“ಕೆಲಸ ಹೋದ ಮೇಲೆ ಸತ್ಯ ಗೊತ್ತಾಯ್ತು!”: ಬೆಂಗಳೂರು ಯುವತಿಯ ಭಾವುಕ ವಿಡಿಯೋ ವೈರಲ್; ಕೆಲಸದ ಒತ್ತಡದ ಬಗ್ಗೆ ಬಿಚ್ಚಿಟ್ಟ ಸತ್ಯ
ಬೆಂಗಳೂರಿನ ನಿಧಿ ಕೆಲಸ ಕಳೆದುಕೊಂಡ ನಂತರ, ಉದ್ಯೋಗವೇ ಜೀವನವಲ್ಲ ಎಂಬ ಸತ್ಯ ಅರಿವಾಯಿತು. ಕೆಲಸದ ಒತ್ತಡದಿಂದ ವೈಯಕ್ತಿಕ ಬದುಕನ್ನು ಕಡೆಗಣಿಸಿದ್ದ ನಿಧಿ, ತನ್ನ ಅನುಭವಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದ್ದು, ಲಕ್ಷಾಂತರ ಉದ್ಯೋಗಿಗಳಿಗೆ ತಮ್ಮ ಜೀವನದಲ್ಲಿ ಕೆಲಸ-ಸಮತೋಲನ ಮುಖ್ಯ ಎಂದು ಮನವರಿಕೆ ಮಾಡಿಕೊಟ್ಟಿದೆ. ಆರೋಗ್ಯ ಮತ್ತು ಸಂತೋಷಕ್ಕಿಂತ ಡೆಡ್ಲೈನ್ಗಳು ಮುಖ್ಯವಲ್ಲ.

ಬೆಂಗಳೂರು, ಏ.20: ಅದೆಷ್ಟೋ ಜನ ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಸ್ವಂತ ಅಥವಾ ಊರಿಗೆ ಹೋಗಿ ಬದುಕುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಇತ್ತೀಚೆಗೆ ಭಾರೀ ವೈರಲ್ ಆಗುತ್ತಿದೆ. ಇದೀಗ ಇಲ್ಲೊಬ್ಬ ಯುವತಿ ಕೂಡ ಅಂತಹದೇ ಹಾದಿಯನ್ನು ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ. ಕೆಲಸದ ಒತ್ತಡದಿಂದಾಗಿ ತನ್ನ ವೈಯಕ್ತಿಕ ಜೀವನವನ್ನೇ ಬಲಿ ಕೊಟ್ಟಿದ್ದ ಬೆಂಗಳೂರಿನ ನಿಧಿ ಎಂಬ ಯುವತಿ, ಕೆಲಸ ಕಳೆದುಕೊಂಡ ನಂತರ ತನಗಾದ ಅನುಭವಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಉದ್ಯೋಗವೇ ಜೀವನವಲ್ಲ ಎಂಬ ಅವರ ಮಾತುಗಳು ಈಗ ಲಕ್ಷಾಂತರ ಉದ್ಯೋಗಿಗಳ ಮನ ಗೆದ್ದಿವೆ.
“ನಾನು ಕೆಲಸದಿಂದ ವಜಾಗೊಂಡಿದ್ದೇನೆ. ಕೆಲಸ ಹೋದ ನಂತರ ನನಗೆ ಅರಿವಾದ ವಿಷಯಗಳು ನಿಜಕ್ಕೂ ಭಯಾನಕವಾಗಿವೆ” ಎಂದು ನಿಧಿ ಹೇಳಿದ್ದಾರೆ. “ನಾನು ನನ್ನ ಉದ್ಯೋಗವನ್ನೇ ನನ್ನ ಇಡೀ ಜೀವನ ಎಂದು ಭಾವಿಸಿದ್ದೆ. ನನ್ನ ಇಡೀ ಪ್ರಪಂಚ ಕೇವಲ ಮೀಟಿಂಗ್ಗಳು, ಡೆಡ್ಲೈನ್ಗಳು ಮತ್ತು ಒತ್ತಡದ ಸುತ್ತಲೇ ಸುತ್ತುತ್ತಿತ್ತು.ಕೆಲಸದ ಅಮಲಿನಲ್ಲಿ ನಾನು ನನ್ನ ಬಗ್ಗೆ ಕಾಳಜಿ ವಹಿಸುವುದನ್ನೇ ನಿಲ್ಲಿಸಿದೆ. ಗೆಳೆಯರನ್ನು ಭೇಟಿ ಮಾಡುವುದು, ವ್ಯಾಯಾಮ ಮಾಡುವುದು, ಪೌಷ್ಟಿಕ ಆಹಾರ ಸೇವಿಸುವುದು ಮತ್ತು ಹೊರಗಡೆ ಓಡಾಡುವುದನ್ನೆಲ್ಲಾ ಮರೆತುಬಿಟ್ಟಿದ್ದೆ.ಬೆಳಿಗ್ಗೆ ಆಫೀಸ್ಗೆ ಹೋಗುವುದು, ರಾತ್ರಿ ಮನೆಗೆ ಬರುವುದು ಮತ್ತು ಪುನಃ ಕೆಲಸ ಮಾಡುವುದು ಇದೇ ನನ್ನ ದಿನಚರಿಯಾಗಿತ್ತು. ನಮ್ಮಲ್ಲಿ ಅನೇಕರು ಇದೇ ರೀತಿ ರೋಬೋಟ್ಗಳಂತೆ ಬದುಕುತ್ತಿದ್ದಾರೆ. ಆದರೆ ನಿಜಕ್ಕೂ ನಮಗೆ ಇಂತಹ ಬದುಕು ಬೇಕಾ?” ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಐಷಾರಾಮಿ ‘ಪೋರ್ಷೆ’ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಮಿಶ್ರಣ! ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಿದ ಉದ್ಯಮಿಯ ವೀಡಿಯೋ ವೈರಲ್
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ನಾವೆಲ್ಲರೂ ಆಟೋಪೈಲಟ್ ಮೋಡ್ನಲ್ಲಿ ಬದುಕುತ್ತಿದ್ದೇವೆ, ನಿಮ್ಮ ಮಾತುಗಳು ನೂರಕ್ಕೆ ನೂರು ನಿಜ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಆರೋಗ್ಯ ಮತ್ತು ಸಂತೋಷಕ್ಕಿಂತ ಡೆಡ್ಲೈನ್ಗಳು ಮುಖ್ಯವಲ್ಲ” ಎಂದು ಬರೆದಿದ್ದಾರೆ. “ಕೆಲಸ ಎಂಬುದು ಜೀವನದ ಒಂದು ಭಾಗ ಮಾತ್ರ, ಅದೇ ಪೂರ್ಣ ಜೀವನವಲ್ಲ ಎಂದು ಅರಿವಾಗಲು ನಮಗೆ ಇಂತಹ ಹೊಡೆತಗಳೇ ಬೇಕು” ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




