಜೊತೆ ಮಾತನಾಡಿ ಅಲ್ಲಿಯೇ ಟೆಸ್ಟಿಂಗ್ ಮಾಡಿಸುವುದರ ವಿಚಾರವಾಗಿ ಆರೋಗ್ಯ ಸಚಿವರ ಜೊತೆ ಮಾತನಾಡುತ್ತೇನೆ. ನೈಟ್ ಕರ್ಫ್ಯೂ ಜಾರಿಗೆ ತರುವ ವಿಷಯ ಈಗಾಗಲೇ ಯಶಸ್ವಿಯಾಗಿದೆ. ನೈಟ್ ಕರ್ಫ್ಯೂ ವಿಸ್ತರಣೆಗೆ ನಾವೂ ಸಿದ್ದರಿದ್ದೇವೆ ಎಂದು ಹೇಳಿದ್ದಾರೆ.
ಮಾಸ್ಕ್ ಧರಿಸದ 65,630 ಮಂದಿಗೆ ದಂಡ ಹಾಕಿದ್ದೇವೆ. ಬಸ್ಸ್ಟ್ಯಾಂಡ್ಗಳಲ್ಲಿ ಕೊವಿಡ್ ಟೆಸ್ಟ್ ಕಡ್ಡಾಯ ಮಾಡುತ್ತೇವೆ. ಪೊಲೀಸ್ ಇಲಾಖೆಯಲ್ಲಿ 30 ಜನಕ್ಕೆ ಪಾಸಿಟಿವ್ ವರದಿ ದೃಢವಾಗಿದೆ. 450 ಪೊಲೀಸ್ ಇಲಾಖೆ ಕುಟುಂಬದವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಅವರಿಗೆ ಚಿಕಿತ್ಸೆಯನ್ನೂ ಕೊಡುತ್ತಿದ್ದೇವೆ. ಯಾವುದೇ ಆಸ್ಪತ್ರೆಯಲ್ಲೂ ಪೊಲೀಸರಿಗೆ ಚಿಕಿತ್ಸೆ ನಿರಾಕರಿಸಬಾರದು. ಇದನ್ನ ಒಬ್ಬ ಪೊಲೀಸ್ ವಿಶೇಷಾಧಿಕಾರಿ ಮಾನಿಟಿರ್ ಮಾಡಲಿದ್ದಾರೆ. ಇನ್ನು, ಲಾಕ್ಡೌನ್ ವಿಚಾರಕ್ಕೆ ಬಂದರೆ, ಲಾಕ್ಡೌನ್ ಕುರಿತು ಸದ್ಯಕ್ಕೆ ಯಾವುದೇ ಚರ್ಚೆ ಆಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಶುಕ್ರವಾರ ಒಂದೇ ದಿನ 14,859 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು 78 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 11,24,509ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಂದೇ ದಿನ 9,917 ಜನರಿಗೆ ಸೋಂಕು ಕಾಣಿಸಿಕೊಂಡಿದೆ. 57 ಜನರು ಬಲಿಯಾಗಿದ್ದಾರೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 5,22,438ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಬೆಂಗಳೂರು ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಇಂದು 9000 ಗಡಿ ದಾಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 9,917 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಇದನ್ನೂ ಓದಿ: ಕೊವಿಡ್ನಿಂದ ಮೃತಪಟ್ಟವರನ್ನು ಚಿತಾಗಾರಕ್ಕೆ ಸಾಗಿಸಲು ಯಾವುದೇ ಶುಲ್ಕ ಇಲ್ಲ: ಬಿಬಿಎಂಪಿ ಸ್ಪಷ್ಟನೆ
(Basavaraja Bommai says in bengalore 65,630 people without mask have been fined)
Published On - 7:45 pm, Fri, 16 April 21