ಜಯಲಲಿತಾರ ಬೆಲೆಬಾಳುವ ವಸ್ತುಗಳು, ಆಸ್ತಿ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಡೇಟ್ ಫಿಕ್ಸ್
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿದ್ದ, ಪ್ರಸ್ತುತ ತನಿಖಾ ಸಂಸ್ಥೆಗಳ ವಶದಲ್ಲಿರುವ ಬೆಲೆ ಬಾಳುವ ವಸ್ತುಗಳು, ಆಸ್ತಿಯನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಕೊನೆಗೂ ದಿನ ಸನ್ನಿಹಿತವಾಗಿದೆ. ಫೆಬ್ರವರಿ 14 ಮತ್ತು 15 ರಂದು ದಿನಾಂಕ ನಿಗದಿಪಡಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಬೆಂಗಳೂರು, ಜನವರಿ 30: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾಗಿದ್ದ ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಫೆಬ್ರವರಿ 14 ಮತ್ತು 15 ರಂದು ಎರಡು ದಿನಗಳನ್ನು ನಿಗದಿಪಡಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಸಿಬಿಐ/ಇಡಿ ಪ್ರಕರಣಗಳ ವಿಚಾರಣೆ ನಡೆಸಲು ಸ್ಥಾಪನೆಯಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಎಚ್ಎ ಬುಧವಾರ ಆದೇಶ ಹೊರಡಿಸಿದ್ದು, ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ದಿನಾಂಕಗಳನ್ನು ನಿಗದಿಪಡಿಸಿದ್ದಾರೆ. ಜಪ್ತಿ ಮಾಡಲಾದ ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿ ಮೇಲಿನ ಹಕ್ಕುಗಳನ್ನು ಕೋರಿ ಜಯಲಲಿತಾ ಅವರ ಕಾನೂನು ವಾರಸುದಾರರಾದ ಜೆ ದೀಪಕ್ ಮತ್ತು ಜೆ ದೀಪಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು. ಹೀಗಾಗಿ ಇದೀಗ ಅವುಗಳ ಹಸ್ತಾಂತರಕ್ಕೆ ಕೋರ್ಟ್ ದಿನ ನಿಗದಿಪಡಿಸಿದೆ.
ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿಯನ್ನು ತಮಿಳುನಾಡಿಗೆ ಹಸ್ತಾಂತರ ಮಾಡುವ ವಿಶೇಷ ನ್ಯಾಯಾಲಯದ ಆದೇಶವನ್ನು 2023 ರ ಜುಲೈ 12 ರಂದು ಹೈಕೋರ್ಟ್ ಎತ್ತಿಹಿಡಿದಿತ್ತು. ಆದರೆ, ಅದರ ವಿರುದ್ಧ ಮತ್ತೆ ಮೇಲ್ಮನವಿ ಸಲ್ಲಿಕೆಯಾಗಿತ್ತು.
ಇದನ್ನೂ ಓದಿ: ಇಡಿ ಕ್ರಮ ನ್ಯಾಯಸಮ್ಮತವಾಗಿರಬೇಕು: ಮುಡಾ ಮಾಜಿ ಆಯುಕ್ತರ ಶೋಧನೆ ರದ್ದುಗೊಳಿಸಿದ ಕೋರ್ಟ್
2024 ರ ಫೆಬ್ರವರಿ 19 ರಂದು, ವಿಶೇಷ ನ್ಯಾಯಾಲಯವು ಬೆಲೆಬಾಳುವ ವಸ್ತುಗಳು, ಚಿನ್ನ ಮತ್ತು ವಜ್ರದ ಆಭರಣಗಳನ್ನು ಹಿಂದಿರುಗಿಸಲು ದಿನಾಂಕವನ್ನು ನಿಗದಿಪಡಿಸಿತ್ತು. ಮಾರ್ಚ್ 6 ಮತ್ತು 7 ರಂದು ಅಧಿಕೃತ ಅಧಿಕಾರಿಗಳನ್ನು ನಿಯೋಜಿಸುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದರೆ, ಅದರ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆಯಾದ ಕಾರಣ ಹಸ್ತಾಂತರ ಮಾಡಲಾಗಿರಲಿಲ್ಲ. ಜಯಲಲಿತಾ ಅವರ ಕಾನೂನು ವಾರಸುದಾರರಾದ ಜೆ ದೀಪಕ್ ಮತ್ತು ಜೆ ದೀಪಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಇದೀಗ ಅವರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದರಿಂದ ವಿಶೇಷ ನ್ಯಾಯಾಲಯ ಮತ್ತೆ ಹಸ್ತಾಂತರಕ್ಕೆ ದಿನಾಂಕ ನಿಗದಿ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ