
ಬೆಳಗಾವಿ, ಮೇ 18: 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣ ಸಂಬಂಧ ಆರೋಪಿ ಶಿವಾನಂದ ನೀಲಣ್ಣವರ್ನ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಬೆಳಗಾವಿಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಬೆಂಗಳೂರಿನ ಕಚೇರಿಗೆ ಆರೋಪಿ ಕರೆದೊಯ್ದು ವಿಚಾರಣೆ ಮಾಡಬೇಕಿದೆ. ಶಿವಾನಂದ ನೀಲಣ್ಣವರ್ ಬಳಿ 35,000 ಜನ ಹೂಡಿಕೆ ಮಾಡಿದ್ದು, ಒಂದು ಸಾವಿರ ಕೋಟಿಗೂ ಅಧಿಕ ಹಣದ ವ್ಯವಹಾರ ಆಗಿದೆ. ಹೀಗಾಗಿ 10 ದಿನ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಕೋರ್ಟ್ಗೆ ಮನವಿ ಮಾಡಿದ್ದರು. ಸಿಐಡಿ ವಕೀಲರ ಮನವಿ ಮೇರೆಗೆ ಆರೋಪಿಯನ್ನು ಕಸ್ಟಡಿಗೆ ನೀಡಿ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಜಡ್ಜ್ ಗಂಗಾಧರ ಅವರು ಆದೇಶಿಸಿದ್ದಾರೆ.
ಇನ್ನು ಆರೋಪಿ ಶಿವಾನಂದ ನೀಲಣ್ಣವರ್ ಆರೋಗ್ಯದ ಬಗ್ಗೆ ನ್ಯಾಯಾಧೀಶರು ವಿಚಾರಿಸಿದ್ದು, ತನಗೆ ಬಿಪಿ ಇದೆ ಎಂದು ನ್ಯಾಯಾಧೀಶರ ಮುಂದೆ ನೀಲಣ್ಣವರ್ ಹೇಳಿಕೊಂಡಿದ್ದಾರೆ. ಆಗ, ಸಂಬಂಧಪಟ್ಟ ವೈದ್ಯರಿಂದ ನಿಮಗೆ ಮಾತ್ರೆ ಸೇರಿ ಎಲ್ಲಾ ವ್ಯವಸ್ಥೆ ಮಾಡ್ತಾರೆ ಎಂದು ನ್ಯಾಯಾಧೀಶರು ಆರೋಪಿಗೆ ತಿಳಿಸಿದ್ದಾರೆ. ಅಲ್ಲದೆ, ಈ ವೇಳೆ 35,000 ಜನರಿಗೆ ಹಣ ಬೇಕಿಲ್ಲ, ನಾನು ಬೇಕಾಗಿದ್ದೇನೆ ಎಂದು ನೀಲಣ್ಣವರ್ ಹೇಳಿದ್ದು, ಇದಕ್ಕೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು ಅಮಾಯಕರಿಗೆ ಅನ್ಯಾಯ ಆಗಬಾರದು. ಸರ್ಕಾರ ಜನರ ತಂದೆ-ತಾಯಿ ಇದ್ದಂತೆ. ಅವರ ರಕ್ಷಣೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಖಾತೆಯಲ್ಲಿ ನೂರಾರು ಕೋಟಿ ಪತ್ತೆಯಾದ್ರೂ ಬ್ಯಾಂಕ್ ಗಪ್ಚುಪ್; ಶಿವಾನಂದನೊಂದಿಗೆ ಅಧಿಕಾರಿಗಳು ಶಾಮೀಲು?
ನೀವು ಜನರಿಗೆ ಬೇಕಾಗಿರಬಹುದು, ಒಳ್ಳೆಯದು ಮಾಡಿರಬಹುದು ಅದು ನನಗೆ ಗೊತ್ತಿಲ್ಲ.ಆದರೆ ಅಮಾಯಕ ಜನರಿದ್ದಾರೆ, ಅವರನ್ನ ರಕ್ಷಣೆ ಮಾಡೋದು ಸರ್ಕಾರದ ಜವಾಬ್ದಾರಿ. ಸಾಕಷ್ಟು ಜನ ಹಣ ತಗೊಂಡು ಓಡಿ ಹೋಗಿದ್ದಾರೆ. ಇತಿಹಾಸದಿಂದ ಪಾಠ ಕಲಿಯಲು ಈ ಕಾನೂನು ತಂದಿದ್ದಾರೆ. ಕಾನೂನಿನ ಅಡಿಯಲ್ಲಿ ನೀವೇನು ಮಾಡಿದ್ದೀರಿ ಅದು ಉಳಿಯುತ್ತೆ ಎಂದು ತಿಳಿಸಿರುವ ನ್ಯಾಯಾಧೀಶರು, ಧರ್ಮೋ ರಕ್ಷಿತಿ ರಕ್ಷಿತ ಎಂದು ಶ್ಲೋಕದ ಉದಾಹರಣೆ ಕೂಡ ನೀಡಿದ್ದಾರೆ.
10 ದಿನಗಳ ಕಾಲ ಆರೋಪಿಯನ್ನು ಸಿಐಡಿ ಕಸ್ಟಡಿಗೆ ನೀಡಿರುವ ನ್ಯಾಯಾಲಯ ಭದ್ರತೆ ಸೇರಿ ಆರೋಪಿ ಬಗ್ಗೆ ಕಾಳಜಿ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಕೋರ್ಟ್ ಹಾಲ್ನಿಂದ ಹೊರ ಬರುತ್ತಿದ್ದಂತೆ ಸಹೋದರನ ಕಂಡು ಆರೋಪಿ ಶಿವಾನಂದ ನೀಲಣ್ಣವರ್ ಕಣ್ಣೀರಿಟ್ಟ ಪ್ರಸಂಗವೂ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.