400 ಕೋಟಿ ಮಾಲೀಕ ಗುಜರಾತ್ ರಾಜಕಾರಣಿಯಾ? ದೇಶದ ಅತಿದೊಡ್ಡ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್!

ಕರ್ನಾಟಕ ಗಡಿ ಭಾಗದ ಛೋರ್ಲಾ ಘಾಟ್‌ನಲ್ಲಿ ನಡೆದಿದ್ದ ಸಿನಿಮೀಯ ರೀತಿಯ 400 ಕೋಟಿ ರೂ. ದರೋಡೆ ಪ್ರಕರಣದ ಬಗ್ಗೆ ದಿನಕ್ಕೊಂದು ಮಾಹಿತಿ ಹೊರಬೀಳುತ್ತಿದೆ. ಮತ್ತೊಂದೆಡೆ, ಹಣ ಯಾರಿಗೆ ಸೇರಿದ್ದೆಂಬ ಬಗ್ಗೆ ರಾಜಕೀಯ ಜಟಾಪಟಿಯೂ ಜೋರಾಗಿದೆ. ಈ ಬೆಳವಣಿಗೆಗಳ ಮಧ್ಯೆ ಪ್ರಕರಣಕ್ಕೆ ಮತ್ತೊಂದು ರೋಚಕ ಟ್ವಿಸ್ಟ್ ದೊರೆತಿದೆ. ಏನದು ಎಂಬ ಮಾಹಿತಿ ಇಲ್ಲಿದೆ.

400 ಕೋಟಿ ಮಾಲೀಕ ಗುಜರಾತ್ ರಾಜಕಾರಣಿಯಾ? ದೇಶದ ಅತಿದೊಡ್ಡ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್!
ಸಾಂದರ್ಭಿಕ ಚಿತ್ರ
Edited By:

Updated on: Jan 27, 2026 | 7:06 AM

ಬೆಳಗಾವಿ, ಜನವರಿ 27: ಗೋವಾದಿಂದ ಬೆಳಗಾವಿ (Belagavi) ಚೋರ್ಲಾ ಮಾರ್ಗವಾಗಿ ಎರಡು ಕಂಟೇನರ್‌ಗಳಲ್ಲಿ ಸಾಗಿಸಲಾಗುತ್ತಿದ್ದ 400 ಕೋಟಿ ರೂ. ಹಣವನ್ನು ಕಳೆದ ಅಕ್ಟೋಬರ್​​​ನಲ್ಲಿ ಹೈಜಾಕ್ (400 crore robbery case) ಮಾಡಲಾಗಿತ್ತು ಎಂಬ ಪ್ರಕರಣ ಸಂಬಂಧ ಇದೀಗ ಮತ್ತೊಂದು ಮಾಹಿತಿ ಹೊರಬಿದ್ದಿದೆ. 2 ಸಾವಿರ ರೂಪಾಯಿ ಮೌಲ್ಯದ ಸುಮಾರು 400 ಕೋಟಿ ರೂಪಾಯಿ ಹಳೇ ನೋಟುಗಳನ್ನು ತುಂಬಿದ್ದ ಟ್ರಕ್ ದರೋಡೆ ಮಾಡಲಾಗಿತ್ತು ಎಂಬ ಆರೋಪವಿದೆ. ಇದೀಗ ಈ ಹಣದ ಹಿಂದೆ ಗುಜರಾತ್ ರಾಜಕಾರಣಿ ಹೆಸರು ಕೇಳಬಂದಿದ್ದು, ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ದರೋಡೆಯಾದ ಹಣ ಮಹಾರಾಷ್ಟ್ರ ಪಾಲಿಕೆ ಚುನಾವಣೆಗೆ ಬಳಕೆ ಆಗಿದೆ. ನೋಟು ಬದಲಾವಣೆ ದಂಧೆ ನಡೆದಿದೆ, ಹಣ ಇವರದ್ದೇ ಇರಬೇಕು, ಅವರದ್ದೇ ಇರಬೇಕು ಎಂದು ಪರಸ್ಪರ ಕೆಸರೆರಚಾಟ ತಾರಕಕ್ಕೇರಿದೆ.

ಕಾಂಗ್ರೆಸ್​​​ನವರೇ ಹಣ ಕಳುಹಿಸಿದ್ದಾರೆ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದು, ಅವರ ಮಾತಿಗೆ ಮಾತಿಗೆ ಮಾಜಿ ಸಿಎಂ ಸದಾನಂದಗೌಡ ಧ್ವನಿಗೂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಣ ಸಂಗ್ರಹ ಮಾಡುತ್ತದೆ, ಬೇರೆ ಬೇರೆ ಕಡೆ ಕಳಿಸಿಕೊಡುತ್ತದೆ ಎಂದಿದ್ದಾರೆ. ಈ ಮಾತಿಗೆ ಗರಂ ಆದ, ಸಚಿವ ಭೈರತಿ ಸುರೇಶ್, ನೋಟ್ ಮೇಲೆ ಕಾಂಗ್ರೆಸ್ ಎಂದು ಬರೆದಿದೆಯಾ ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದೆಡೆ, ಹಣ ಸಾಗಾಟಕ್ಕೆ ಸಂಬಂಧಿಸಿದ ಮೂರೂ ರಾಜ್ಯಗಳಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಪ್ರಧಾನಿ ಮೋದಿಗೆ ಕಲಬುರಗಿಯಲ್ಲಿ ರೊಟ್ಟಿ ಮಾಡುವವರ ಬಗ್ಗೆ ಗೊತ್ತಾಗುತ್ತದೆ. ದರೋಡೆ ಬಗ್ಗೆ ಯಾಕೆ ಗೊತ್ತಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿಯ ಗಡಿಭಾಗದಲ್ಲೇ ನಾಪತ್ತೆಯಾದ 400 ಕೋಟಿ ರೂ. ಬಗ್ಗೆ ಜಿಲ್ಲೆಯ ಸಚಿವರು ಪ್ರಶ್ನೆ ಎತ್ತಿದ್ದಾರೆ. ಮಹಾರಾಷ್ಟ್ರ ಪೊಲೀಸರೇ ನಮ್ಮ ಪೊಲೀಸರಿಗೆ ಸಹಕಾರ ಕೊಡುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.

400 ಕೋಟಿ ರೂ. ಹಣ ಗುಜರಾತ್ ರಾಜಕಾಣಿಗೆ ಸೇರಿದ್ದಾ?

ದರೋಡೆಯಾಗಿತ್ತು ಎನ್ನಲಾದ 400 ಕೋಟಿ ರೂ. ಹಣಕ್ಕೆ ಸಂಬಂಧಿಸಿದಂತೆ ಜಯೇಶ್ ಎಂಬಾತನ ಜೊತೆ ಮಹಾರಾಷ್ಟ್ರದ ಉದ್ಯಮಿ ಕಿಶೋರ್ ಮಾತನಾಡಿದ್ದಾನೆ ಎನ್ನಲಾದ ಆಡಿಯೋವೊಂದು ಸೋಮವಾರ ಬಹಿರಂಗವಾಗಿದೆ. ಅದರಲ್ಲ, ನನ್ನ ಮತ್ತು ವಿರಾಟ್‌ಗೆ ಪರಿಚಯವಿದ್ದ ವ್ಯಕ್ತಿ ಮಧ್ಯಸ್ಥಿಕೆ ವಹಿಸಿದ್ದಾರೆ. ಈ ಮಧ್ಯಸ್ಥಿಕೆ ವಹಿಸಿದ ವ್ಯಕ್ತಿ ಗುಜರಾತ್‌ನ ದೊಡ್ಡ ರಾಜಕಾರಣ ಎಂದು ಹೇಳಲಾಗಿದೆ. ಹೀಗಾಗಿ ದರೋಡೆಯಾಗಿರುವ ಹಣ ಗುಜರಾತ್ ರಾಜಕಾಣಿಗೆ ಸೇರಿದ್ದಾ ಎಂಬ ಪ್ರಶ್ನೆ ಮೂಡಿದೆ. ಇದುವೇ ರಾಜಕೀಯ ಜಟಾಪಟಿಗೂ ಕಾರಣವಾಗಿದೆ.

ಆಡಿಯೋದಿಂದ ಹುಟ್ಟಿವೆ ಹಲವು ಪ್ರಶ್ನೆ

ಆಡಿಯೋ ಪ್ರಕಾರ ಕಿಶೋರ್ ಹಣ ಕಳುಹಿಸುತ್ತಿದ್ದ ಎನ್ನಬಹುದು. ಆದರೆ, ಗೋವಾದಲ್ಲಿ ಹಣ ಕೊಟ್ಟಿದ್ಯಾರು? ಆ ದುಡ್ಡು ಕಿಶೋರ್‌ನದ್ದೇನಾ? ಗುಜರಾತ್‌ ರಾಜಕಾರಣಿಗೆ ಹೋಗಿತ್ತಾ? ಅಥವಾ ಗುಜರಾತ್ ರಾಜಕಾರಣಿಯೇ ನೋಟು ಬದಲಾವಣೆಗೆ ಕೊಟ್ಟಿದ್ದರಾ ಎಂಬುದು ನಿಗೂಢವಾಗಿದೆ. ಗುಜರಾತ್ ರಾಜಕಾರಣಿ ಕೂಡಾ ಬೇರೆ ಹಣದ ವ್ಯವಸ್ಥೆ ಮಾಡಿ, ಈ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂಬುದೂ ಆಡಿಯೋದಲ್ಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ಪ್ರಕರಣಲ್ಲಿ ಗೊಂದಲವಿದೆ. ನಮ್ಮ ಪೊಲೀಸರು ಮಹಾರಾಷ್ಟ್ರ ಪೊಲೀಸರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಮೊದಲಿಗೆ ಕಿಡ್ನಾಪ್ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು 400 ಕೋಟಿ ರೂ. ಮೂಲ ಬೆನ್ನತ್ತಿದ್ದಾರೆ.

ದೇಶದ ಅತಿ ದೊಡ್ಡ ರಾಬರಿ: ಬೆಳಗಾವಿ ಗಡಿಭಾಗದಲ್ಲಿ 400 ಕೋಟಿ ರೂ ಹಣವಿದ್ದ 2 ಕಂಟೇನರ್​​​ ಹೈಜಾಕ್​?

ಒಟ್ಟಿನಲ್ಲಿ, 400 ಕೋಟಿ ರೂ. ದರೋಡೆ ಪ್ರಕರಣದ ಬಗ್ಗೆ ಕರ್ನಾಟಕದಲ್ಲಿ ಎಫ್​ಐಆರ್ ದಾಖಲಾಗಿಲ್ಲ. ಆದರೂ ಮಹಾರಾಷ್ಟ್ರ, ಗೋವಾ ಪೊಲೀಸರ ಜೊತೆಗೆ ತನಿಖೆಗೆ ಇಳಿದಿದ್ದಾರೆ. ಈ ನಡುವೆ ರಾಜಕೀಯ ನಾಯಕರ ನಡುವೆ ವಾಕ್ಸಮರವೂ ಮುಂದುವರಿದಿದೆ. ಗುಜರಾತಿನ ರಾಜಕಾರಣಿ ಯಾರು ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sahadev Mane
Follow Us