ಡ್ರಗ್ಸ್ ಪಿಡುಗಿನಿಂದ ಮಕ್ಕಳನ್ನು ಕಾಪಾಡುವಂತೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

ನ್ಯೂ ಗಾಂಧಿನಗರದಿಂದ ಪೊಲೀಸ್ ಅಯುಕ್ತರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಗಾಂಜಾ ಮತ್ತಿನಲ್ಲಿ ಯುವಕರು ಪರಸ್ಪರ ಹೊಡೆದಾಡುವುದು ಸಾಮಾನ್ಯ ಎನಿಸಿದೆ.

ಡ್ರಗ್ಸ್ ಪಿಡುಗಿನಿಂದ ಮಕ್ಕಳನ್ನು ಕಾಪಾಡುವಂತೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ
ಪೆಟ್ಟು ತಿಂದು ಆಸ್ಪತ್ರೆ ಸೇರಿರುವ ಮೊಹಮದ್ ಕೈಫ್
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 20, 2022 | 3:37 PM

ಬೆಳಗಾವಿ: ಡ್ರಗ್ಸ್ ಮತ್ತು ಗಾಂಜಾ ಪಿಡುಗಿನಿಂದ (Drugs Ganja) ಮಕ್ಕಳನ್ನು ರಕ್ಷಣೆ ಮಾಡುವಂತೆ ಆಗ್ರಹಿಸಿ ಬೆಳಗಾವಿಯ (Belagavi) ನ್ಯೂ ಗಾಂಧಿನಗರ, ಉಜ್ವಲನಗರದ ಮಹಿಳೆಯರ ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ನ್ಯೂ ಗಾಂಧಿನಗರದಿಂದ ಪೊಲೀಸ್ ಅಯುಕ್ತರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಗಾಂಜಾ ಮತ್ತಿನಲ್ಲಿ ಯುವಕರು ಪರಸ್ಪರ ಹೊಡೆದಾಡುವುದು ಸಾಮಾನ್ಯ ಎನಿಸಿದೆ. ಇತ್ತೀಚೆಗೆ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ರೌಡಿ ಮುಸ್ತಾಕ್‌ನನ್ನು ಶೀಘ್ರ ಬಂಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಗಾಂಜಾ ಹಾವಳಿಗೆ ಶಾಲಾ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಮತ್ತಿನಲ್ಲಿ ಯುವತಿಯರು, ಮಹಿಳೆಯರನ್ನು ಚುಡಾಯಿಸುತ್ತಿದ್ದಾರೆ. ರಕ್ಷಣೆಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಂಜಾ ಹಾವಳಿ ತಡೆಯಲು ವಿಫಲರಾದ ಪೊಲೀಸರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಗಾಂಜಾ ನಶೆ ಗಲಾಟೆ ಹೆಚ್ಚಾಗುತ್ತಿದೆ. ಎರಡು ದಿನಗಳ ಹಿಂದೆ ಗಾಂಜಾ ಮತ್ತಿನಲ್ಲಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ಗಾಂಜಾ ಮತ್ತಿನಲ್ಲಿ ಮೊಹಮದ್ ಕೈಫ್ ಎಂಬಾತನ ಮೇಲೆ ದುಷ್ಕರ್ಮಿಗಳು ತಲ್ವಾರ್ ಹಾಗೂ ಚಾಕುವಿನಿಂದ ಹಲ್ಲೆ ಮಾಡಿದ್ದರು. ಈ ಘಟನೆಯ ಹಿಂದಿರುವ ರೌಡಿ ಮುಷ್ತಾಕ್ ಮತ್ತು ಅವನ ಸಹಚರರನ್ನು ಬಂಧಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಗಾಂಜಾ ಮತ್ತಿನಲ್ಲಿದ್​ದ ಆರು ಮಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗ್ಯಾರೇಜ್ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್​ದ 20 ವರ್ಷದ ಮೊಹಮದ್ ಕೈಫ್ ಹಲ್ಲೆಗೆ ಒಳಗಾದವರು. ಗಂಭೀರವಾಗಿ ಗಾಯಗೊಂಡ ಯುವಕನಿಗೆ ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಮಗನ ಮೇಲೆ ವಿನಾಕಾರಣ ಹಲ್ಲೆ ನಡೆದಿದ್ದನ್ನು ಪೋಷಕರು ಖಂಡಿಸಿದ್ದಾರೆ. ಪೊಲೀಸರು ಯಾರ ಒತ್ತಡಕ್ಕೂ ಮಣಿಯದೆ ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಬೇಕು. ಮಗನ ಮೇಲೆ ಹಲ್ಲೆ ಮಾಡಿದವರು ಗಾಂಜಾ ಮತ್ತಿನಲ್ಲಿದ್ದರು ಎಂದು ಆರೋಪ ಮಾಡಿದ್ದಾರೆ.

ಪ್ರತಿಭಟನೆ ನಡೆಸಿದ ಮಹಿಳೆಯರು ರೌಡಿಗಳ ಅಟ್ಟಹಾಸದ ಬಗ್ಗೆ ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಗಾಂಜಾ ಮತ್ತು ಮದ್ಯಪಾನ ಸೇವಿಸುವ ರೌಡಿಗಳು ಸಿಕ್ಕಸಿಕ್ಕವರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಬಡವರಾದ ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಬೇಕು ಎಂದು ರೌಡಿಗಳ ಕಾಲಿಗೆ ಬಿದ್ದಿದ್ದೇವೆ. ಆದರೂ ಅವರು ಅವರ ಚಟ ಬಿಡುತ್ತಿಲ್ಲ. ವಿನಾಕಾರಣ ದ್ವೇಷ ಸಾಧಿಸುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಯುವಕನ ಮೇಲೆ ಹಲ್ಲೆ ನಡೆದ ವಿಷಯ ತಿಳಿದ ಸ್ಥಳೀಯರು ಆಸ್ಪತ್ರೆಗೆ ಧಾವಿಸಿ ರೌಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಡಿಸಿಪಿ ರವೀಂದ್ರ ಗಡಾದಿ ಸಹ ಆಸ್ಪತ್ರೆಗೆ ಭೇಟಿ ನೀಡಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿ, ಸಮಾಧಾನ ಮಾಡಿದರು. ಗಾಂಜಾ ಮತ್ತಿನಲ್ಲಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Crime Updates: ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಬಳಿ 1 ಕೆಜಿ ಗಾಂಜಾ ಪತ್ತೆ; ಆರೋಪಿಗಳ ಬಂಧನ

ಇದನ್ನೂ ಓದಿ: ಹಿಜಾಬ್ ಪರ ಹೋರಾಟಗಾರ್ತಿ ಸೀಮಾಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ; ಸಿಇಎನ್ ಠಾಣೆ, ಬೆಳಗಾವಿ ಪೊಲೀಸ್ ಆಯುಕ್ತರಿಗೆ ದೂರು

Published On - 3:36 pm, Sun, 20 February 22