ಬೆಳಗಾವಿ: ನಾನು 3 ಬಾರಿ ಶಾಸಕನಾಗಿದ್ದೇನೆ, ದಲಿತನೂ ಆಗಿದ್ದೇನೆ. ಈ ಬಾರಿ ನನಗೂ ಸಚಿವ ಸ್ಥಾನವನ್ನು ನೀಡಬೇಕು ಅಂತ ಹೇಳಿಕೆ ನೀಡಿದ ಜಿಲ್ಲೆಯ ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ, ಕಳೆದ 25 ವರ್ಷಗಳಿಂದ ರಾಯಬಾಗ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಕಳೆದ ಬಾರಿಯೂ ನನ್ನನ್ನ ಕಡೆಗಣನೆ ಮಾಡಲಾಗಿದೆ. ಈ ಬಾರಿ ನನಗೆ ಸಚಿವ ಸ್ಥಾನ ನೀಡಬೇಕು ಅಂತ ಒತ್ತಾಯಿಸಿದ್ದಾರೆ.
ಇವತ್ತು ಬೆಂಗಳೂರಿಗೆ ಹೋಗುತ್ತಿದ್ದೇನೆ. ಹೈಕಮಾಂಡ್ ಭೇಟಿಯಾಗಿ ಸಚಿವ ಸ್ಥಾನಕ್ಕೆ ವಿನಂತಿ ಮಾಡಿಕೊಳ್ಳುತ್ತೇನೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಡಿಸಿಎಂ ಗೋವಿಂದ್ ಕಾರಜೋಳರನ್ನು ಭೇಟಿಯಾಗುತ್ತೇನೆ. ಸಚಿವ ಸ್ಥಾನ ಸಿಗದಿದ್ದರರೆ ಎಲ್ಲಾ ಅಳಲನ್ನ ಮುಂದಿನ ದಿನಗಳಲ್ಲಿ ತೊಡಿಕೊಳ್ಳುತ್ತೇನೆ ಅಂತ ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ.
ಆನಂದ ಮಾಮನಿ ಒತ್ತಾಯ ಮೂರು ಬಾರಿ ಶಾಸಕನಾಗಿ ಸರ್ಕಾರದ ಯೋಜನೆಯನ್ನ ಜನರ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡಿದ್ದೇನೆ. ಸಂಪುಟ ರಚನೆ ವೇಳೆ ನನಗೂ ಸಚಿವ ಸ್ಥಾನ ನೀಡಬೇಕೆಂದು ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ಒತ್ತಾಯಿಸಿದ್ದಾರೆ. ಸಚಿವ ಸ್ಥಾನ ಸಿಗದಿದ್ದರೆ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಆನಂದ ಮಾಮನಿ ಹೇಳಿದ್ದಾರೆ.
ಸಿಎಂ ಸ್ಥಾನದಿಂದ ಯಡಿಯೂರಪ್ಪ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂಬ ಸುದ್ದಿಯಾದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಏರಲು ಭಾರಿ ಪೈಪೋಟಿ ನಡೆಯುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ನಿನ್ನೆ (ಜುಲೈ 26) ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಬಿಎಸ್ವೈ ರಾಜೀನಾಮೆ ನೀಡಿದ ಬೆನ್ನಲ್ಲೆ ರಾಜ್ಯದಲ್ಲಿ ಸಚಿವ ಸ್ಥಾನಕ್ಕೂ ಲಾಬಿ ನಡೆಯುತ್ತಿದೆ. ನನಗೂ ಮಂತ್ರಿ ಸ್ಥಾನ ನೀಡಬೇಕೆಂದು ಹಲವು ಶಾಸಕರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ
ಮುಂದಿನ ಸಂಪುಟದಲ್ಲಿ ಯಡಿಯೂರಪ್ಪ ಪಾತ್ರ ಇರಲ್ಲ. ಇನ್ನು ಮಕ್ಕಳ ಪಾತ್ರ ಎಲ್ಲಿಂದ ಬಂತು?: ಸಂಸದ ಬಿ ವೈ ರಾಘವೇಂದ್ರ
(BJP MLA Duryodhan Aihole has demanded a ministerial post)