ಯಾರಾದ್ರೂ ರೇಪ್ ಮಾಡಿ ಬಿಸಾಕಿದ್ರಾ: ರಜೆ ಹಾಕಿದ ಮಹಿಳಾ ಸಿಬ್ಬಂದಿಗೆ ಬಿಬಿಎಂಪಿ ಅಧಿಕಾರಿ ಲೈಂಗಿಕ ನಿಂದನೆ ಆರೋಪ
ಬಿಬಿಎಂಪಿ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ರಜೆ ಮಾಡಿದ್ದಕ್ಕೆ ಅಧಿಕಾರಿಯೊಬ್ಬರು ಅವರನ್ನು ಲೈಂಗಿಕವಾಗಿ ನಿಂದಿಸಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಹಿಳಾ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಬಿಎಂಪಿ ವಿಶೇಷ ಆಯುಕ್ತರಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಪ್ರಕರಣದ ಹಿನ್ನೆಲೆ, ವಿಡಿಯೋ ಸಹಿತ ವಿವರ ಇಲ್ಲಿದೆ.
ಬೆಂಗಳೂರು, ಮಾರ್ಚ್ 1: ಬಿಬಿಎಂಪಿ ಕಚೇರಿಯಲ್ಲಿ ಉನ್ನತ ಅಧಿಕಾರಿಯೊಬ್ಬರ ವಿರುದ್ಧ ಮಹಿಳಾ ಸಿಬ್ಬಂದಿಗೆ ಲೈಂಗಿಕ ನಿಂದನೆ ಮಾಡಿದ ಆರೋಪ ಕೇಳಿಬಂದಿದೆ. ರಜೆ ಹಾಕಿದ ಮಹಿಳಾ ಸಿಬ್ಬಂದಿಗೆ, ‘‘ಎಚ್ಐವಿ ಬಂದಿದೆಯಾ? ನಿನ್ನನ್ನು ಯಾರಾದರೂ ರೇಪ್ ಮಾಡಿ ಬಿಸಾಕಿದ್ರಾ? ಪಾಸಿಟಿವ್ ಇದ್ಯಾ ಎಂದು ಟೆಸ್ಟ್ ಮಾಡಿಸ್ಕೊಂಡ್ಯಾ’’ ಎಂದು ಬಿಬಿಎಂಪಿ ಸಹಾಯಕ ಅಯುಕ್ತ ಶ್ರೀನಿವಾಸ ಮೂರ್ತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಚಾರವಾಗಿ ಸಂತ್ರಸ್ತೆಯು ಈಗಾಗಲೇ ಬಿಬಿಎಂಪಿ ವಿಶೇಷ ಆಯುಕ್ತರಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ.
ಮಹಿಳಾ ಸಿಬ್ಬಂದಿ ಐದು ದಿನ ರಜೆ ಹಾಕಿದ್ದರು. ಇದಕ್ಕೆ ಸಿಟ್ಟಾಗಿದ್ದ ಅಧಿಕಾರಿ, ‘‘ದಂಧೆ ನಡೆಸುತ್ತಾ ಇದ್ದೀಯಾ? ಅದಕ್ಕೆ ರಜೆ ಹಾಕಿದ್ದೀಯಾ’’ ಎಂದು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ರೀತಿಯ ವರ್ತನೆ ಬಗ್ಗೆ ಶ್ರೀನಿವಾಸ ಮೂರ್ತಿಗೆ ನೌಕರರ ಸಂಘಟನೆ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ಆದರೂ ಅವರು ಚಾಳಿ ಮುಂದುವರಿಸಿದ್ದರು. ಇದೀಗ ಅವರ ಕಿರುಕುಳದಿಂದ ಬೇಸತ್ತು ಸಿಬ್ಬಂದಿ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಬಿಎಂಪಿ ಕೇಂದ್ರ ಕಚೇರಿಯ ಸಿಬ್ಬಂದಿಯಿಂದಲೇ ಆರೋಪ ಕೇಳಿಬಂದಿದೆ.
ಈ ಮಧ್ಯೆ, ಶ್ರೀನಿವಾಸ ಮೂರ್ತಿ ಬಗ್ಗೆ 2-3 ಬಾರಿ ದೂರು ಕೊಟ್ಟರೂ ಹಿರಿಯ ಅಧಿಕಾರಿಗಳು ಕ್ಯಾರೇ ಎಂದಿರಲಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ.
ಎಚ್ಚರಿಕೆ ನೀಡಿದ್ದರೂ ಕ್ಯಾರೇ ಎನ್ನದ ಅಧಿಕಾರಿ
ಈ ಹಿಂದೆ ಪಾಲಿಕೆ ನೌಕರರ ಸಂಘದ ಮೂಲಕ ರಾಜಿ ಸಂಧಾನ ಕೂಡ ಅಗಿತ್ತು. ರಾಜಿ ಸಂಧಾನದ ವೇಳೆ ಶ್ರೀನಿವಾಸ ಮೂರ್ತಿಗೆ ಎಚ್ಚರಿಕೆ ನೀಡಲಾಗಿತ್ತು. ಅದರೂ ಕೂಡ ಅಸ್ತಿ ವಿಭಾಗದ ಸಹಾಯಕ ಅಯುಕ್ತರು ಮತ್ತೆ ಅದೇ ಚಾಳಿ ಮುಂದುವರಿಸಿದಿದ್ದಾರೆ.
ಸಿಬ್ಬಂದಿ ನೀಡಿದ ದೂರಿನಲ್ಲೇನಿದೆ?
ಶ್ರೀನಿವಾಸ ಮೂರ್ತಿಯವರು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಾರೆ. ಕೊಠಡಿಗೆ ಕರೆಸಿ ಲೈಂಗಿಕವಾಗಿ ನಿಂದನೆ ಮಾಡುತ್ತಾರೆ. ಸಿಬ್ಬಂದಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಚಾಡಿ ಹೇಳುವುದು ಮಾಡುತ್ತಾರೆ. ಈ ಬಗ್ಗೆ ಅಯುಕ್ತರ ಗಮನಕ್ಕೆ ತಂದರೆ ನಿಮ್ಮ ಸೇವೆ ಪುಸ್ತಕದಲ್ಲಿ ನೆಗೆಟಿವ್ ರಿಮಾರ್ಕ್ ಬರೆಯುವುದಾಗಿ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದರು. ಪ್ರತಿನಿತ್ಯ ಮಹಿಳಾ ಸಿಬ್ಬಂದಿ ಯನ್ನು 10 ಕ್ಕೂ ಹೆಚ್ಚು ಬಾರಿ ಕೊಠಡಿಗೆ ಕರೆಸಿ ಲೈಂಗಿಕವಾಗಿ ನಿಂದನೆ ಮಾಡುತ್ತಿದ್ದರು. ಅನವಶ್ಯಕವಾಗಿ, ಅಸಂಬದ್ಧ ವಿಷಯಗಳನ್ನು ಮಾತನಾಡುವುದು, ಕರ್ತವ್ಯಕ್ಕೆ ಅಡಿ ಪಡಿಸುವುದು, ಏರು ಧ್ವನಿಯಲ್ಲಿ ಬಾಯಿಗೆ ಬಂದಂತೆ ಮಾತನಾಡುವುದನ್ನು ಮಾಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ವಾಟ್ಸಾಪ್ ಮೂಲಕ ನೋಟಿಸ್ ನೀಡುವಂತಿಲ್ಲ: ಆಡುಗೋಡಿ ಪೊಲೀಸರು ನೀಡಿದ್ದ ನೋಟಿಸ್ ರದ್ಧು ಮಾಡಿದ ಹೈಕೋರ್ಟ್
ಸಾರ್ವಜನಿಕರ ಮುಂದೆ ಸಿಬ್ಬಂದಿಯನ್ನು ಹೀಯಾಳಿಸುತ್ತಾರೆ. ಇದರಿಂದ ಈ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮಾನಸಿಕವಾಗಿ, ದೈಹಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.