ಕಲಬುರಗಿಯಲ್ಲಿ ದೇಶವಿರೋಧಿ ಕೃತ್ಯ ಎಸಗುತ್ತಿದ್ದ ಮಹಮ್ಮದ್ ಸಮೀರ್ ಬಂಧನ: ತನಿಖೆ ವೇಳೆ ಬೆಚ್ಚಿಬಿದ್ದ ಪೊಲೀಸ್ ಅಧಿಕಾರಿಗಳು
ಕಲಬುರಗಿಯಲ್ಲಿ ಮಹಮ್ಮದ್ ಸಮೀರ್ (23) ಎಂಬಾತನನ್ನು ದೇಶವಿರೋಧಿ ಚಟುವಟಿಕೆಗಳಿಗಾಗಿ ಬಂಧಿಸಲಾಗಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಜೊತೆ ಸಂಪರ್ಕ, ವಿದೇಶಿ ಮೊಬೈಲ್ ಸಂಖ್ಯೆಗಳ ಬಳಕೆ ಹಾಗೂ ದೇಶದ ಅಖಂಡತೆಗೆ ಧಕ್ಕೆ ತರುವಂತಹ ವಿಡಿಯೋಗಳನ್ನು ಹಂಚಿಕೊಂಡ ಆರೋಪ ಎದುರಿಸುತ್ತಿದ್ದಾನೆ. ಕಲಬುರಗಿ ಪೊಲೀಸರು ಈ ಜಾಲವನ್ನು ಪತ್ತೆಹಚ್ಚಿ ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಕೇಂದ್ರೀಯ ತನಿಖಾ ಸಂಸ್ಥೆಗಳಿಗೂ ಮಾಹಿತಿ ರವಾನಿಸಲಾಗಿದೆ.

ಕಲಬುರಗಿ, ಆ.14: ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ ಪೇಜ್ಗಳು ಹಾಗೂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಮಹಮ್ಮದ್ ಸಮೀರ್ (23) ಎಂಬಾತನನ್ನು ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದರು. ಮೂಲತಃ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯವನಾದ ಈತ, ಕಳೆದ ಕೆಲವು ತಿಂಗಳುಗಳಿಂದ ಕಲಬುರಗಿಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆರೋಪಿಯ ಮೊಬೈಲ್ ಫೋನ್ ಪರಿಶೀಲನೆ ನಡೆಸಿದ ವೇಳೆ ಬೆಚ್ಚಿಬೀಳಿಸುವ ರೋಚಕ ಹಾಗೂ ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಆರೋಪಿ ಸಮೀರ್ ಭಾರತದಲ್ಲಿದ್ದುಕೊಂಡೇ ವಿದೇಶಿ ಮೂಲದ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ವಾಟ್ಸಪ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳನ್ನು ನಿರ್ವಹಿಸುತ್ತಿದ್ದ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಿಗೆ ಸೇರಿದ ಅಬೀದ್ ಜಟ್ ಹಾಗೂ ಶಹಜಾದ್ ಭಟ್ಟಿ ಎಂಬ ಹ್ಯಾಂಡ್ಲರ್ಗಳ ಜೊತೆ ಈತ ನಿರಂತರ ಸಂಪರ್ಕದಲ್ಲಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈತ ‘ವೆಮನ್ ಮತ್ತು ಜಟ್ 333’ ಹಾಗೂ ‘ರಾಣಾ ಭಾಯ್ 333’ ಸೇರಿದಂತೆ ಹಲವು ದೇಶವಿರೋಧಿ ಮತ್ತು ಮತೀಯ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ವಾಟ್ಸಪ್ ಗ್ರೂಪ್ಗಳಲ್ಲಿ ಸಕ್ರಿಯ ಸದಸ್ಯನಾಗಿದ್ದ.
ಪೊಲೀಸರು ಸಮೀರ್ನ ಮೊಬೈಲ್ ವಶಪಡಿಸಿಕೊಂಡು ಡಿಜಿಟಲ್ ಫೋರೆನ್ಸಿಕ್ ತನಿಖೆಗೆ ಒಳಪಡಿಸಿದಾಗ, ಭಾರತ ವಿರೋಧಿ ಪ್ರಚೋದನಾತ್ಮಕ ವಿಡಿಯೋಗಳು ಪತ್ತೆಯಾಗಿವೆ. ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ನಕ್ಷೆಯಿಂದ ಹೊರಗಿಟ್ಟು, ಅದನ್ನು ಪಾಕಿಸ್ತಾನದ ಭೂಭಾಗಕ್ಕೆ ಜೋಡಿಸಿ ಚಿತ್ರಿಸಲಾಗಿರುವ ತಂಟೆಯುಕ್ತ ವಿಡಿಯೋಗಳು ಈತನ ಮೊಬೈಲ್ನಲ್ಲಿ ಪತ್ತೆಯಾಗಿವೆ. ದೇಶದ ಅಖಂಡತೆಗೆ ಧಕ್ಕೆ ತರುವ ಮತ್ತು ಸಮಾಜದಲ್ಲಿ ಶಾಂತಿ ಕದಡುವಂತಹ ವಿಷಯಗಳನ್ನು ಈತ ಶೇರ್ ಮಾಡುತ್ತಿದ್ದ.
ಇದನ್ನೂ ಓದಿ: ಪಾಕಿಸ್ತಾನ, ಐಸಿಸ್ ಜತೆ ನಂಟು: ಕಲಬುರಗಿಯಲ್ಲಿ ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ
ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್ಡಿ ಅವರ ಮಾರ್ಗದರ್ಶನದಲ್ಲಿ ತಾಂತ್ರಿಕ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಮೂಲಕ ಈ ಜಾಲವನ್ನು ಪತ್ತೆಹಚ್ಚಲಾಗಿದೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 113(3) (ಭಯೋತ್ಪಾದನಾ ಕೃತ್ಯ) ಹಾಗೂ ಸೆಕ್ಷನ್ 197 (ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿರುವುದರಿಂದ ಕೇಂದ್ರೀಯ ತನಿಖಾ ಸಂಸ್ಥೆಗಳಿಗೂ ಮಾಹಿತಿ ರವಾನಿಸಲಾಗಿದ್ದು, ಹೆಚ್ಚಿನ ವಿಚಾರಣೆ ಕಾಯ್ದಿರಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



