ಬೆಳಗಾವಿ, (ಮಾರ್ಚ್ 17)): ಪ್ರೀತ್ಸೇ…ಪ್ರೀತ್ಸೇ (Love) ಎಂದು ಪ್ರಾಣ ತಿಂತಿದ್ದವನ ಕಾಟ ತಾಳಲಾರದೇ ಎಸ್ಎಸ್ಎಲ್ ವಿದ್ಯಾರ್ಥಿನಿ(Student) ಆತ್ಮಹತ್ಯೆಗೆ (Suicide) ಶರಣಾದ ಘಟನೆ ಬೆಳಗಾವಿಯಲ್ಲಿ (Belgavi) ನಡೆದಿದೆ. ಹದಿನೇಳು ವರ್ಷದ ಬಾಲಕಿ 10ನೇ ಕ್ಲಾಸ್ ನಲ್ಲಿ ಓದುತ್ತಿದ್ದಳು. ಇನ್ನೇನು ಪರೀಕ್ಷೆ ಬರೆಯಲು ಸಹ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಳು. ಇನ್ನೇನು ಪರೀಕ್ಷೆಯನ್ನು ಅಟೆಂಡ್ ಮಾಡಬೇಕು ಎನ್ನುವಷ್ಟರಲ್ಲಿ ಬಾಲಕಿ ಅಗ್ನಿ ಪರೀಕ್ಷೆಯನ್ನೇ ಮುಗಿಸಿ ಬಾರದ ಲೋಕಕ್ಕೆ ಹೋಗಿದ್ದಾಳೆ. ಸಿದ್ದಲಿಂಗ ಪೂಜೇರಿ ಎನ್ನುವ ಯುವಕನ ಕಾಟದಿಂದ ಬಾಲಕಿ (ನಿನ್ನೆ(ಮಾರ್ಚ್ 16) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದ್ರೆ, ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಇಂದು (ಮಾರ್ಚ್ 17) ಬೆಳಗ್ಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಘಟಪ್ರಭಾ ಪೊಲೀಸ್ ಠಾಣೆಯ ಹಳ್ಳಿಯೊಂದರ ಸಿದ್ದಲಿಂಗ ಪೂಜೇರಿ ಎನ್ನುವ 21 ವರ್ಷ ವಯಸ್ಸಿನ ಯುವಕನಿಗೆ ಇನ್ನೂ ಮೀಸೆ ಚಿಗುರಿಲ್ಲ. ಆಗಲೇ ಪ್ರೀತಿ ಪ್ರಣಯ ಅಂತ ಬಾಲಕಿಯನ್ನು ಬಲಿಪಡೆದುಕೊಂಡಿದ್ದಾನೆ. ಪ್ರೀತ್ಸೇ ಪ್ರೀತ್ಸೇ ಎಂದು ಬಾಲಕಿ ಹಿಂದೆ ಬಿದ್ದು ಟಾರ್ಟರ್ ಕೊಡುತ್ತಿದ್ದ. ಹಲವಾರು ಬಾರಿ ಯುವಕನೊಗೆ ಎಚ್ಚರಿಕೆ ನೀಡಿದರೂ ಸಹ ಬಿಟ್ಟಿರಲಿಲ್ಲವಂತೆ. ಇದ ಕಾರಣಕ್ಕೆ ಮನನೊಂದು ಬಾಲಕಿ ನಿನ್ನೆ(ಮಾರ್ಚ್ 16) ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪಕ್ಕದ ಮನೆಯವರು ಇದನ್ನ ಗಮನಿಸಿ ತಂದೆ ತಾಯಿಗೆ ಹೇಳಿದ್ದಾರೆ ಇತ್ತ ಕೂಡಲೇ ಆಕೆಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಗಂಭೀರವಾಗಿ ಸುಟ್ಟು ಗಾಯಗಳಾಗಿದ್ದರಿಂದ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ತಡರಾತ್ರಿ ಬಾಲಕಿಯನ್ನ ಪೋಷಕರು ಕರೆತಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು(ಮಾರ್ಚ್ 17) ನಸುಕಿನ ಜಾವ ಬಿಮ್ಸ್ ಆಸ್ಪತ್ರೆಯಲ್ಲಿಯೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
ಬಾಲಕಿ ಶಾಲೆಗೆ ಹೋಗುವಾಗ ಮತ್ತು ಬರುವಾಗ ತನ್ನನ್ನು ಪ್ರೀತಿಸು ಎಂದು ಸಿದ್ದಲಿಂಗ ಪೀಡಿಸುತ್ತಿದ್ದ ಹೀಗಾಗಿ ಮನನೊಂದು ತಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಬಾಲಕಿ ಪೋಷಕರು ಆರೋಪಿಸುತ್ತಿದ್ದಾರೆ. ಅಲ್ಲದೆ ಸದ್ಯ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಕೂಡಲೇ ಆರೋಪಿ ಸಿದ್ದಲಿಂಗನನ್ನ ಬಂಧಿಸಿ ವಿಚಾರಣೆ ನಡೆಸಿ ಬಳಿಕ ಜೈಲಿಗೆ ಕಳುಹಿಸಿದ್ದಾರೆ.
ಒಟ್ಟಿನಲ್ಲಿ ಜಗತ್ತನ್ನೇ ಅರಿಯದ ವಯಸ್ಸಲ್ಲಿ ಪ್ರೀತಿ ಪ್ರೇಮದ ಗುಂಗಿಗೆ ಬಿದ್ದ ಯುವಕ ಓರ್ವ ಬಾಲಕಿಯ ಸಾವಿಗೆ ಕಾರಣವಾಗಿದ್ದಾನೆ. ಆತನನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರೆ ಇತ್ತ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಜೀವನದ ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಬಾಲಕಿ ಜೀವನದ ಅಗ್ನಿಪರೀಕ್ಷೆಯನ್ನು ಮುಗಿಸಿ ಮಸಣ ಸೇರಿದ್ದಾಳೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.