Kannada News Karnataka Bengaluru stampede: Karnataka Government okayed RCB's Vidhana Soudha event with 19 conditions
ವಿಧಾನಸೌಧ ಮುಂದೆ RCB ವಿಜಯೋತ್ಸವಕ್ಕೆ 19 ಷರತ್ತು ವಿಧಿಸಿದ್ದ ರಾಜ್ಯ ಸರ್ಕಾರ
ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಕಾಲ್ತುಳಿತದಲ್ಲಿ 11 ಆರ್ಸಿಬಿ ಅಭಿಮಾನಿಗಳ ಸಾವು ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದೆ. ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿದ ಬಳಿಕ ಎಚ್ಚೆತ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಕೆಎಸ್ಸಿಎ, ಆರ್ಸಿಬಿ ಹಾಗೂ ಡಿಎನ್ಎ ನೆಟ್ವರ್ಕ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಆದರೆ ಸರ್ಕಾರದ ಕ್ರಮಕ್ಕೆ ಪ್ರತಿರೋಧ ತೋರಿರುವ ಕೆಎಸ್ಸಿಎ ಹೈಕೋರ್ಟ್ ಮೆಟ್ಟಿಲೇರಿದೆ. ಇನ್ನು ವಿಧಾನಸೌಧ ಮುಂದೆ RCB ವಿಜಯೋತ್ಸವಕ್ಕೆ ರಾಜ್ಯ ಸರ್ಕಾರ 19 ಷರತ್ತು ವಿಧಿಸಿತ್ತು ಎನ್ನುವುದು ತಿಳಿದುಬಂದಿದೆ. ಹಾಗಾದ್ರೆ, ಆ 19 ಷರತ್ತುಗಳಾಗುವುವು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಜೂನ್ 06): ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಧಾನಸೌಧ ಮುಂದೆ RCB ವಿಜಯೋತ್ಸವಕ್ಕೆ ಅನುಮತಿ ನೀಡಿರುವುದರ ಬಗ್ಗೆ ನಾನಾ ಗೊಂದಲಗಳು ಏರ್ಪಟ್ಟಿದ್ದು, ಯಾರು ಅನುಮತಿ ಕೇಳಿದ್ಯಾರು? ಹಾಗೂ ಇದಕ್ಕೆ ಪರ್ಮಿಷನ್ ಕೊಟ್ಟಿದ್ಯಾರು ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಆರ್ಸಿಬಿಯ ವಿಧಾನಸೌಧ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೀಡಿದ್ದ ಅನುಮತಿ ಪತ್ರ ಟಿವಿ9ಗೆ ಲಭ್ಯವಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, 19 ಷರತ್ತು ವಿಧಿಸಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಅನುಮತಿ ನೀಡಿದ್ದಾರೆ. ಏನೆಲ್ಲಾ ಷರತ್ತುಗಳನ್ನ ವಿಧಿಸಿತ್ತು ಎನ್ನುವುದು ಈ ಕೆಳಗಿನಂತಿದೆ.
RCB ಕಾರ್ಯಕ್ರಮಕ್ಕೆ 19 ಷರತ್ತು ವಿಧಿಸಿದ್ದ ಸರ್ಕಾರ
ಜನಸಂದಣಿ ಹೆಚ್ಚಾಗಿ ಸೇರುವ ಕಾರಣ ಈ ಕಾರ್ಯಕ್ರಮವನ್ನು ನಡೆಸುವಾಗ ಭವ್ಯ ಮೆಟ್ಟಿಲಿಗಾಗಲಿ (ಗ್ರಾಂಡ್ ಸ್ಟೆಪ್ಸ್), ಪ್ರತಿಮೆಗಾಗಲಿ, ರಸ್ತೆಗಾಗಲಿ, ಉದ್ಯಾನವನಕ್ಕಾಗಲಿ ಯಾವುದೇ ರೀತಿಯ ಧಕ್ಕೆಯಾಗದಂತೆ ಮುಂಜಾಗ್ರತೆ ವಹಿಸತಕ್ಕದು. ತಪ್ಪಿದಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸಿದಲ್ಲಿ ಅದರ ಸಂಪೂರ್ಣ ದುರಸ್ತಿ ಅಥವಾ ವೆಚ್ಚವನ್ನು ಭರಿಸಲು ಸಿದ್ಧರಿರತಕ್ಕದ್ದು.
ಸಂಚಾರ ವ್ಯವಸ್ಥೆಗೆ ಅಡಚಣೆಯಾಗದಂತೆ ಕಾರ್ಯಕ್ರಮವನ್ನು ನಡೆಸತಕ್ಕದು. ಈ ಕುರಿತು ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಕ್ರಮವಹಿಸುವುದು.
ಕಛೇರಿ ಕೆಲಸ ಕಾರ್ಯಗಳಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯಕ್ರಮ ನಡೆಸಬೇಕು.
ಕಾರ್ಯಕ್ರಮ ನಡೆಯುವ ಸ್ಥಳವನ್ನು ಸ್ವಚ್ಛವಾಗಿರಿಸುವುದು.
ಪ್ಲಾಸ್ಟಿಕ್ ಬಾಟಲಿ/ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕ ಬಳಕೆಗಾಗಿ ಪೇಪರ್/ಗಾಜಿನ ಗ್ಲಾಸ್ ಬಳಸುವಂತೆ ಕೋರಿದ.
ಸದರಿ ಕಾರ್ಯಕ್ರಮಕ್ಕೆ ಬರುವ ಆಹ್ವಾನಿತರಿಗೆ ಲಘು ಉಪಾಹಾರ ಅಥವಾ ಭೋಜನ ಕೂಟವನ್ನು ಏರ್ಪಡಿಸಿದಲ್ಲಿ, ಹೊರಗಡೆಯಿಂದ ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ತರತಕ್ಕದ್ದು. ಯಾವುದೇ ಗ್ಯಾಸ್ ಸಿಲಿಂಡರ್ನ್ನು ತರುವಂತಿಲ್ಲ ಹಾಗೂ ವಿಧಾನಸೌಧದ ಪೂರ್ವ ದ್ವಾರದ ಹೊರ ಆವರಣದ ಬಲಭಾಗದಲ್ಲಿ ಮಾತ್ರ ಉಪಹಾರ ವ್ಯವಸ್ಥೆಯನ್ನು ಮಾಡಿಕೊಳ್ಳತಕ್ಕದ್ದು, ಉಪಹಾರ ವ್ಯವಸ್ಥೆಯನ್ನು ಮಾಡುವ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯು ಭದ್ರತಾ ಠೇವಣಿಯಾಗಿ ಮುಂಗಡವಾಗಿ ರೂಪಾಯಿ 10 ಸಾವಿರ ಪಾವತಿಸತಕ್ಕದ್ದು. ಕಾರ್ಯಕ್ರಮ ಮುಗಿದ ನಂತರ ಯಾವುದೇ ದೂರಗಳಿಲ್ಲದಿದ್ದಲ್ಲಿ ಸದರಿ ಮೊತ್ತವನ್ನು ಸಂಬಂಧಪಟ್ಟ ಸಂಸ್ಥೆಗೆ ಹಿಂತಿರುಗಿಸಲಾಗುವುದು.
ಕಾರ್ಯಕ್ರಮ ನಡೆಯುವ 1 ದಿನ ಮುಂಚೆ ಸ್ವಚ್ಛತಾ ವೆಚ್ಚ ರೂ.10,000/- ಗಳನ್ನು ಪಾವತಿಸತಕ್ಕದ್ದು.
ಕಾರಣಾಂತರದಿಂದ ಕಾರ್ಯಕ್ರಮ ರದ್ಮಾದಲ್ಲಿ ಮುಂಗಡವಾಗಿ ಪಾವತಿಸುವ ಸ್ವಚ್ಛತಾ ವೆಚ್ಚವನ್ನು ಹಿಂದಿರುಗಿಸಲಾಗುವುದಿಲ್ಲ.
ಭವ್ಯ ಮೆಟ್ಟಿಲ ಮೇಲೆ ಸೈಜ್ ಅಳವಡಿಸಿದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ನಂ.2, ಕಟ್ಟಡಗಳ ಉಪ ವಿಭಾಗ, ಲೋಕೋಪಯೋಗಿ ಇಲಾಖೆ, ವಿಧಾನಸೌಧ ಇವರ ಧೃಢೀಕರಣ ಪಡೆಯುವುದು ಕಡ್ಡಾಯವಾಗಿರುತ್ತದೆ.
ಕಾರ್ಯಕ್ರಮಕ್ಕೆ ಸಿದ್ಧತೆ ಮಾಡುವಾಗ, ನಡೆಸುವಾಗ ಯಾವುದೇ ರೀತಿಯ ಅವಘಡ ಸಂಭವಿಸಿದರೆ ತಮ್ಮ ಸಂಸ್ಥೆಯೇ ಪೂರ್ಣ ಜವಾಬ್ದಾರಿಯಾಗಿರುತ್ತದೆ.
ವಿದ್ಯುತ್ ಉಪಕರಣಗಳನ್ನು ಆಳವಡಿಸಿದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ನಂ.5, ವಿದ್ಯುತ್ ಉಪ ವಿಭಾಗ, ಲೋಕೋಪಯೋಗಿ ಇಲಾಖೆ, ವಿಧಾನಸೌಧ ಇವರ ಧೃಢೀಕರಣ ಪಡೆಯುವುದು ಕಡ್ಡಾಯವಾಗಿರುತ್ತದೆ.
ಆಹ್ವಾನ ಪತ್ರಿಕೆ ಸಿದ್ಧಪಡಿಸುವಾಗ ಸಿಆಸುಇ (ರಾಜ್ಯ ಶಿಷ್ಟಾಚಾರ) ಇವರ ಧೃಢೀಕರಣ ಪಡೆಯುವುದು ಕಡ್ಡಾಯವಾಗಿರುತ್ತದೆ.
ವಿಧಾಸೌಧ ಕಟ್ಟಡದ ಸುತ್ತಮುತ್ತಲಿನ ಪುದೇಶವನ್ನು ಡೋನ್ ನಿಷೇಧಿತ ಪ್ರದೇಶವೆಂದು ಗುರುತಿಸಿರುವುದರಿಂದ ಡೋನ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಅಗ್ನಿಶಾಮಕ ಇಲಾಖೆಯಿಂದ ಮುಂಜಾಗೃತ ಕ್ರಮವಾಗಿ ಅಗ್ನಿ ಶಾಮಕ ವಾಹನ ಮತ್ತು ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವುದು.
ಮುಂಜಾಗೃತ ಕ್ರಮವಾಗಿ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಶುಶ್ರೂಕ ಸಿಬ್ಬಂದಿಗಳನ್ನು ನೇಮಿಸಿಕೊಳ್ಳವುದು.
ಕಾರ್ಯಕ್ರಮಕ್ಕೆ ಅಗತ್ಯ ಟೆಂಟ್ ಇನ್ನಿತರ ವ್ಯವಸ್ಥೆ ಕಲ್ಪಿಸಿದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು/ಆಯೋಜಕರು ಭದ್ರತಾ ಠೇವಣಿಯಾಗಿ ರೂ.15.00 {ರೂಪಾಯಿಗಳು ಹದಿನೈದು ಲಕ್ಷ ಮಾತ್ರ} ಲಕ್ಷಗಳನ್ನು ಪಾವತಿಸತಕ್ಕದ್ದು.
ಕಾರ್ಯಕ್ರಮಕ್ಕಾಗಿ ಅಳವಡಿಸಲಾಗಿರುವ ಪೀಠೋಪಕರಣಗಳನ್ನು ಕಾರ್ಯಕ್ರಮ ಮುಕ್ತಾಯಗೊಂಡ 3 ಗಂಟೆಯೊಳಗಾಗಿ ತೆರವುಗೊಳಿಸತಕ್ಕದ್ದು, ಇಲ್ಲದಿದ್ದಲ್ಲಿ, ಪಾವತಿಸಲಾಗಿರುವ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ವಿಧಾನಸೌಧದ ಆವರಣದ ಹೊರಗಡೆ ಜನ ಸೇರುವುದರಿಂದ ಪೊಲೀಸ್ ಆಯುಕ್ತರು, ಬೆಂಗಳೂರು ನಗರ, ಆಯುಕ್ತರು, ಬಿ.ಬಿ.ಎಂ.ಪಿ ಮತ್ತು ಇನ್ನಿತರ ಸಂಬಂಧಪಟ್ಟ ಪ್ರಾಧಿಕಾರಿಗಳ ಪೂರ್ವನುಮತಿ ಪಡೆದು ಕಾರ್ಯಕ್ರಮ ನಡೆಸತಕ್ಕದ್ದು.
ಆಹ್ವಾನ ಪತ್ರಿಕೆಯೊಂದಿಗೆ ಈ ಕಾರ್ಯಕ್ರಮಕ್ಕೆ ಆಗಮಿಸುವ ಆಹ್ವಾನಿತರು, ಗಣ್ಯರು ಮತ್ತು ಕಾರ್ಯಕ್ರಮಕ್ಕೆ ಬರುವ ಇತರೆಯವರನ್ನು ಗುರುತಿಸಿ ಬಿಡಿಸುವ ಜವಾಬ್ದಾರಿ ಸಂಬಂಧಪಟ್ಟ ತಮ್ಮದೇ ಆಗಿರುತ್ತದೆ. ಈ ಸಂಬಂಧ ಉಪ ಪೊಲೀಸ್ ಆಯುಕ್ತರು ವಿಧಾನಸೌಧ ಭದ್ರತೆ ಇವರೊಡನೆ ಕೂಡಲೇ ಸಮಾಲೋಚಿಸಿ ಅವಶ್ಯಕ ಕ್ರಮ ತೆಗೆದುಕೊಳ್ಳತಕ್ಕದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ