AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಮೈತ್ರಿ: ಲಿಂಗಾಯತ ನಾಯಕನಿಗೆ ಪಟ್ಟ

Belagavi DCC Bank: ಪ್ರತಿಷ್ಠಿತ ‌ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್​​​ಗೆ ಬಹುಮತ ಸಿಕ್ಕಿದೆ. ಸತೀಸ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ಸೇರಿಕೊಂಡು ಎದುರಾಳಿ ರಮೇಶ್ ಕತ್ತಿ ಬಣವನ್ನು ಸೋಲಿಸಿದೆ. ಆದಾಗ್ಯೂ ಇದೀಗ ಅಧ್ಯಕ್ಷ ಪಟ್ಟವನ್ನು ಬಿಜೆಪಿ ನಾಯಕನಿಗೆ ಕಟ್ಟಲಾಗಿದೆ. ವಿಶೇಷ ಅಂದ್ರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಜಾರಕಿಹೊಳಿ ಬ್ರದರ್ಸ್ ನುಡಿದಂತೆ ನಡೆದುಕೊಂಡಿದ್ದಾರೆ.

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಮೈತ್ರಿ: ಲಿಂಗಾಯತ ನಾಯಕನಿಗೆ ಪಟ್ಟ
Jarkiholi Brothers
Sahadev Mane
| Edited By: |

Updated on:Nov 10, 2025 | 3:45 PM

Share

ಬೆಳಗಾವಿ, (ನವೆಂಬರ್ 10): ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ (Belagavi DCC bank) ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್​ ಮೇಲುಗೈ ಸಾಧಿಸಿದ್ದಾರೆ. ಪ್ರತಿಸ್ಪರ್ಧಿಯಾಗಿದ್ದ ರಮೇಶ್ ಕತ್ತಿ ಬಣವನ್ನು ಜಾರಕಿಹೊಳಿ ಸಹೋದರರು ಮೆಟ್ಟಿನಿಂತ ಡಿಸಿಸಿ ಬ್ಯಾಂಕ್ ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಅಧ್ಯಕ್ಷ ಸ್ಥಾನವನ್ನು ಹೇಳಿದಂತೆ ಲಿಂಗಾಯತ ಬಿಜೆಪಿ ನಾಯಕನಿಗೆ ಬಿಟ್ಟು ಕೊಡಲಾಗಿದೆ. ಹೌದು.. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಣ್ಣಸಾಹೇಬ್ ಜೊಲ್ಲೆ, ಉಪಾಧ್ಯಕ್ಷರಾಗಿ ರಾಜು ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಚುನಾವಣೆ ಸಂದರ್ಭದಲ್ಲೇ ಜಾರಕಿಹೊಳಿ ಬ್ರದರ್ಸ್ ಈ ಬಾರಿ ಲಿಂಗಾಯತರನ್ನೇ ಡಿಸಿಸಿ ಬ್ಯಾಂಕ್​​​ ಅಧ್ಯಕ್ಷರನ್ನ ಮಾಡುತ್ತೇವೆ ಎಂದು  ಘೋಷಿಸಿದ್ದರು. ಅದರಂತೆ ಇದೀಗ ಬಿಜೆಪಿ ಮಾಜಿ ಸಂಸದ ಅಣ್ಣಸಾಹೇಬ್ ಜೊಲ್ಲೆ ಅವರನ್ನೇ ಬೆಳಗಾವಿವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ನೇಮಕ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಜಾರಕಿಹೊಳಿ ಬ್ರದರ್ಸ್ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಈ ಮೂಲಕ ಸಾವಿರಾರು ಕೋಟಿ ವ್ಯವಹಾರ ಮಾಡುವ ಈ ಬ್ಯಾಂಕಿಗೆ ನೂತನ ಅಧಿಪತಿ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.

ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದು ಬೀಗುತ್ತಿದ್ದ ಜಾರಕಿಹೊಳಿ ಬ್ರದರ್ಸ್​​ಗೆ ಶಾಕ್ ಕೊಟ್ಟ ಸವದಿ ಸಹೋದರರು

ಈ ಡಿಸಿಸಿ ಬ್ಯಾಂಕ್​ ಚುನಾವಣೆಗೆ ಮುಂಚೆ ನಿರ್ದೇಶಕರ ಸಭೆ ನಡೆದ ಬಳಿಕ ಜೊಲ್ಲೆ ಮತ್ತು ರಾಜು ಕಾಗೆ ನಾಮಪತ್ರ ಸಲ್ಲಿಕೆಗೆ ಹೊರಟರು. ಬಾಲಚಂದ್ರ ಜಾರಕಿಹೊಳಿ ಅವರ ಕಾರಿನಲ್ಲೇ ಈ ಇಬ್ಬರೂ ನಾಮಪತ್ರ ಸಲ್ಲಿಸಲು ತೆರಳಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಡಿಸಿಸಿ ಬ್ಯಾಂಕ್ ಬೆಳಗಾವಿ ಜಿಲ್ಲೆಯ ಅತಿದೊಡ್ಡ ಗ್ರಾಮೀಣ ಋಣ ಸಹಕಾರ ಸಂಸ್ಥೆ. ಇದರ ನಿರ್ವಹಣೆಯಲ್ಲಿ ಜಾರಕಿಹೊಳಿ, ಜೊಲ್ಲೆ, ಕತ್ತಿ ಕುಟುಂಬಗಳು ಹಲವು ವರ್ಷಗಳಿಂದ ಪ್ರಭಾವ ಬೀರಿವೆ. ಈ ಬಾರಿಯ ಚುನಾವಣೆಯೂ ರಾಜಕೀಯ ಹೋರಾಟದ ರೂಪ ಪಡೆದಿತ್ತು.

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಮಧ್ಯೆ 30- 30 ತಿಂಗಳು ಅಧಿಕಾರ ಹಂಚಿಕೆ ಸೂತ್ರ ನಡೆದಿದೆ. ಹೌದು… ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಬಿಜೆಪಿ ವಿರೋದಿಯಾಗಿದ್ದರೂ ಸಹ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಲ್ಲಿ ಮೈತ್ರಿ ಮಾಡಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ಬಿಜೆಪಿಗರನ್ನ ಅಧ್ಯಕ್ಷ ಮಾಡಿದ್ಯಾಕೆ?

ಇನ್ನು ಈ ಬಗ್ಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಣ್ಣಸಾಹೇಬ್ ಜೊಲ್ಲೆ, ಉಪಾಧ್ಯಕ್ಷರಾಗಿ ರಾಜು ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ. 30 ತಿಂಗಳ ಅವಧಿಗೆ ಅಧಿಕಾರ ಹಂಚಿಕೆಯಾಗಿದೆ. ಬಿಜೆಪಿಗೆ ಈಗ ಅಧ್ಯಕ್ಷ ಸ್ಥಾನ, ಕಾಂಗ್ರೆಸ್ ಗೆ ಉಪಾಧ್ಯಕ್ಷ ಸ್ಥಾನ ಹಂಚಿಕೊಂಡಿದ್ದೇವೆ. ಈ ಹಿಂದೆ ನಾವು 3 ಜನ ಇದ್ದರೂ ಬಿಜೆಪಿಯವರು ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟಿದ್ದರು. ಈಗ ನಾವು ಬಿಜೆಪಿಯವರಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟಿದ್ದೇವೆ. ಜೊಲ್ಲೆಯವರು ನಮ್ಮನ್ನ ನಂಬಿ ಬಂದಿದ್ದರು. ಹೀಗಾಗಿ ಜೊಲ್ಲೆಯವರನ್ನ ಗೆಲ್ಲಿಸಿ, ಅಧ್ಯಕ್ಷರಾಗಿ ಮಾಡಿದ್ದೇವೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಬ್ಯಾಂಕ್ ಗೆ ಅಣ್ಣಸಾಹೇಬ್ ಜೊಲ್ಲೆ ಅಗತ್ಯವಿದೆ. ಪ್ರತಿ ವರ್ಷವೂ ಬ್ಯಾಂಕ್ ನಿಂದ ಠೇವಣಿ ಹೋಗುತ್ತೆ ಬರುತ್ತದೆ. ನಮ್ಮ ಪರ ಸದಸ್ಯರನ್ನ ಸೆಳೆಯಲು ಬೆಂಗಳೂರಿನ, ಬೆಳಗಾವಿಯಲ್ಲಿ ಇದ್ದುಕೊಂಡು ಮಸಾಜ್ ಮಾಡಿದ್ರು. ಆದ್ರೆ ನಾವು ಆಯುರ್ವೇದಿಕ್ ಡಾಕ್ಟರ್ ಇದ್ದೇವೆ. ಸರಿಯಾದ ಔಷಧ ಕೊಟ್ಟಿದ್ದೇವೆ ಹೀಗಾಗಿ ಸರಿಯಾಗಿದೆ ಎಂದು ಹೇಳಿದರು.

ಬಾಲಚಂದ್ರ ಜಾರಕಿಹೊಳಿ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ‌ ಮಾತನಾಡಿ, ಇವತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಇತ್ತು. ಉಸ್ತುವಾರಿ ಸಚಿವರು, ಸದಸ್ಯರ ಜೊತೆಗೆ ಚರ್ಚೆ ಮಾಡಿದ್ದೇವು. ಅಧ್ಯಕ್ಷರಾಗಿ ಅಣ್ಣಾಸಾಹೇಬ್ ಜೊಲ್ಲೆ, ಉಪಾಧ್ಯಕ್ಷರಾಗಿ ರಾಜು ಕಾಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎರಡು ಸ್ಥಾನ ಲಿಂಗಾಯತ ಸಮಾಜಕ್ಕೆ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಬ್ಯಾಂಕ್ ನಲ್ಲಿ ಕುಳಿತು ರಾಜಕಾರಣ ಮಾಡಿ ಬ್ಯಾಂಕ್ ನಡೆಸುತ್ತಿದ್ದರು. ಸಾವಿರ ಕೋಟಿ ರೂ. ವಿತ್ ಡ್ರಾ ಆಗುತ್ತಿದೆ ಎಂದು ಹಬ್ಬಿಸುತ್ತಿದ್ದಾರೆ. ಪ್ರತಿ ವರ್ಷ ಈ ಸಮಯದಲ್ಲಿ ವಿತ್ ಡ್ರಾ ಮಾಡುವುದು ಸಹಜ. ಚಿನ್ನದ ಬೆಲೆ ಏರಿಕೆ ಹಿನ್ನೆಲೆ ಜಾಸ್ತಿ ಡ್ರಾ ಆಗಿದೆ. ಕರ್ನಾಟಕದಲ್ಲಿ ಡಿಸಿಸಿ ಬ್ಯಾಂಕ್ ನಂಬರ್ ಒನ್ ಮಾಡುತ್ತೇವೆ‌. ರಾಜಕಾರಣದಲ್ಲಿ ವಿರೋಧಿಗಳಿಗೆ ಸುಮ್ಮನೆ ಕೂಡಿ ಅನ್ನಲಾಗಲ್ಲ. ಜೊಲ್ಲೆ ಅವರನ್ನ ಜಾರಕಿಹೊಳಿ‌ ಅವರು ಸೋಲಿಸುತ್ತಾರೆ ಎಂದಯ ಅಪಪ್ರಚಾರ ಮಾಡಿದರು. ಮೂರು ಜನ ಅಣ್ತಮ್ಮಂದಿರು ಸೇರಿಕೊಂಡು ಗೆಲ್ಲಿಸಿ ಅಧ್ಯಕ್ಷ ಕೂಡ ಮಾಡಿದ್ದೇವೆ. ಐದು ವರ್ಷದಲ್ಲಿ ಬ್ಯಾಂಕ್ ಒಂದನೇ ಸ್ಥಾನಕ್ಕೆ ತರುತ್ತೇವೆ ಎಂದು ತಿಳಿಸಿದರು.

Published On - 2:47 pm, Mon, 10 November 25

Follow Us