ಕ್ಯಾನ್ಸರ್​ನಿಂದ ಬಳಲುತ್ತಿದ್ದರೂ ನಮ್ಮ ಮೆಟ್ರೋಗೆ ಧ್ವನಿ ನೀಡಿದ್ದ ನಮ್ಮ ಅಪರ್ಣಾ; ಹೊಸ ಮಾರ್ಗಗಳಲ್ಲೂ ತೇಲಿಬರಲಿದೆ ಅವರ ಸಿರಿ ಕಂಠ!

ಖ್ಯಾತ ನಿರೂಪಕಿ, ಹೆಮ್ಮೆಯ ಕನ್ನಡತಿ ಅಪರ್ಣಾ ವಸ್ತಾರೆ ಅವರು ನಮ್ಮನ್ನು ಅಗಲಿ ಎರಡು ತಿಂಗಳು ಕಳೆದಿವೆ. ಸದ್ಯ ಇದೀಗ ಬಿಎಂಆರ್​ಸಿಎಲ್ ಸಿಹಿ ಸುದ್ದಿ ನೀಡಿದ್ದು ಮುಂದಿನ ಎರಡು ಹೊಸ ಮೆಟ್ರೋ ಮಾರ್ಗಗಳಲ್ಲೂ ಅಪರ್ಣಾ ಅವರ "ದಯವಿಟ್ಟು ಗಮನಿಸಿ" ಎನ್ನುವ ವಾಯ್ಸ್ ‌ಕೇಳಲಿದೆ ಎಂದು ತಿಳಿಸಿದೆ.

ಕ್ಯಾನ್ಸರ್​ನಿಂದ ಬಳಲುತ್ತಿದ್ದರೂ ನಮ್ಮ ಮೆಟ್ರೋಗೆ ಧ್ವನಿ ನೀಡಿದ್ದ ನಮ್ಮ ಅಪರ್ಣಾ; ಹೊಸ ಮಾರ್ಗಗಳಲ್ಲೂ ತೇಲಿಬರಲಿದೆ ಅವರ ಸಿರಿ ಕಂಠ!
ಅಪರ್ಣಾ ವಸ್ತಾರೆ
Follow us
| Updated By: ಆಯೇಷಾ ಬಾನು

Updated on:Sep 11, 2024 | 12:43 PM

ಬೆಂಗಳೂರು, ಸೆ.11: ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾದ ಖ್ಯಾತ ನಿರೂಪಕಿ, ಹೆಮ್ಮೆಯ ಕನ್ನಡತಿ ಅಪರ್ಣಾ ವಸ್ತಾರೆ (Aparna Vastarey) ಅವರು ನಮ್ಮನ್ನು ಅಗಲಿ ಎರಡು ತಿಂಗಳು ಕಳೆದಿವೆ. ಆದರೆ ಅವರ ನೆನಪುಗಳು ಮಾತ್ರ ಅಜರಾಮರ. ಪ್ರಯಾಣಿಸುವಾಗ ಲೋಕದ ಚಿಂತೆಯಲ್ಲಿ ಮುಳುಗುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಮೆಟ್ರೋದಲ್ಲಿ ಕೇಳಿಬರುವ ಅಪರ್ಣಾ ಅವರ ಧ್ವನಿ, ಅವರು ನಮ್ಮೊಂದಿಗೆ ಇದ್ದಾರೆ. ನಮ್ಮ ಪಕ್ಕದಲ್ಲೇ ಕೂತು ನಿಮ್ಮ ನಿಲ್ದಾಣ ಬಂದಿದೆ ಎಂದು ಎಚ್ಚರಿಸುವಂತಿರುತ್ತೆ. ಅಪರ್ಣಾ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರು ಮೆಟ್ರೋಗೆ ವಾಯ್ಸ್ ನೀಡಿ ತಮ್ಮ ಕೆಲಸದ ಮೇಲಿನ ಶ್ರದ್ಧೆಯನ್ನು ತೋರಿಸಿಕೊಟ್ಟಿದ್ದಾರೆ. ಇದೀಗ ಬಿಎಂಆರ್​ಸಿಎಲ್ ಸಿಹಿ ಸುದ್ದಿ ನೀಡಿದ್ದು ಮುಂದಿನ ಎರಡು ಹೊಸ ಮೆಟ್ರೋ ಮಾರ್ಗಗಳಲ್ಲೂ ಅಪರ್ಣಾ ಅವರ “ಪ್ರಯಾಣಿಕರೇ ಗಮನಿಸಿ” ಎನ್ನುವ ವಾಯ್ಸ್ ‌ಕೇಳಲಿದೆ ಎಂದು ತಿಳಿಸಿದೆ.

ಅಪರ್ಣಾ ಅವರು ಜುಲೈ-11ರಂದು ಕ್ಯಾನ್ಸರ್ ನಿಂದ ವಿಧಿವಶರಾದರು. ಆದರೆ ಏಪ್ರಿಲ್- ಮೇನಲ್ಲೇ ಮೆಟ್ರೋಗೆ ವಾಯ್ಸ್ ಓವರ್ ನೀಡಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತಿದ್ದರೂ ಅಪ್ಪಟ ಕನ್ನಡತಿ ಅಪರ್ಣಾ ಅವರು ನಮ್ಮ ಮೆಟ್ರೋಗೆ ಧ್ವನಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲು ಸಿದ್ಧವಾಗುತ್ತಿರುವ ಎರಡು ಹೊಸ ಮೆಟ್ರೋ ಮಾರ್ಗಗಳಲ್ಲೂ ಅಪರ್ಣಾ ಅವರ “ದಯವಿಟ್ಟು ಗಮನಿಸಿ” ಎನ್ನುವ ವಾಯ್ಸ್ ‌ಕೇಳಲಿದೆ. ಮೆಟ್ರೋ ಪ್ರಯಾಣಿಕರು ಈಗಿರುವ ಗ್ರೀನ್ ಲೈನ್ ಮತ್ತು ಪರ್ಪಲ್ ಲೈನ್ ನಲ್ಲಿ ಅಪರ್ಣಾ ಅವರ ಧ್ವನಿ ಮುಂದುವರಿಸಬೇಕು ಮತ್ತು ಹೊಸ ಮಾರ್ಗಗಳಿಗೂ ಅವರ ವಾಯ್ಸ್ ಅನ್ನೇ ಹಾಕಬೇಕು ಎಂದು ಒತ್ತಾಯ ಮಾಡಿದ್ದರು.

ಇದನ್ನೂ ಓದಿ: ‘ಪದವಾಗಿ ಸತ್ತರೂ ಪದ್ಯವಾಗಿ ಬದುಕಬಹುದು’: ಅಪರ್ಣಾ ಪತಿ ನಾಗರಾಜ್ ವಸ್ತಾರೆ ಕವನ

ಆದರೆ, ಮೆಟ್ರೋ ‌ಅಧಿಕಾರಿಗಳು ಹಳೆಯ ಮಾರ್ಗದಲ್ಲಿ ಅಪರ್ಣಾ ಧ್ವನಿ ಮುಂದುವರಿಸುತ್ತೀವಿ. ಹೊಸ ಮಾರ್ಗಕ್ಕೆ ಕಷ್ಟ. ಅವರ ಧ್ವನಿ ನಮ್ಮ ಬಳಿ ಇಲ್ಲ ಎಂದು ಹೇಳಿದ್ದರು. ಆದರೆ, ಏಪ್ರಿಲ್- ಮೇ ನಲ್ಲೇ ಮೆಟ್ರೋ ಟೆಕ್ನಿಕಲ್ ಟೀಮ್ ಅಪರ್ಣಾ ಅವರ ಧ್ವನಿಯನ್ನು ರೆಕಾರ್ಡಿಂಗ್ ಮಾಡಿಕೊಂಡಿದ್ದು, ಆ ರೆಕಾರ್ಡಿಂಗ್ ಅನ್ನೇ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆ ಎರಡು ಮಾರ್ಗಗಳಿಗಾಗಿ ಮಾಡಿರುವ ವಾಯ್ಸ್ ರೆಕಾರ್ಡಿಂಗ್ ಗಳನ್ನು ಟೆಸ್ಟ್ ಮಾಡಲಾಗ್ತಿದೆ. ಗ್ರೀನ್ ಲೈನ್ ನಲ್ಲಿ ಬರುವ ನಾಗಸಂದ್ರ ಟು ಮಾದಾವಾರದ ಮೂರು ಸ್ಟೇಷನ್ ಗಳು, ಯೆಲ್ಲೋ ಲೈನ್ ನ ಆರ್ವಿ ರೋಡ್ ಟು ಬೊಮ್ಮಸಂದ್ರದ ಒಟ್ಟು ಹದಿನಾರು ಮೆಟ್ರೋ ಸ್ಟೇಷನ್ ಗಳಲ್ಲೂ ಅಪರ್ಣಾ ಅವರ ಧ್ವನಿಯನ್ನು ಹಾಕಲು ಬಿಎಂಆರ್​ಸಿಎಲ್ ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ.

ಈಗಾಗಲೇ ಗ್ರೀನ್ ಲೈನ್ ನ ನಾಗಸಂದ್ರ ಟು ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ( 29 ಮೆಟ್ರೋ ಸ್ಟೇಷನ್ ಗಳು) ಪರ್ಪಲ್ ಲೈನ್ ‌ನ ವೈಟ್ ಫೀಲ್ಡ್ ಟು ಚೆಲ್ಲಘಟ್ಟ (37 ಮೆಟ್ರೋ ಸ್ಟೇಷನ್ ಗಳು)ಸೇರಿ ಗ್ರೀನ್ ಮತ್ತು ಪರ್ಪಲ್ ಲೈನಿನ 66 ಮೆಟ್ರೋ ಸ್ಟೇಷನ್ ರೈಲಿನಲ್ಲೂ ಅಪರ್ಣಾ ಅವರ‌ ಧ್ವನಿ ಕೇಳಿಸುತ್ತಿದೆ. ಸತತ ಹದಿಮೂರು ವರ್ಷಗಳಿಂದ ನಮ್ಮ ಮೆಟ್ರೋಗೆ ಧ್ವನಿಯಾಗಿರುವ ಅಪರ್ಣಾ ಅವರು ದೇವರಲ್ಲಿ ಲೀನರಾದರೂ ಧ್ವನಿಯಾಗಿ ನಮ್ಮ ಮನಸ್ಸಿನಲ್ಲಿದ್ದಾರೆ. ಇದರ ಹೊರತಾಗಿಯೂ, AI ತಂತ್ರಜ್ಞಾನ ಬಳಸಿ ಅಪರ್ಣಾ ಅವರ ವಾಯ್ಸ್​​ ಅನ್ನು ಬಹುತೇಕ ಯಥಾವತ್ತಾಗಿ ಉಳಿಸಿಕೊಳ್ಳಬಹುದು ಎಂದು ಕನ್ನಡಿಗರು ಆಶಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:22 pm, Wed, 11 September 24