ಅದ್ದೂರಿ ಕಿತ್ತೂರು ಚನ್ನಮ್ಮ ಉತ್ಸವ: ರಾಜ್ಯ ಸುತ್ತಿ ಬಂದ ಜ್ಯೋತಿಗೆ ಗಣ್ಯರಿಂದ ಸ್ವಾಗತ

ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಎಂದು ಹೆಸರಾಗಿರುವ ಕಿತ್ತೂರು ಚನ್ನಮ್ಮನ ಉತ್ಸವಕ್ಕೆ ಸೋಮವಾರ ಅದ್ದೂರಿ ಚಾಲನೆ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ ಜ್ಯೋತಿ ಇಂದು ಕಿತ್ತೂರು ತಲುಪಿದ್ದು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ಉತ್ಸವ ನಡೆಯಲಿದೆ.

ಅದ್ದೂರಿ ಕಿತ್ತೂರು ಚನ್ನಮ್ಮ ಉತ್ಸವ: ರಾಜ್ಯ ಸುತ್ತಿ ಬಂದ ಜ್ಯೋತಿಗೆ ಗಣ್ಯರಿಂದ ಸ್ವಾಗತ
ಕಿತ್ತೂರು ಉತ್ಸವ
Edited By:

Updated on: Oct 23, 2023 | 9:49 PM

ಬೆಳಗಾವಿ, ಅಕ್ಟೋಬರ್​​ 23: ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಎಂದು ಹೆಸರಾಗಿರುವ ಕಿತ್ತೂರು ಚನ್ನಮ್ಮನ ಉತ್ಸವ (Kittur Channamma Festival) ಕ್ಕೆ ಸೋಮವಾರ ಅದ್ದೂರಿ ಚಾಲನೆ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ ಜ್ಯೋತಿ ಇಂದು ಕಿತ್ತೂರು ತಲುಪಿದ್ದು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ಉತ್ಸವ ನಡೆಯಲಿದೆ. ವಿವಿಧ ಜಾನಪದ ಕಲಾ ತಂಡಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರೆ, ಶಾಸಕ ಬಾಬಾಸಾಹೇಬ್ ಪಾಟೀಲ್ ಕಿತ್ತೂರು ಉತ್ಸವದ ನಂದಿ ಧ್ವಜಾರೋಹಣ ಮಾಡಿ ಉತ್ಸವಕ್ಕೆ ಚಾಲನೆ ನೀಡಿದರು.

ಪ್ರತಿ ವರ್ಷ ನಮ್ಮ ಇಲಾಖೆಯಿಂದ ಐದು ಕೋಟಿ ರೂ: ಸಚಿವ ಸತೀಶ್​ ಜಾರಕಿಹೊಳಿ

ಈ ವೇಳೆ ಮಾತನಾಡಿದ ಸಚಿವ ಸತೀಶ್​ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆಯಿಂದ ಕಿತ್ತೂರು ಅಭಿವೃದ್ಧಿಗೆ ಐದು ಕೋಟಿ ರೂ. ಕೊಡುತ್ತೇವೆ. ಪ್ರತಿ ವರ್ಷ ನಮ್ಮ ಇಲಾಖೆಯಿಂದ ಐದು ಕೋಟಿ ರೂ. ನೀಡುತ್ತೇವೆ. ನಂದಗಡ, ಅಮಟೂರ, ಹಲಸಿ, ಸಂಗೊಳ್ಳಿ ಒಂದು ಪ್ರವಾಸಿ ಸ್ಥಳ ಮಾಡುತ್ತೇವೆ. ಕಿತ್ತೂರು ರಾಜ್ಯಕ್ಕೆ ಅಲ್ಲಾ ದೇಶಕ್ಕೆ ಮಾದರಿ ಆಗಲಿ‌. ನಮ್ಮ ಸರ್ಕಾರ ನಿಮ್ಮ ಜತೆಗೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಸಿಎಂ ಪದೇ ಪದೇ ಗೈರು, ಮೌಡ್ಯಕ್ಕೆ ಹೆದರಿದ್ರಾ ಸಿದ್ದರಾಮಯ್ಯ?

ಕಳೆದ 25 ವರ್ಷದಿಂದ ಉತ್ಸವ ಆಚರಣೆ ಮಾಡಲಾಗುತ್ತಿದೆ. ಬಂಗಾರಪ್ಪ ಅವರ ಕಾಲದಿಂದ ಸಣ್ಣದಾಗಿ ಆರಂಭವಾದ ಕಾರ್ಯಕ್ರಮ. ಇಂದು ರಾಜ್ಯದ ಮನೆ ಮಾತಾಗಿರುವ ಉತ್ಸವ ಆಗಿದೆ. ಮೂರು ದಿನಗಳ ಕಾಲ ನಡೆಯುವ ಉತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಕಲಾವಿದರು ಬರುತ್ತಾರೆ. ನೆಲ, ಜಲಕ್ಕಾಗಿ ಸಂಘರ್ಷ ಆದ ನೆಲ ಕಿತ್ತೂರು ಚನ್ನಮ್ಮನ ನೆಲ. ಈ ಕಾರ್ಯಕ್ರಮ ಕಿತ್ತೂರು, ಬೆಳಗಾವಿಗೆ ಸೀಮಿತ ಆಗದೆ ಇಡೀ ರಾಜ್ಯದ ಮೂಲೆ ಮೂಲೆಗೆ ಮುಟ್ಟಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಮಾಡಿದ್ದೇವೆ ಎಂದರು.

ಬರಗಾಲ ಇದೆ ಮೊಟಕುಗೊಳಿಸಬೇಕು ಅನ್ನೋ ಚಿಂತನೆ ಇತ್ತು. ಶಾಸಕರ ಪ್ರಯತ್ನದಿಂದ ಮೂರು ದಿನದ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಿಎಂ ಅವರ ಬಳಿ ಹೋಗಿ ಮನವಿ ಮಾಡಿಕೊಂಡು ಶಾಸಕರು ಅನುದಾನ ತಂದಿದ್ದಾರೆ. ದೇಶಕ್ಕೆ, ರಾಜ್ಯಕ್ಕೆ ಮಾದರಿಯಾಗಲು ಪ್ರಯತ್ನ ಮಾಡುತ್ತೇವೆ. ಬರುವ ಐದು ವರ್ಷದಲ್ಲಿ ಐತಿಹಾಸಿಕ ಕಿತ್ತೂರು ಕೋಟೆ ಮೆರಗು ಕೊಡಲು ಹಲವು ಚಿಂತನೆ ಮಾಡುತ್ತಿದ್ದೇವೆ. ಬರುವ ದಿನಗಳಲ್ಲಿ ಕಿತ್ತೂರು ಕೋಟೆ ಇನ್ನಷ್ಟು ಸೌಂದರ್ಯಕರಣ ಮಾಡುತ್ತೇವೆ.

ಕಿತ್ತೂರು ಉತ್ಸವ ರಾಷ್ಟ್ರೀಯ ಉತ್ಸವ ಮಾಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಬೇಕು: ಸದಸ್ಯ ಈರಣ್ಣಾ ಕಡಾಡಿ

ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಪ್ರತಿಕ್ರಿಯಿಸಿದ್ದು, ವರ್ಷದಿಂದ ವರ್ಷಕ್ಕೆ ಕಿತ್ತೂರು ಉತ್ಸವ ಜನರ ಉತ್ಸವವಾಗಿ ಪರಿವರ್ತನೆ ಆಗಿದೆ. ನಾಡಿನಾದ್ಯಂತ ರಾಜ್ಯಮಟ್ಟದ ಉತ್ಸವ ಆಗಿ ಹೊರಹೊಮ್ಮಿದೆ. ರಾಣಿ ಚನ್ನಮ್ಮ ಇತಿಹಾಸವನ್ನ ಮೂರ ದಿನಗಳ ಕಾಲ ಮೆಲಕು ಹಾಕದೆ, ಮೂರು ದಿನಗಳಿಗೆ ಸೀಮಿತ ಮಾಡದೇ ವಿಚಾರ ಸಂಕಿರಣಗಳ ಮೂಲಕ‌ ಹೆಚ್ಚಿಸಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ನೆನಪ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸಾಂಸ್ಕೃತಿಕ ಗಟ್ಟಿ ನೆಲೆಯನ್ನ ನಿರ್ಮಿಸಿಬೇಕಿದೆ ಎಂದರು.

ಇದನ್ನೂ ಓದಿ: ರೈತರ ಆಯುಧ ಪೂಜೆ ಸಂಭ್ರಮಕ್ಕೆ ಲೋಡ್ ಶೆಡ್ಡಿಂಗ್ ಅಡ್ಡಿ: ತೋಟದ ಮನೆಗಳಿಗೂ ‘ನಿರಂತರ ಜ್ಯೋತಿ’ ಸಂಪರ್ಕಕ್ಕೆ ಆಗ್ರಹ

ಬರುವ 200ನೇ ವರ್ಷಕ್ಕೆ ನಾಡ ಉತ್ಸವವಾಗದೇ ರಾಷ್ಟ್ರೀಯ ಉತ್ಸವಾಗಿ‌ ಪರಿವರ್ತನೆ ಆಗಬೇಕು. ಝಾನ್ಸಿ ರಾಣಿಕ್ಕಿಂತ ಮೊದಲು ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಗೆದ್ದಿದ್ರು. ಕಿತ್ತೂರು ಉತ್ಸವ ರಾಷ್ಟ್ರೀಯ ಉತ್ಸವ ಮಾಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಬೇಕು. ನಾವೆಲ್ಲರೂ ಕೂಡಿಕೊಂಡು ಕಿತ್ತೂರು ರಾಷ್ಟ್ರೀಯ ಉತ್ಸವ ಮಾಡಲು ಪ್ರಯತ್ನ ಮಾಡೋಣ. ನಾವು ಕೂಡ ನಿಮ್ಮ ಜತೆಗೆ ಪ್ರಯತ್ನ ಮಾಡುತ್ತೇವೆ. ಕಿತ್ತೂರು ಪ್ರವಾಸ ತಾಣವಾಗಿ ಬೆಳೆಯಬೇಕು ಎಂದು ಹೇಳಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ಚನ್ನಮ್ಮ ಹೆಸರಿಡಬೇಕು: ಜಯಮೃತ್ಯುಂಜಯ ಸ್ವಾಮೀಜಿ

ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮೈಸೂರ ದಸರಾದಲ್ಲಿ ಅಲ್ಲಿನ ರಾಜರನ್ನ ನೆನಪಿಸಿಕೊಳ್ಳವ ಕೆಲಸ ಮಾಡುತ್ತಾರೆ. ರಾಜರನ್ನ ನೆನಪಿಸಿಕೊಳ್ಳುತ್ತೇವೆ ಆದರೆ ರಾಣಿಯರನ್ನ ನೆನಪಿಸಿಕೊಳ್ಳುವುದಿಲ್ಲ. ಪ್ರಾದೇಶಿಕ ಅಸಮಾನತೆಯೋ ಗೊತ್ತಿಲ್ಲ ಆದರೆ ಈ ಭಾಗ ಅಷ್ಟೊಂದು ಅಭಿವೃದ್ಧಿಯಾಗಿಲ್ಲ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ಚನ್ನಮ್ಮ ಹೆಸರಿಡಬೇಕು ಎಂದು ಹೇಳಿದ್ದಾರೆ.

ಪಾರ್ಲಿಮೆಂಟ್ ಮುಂದೆ ಚನ್ನಮ್ಮ ಮತ್ತು ಬಸವಣ್ಣನವರ ಮೂರ್ತಿ ಇದೆ ಗೌರವ ಸಿಗುತ್ತಿಲ್ಲ. ಮುಂದಿನ ವರ್ಷ ಇಬ್ಬರು ಮಹಾನ್ ನಾಯಕರಿಗೆ ಮಾಲಾರ್ಪಣೆ ಮಾಡಿ ಗೌರವ ಕೊಡಬೇಕು. ಸಿಎಂ ಬೇರೆ ಯಾವುದೇ ಉತ್ಸವ ತಪ್ಪಿಸಿದ್ರೂ ಪರವಾಗಿಲ್ಲ, ಕಿತ್ತೂರು ಉತ್ಸವಕ್ಕೆ ಬಂದೂ ಹೋಗುವ ಕೆಲಸವನ್ನ ಮಾಡಲಿ. ಮುಂದಿನ ವರ್ಷ ನಡೆಯುವ ಎರಡನೂರು ವರ್ಷದ ಉತ್ಸವಕ್ಕೆ ಈಗಿನಿಂದಲೇ ಸಭೆ ಕರೆದು ಚರ್ಚೆ ಮಾಡಲಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Sahadev Mane
Follow Us