SDRF ಸಿಪಿಐ ನಿಗೂಢ ಸಾವು: ಅಧಿಕಾರಿ ಬಲಿ ಪಡೆಯಿತಾ ಆನ್​​ಲೈನ್​​ ಗೇಮ್​​ ಗೀಳು?

ಬೆಳಗಾವಿಯಲ್ಲಿ ಎಸ್‌ಡಿಆರ್‌ಎಫ್ ಸಿಪಿಐ ಓರ್ವರು ಮನೆಯಲ್ಲೇ ನಿಗೂಢವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾವಿಗೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದ್ದು, ಈ ಸಂಬಂಧ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇನ್ನು 2-3 ತಿಂಗಳಲ್ಲಿಯೇ ಡಿವೈಎಸ್ಪಿ ಆಗಿ ಭಡ್ತಿ ಹೊಂದಬೇಕಿದ್ದ ಅಧಿಕಾರಿಯ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

SDRF ಸಿಪಿಐ ನಿಗೂಢ ಸಾವು: ಅಧಿಕಾರಿ ಬಲಿ ಪಡೆಯಿತಾ ಆನ್​​ಲೈನ್​​ ಗೇಮ್​​ ಗೀಳು?
ಮೃತ ಶ್ರೀಶೈಲ್ ಚೌಗುಲಾ
Image Credit source: Tv9 Kannada
Edited By:

Updated on: May 28, 2026 | 6:27 PM

ಬೆಳಗಾವಿ, ಮೇ 28: ಕಳೆದ 13 ವರ್ಷಗಳಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಸಿಪಿಐಯೊಬ್ಬರು ನಿಗೂಢವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಶ್ರೀಶೈಲ್ ಚೌಗುಲಾ ಮೃತರಾಗಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಮನೆಯಲ್ಲಿಯೇ ಕಂಡುಬಂದಿದೆ. ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದ್ದು, ಈ ಕುರಿತು ಪೊಲೀಸ್​​ ತನಿಖೆ ನಡೆಯುತ್ತಿದೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವನ್ನು ಹಸ್ತಾಂತರ ಮಾಡಲಾಗಿದ್ದು, ಬಳಿಕ ಅಥಣಿ ತಾಲೂಕಿನ ಕವಟಕೊಪ್ಪ ಗ್ರಾಮದಲ್ಲಿ ಶ್ರೀಶೈಲ್​​ ಅಂತ್ಯಕ್ರಿಯೆ ನಡೆಸಲಾಗಿದೆ.

ಇನ್ನು 2-3 ತಿಂಗಳಲ್ಲಿಯೇ ಡಿವೈಎಸ್ಪಿ ಆಗಿ ಭಡ್ತಿ ಹೊಂದಬೇಕಿದ್ದ ಶ್ರೀಶೈಲ್​ ನಿನ್ನೆ ಕೆಲಸ ಮುಗಿಸಿ ಸಂಜೆ ಮನೆಗೆ ವಾಪಾಸ್ ಆಗಿದ್ದರು. ಪತ್ನಿ ಜೊತೆಗೆ ಮಾತಾಡಿದ್ದ ಬಳಿಕ ಊಟಕ್ಕೆ ಕರೆಯುವಂತೆ ತಿಳಿಸಿ ರೂಮ್ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಬಳಿಕ ಹೊರ ಬಂದು ರಾತ್ರಿ ಊಟ ಮಾಡಿ ಮತ್ತೆ ರೂಮಿಗೆ ಹೋದ ಶ್ರೀಶೈಲ್ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯಲ್ಲೇ ಇದ್ದ ಪತ್ನಿ ಸ್ವಲ್ಪ ಹೊತ್ತಿನ ಬಳಿಕ ರೂಮ್ ಬಳಿ ಹೋದಾಗ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಆಕೆ ಕಚೇರಿಯ ಸಿಬ್ಬಂದಿಗೆ ಕರೆ ಮಾಡಿದ್ದು, ಶ್ರೀಶೈಲ್​​ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಿಯೇ ಶ್ರೀಶೈಲ್​​ ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಯಬಾಗದಲ್ಲಿ ಭೀಕರ ರಸ್ತೆ ಅಪಘಾತ, ಗೂಡ್ಸ್ ಆಟೋ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರ ದುರ್ಮರಣ

ಶ್ರೀಶೈಲ ಚೌಗುಲಾ ಮೂಲತಃ ಕೃಷಿಕ ಕುಟುಂಬದವರಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆಯಲ್ಲಿ ಕೆಲಸಕ್ಕೆ ಸೇರ್ಪಡೆಯಾಗಿ ಅಲ್ಲಿ ಉತ್ತಮ ಹೆಸರು ಗಳಿಸಿದ್ದರು. ಇವರಿಗೆ ಕಳೆದ ಹತ್ತು ವರ್ಷಗಳ ಹಿಂದೆ ಚೇತನಾ ಎಂಬುವವರ ಜೊತೆಗೆ ಮದುವೆಯಾಗಿತ್ತು. ದಂಪತಿಗೆ 8 ವರ್ಷದ ಅಕ್ಷಯ, 5 ವರ್ಷದ ಅನ್ವಿ ಎಂಬ ಮಕ್ಕಳೂ ಇದ್ದಾರೆ. ಇನ್ನು ಆನ್​​ಲೈನ್​​ ಗೇಮ್​​ ಗೀಳಿಗೆ ಒಳಗಾಗಿದ್ದ ಶ್ರೀಶೈಲ್​​ ಸಾಲ ಮಾಡಿಕೊಂಡು ಈ ರೀತಿ ಸಾವಿಗೀಡಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮತ್ತೊಂದು ಕಡೆ ಕೌಟುಂಬಿಕ ಕಲಹವೂ ಕಾರಣವಾಗಿರಬಹುದೆಂಬ ಅನುಮಾನವೂ ಇದೆ. ಈ ಸಂಬಂಧ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸ್​​ ತನಿಖೆ ಬಳಿಕವೇ ಸಾವಿಗೆ ಅಸಲಿ ಕಾರಣ ಏನೆಂಬುದು ಗೊತ್ತಾಗಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Sahadev Mane
Follow Us