ಮಳೆ ಅಂತ ಪಾಳು ಮನೆಯ ಕೆಳಗೆ ನಿಂತಿದ್ದ ದಂಪತಿ ಮೇಲೆ ಕುಸಿದ ಗೋಡೆ: ಮುಂದಾಗಿದ್ದು ಘೋರ ದುರಂತ
ಬೆಳಗಾವಿ ತಾಲೂಕಿನ ಹೊಸೂರು ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಮಳೆ ಬಂದ ಹಿನ್ನೆಲೆ ಪಾಳು ಮನೆಯ ಕೆಳಗೆ ನಿಂತಿದ್ದ ದಂಪತಿಯ ಮೇಲೆ ಮನೆಯ ಗೋಡೆ ಕುಸಿದುಬಿದ್ದು ಪತ್ನಿ ಸಾವನ್ನಪ್ಪಿದ್ದು, ಪತಿ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಳಗಾವಿ, ಮಾರ್ಚ್ 17: ರಣ ರಣ ಬಿಸಿಲಿನ ನಡುವೆ ರಾಜ್ಯದಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ (Rain). ಆ ಮೂಲಕ ಬಿಸಿಲಿಂದ ಬೆಂಡಾಗಿದ್ದ ಭೂಮಿಗೆ ವರುಣ ತಂಪೆರದಿದ್ದಾನೆ. ಸುಡುಬೇಸಿಗೆ ನಡುವೆ ಅಕಾಲಿಕ ಮಳೆ ಶುರುವಾಗಿದೆ. ಈ ಅಕಾಲಿಕ ಮಳೆಗೆ ದುರಂತಗಳು ಸಂಭವಿಸಿದೆ. ಮಳೆ ಹೆಚ್ಚಾದ ಹಿನ್ನೆಲೆ ಪಾಳು ಮನೆಯ ಕೆಳಗೆ ನಿಂತಿದ್ದ ದಂಪತಿ ಮೇಲೆ ಗೋಡೆ ಕುಸಿದುಬಿದ್ದು ಪತ್ನಿ ಸಾವನ್ನಪ್ಪಿದ್ದು (death), ಪತಿ ಬಚಾವ್ ಆಗಿರುವಂತಹ ಘಟನೆ ಬೆಳಗಾವಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ನಡೆದಿದ್ದೇನು?
ದಂಪತಿ ಕೋಳಿಗಳನ್ನು ಮಾರಾಟ ಮಾಡಲು ಬೈಕ್ ಮೇಲೆ ಹೊರಟಿದ್ದರು. ಮಳೆ ಹೆಚ್ಚಾದ ಹಿನ್ನೆಲೆ ಪಾಳು ಮನೆಯ ಕೆಳಗೆ ನಿಂತಿದ್ದಾರೆ. ಈ ವೇಳೆ ಗೋಡೆ ಕುಸಿದುಬಿದ್ದು ಪತ್ನಿ ಪರ್ವಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತಿ ಶರೀಫ್ಗೆ ಗಂಭೀರ ಗಾಯವಾಗಿದ್ದು, ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಧಾರವಾಡದಲ್ಲಿ ಭಾರೀ ಮಳೆ: ಕಲ್ಲಘಟಗಿ ರಸ್ತೆ ತುಂಬೆಲ್ಲಾ ಆಲಿಕಲ್ಲು, ಫುಲ್ ಟ್ರಾಫಿಕ್ ಜಾಮ್
ಮೃತ ಪರ್ವಿನ್ ಬೇಪಾರಿ(34) ವಂಟಮೂರಿ ಗ್ರಾಮದ ನಿವಾಸಿ. ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಕುಟುಂಬದವರು ಆಗ್ರಹಿಸಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಿಡಿಲು ಬಡಿದು ರೈತ ಸಾವು
ಸಿಡಿಲು ಬಡಿದು ರೈತ ಸಾವನ್ನಪ್ಪಿರುವಂತಹ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ನಡೆದಿದ. ರೈತ ನಿಂಗಪ್ಪ(58) ಮೃತ ದುರ್ದೈವಿ. ಜಮೀನಿಗೆ ಹೋಗಿ ವಾಪಸಾಗುವಾಗ ಅವಘಡ ಸಂಭವಿಸಿದೆ. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
15 ವರ್ಷದ ಬಾಲಕ ಸಾವು
ಇನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಜರಕುಂಟಿ ಗ್ರಾಮದಲ್ಲಿ ಸಿಡಿಲು ಬಡಿದು 15 ವರ್ಷದ ಬಾಲಕ ಮಂಜುನಾಥ್ ಸಾವನಪ್ಪಿದ್ದಾನೆ. ನಿನ್ನೆ ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲಿಗೆ ಬಲಿಯಾಗಿದ್ದಾನೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಯಂಬಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಪವನ್ ವಿದ್ಯುತ್ ಯಂತ್ರವೊಂದು ಧಗಧಗಿಸಿ ಉರಿದಿದೆ. ಇನ್ನು ನಿನ್ನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಬೃಹತ್ ಮರ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.