Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್​: ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಸುವರ್ಣ ಸೌಧ ಮುತ್ತಿಗೆ ಪ್ರಯತ್ನ ನಡೆಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಇದರಿಂದ ಕೊಚ್ಚಿಗೆದ್ದ ಹೋರಾಟಗಾರರು ಕಲ್ಲು ತೂರಾಟ ನಡೆಸಿದರು. ಹೀಗಾಗಿ ಪೊಲೀಸರು ಸಹ ಮತ್ತಷ್ಟು ಲಾಠಿ ಚಾರ್ಜ್ ಮಾಡಿದ್ದರಿಂದ ಹಲವರು ಗಾಯಗೊಂಡಿದ್ದಾರೆ. ಪೊಲೀಸರು ಲಾಠಿಚಾರ್ಜ್​ ಮಾಡಿದ್ದನ್ನು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಖಂಡಿಸಿದ್ದು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್​: ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ
ಬಸವ ಜಯ ಮೃತ್ಯುಂಜಯ ಸ್ವಾಮೀಜಿ
Follow us
Sahadev Mane
| Updated By: ರಮೇಶ್ ಬಿ. ಜವಳಗೇರಾ

Updated on: Dec 10, 2024 | 6:39 PM

ಬೆಳಗಾವಿ, (ಡಿಸೆಂಬರ್ 10): 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ ನಡೆಸಿದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನೆಕಾರುರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಹೋರಾಟಗಾರರನ್ನು ತಡೆಯಲು ಲಾಠಿ ಚಾರ್ಜ್ ಮಾಡಿದ್ದಾರೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಜರನು ಪೊಲೀಸರ ಮೇಲೆಯೇ ಕಲ್ಲು, ಚಪ್ಪಲಿ ತೂರಿ ಆಕ್ರೋಶ ಹೊರಕಿದರು. ಈ ಘಟನೆಯಲ್ಲಿ ಪೊಲೀಸರು ಹಾಗೂ ಪ್ರತಿಭಟನೆಕಾರರಿಗೆ ಗಾಯಗಳಾಗಿವೆ. ಇನ್ನು ಈ ಸಂಬಂಧ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ಪೊಲೀಸರು ಹಾಗೂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಖಡಕ್ ಎಚ್ಚರಿಕೆ ಸಂದೇಶವನ್ನು ಸಹ ರವಾನಿಸಿದ್ದಾರೆ.

ಲಾಠಿ ಚಾರ್ಜ್​ ಘಟನೆ ಬಳಿಕ ಜಯಮೃತ್ಯುಂಜಯ ಶ್ರೀ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯದ ಮುಖಂಡರು ಸಭೆ ಮಾಡಿದ್ದು, ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿದರು. ಬಳಿಕ ಚೆನ್ನಮ್ಮ ವೃತ್ತಕ್ಕೆ ಮಾಲಾರ್ಪಣೆ ಪಂಚಮಸಾಲಿ ಮಕ್ಕಳ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆಂದು ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಂಸಾರೂಪಕ್ಕೆ ತಿರುಗಿದ ಪಂಚಮಸಾಲಿ ಹೋರಾಟ, ಲಾಠಿ ಚಾರ್ಜ್, ಕಲ್ಲು ತೂರಾಟ

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮೃತ್ಯುಂಜಯ ಸ್ವಾಮೀಜಿ, ಹೋರಾಟದ ಸ್ಥಳಕ್ಕೆ ಸಿಎಂ ಬರಬೇಕು ಎಂದು ನಮ್ಮ ಆಗ್ರಹ ಇತ್ತು. ಸ್ಥಳಕ್ಕೆ ಬಂದ ಸಚಿವರ ಮಾತು ಸಮಾಧಾನ ತರಲಿಲ್ಲ. ಹಾಗಾಗಿ ನಾವು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹೊಗುತ್ತಿದ್ದೆವು. ಅಲ್ಲಿದ್ದ ಎಡಿಜಿಪಿ, ಕಮಿಷನರ್ ಕುತಂತ್ರದಿಂದ ಹೊಡೆದರು. ಇದನ್ನ ಸಿಎಂ ಅವರು ಹೇಳಿ ಮಾಡಿಸಿದ್ದಾರೆ ಎನ್ನುವ ಅನುಮಾನ ಇದೆ. ಸಿಎಂ ಅವರ ಹತಾಶೆ ಭಾವನೆಯಿಂದ ಕಿಚ್ಚಿನಿಂದ ನಮ್ಮವರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದು, ಬಹಳಷ್ಟು ಜನರಿಗೆ ಕೈಕಾಲು ಮುರಿದಿದ್ದಾರೆ. ಲಿಂಗಾಯತರ ಮೇಲೆ ಹಲ್ಲೆ ಮಾಡಿದ ಸರ್ಕಾರ ಏಕೈಕ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರ ಪಿತೂರಿ ನೋಡಿದರೆ ಗೋಲಿಬಾರ್ ಮಾಡುತ್ತಿದ್ದರು ಅನ್ಸತ್ತೆ. ಲಿಂಗಾಯತರಿಗೆ ಮೀಸಲಾತಿ ಕೊಡಲ್ಲ ಎಂದು ಇವತ್ತೆ ಹೇಳಿ. 2028ಕ್ಕೆ ನಮಗೆ ಬೇಕಾದ ಸರ್ಕಾರ ತಂದು ಮೀಸಲಾತಿ ಪಡೆಯುತ್ತೇವೆ. ನಾಡಿದ್ದು ರಾಜ್ಯದ ಜನರು ನಿಮ್ಮ ಹಳ್ಳಿ, ತಾಲೂಕು, ಜಿಲ್ಲಾ ರಸ್ತೆ ಬಂದ್ ಮಾಡಿ ಹೋರಾಟ ಮಾಡಿ ಎಂದು ಸಮುದಾಯಕ್ಕೆ ಕರೆ ನೀಡಿದ ಸ್ವಾಮೀನಿ, ಎಡಿಜಿಪಿ ಮತ್ತು ಕಮಿಷನರ್ ಅವರನ್ನ ಕೂಡಲೇ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು.

ಇನ್ನು ಲಾಠಿಚಾರ್ಜ್​ನಲ್ಲಿ ಗಾಯಗೊಂಡವರನ್ನ ಭೇಟಿಯಾಗಿ ಅವರ ಚಿಕಿತ್ಸೆ ವೆಚ್ಚ ಭರಿಸುತ್ತೇವೆ. ನಿಮಗೆ ಅನ್ಯಾಯ ಮಾಡಿ ದೌರ್ಜನ್ಯ ಮಾಡಿದ್ದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಮುಂದಿನ ಹೋರಾಟವನ್ನ ಪ್ರಕಟ ಮಾಡುತ್ತೇವೆ. ಸಿಎಂ ಅವರನ್ನ ನಾವು ಕರೆದರೂ ಅವರು ಬರಲಿಲ್ಲ. ಅವರು ನಮ್ಮನ್ನ ಕರೆಯುವ ಸೌಜನ್ಯ ಮಾಡಲಿಲ್ಲ. ಹೀಗಾಗಿ ನಾವೇ ಅವರ ಬಳಿ ಹೋಗುತ್ತಿದ್ದೆವು ಎಂದರು.