ತರಕಾರಿ ಮಾರುವ ವೇಷದಲ್ಲಿ ಬಂದು ಮನೆಗಳಿಗೆ ಕನ್ನ: ಕದ್ದ ವಸ್ತು ಮಾರಿ ಗೋವಾದಲ್ಲಿ ಮೋಜು ಮಸ್ತಿ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್
ತರಕಾರಿ ಮಾರುವವರ ವೇಷದಲ್ಲಿ ಬಂದು ಮನೆಗಳಿಗೆ ಕನ್ನ ಹಾಕುತ್ತಿದ್ದ ಅಂತಾರಾಜ್ಯ ಕಳ್ಳರ ಗ್ಯಾಂಗ್ ಅನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಮೂಲದ ಈ ಗ್ಯಾಂಗ್ ಕದ್ದ ಚಿನ್ನಾಭರಣಗಳನ್ನು ಗೋವಾದಲ್ಲಿ ಮಾರಿ ಮೋಜು ಮಾಡುತ್ತಿತ್ತು. ಪ್ರಕರಣ ಸಂಬಂಧ ಫೀಲ್ಡ್ಗೆ ಇಳಿದಿದ್ದ ಖಾಕಿ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದೆ.

ಬೆಳಗಾವಿ, ಮೇ 12: ತರಕಾರಿ ಮಾರುವವರ ವೇಷದಲ್ಲಿ ಬಂದು ಮನೆಗಳಲ್ಲಿ ಕಳ್ಳತನ ನಡೆಸಿ ಬಳಿಕ ಗೋವಾದಲ್ಲಿ ಮೋಜು ಮಸ್ತಿ ಮಾಡ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ನ ಬೆಳಗಾವಿ ಪೊಲೀಸರು ಭೇದಿಸಿದ್ದಾರೆ. ಪ್ರತ್ಯೇಕ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಮೂಲದವರೆಂಬುದು ತಿಳಿದುಬಂದಿದೆ.
ಕಳ್ಳತನಕ್ಕೂ ಪೂರ್ವದಲ್ಲಿ ಏರಿಯಾಗಳಲ್ಲಿ ತರಕಾರಿ ಮಾರುವವರ ವೇಷದಲ್ಲಿ ಓಡಾಟ ನಡೆಸುತ್ತಿದ್ದ ಆರೋಪಿಗಳು, ಈ ವೇಳೆ ಬೀಗ ಹಾಕಿದ ಮನೆಗನ್ನ ಗುರುತಿಸುತ್ತಿದ್ದರು. ಬಳಿಕ ರಾತ್ರಿ ಗ್ಯಾಂಗ್ ಕಟ್ಟಿಕೊಂಡು ಬಂದು ಮನೆ ಬೀಗ ಮುರಿದು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದರು. ಈ ಕುರಿತು ಎಪಿಎಂಸಿ ಹಾಗೂ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಇದಕ್ಕಾಗಿ ಎರಡು ತಂಡ ರಚನೆ ಮಾಡಿ ಫೀಲ್ಡ್ಗೆ ಇಳಿದಿದ್ದರು. ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಮಹಾರಾಷ್ಟ್ರ ಮೂಲದ ದೇವೇಂದ್ರ ವಾಘಮೋರೆ, ಸಚಿನ್ ಗೌಳಿ, ಕಪಿಲ್ ಜಾಧವ್ರನ್ನು ಅರೆಸ್ಟ್ ಮಾಡಿ, ಅವರಿಂದ 4.71 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಾಗ್ರಿ, ಎರಡು ಬೈಕ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿಯ ಮನೆಗೇ ಕನ್ನ ಹಾಕಿದ ಹಸೀನಾ! 21 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಚೋರಿ
ಇನ್ನು ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಖತರ್ನಾಕ್ ಗ್ಯಾಂಗ್ನ ಕಿಂಗ್ಪಿನ್ ಅನ್ನೇ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಉತ್ತರ ಪ್ರದೇಶ ಮೂಲದ ಮಿಂಟು ವಿಶ್ವಾಸ್ ಬಂಧಿತ ಆರೋಪಿಯಾಗಿದ್ದು, ಈತನಿಂದ 44 ಲಕ್ಷ 86 ಸಾವಿರ ರೂಪಾಯಿ ಮೌಲ್ಯದ 290ಗ್ರಾಂ ಚಿನ್ನ ಹಾಗೂ ಬೈಕ್ ವಶಕ್ಕೆ ಪಡೆಯಲಾಗುದೆ. ಈ ಎರಡೂ ಗ್ಯಾಂಗ್ ಶಿವಮೊಗ್ಗ, ಕಲಬುರ್ಗಿ ಪೊಲೀಸರು ಸೇರಿದಂತೆ ಗೋವಾ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶದ ಪೊಲೀಸರಿಗೆ ಬೇಕಾಗಿದ್ದವರು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಕಳ್ಳತನ ಮಾಡಿದ್ದನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಗೋವಾಗೆ ತೆರಳಿ ಕೆಸಿನೋಗಳಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಖದೀಮರೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಮನೆಗಳ್ಳತನ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಅಲರ್ಟ್ ಆದ ಜಿಲ್ಲಾ ಪೊಲೀಸರು ಯಾರೇ ಮನೆಗೆ ಬೀಗ ಹಾಕಿ ದೂರದ ಊರಿಗೆ ತೆರಳುವವರಿದ್ದರೂ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು. ಅವರು ಮನೆಗೆ ವಾಪಾಸ್ ಆಗುವವರೆಗೂ ಪೊಲೀಸರು ಆ ಮನೆ ಮೇಲೆ ನಿಗಾ ಇಡುವ ಜೊತೆಗೆ, ನಿರಂತರವಾಗಿ ಗಸ್ತು ವ್ಯವಸ್ಥೆ ಕೂಡ ಮಾಡುವುದಾಗಿ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



