ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಬೆಳಗಾವಿ ಅಧಿವೇಶನದಲ್ಲಿ ಸಿಎಂ ಬೊಮ್ಮಯಿ, ಸಿದ್ದರಾಮಯ್ಯ ನಡುವೆ ಬಿಸಿ ಏರಿದ ಚರ್ಚೆ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ನಿಲುವನ್ನು ತಿಳಿಸಿದರು.

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೆ ಏರಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ರಾಜ್ಯದ ನಿಲುವನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೂ ಕೂಡ ಪಟ್ಟು ಬಿಡಿದ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆಯುತ್ತಿದೆ. ಇದೇ ವಿಚಾರವಾಗಿ ಬೆಳಗಾವಿ ಗಡಿಯಲ್ಲಿ ಮರಾಠಿಗರು ಪುಂಡಾಟ ಮೆರೆದಿದ್ದಾರೆ. ಮತ್ತು ಅಧಿವೇಶನ ವಿರುದ್ಧ ಮಹಾಮೇಳಾವ್ ನಡೆಸುವ ವಿಫಲ ಯತ್ನ ನಡೆಸಿದರು.
ಇನ್ನೂ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರವ ಚಳಿಗಾಲದ ಅಧಿವೇಶನದಲ್ಲಿ ನಿರೀಕ್ಷೆಯಂತೆ ಗಡಿ ವಿಚಾರದ ಕುರಿತು ನಿಯಮ 69ರಡಿ ಚರ್ಚಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಿದರು. ಗಡಿ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaih) ಸುದೀರ್ಘವಾಗಿ ಚರ್ಚಿಸಿದರು.
ಸಿಎಂ ಬೊಮ್ಮಾಯಿ: ನಾಳೆ (ಡಿ.21) ಸರ್ಕಾರದ ಉತ್ತರ ಕೊಡುವಾಗ ಗಡಿ ವಿಚಾರದಲ್ಲಿ ನಿರ್ಣಯವನ್ನು ಅಂಗೀಕರಿಸೋಣ. ಮಹಾರಾಷ್ಟ್ರ ಸಚಿವರು, ಸಂಸದರು ಗಡಿ ಪ್ರವೇಶ ಮಾಡಲು ಬಿಟ್ಟಿಲ್ಲ. ನಿವು ಸಿಎಸ್ ಪತ್ರ ಬರೆಯಬಾರದಿತ್ತು ಎಂದು ಅಮಿತ್ ಶಾ ಹೇಳಿದ್ದರು. ಕಾನೂನು ಪ್ರಕಾರ ಪತ್ರ ಬರೆದಿದ್ದೇವೆ, ಅದು ಸರಿ ಇದೆ ಎಂದಿದ್ದೇವೆ. ಆ ಪತ್ರ ಭವಿಷ್ಯದಲ್ಲಿ ಮುಖ್ಯ ದಾಖಲೆ ಆಗಲಿದೆ. ಇನ್ನೊಂದು ರಾಜ್ಯಕ್ಕೆ ನುಗ್ಗಿ ಬರುತ್ತೇವೆ ಎಂಬ ಪ್ರವೃತ್ತಿ ಖಂಡನೀಯ. ನಮ್ಮ ಗಡಿಯನ್ನು ರಕ್ಷಣೆ ಮಾಡುತ್ತೇವೆ.
ಈ ಹಿಂದೆ ಒಮ್ಮೆ ಶರದ್ ಪವಾರ್ ಬಂದಿದ್ದರು. ಬಂದಾಗ ಯಾರ ಮನೆಯಲ್ಲಿ ಇದ್ದರು ಗೊತ್ತಿದೆ. ಈ ಹಿಂದೆ ಅವರು ಬೆಳಗಾವಿಗೆ ಬಂದು ಭಾಷಣ ಮಾಡಿದ್ದರು. ಈಗ ಅದಕ್ಕೆಲ್ಲಾ ಅವಕಾಶ ನೀಡಿಲ್ಲ. ಮಹಾಮೇಳ ನಡೆಸಲು ಬಿಟ್ಟಿಲ್ಲ. ಸಚಿವರು, ಸಂಸದರು ಗಡಿ ಪ್ರವೇಶ ಮಾಡಲು ಬಿಟ್ಟಿಲ್ಲ ಎಂದರು.
ಸಿದ್ದರಾಮಯ್ಯ: ನಾಳೆ ನಿರ್ಣಯ ತನ್ನಿ ಪಾಸ್ ಮಾಡಿ ಕಳಿಸೋಣ. ಮಹಾಜನ್ ವರದಿ ಪ್ರಕಾರ ನಮಗೂ ಸ್ವಲ್ಪ ತೊಂದರೆ ಆಗಬಹುದು. ಆದರೂ ಮಹಾಜನ್ ಆಯೋಗದ ವರದಿಯನ್ನು ಒಪ್ಪಿಕೊಂಡಿದ್ದೇವೆ. ಬೆಳಗಾವಿಯಲ್ಲಿ ಮಹಾಮೇಳಾವ್, ಬ್ಲ್ಯಾಕ್ ಡೇ ಅಂತಾ ಮಾಡೋದು. ಮಹಾರಾಷ್ಟ್ರ ಬಸ್ಗಳ ಮೇಲೆ ಕಲ್ಲು ಹೊಡೆದು ಮಸಿ ಬಳಿಯುತ್ತಾರೆ. ಇದಾದ ಮೇಲೆ ಕನ್ನಡಪರ ಸಂಘಟನೆಗಳು ಸುಮ್ಮನೇ ಇರ್ತಾರಾ? ಸಾಂಗ್ಲಿ ಜಿಲ್ಲೆಯಲ್ಲಿ ವಾಸವಿರುವ ಕನ್ನಡಿಗರಿಗೆ ತೊಂದರೆ ಕೊಡುತ್ತಿದ್ದಾರೆ. ಅಲ್ಲಿ ಕುಡಿಯಲು ನೀರು ಕೊಟ್ಟಿಲ್ಲ, ಅಭಿವೃದ್ಧಿಗೆ ಹಣವನ್ನೂ ನೀಡಿಲ್ಲ.
ಅಮಿತ್ ಶಾ ಕರೆದ ಸಭೆಗೆ ಸಿಎಂ ಬೊಮ್ಮಾಯಿ ಹೋಗಬಾರದಿತ್ತು. ಡಬಲ್ ಇಂಜಿನ್ ಸರ್ಕಾರ ಅಲ್ಲ, ತ್ರಿಬಲ್ ಇಂಜಿನ್ ಸರ್ಕಾರ ಇದೆ. ಪುಂಡಾಟಿಕೆ, ಗೂಂಡಾಗಿರಿ ಮಾಡುವುದನ್ನು ನಿಲ್ಲಿಸಿ ಎಂದು ಹೇಳಬೇಕಿತ್ತು. ಶಿಂಧೆ ಮೂವರು ಸಚಿವರನ್ನು ಬೆಳಗಾವಿಗೆ ಕಳುಹಿಸುವುದಾಗಿ ಹೇಳಿದ್ದರು. ಕೋರ್ಟ್ನಲ್ಲಿ ಕೇಸ್ ಇರುವಾಗ ಬಾಯಿಮುಚ್ಚಿಕೊಂಡು ಇರಬೇಕಿತ್ತು. ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಬರುವಾಗ ಏಕನಾಥ್ ಶಿಂಧೆ, ಮತ್ತೆ ಫಡ್ನವಿಸ್ ಮಾತಾಡಲು ಶುರು ಮಾಡಿದರು. ಯಾವುದೇ ಒಂದು ಹಳ್ಳಿಯನ್ನು ಕರ್ನಾಟಕಕ್ಕೆ ಬಿಟ್ಟು ಕೊಡುತ್ತೇವೆ ಅಂತ ಫಡ್ನವಿಸ್ ಹೇಳುತ್ತಾರೆ.
ಅಮಿತ್ ಶಾ ಸಭೆಗೆ ಹೋಗುವ ಮುನ್ನ ಸರ್ವಪಕ್ಷ ಸಭೆ ಕರೆಯಬೇಕಿತ್ತು. ಸರ್ವಪಕ್ಷ ಸಭೆ ಕರೆದಿದ್ದರೆ ನಿಮಗೆ ಇನ್ನೂ ಹೆಚ್ಚಿನ ಶಕ್ತಿ ಬರುತ್ತಿತ್ತು. ನಾವು ಕೂಡ ನಿಮ್ಮ ಜೊತೆಯಲ್ಲಿ ಇರುತ್ತೇವೆ ಎಂದು ಹೇಳುತ್ತಿದ್ದೆವು.
ಸಿಎಂ ಬೊಮ್ಮಾಯಿ: ಗಡಿ ವಿವಾದ ಬಂದಾಗ ಸರ್ವಪಕ್ಷ ಸಭೆ ಬಗ್ಗೆ ಪ್ರಸ್ತಾಪಿಸಿದ್ದು ನಿಜ. ಮತ್ತೆ ಸಮಯ ಸಿಗುತ್ತದೆ ಸಭೆ ಕರೆಯಬಹುದು ಎಂದುಕೊಂಡಿದ್ದೆ. ದೆಹಲಿಗೆ ನಾನು ಹೋಗುವ ಹಿಂದಿನ ದಿನವೇ ಫೋನ್ ಬಂದಿದ್ದು. ಸಮಯ ಇದ್ದರೆ ಖಂಡಿತವಾಗಿಯೂ ಸರ್ವಪಕ್ಷ ಸಭೆ ಕರೆಯುತ್ತಿದ್ದೆ. ಸಮಯ ಇಲ್ಲದ ಕಾರಣ ನಾನು ಸರ್ವಪಕ್ಷ ಸಭೆ ಕರೆದಿಲ್ಲ. ವಿಪಕ್ಷ ನಾಯಕರ ಜತೆ ಸಭೆ ಮಾಡಿದ್ದರೇ ನನಗೆ ಶಕ್ತಿ ಬರುತ್ತಿತ್ತು. ಈ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದರು.
ಎರಡು ಕಡೆ ಉದ್ರಿಕ್ತ ಸ್ಥಿತಿಯಿದ್ದಾಗ ಅಮಿತ್ ಶಾ ಕರೆ ಮಾಡಿದ್ದರು. ನಮ್ಮ ಕಡೆಯಿಂದ ಯಾವುದೇ ಹೇಳಿಕೆ ನೀಡಿಲ್ಲ ಅಂತಾ ತಿಳಿಸಿದ್ದೆವು. ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ ಬನ್ನಿ ಅಂತ ಕರೆದರು. ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ ಸಭೆ ನಡೆದಿದ್ದೇ 10-15 ನಿಮಿಷ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಸಚಿವರು ಕರೆದಾಗ ಹೋಗಲೇಬೇಕು. ಸಂವಿಧಾನ, ಸುಪ್ರೀಂಕೋರ್ಟ್ನಲ್ಲಿ ಸಮಸ್ಯೆ ಇತ್ಯರ್ಥಪಡಿಸಬೇಕು ಅಂದರು. ಎರಡೂ ಕಡೆ ಶಾಂತಿ ಕಾಪಾಡಬೇಕು, ಯಾವುದೇ ಪ್ರವಾಸಿಗರು ಹಾಗೂ ವ್ಯಾಪಾರಿಗಳಿಗೆ ತೊಂದರೆ ಆಗಬಾರದೆಂದು ಅಮಿತ್ಶಾ ಸ್ಪಷ್ಟವಾಗಿ ಹೇಳಿದರು. ಮೂರು ಜನರ ಸಮಿತಿ ಮಾಡಿರೋದೇ ಯಾವುದೇ ಸಮಸ್ಯೆ ಆಗದಂತೆ. ಪ್ರಚೋದನೆ ಆ ಭಾಗದಿಂದಲೇ ಆಗ್ತಿರೋದು ಅಂತ ಹೇಳಿದ್ದೇವೆ. ಗಡಿಯಾಚೆ ಇರುವ ಕನ್ನಡಿಗರ ರಕ್ಷಣೆ ಆಗಬೇಕಿದೆ ಅಂತ ಹೇಳಿದ್ದೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ: ಮಹಾರಾಷ್ಟ್ರ ಒತ್ತಾಯ ಮೇರೆಗೆ ಮಹಾಜನ್ ಆಯೋಗ ರಚನೆ ಆಯ್ತು. 1967ರ ಆಗಸ್ಟ್ನಲ್ಲಿ ಮಹಾಜನ್ ಆಯೋಗವು ವರದಿಯನ್ನು ನೀಡಿತು. ಈ ವರದಿಯನ್ನು ಮಹಾರಾಷ್ಟ್ರ ತಿರಸ್ಕರಿಸಿತ್ತು, ಕರ್ನಾಟಕ ಸ್ವಾಗತಿಸಿತ್ತು. ಮಹಾರಾಷ್ಟ್ರದವರು ರಾಜಕೀಯಕ್ಕೆ ಗಡಿ ವಿಚಾರ ಜೀವಂತವಾಗಿಟ್ಟಿದ್ದಾರೆ. ಯಾವುದೇ ಗಡಿ ವಿವಾದ ಇಲ್ಲ . ರಾಜಕೀಯಕ್ಕಾಗಿ ಮಹಾರಾಷ್ಟ್ರದವರು ಗಡಿ ವಿಚಾರ ಕೆದಕುತ್ತಿರುತ್ತಾರೆ. ಸಮೀಕ್ಷೆ ಪ್ರಕಾರ ಬೆಳಗಾವಿಯಲ್ಲಿ 64.39% ಕನ್ನಡ ಮಾತನಾಡುವವರಿದ್ದಾರೆ. ಶೇಕಡಾ 26.04ರಷ್ಟು ಮರಾಠಿ ಮಾತನಾಡುವ ಜನರು ಇದ್ದಾರೆ. ಶೇಕಡಾ 50ಕ್ಕಿಂತ ಹೆಚ್ಚಾಗಿರುವ ನಮಗೆ ಬೆಳಗಾವಿ ಸೇರಬೇಕಲ್ವಾ? ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರದವರು ಕಾಲುಕೆರೆದು ಬರುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಕ್ಯಾತೆ ತೆಗೆಯುತ್ತಿದ್ದಾರೆ. ಯಾವ ಹಳ್ಳಿಯನ್ನೂ ಕರ್ನಾಟಕಕ್ಕೆ ಬಿಡಲು ತಯಾರಿಲ್ಲ ಎಂದಿದ್ದರು. ಭಾಷಾವಾರು ಆಧಾರದಲ್ಲೇ ಯೂರೋಪ್, ರಷ್ಯಾ ವಿಭಜನೆ ಆಗಿದೆ. ಭಾಷಾವಾರು ವಿಂಗಡಣೆ ಆದ ಮೇಲೆ ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಆದರೆ ಮಹಾರಾಷ್ಟ್ರದವರು ಮಾತ್ರ ಇನ್ನೂ ವಿವಾದ ಮಾಡುತ್ತಿದ್ದಾರೆ. 2004 ರಲ್ಲಿ ನಾವು ಸುಪ್ರೀಂ ಕೋರ್ಟ್ ಗೆ 1956 ಆಕ್ಟ್ ಚಾಲೆಂಜ್ ಮಾಡಿ ಹೋಗಿದ್ದೆವು. ಹೀಗಿದ್ದರೂ ಮಹಾರಾಷ್ಟ್ರದವರು ಜಗಳ ತೆಗೆಯುತ್ತಿದ್ದಾರೆ. ಯಾವುದೇ ನಿರ್ಣಯ ಕೈಗೊಳ್ಳಲು ಸುಪ್ರೀಂಕೋರ್ಟ್ಗೆ ಅವಕಾಶವಿಲ್ಲ. ನಿರ್ಣಯ ತೆಗೆದುಕೊಳ್ಳಲು ಲೋಕಸಭೆಯಲ್ಲಿ ಮಾತ್ರ ಅಧಿಕಾರ ಇದೆ ವಿಧಾನಸಭೆಯಲ್ಲಿ ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:49 pm, Tue, 20 December 22