
ಬೆಂಗಳೂರು, ಜೂನ್ 23: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ (Chinnaswamy stadium Stampede) 11 ಜನರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನ (High Court) ವಿಭಾಗೀಯ ಪೀಠ ಸೋಮವಾರ (ಜೂ.23) ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನಡೆಸಿತು. ಈ ಪ್ರಕರಣದಲ್ಲಿ ಅಮೈಕಸ್ ಕ್ಯೂರಿಯಾಗಿ (ನ್ಯಾಯಾಲಯಕ್ಕೆ ನೆರವಾಗುವ ವಕೀಲ) ಹಿರಿಯ ವಕೀಲೆ ಎಸ್.ಸುಶೀಲಾ ಅವರನ್ನು ಪೀಠ ನೇಮಕ ಮಾಡಿತು. ಪಿಐಎಲ್ ಹಾಗೂ ಪ್ರಕರಣದ ಇತರೆ ದಾಖಲೆಗಳನ್ನು ಎಸ್.ಸುಶೀಲಾರಿಗೆ ನೀಡಲು ಪೀಠ ಸೂಚನೆ ನೀಡಿತು.
ವಿಚಾರಣೆ ವೇಳೆ ಕೆಎಸ್ಸಿಎ, ಆರ್ಸಿಬಿ, ಡಿಎನ್ಎ ಪರ ವಕೀಲರು ಹಾಜರಾಗಿದ್ದರು. ರಾಜ್ಯ ಸರ್ಕಾರ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಕೈಗೊಂಡ ಕ್ರಮದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಕೆ ಮಾಡಿತು. ಇನ್ನು, ವರದಿಯನ್ನು ಮುಚ್ಚಿದ ಲಕೋಟೆಯಲ್ಲಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ವಿಚಾರಣೆಯನ್ನು ಅಮೈಕಸ್ ಕ್ಯೂರಿ ನೇಮಕದ ಬಳಿಕ ಈ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ನ್ಯಾ.ವಿ.ಕಾಮೇಶ್ವರ ರಾವ್, ನ್ಯಾ.ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಈ ಪ್ರಕರಣದಲ್ಲಿ ಅಮೈಕಸ್ ಕ್ಯೂರಿಯಾಗಿ ಹಿರಿಯ ವಕೀಲೆ ಎಸ್.ಸುಶೀಲಾ ಅವರನ್ನು ಪೀಠ ನೇಮಕ ಮಾಡಿತು.
ಪರಿಹಾರದ ಹಣ ಹೆಚ್ಚಿಸುವಂತೆ ಸಂತ್ರಸ್ತರೂ ಕೂಡ ಅರ್ಜಿ ಸಲ್ಲಿಕೆ ಮಾಡಿದರು. ಸರ್ಕಾರ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪರಿಹಾರ ನೀಡುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಿಂದ ಮೃತಪಟ್ಟವರಿಗೆ 25 ಲಕ್ಷ ರೂ. ನೀಡಿದೆ. ಆದರೆ, ಸಿಡಿಲು ಬಡಿದು ಮೃತಪಟ್ಟವರಿಗೆ ಇಷ್ಟು ಪರಿಹಾರ ನೀಡಿಲ್ಲ. ತುಮಕೂರಿನಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟವರಿಗೂ ನೀಡಿಲ್ಲ. ಇತರೆ ಘಟನೆಗಳಲ್ಲೂ ಏಕರೂಪದ ಪರಿಹಾರ ನೀಡಲು ಅರ್ಜಿ ಮೂಲಕ ಮನವಿ ಮಾಡಲಾಗಿದೆ. ಈ ಹಂತದಲ್ಲಿ ಯಾವುದೇ ಅಭಿಪ್ರಾಯ ಹೇಳುವುದಿಲ್ಲ ಎಂದು ಹೈಕೋರ್ಟ್ ಹೇಳಿತು. ಈ ಎಲ್ಲ ಅರ್ಜಿಗಳ ವಿಚಾರಣೆಯನ್ನು ಜುಲೈ 1 ಕ್ಕೆ ಮುಂದೂಡಿದೆ.
ಅಮಿಕಸ್ ಕ್ಯೂರಿ ಎಂದರೆ “ನ್ಯಾಯಾಲಯದ ಸ್ನೇಹಿತ” ಎಂದರ್ಥ. ಅಮಿಕಸ್ ಕ್ಯೂರಿ ಸಾಮಾನ್ಯವಾಗಿ ಕಾನೂನು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರದ ವ್ಯಕ್ತಿ ಅಥವಾ ಗುಂಪಾಗಿರುತ್ತದೆ. ಆದರೆ ನ್ಯಾಯಾಲಯಕ್ಕೆ ವಿಷಯದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಅಥವಾ ದೃಷ್ಟಿಕೋನವನ್ನು ಒದಗಿಸುವ ಮೂಲಕ ಸಹಾಯ ಮಾಡಲು ಅನುಮತಿ ಕೇಳುತ್ತದೆ. ಉದಾಹರಣೆಗೆ, ಇದು ಕಾನೂನಿನ ಬಗ್ಗೆ ಪರಿಣತಿಯನ್ನು ಹೊಂದಿರುವ ವ್ಯಕ್ತಿಯಾಗಿರಬಹುದು, ಅಥವಾ ಸಾರ್ವಜನಿಕ ಹಿತಾಸಕ್ತಿಯ ವಿಷಯದ ಬಗ್ಗೆ ತಿಳಿದಿರುವ ಗುಂಪಾಗಿರಬಹುದು.
ಅಮಿಕಸ್ ಕ್ಯೂರಿಯು ಸಾಮಾನ್ಯವಾಗಿ “ಅಮಿಕಸ್ ಬ್ರೀಫ್” ಎಂಬ ಲಿಖಿತ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತದೆ. ಇದರಲ್ಲಿ ಅವರು ತಮ್ಮ ದೃಷ್ಟಿಕೋನಗಳನ್ನು ಮತ್ತು ವಾದಗಳನ್ನು ಮಂಡಿಸುತ್ತಾರೆ. ಅಮಿಕಸ್ ಕ್ಯೂರಿಯು ಸಲ್ಲಿಸುವ ಬ್ರೀಫ್ ಅನ್ನು ಸ್ವೀಕರಿಸಬೇಕೇ ಅಥವಾ ಬೇಡವೇ ಎಂಬುದು ನ್ಯಾಯಾಲಯದ ವಿವೇಚನೆಯನ್ನು ಅವಲಂಬಿಸಿರುತ್ತದೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಪ್ರಕರಣ: ಆರ್ಸಿಬಿಗೆ ಹೈಕೋರ್ಟ್ ನೋಟಿಸ್
ಅಮಿಕಸ್ ಕ್ಯೂರಿಯ ಮುಖ್ಯ ಉದ್ದೇಶವೆಂದರೆ ನ್ಯಾಯಾಲಯವು ಮಾಹಿತಿಯುತ ಮತ್ತು ನ್ಯಾಯಯುತ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುವುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಮಿಕಸ್ ಕ್ಯೂರಿಯು ಪ್ರಕರಣದಲ್ಲಿ ಭಾಗಿಯಾಗಿರದಿದ್ದರೂ, ನ್ಯಾಯಾಲಯಕ್ಕೆ ಅಮೂಲ್ಯವಾದ ಒಳನೋಟಗಳನ್ನು ಮತ್ತು ಮಾಹಿತಿಯನ್ನು ಒದಗಿಸುವ ವ್ಯಕ್ತಿ ಅಥವಾ ಗುಂಪಾಗಿದೆ.