ವಿಧಾನಪರಿಷತ್‌ನ 14 ಕಾಂಗ್ರೆಸ್‌ ಸದಸ್ಯರ ಅಮಾನತು; ಸಭಾಪತಿ ಬಸವರಾಜ ಹೊರಟ್ಟಿ ಆದೇಶ

| Updated By: ganapathi bhat

Updated on: Apr 05, 2022 | 12:34 PM

ಎಸ್.ಆರ್. ಪಾಟೀಲ್, ಪಿ.ಆರ್. ರಮೇಶ್‌, ನಾರಾಯಣಸ್ವಾಮಿ, ಬಿ.ಕೆ. ಹರಿಪ್ರಸಾದ್‌, ಪ್ರತಾಪ್‌ಚಂದ್ರ ಶೆಟ್ಟಿ, ಯು.ಬಿ. ವೆಂಕಟೇಶ್‌, ವೀಣಾ ಅಚ್ಚಯ್ಯ, ಸಿ.ಎಂ. ಇಬ್ರಾಹಿಂ ಸಹಿಯ 14 ಕಾಂಗ್ರೆಸ್ ಸದಸ್ಯರ ಅಮಾನತುಗೊಳಿಸಲಾಗಿದೆ.

ವಿಧಾನಪರಿಷತ್‌ನ 14 ಕಾಂಗ್ರೆಸ್‌ ಸದಸ್ಯರ ಅಮಾನತು; ಸಭಾಪತಿ ಬಸವರಾಜ ಹೊರಟ್ಟಿ ಆದೇಶ
ಪರಿಷತ್‌ ಕಲಾಪ (ಸಾಂದರ್ಭಿಕ ಚಿತ್ರ)
Follow us on

ಬೆಳಗಾವಿ: ವಿಧಾನಪರಿಷತ್‌ನ 14 ಕಾಂಗ್ರೆಸ್‌ ಸದಸ್ಯರ ಅಮಾನತು ಮಾಡಿ ಸಭಾಪತಿ ಬಸವರಾಜ ಹೊರಟ್ಟಿ ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದರು. ಹೀಗಾಗಿ 1 ದಿನದ ಮಟ್ಟಿಗೆ ಕಾಂಗ್ರೆಸ್ ಸದಸ್ಯರ ಅಮಾನತು ಮಾಡಲಾಗಿದೆ. ವಿಪಕ್ಷನಾಯಕ ಎಸ್‌.ಆರ್. ಪಾಟೀಲ್‌ ಸೇರಿ 14 ಸದಸ್ಯರು ಅಮಾನತು ಆಗಿದ್ದಾರೆ. ಪಿ.ಆರ್. ರಮೇಶ್‌, ನಾರಾಯಣಸ್ವಾಮಿ, ಬಿ.ಕೆ. ಹರಿಪ್ರಸಾದ್‌, ಪ್ರತಾಪ್‌ಚಂದ್ರ ಶೆಟ್ಟಿ, ಯು.ಬಿ. ವೆಂಕಟೇಶ್‌, ವೀಣಾ ಅಚ್ಚಯ್ಯ, ಸಿ.ಎಂ. ಇಬ್ರಾಹಿಂ ಸಹಿಯ 14 ಕಾಂಗ್ರೆಸ್ ಸದಸ್ಯರ ಅಮಾನತುಗೊಳಿಸಲಾಗಿದೆ.

ವಿಧಾನಪರಿಷತ್‌ನ 14 ಕಾಂಗ್ರೆಸ್‌ ಸದಸ್ಯರ ಅಮಾನತು ಮಾಡಿದರೂ ಸದನದ ಬಾವಿಗಿಳಿದು ಗಲಾಟೆ ಮಾಡುತ್ತಿರುವುದು ಮುಂದುವರಿದಿದೆ. ಸದನದಿಂದ ಹೊರಹೋಗುವಂತೆ ಸೂಚಿಸಿದರೂ ಗಲಾಟೆ ಕಂಡುಬಂದಿದೆ. ವಿಧಾನಪರಿಷತ್​​ನಲ್ಲಿ ಸದಸ್ಯರ ಗಲಾಟೆ ಗದ್ದಲ ಜೋರಾಗಿದೆ. ಸದನದ ಬಾವಿಯಿಂದ ಕದಲದ ಕಾಂಗ್ರೆಸ್‌ ಸದಸ್ಯರು, ಭೂತದ ಬಾಯಲ್ಲಿ ಭಗವದ್ಗೀತೆ ಬೇಡವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಭಾಪತಿ ಕೊಠಡಿಯಲ್ಲಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್​ ಚರ್ಚೆ ನಡೆಸಿದ್ದಾರೆ. ಏರುಧ್ವನಿಯಲ್ಲಿ ಉಭಯ ನಾಯಕರ ಮಾತಿನ ಚಕಮಕಿ ನಡೆದಿದೆ. ನಮಗೆ ಚರ್ಚೆಗೆ ಬಿಡ್ತೀರೋ ಇಲ್ವೋ ಎಂದು ಎಸ್.ಆರ್. ಪಾಟೀಲ್ ಕೇಳಿದ್ದಾರೆ. ನೀವು ಹಾಗೆ ಮಾಡಿದ್ರೆ ಏನ್ಮಾಡ್ಲಿ ಎಂದು ಹೊರಟ್ಟಿ ಗರಂ ಆಗಿದ್ದಾರೆ. ನಿಮ್ಮ ಸದಸ್ಯರ ವರ್ತನೆ ಸರಿ ಇಲ್ಲ ಎಂದ ಹೊರಟ್ಟಿ ಬಗ್ಗೆ ಎಸ್.ಆರ್. ಪಾಟೀಲ್ ಮತ್ತೆ ಸಿಟ್ಟಾಗಿದ್ದಾರೆ.

ಅಮಾನತುಗೊಳಗಾದವರದ್ದು ಯಾವುದು ರೆಕಾರ್ಡ್​ಗೆ ಹೋಗಬಾರದು ಎಂದು ಸಭಾಪತಿ ತೇಜಸ್ವಿನಿ ಗೌಡ ಹೇಳಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಇಬ್ರಾಹಿಂ ಮೇಲೆ ಎಲ್ಲರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. ಹೌದು ನಿಮ್ಮ ಈ ನಡವಳಿಕೆ ನೋಡಲಿ ಎಂದ ಸಭಾಪತಿ, ಇದಕ್ಕಾಗಿ ಯಾಕೆ ಎಲೆಕ್ಟ್ ಆಗಿ ಬರ್ತೀರಾ ಎಂದು ಆಕ್ರೋಶಗೊಂಡಿದ್ದಾರೆ. ಗಲಾಟೆ ಅತಿರೇಕ ಆಗಿರುವ ಹಿನ್ನಲೆ ಪರಿಷತ್ ಗೇಟ್ ಬಳಿ ಮಾರ್ಷಲ್​ಗಳು ಬಂದಿದ್ದಾರೆ. ಸಭಾಪತಿ ಮುಂದಿನ ಸೂಚನೆಗಾಗಿ ಕಾಯುತ್ತಿದ್ದಾರೆ.

ಸದಸ್ಯರ ಗಲಾಟೆ ಹಿನ್ನೆಲೆ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ. ಕೂಡಲೇ ಕ್ರಮ ಜಾರಿಮಾಡಬೇಕು. ಮಾರ್ಷಲ್ಸ್​​ ಕರೆಸಿ ಸದನದಿಂದ ಹೊರಹಾಕಲಿ. ಈ ತಮಾಷೆಯನ್ನ ಜಾಸ್ತಿಹೊತ್ತು ನೋಡಬಾರದು. ಧಿಕ್ಕಾರ ಧಿಕ್ಕಾರ ಎಂದು ಆಯನೂರು ಮಂಜುನಾಥ ವಿಧಾನಪರಿಷತ್​​ನಲ್ಲಿ ಗರಂ ಆಗಿದ್ದಾರೆ. ಈ ಮಧ್ಯೆ, ವಿಧಾನಪರಿಷತ್​ ಕಲಾಪ ನಾಳೆ ಬೆಳಗ್ಗೆ 11ಕ್ಕೆ ಮುಂದೂಡಲಾಗಿದೆ. ಕಲಾಪವನ್ನು ನಾಳೆಗೆ ಮುಂದೂಡಿ ಸಭಾಪತಿ ಆದೇಶಿಸಿದ್ದಾರೆ.

ಪರಿಷತ್‌ನ 14 ಕಾಂಗ್ರೆಸ್‌ ಸದಸ್ಯರ ಅಮಾನತು ವಿಚಾರವಾಗಿ ಬೆಳಗಾವಿಯಲ್ಲಿ ಪರಿಷತ್​ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಸಭಾಪತಿಗಳು ನಮ್ಮನ್ನು ಅಮಾನತು ಮಾಡಿದ್ದು ಸರಿಯಲ್ಲ. ಸಭಾಪತಿಗಳು ದೊಡ್ಡವರಿದ್ದಾರೆ, ನಾವು ಕ್ಷಮೆ ಕೇಳುತ್ತೇವೆ. ಮಂತ್ರಿ ಕ್ರಿಮಿನಲ್ ಎಂದು ಕೋರ್ಟ್​​ ಆದೇಶ ಮಾಡಿದೆ. ಸರ್ಕಾರ ಕ್ರಮ ಕೈಗೊಳ್ಳುತ್ತದೆ ಅಂದಿದ್ರೆ ಮುಗಿಯುತ್ತಿತ್ತು. ಆದರೆ ಸದಸ್ಯರನ್ನು ಅಮಾನತು ಮಾಡಿರುವುದು ಸರಿಯಲ್ಲ ಎಂದು ಬೆಳಗಾವಿಯಲ್ಲಿ ಪರಿಷತ್​ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಟಿವಿ9ಗೆ ಕಾಂಗ್ರೆಸ್​ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಭ್ರಷ್ಟಮಂತ್ರಿಯ ರಕ್ಷಣೆಗೆ ನಿಂತು ಚರ್ಚೆಗೆ ಅವಕಾಶ ಕೊಡಲಿಲ್ಲ. ನಾವು ಸಂವಿಧಾನದಡಿ ಚರ್ಚೆಗೆ ಅವಕಾಶ ಕೇಳಿದೆವು. ಆದ್ರೆ ಭ್ರಷ್ಟಮಂತ್ರಿ ರಕ್ಷಣೆ ಮಾಡಲು ಕಾಲಾವಕಾಶ ಕೊಡಲಿಲ್ಲ. ನಾವು ಪೀಠಕ್ಕೆ ಅಗೌರವ ತೋರಿಲ್ಲ, ನಮ್ಮ ಹಕ್ಕು ಕೇಳಿದ್ದೇವೆ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.

ಸದನದ ಬಾವಿಗಿಳಿದು ಧರಣಿ ನಡೆಸಿದ್ದ ಹಿನ್ನೆಲೆ ಅಮಾನತುಗೊಂಡ ಸದಸ್ಯರು:
ಒಂದು ದಿನದ ಮಟ್ಟಿಗೆ 14 ಕಾಂಗ್ರೆಸ್ ಸದಸ್ಯರ ಅಮಾನತು ಮಾಡಲಾಗಿದೆ. ವಿಧಾನಪರಿಷತ್​ ವಿಪಕ್ಷನಾಯಕ ಎಸ್‌.ಆರ್.ಪಾಟೀಲ್‌, ಪಿ.ಆರ್.ರಮೇಶ್‌, ನಾರಾಯಣಸ್ವಾಮಿ, ಬಿ.ಕೆ.ಹರಿಪ್ರಸಾದ್‌, ಪ್ರತಾಪ್‌ಚಂದ್ರಶೆಟ್ಟಿ, ಯು.ಬಿ.ವೆಂಕಟೇಶ್‌, ವೀಣಾ ಅಚ್ಚಯ್ಯ, ಸಿ.ಎಂ.ಇಬ್ರಾಹಿಂ, ನಜೀರ್ ಅಹ್ಮದ್, ಆರ್.ಬಿ.ತಿಮ್ಮಾಪುರ, ಬಸವರಾಜ್ ಪಾಟೀಲ್ ಇಟಗಿ, ಅರವಿಂದ್ ಕುಮಾರ್, ಗೋಪಾಲಸ್ವಾಮಿ, ಲಿಂಗಪ್ಪ, ಹರೀಶ್ ಕುಮಾರ್ ಸಸ್ಪೆಂಡ್ ಆಗಿದ್ದಾರೆ. ಸದಸ್ಯರನ್ನ ಅಮಾನತುಗೊಳಿಸಿ ಸಭಾಪತಿ ಹೊರಟ್ಟಿ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಮತಾಂತರಕ್ಕೊಂದು ಚೌಕಟ್ಟು ನಿಗದಿ ಮಾಡುವ ಬಗ್ಗೆ ಚರ್ಚೆ; ಸಿಎಂ ಬಸವರಾಜ ಬೊಮ್ಮಾಯಿ ಸಭೆ

ಇದನ್ನೂ ಓದಿ: ಬೆಳಗಾವಿ: ಬುಧವಾರದಿಂದ ಮೂರು ದಿನಗಳ ಕಾಲ ಕಾಂಗ್ರೆಸ್ ನಿರಂತರ ಪ್ರತಿಭಟನೆ; ಸದನಕ್ಕೆ ಟ್ರ್ಯಾಕ್ಟರ್​ನಲ್ಲಿ ಆಗಮಿಸುವ ಸಾಧ್ಯತೆ

Published On - 4:08 pm, Wed, 15 December 21