
ನೆಲಮಂಗಲ, ಜನವರಿ 5: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ (Karnataka Bhovi Development Corporation) ಬಹುಕೋಟಿ ಅವ್ಯವಹಾರ ಪ್ರಕರಣದ ಪ್ರಮುಖ ಸಾಕ್ಷಿ ಕಳ್ಳತನವಾಗಿದೆ. ಭೋವಿ ನಿಗಮದ ಬಹುಕೋಟಿ ಅವ್ಯವಹಾರ ಪ್ರಕರಣದ ತನಿಖೆಯುನ್ನು ಅಪರಾಧ ತನಿಖಾ ಇಲಾಖೆ (CID) ನಡೆಸುತ್ತಿದೆ. ಆದರೆ, ಅವ್ಯವಹಾರಕ್ಕೆ ಸಂಬಂಧಿಸಿದ್ದ ಸಾಕ್ಷ್ಯಗಳು ಇದ್ದ ಮೊಬೈಲ್ ಕಳ್ಳತನವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕ ಸಿಪಿ ಶಿವಸ್ವಾಮಿ ಡಿಸೆಂಬರ್ 27 ರಂದು ಸಂಜೆ 5.30ರ ಸುಮಾರಿಗೆ ಚನ್ನರಾಯಪಟ್ಟಣಕ್ಕೆ ತೆರಳಲು ನೆಲಮಂಗಲದ ಕುಣಿಗಲ್ ಸರ್ಕಲ್ನಲ್ಲಿ ಬಸ್ಸಿಗೆ ಕಾಯುತ್ತಿದ್ದರು. ಈ ವೇಳೆ ಶಿವಸ್ವಾಮಿ ಜೇಬಿನಲ್ಲಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಅಲ್ಟ್ರಾ 5ಜಿ ಮೊಬೈಲ್ ಅನ್ನು ಕದ್ದಿದ್ದಾರೆ. ಕಳ್ಳರು ಮೊಬೈಲ್ ಕಳುವು ಮಾಡಿ, ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಭೋವಿ ನಿಗಮ ಅವ್ಯವಹಾರ: ನಕಲಿ ಕಂಪನಿಗಳ ಖಾತೆಗೆ ಜಮೆ ಆಯ್ತು ಕೋಟಿ ಕೋಟಿ ಹಣ
ಈ ಬಗ್ಗೆ ಸಿಪಿ ಶಿವಸ್ವಾಮಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಲೋಕಾಯುಕ್ತ ಮತ್ತು ಸಿಐಡಿ ತನಿಖೆ ನಡೆಸುತ್ತಿವೆ. ತನಿಖೆಗೆ ಹಾಗೂ ನಿಗಮಕ್ಕೆ ಸಂಬಂಧಿಸಿದ ಪ್ರಮುಖ ದಾಖಲಾತಿಗಳು ಮೊಬೈಲ್ನಲ್ಲಿ ಇವೆ. ಈ ದಾಖಲಾತಿಗಳನ್ನು ಉದ್ದೇಶಪೂರ್ವಕವಾಗಿ ಕಳ್ಳತನ ಮಾಡಿರುವ ಅನುಮಾನವಿದೆ” ಎಂದು ದೂರು ನೀಡಿದ್ದಾರೆ. ಮೊಬೈಲ್ ಕದ್ದವರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
2021-22ನೇ ಸಾಲಿನಲ್ಲಿ ಉದ್ಯಮಿಗಳಿಗೆ ಸಾಲ ನೀಡುವಾಗ ಅಕ್ರಮ ನಡೆದಿದ್ದು, ಲಕ್ಷಾಂತರ ರೂ. ಸಾಲಕೊಡಿಸುವುದಾಗಿ ಸಾರ್ವಜನಿಕ ದಾಖಲೆ ದುರ್ಬಳಕೆ ಜೊತೆಗೆ 10 ಕೋಟಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಆರೋಪ ಕೇಳಿಬಂದಿತ್ತು.
ಪ್ರಕರಣ ಮುಚ್ಚಿಹಾಕಲು ನಿಗಮದ ಅಧೀಕ್ಷಕ ಸುಬ್ಬಪ್ಪ, ‘ಭೋವಿ ಅಭಿವೃದ್ಧಿ ನಿಗಮದ ಲೆಕ್ಕಪತ್ರ ಕಡತ, ನಗದು ಪುಸ್ತಕಗಳು, ಯೋಜನಾ ಕಡತ, ಬ್ಯಾಂಕ್ ಚೆಕ್ ಸೇರಿ 200ಕ್ಕೂ ಹೆಚ್ಚು ಕಡತಗಳನ್ನು ಕಳವು ಮಾಡಿದ್ದ ಕುರಿತು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕಲಬುರಗಿ ಜಿಲ್ಲೆಯಲ್ಲಿ ದೂರು ದಾಖಲಾಗಿದ್ದವು.
ಪ್ರಕರಣ ತನಿಖೆಯನ್ನು ಸಿಐಡಿ ಮತ್ತು ಲೋಕಾಯುಕ್ತ ನಡೆಸುತ್ತಿವೆ. 2018-2023ರವರೆಗೆ ಐದು ವರ್ಷಗಳಲ್ಲಿ ಸುಮಾರು 90 ಕೋಟಿಗೂ ಅಧಿಕ ಮೊತ್ತದ ಅಕ್ರಮ ನಡೆದಿರುವುದು ಸಿಐಡಿ ತನಿಖೆಯಲ್ಲಿ ಬಯಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Sun, 5 January 25