ವರಮಹಾಲಕ್ಷ್ಮೀ ಹಬ್ಬಕ್ಕೆ ಕ್ಷಣಗಣನೆ: ಬೆಂಗಳೂರಿನಲ್ಲಿ ಹೂ, ಹಣ್ಣು, ತರಕಾರಿ ಬೆಲೆ ಮತ್ತೆ ಏರಿಕೆ

ವರಮಹಾಲಕ್ಷ್ಮೀ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರು ಜನ ಹಬ್ಬವನ್ನು ವೈಭವದಿಂದ ಆಚರಿಸಲು ಸಿದ್ಧತೆ ಮಾಡುತ್ತಿದ್ದಾರೆ. ಹೀಗಾಗಿ ಹಬ್ಬಕ್ಕೆ ಬೇಕಾದ ಹೂ, ಹಣ್ಣು ಖರೀದಿಸಲು ಸಿಲಿಕಾನ್ ಸಿಟಿ ಮಂದಿ ಮುಗಿಬೀಳುತ್ತಿದ್ದಾರೆ. ಈ ಸಂದರ್ಭದಲ್ಲೇ ತರಕಾರಿ, ಹೂವು ಹಾಗೂ ಹಣ್ಣಿನ ದರದಲ್ಲಿ ಮತ್ತೆ ಏರಿಕೆಯಾಗಿದೆ. ವಿವರ ಇಲ್ಲಿದೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ಕ್ಷಣಗಣನೆ: ಬೆಂಗಳೂರಿನಲ್ಲಿ ಹೂ, ಹಣ್ಣು, ತರಕಾರಿ ಬೆಲೆ ಮತ್ತೆ ಏರಿಕೆ
ಹೂ, ಹಣ್ಣು, ತರಕಾರಿ ಬೆಲೆ ಮತ್ತೆ ಏರಿಕೆ
Edited By:

Updated on: Aug 15, 2024 | 8:01 AM

ಬೆಂಗಳೂರು, ಆಗಸ್ಟ್ 15: ವರಮಹಾಲಕ್ಷ್ಮೀ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ವರಮಹಾಲಕ್ಷ್ಮೀಯನ್ನು ಅದ್ದೂರಿಯಿಂದ ಬರಮಾಡಿಕೊಳ್ಳಲು ಬೆಂಗಳೂರು ಮಂದಿ ಸಜ್ಜಾಗುತ್ತಿದ್ದಾರೆ.‌ ಹೀಗಾಗಿ ನಗರದ ಕೆಆರ್ ಮಾರ್ಕೆಟ್​​ನಲ್ಲಿ ಬುಧವಾರವೇ ಎಲ್ಲಿ ನೋಡಿದರೂ ಜನಜಂಗುಳಿ ಕಾಣಿಸುತ್ತಿತ್ತು.‌ ಹಬ್ಬಕ್ಕೆ ಬೇಕಾದ ಹೂ, ಹಣ್ಣು, ಖರೀದಿ ಮಾಡುವಲ್ಲಿ ಜನ ವ್ಯಸ್ತರಾಗಿದ್ದಾರೆ. ಈ ಮಧ್ಯೆ ಹೂ, ಹಣ್ಣು, ತರಕಾರಿಗಳ ಬೆಲೆ ಕೊಂಚ ಏರಿಕೆಯಾಗಿದೆ.

ವರಮಹಾಲಕ್ಷ್ಮೀ ಕೂರಿಸಬೇಕು ಅಂದರೆ ಬಗೆಬಗೆಯ ಹೂಗಳನ್ನು ಖರೀದಿ ಮಾಡಲೇಬೇಕು. ಇದೇ ಕಾರಣದಿಂದಾಗಿ‌ ಈ ಬಾರಿ ಹೂವಿಗೆ ಬೇಡಿಕೆ ಜಾಸ್ತಿಯಾಗಿದ್ದು, ಕಳೆದ ವಾರ 100 ರೂಪಾಯಿಗೆ ಸಿಗುತ್ತಿದ್ದ ಹೂವಿನ ಬೆಲೆ ಈಗ ಮೂರು ಪಟ್ಟು ಏರಿಕೆಯಾಗಿದೆ. ಅದರಲ್ಲೂ ಸೇವಂತಿಗೆ, ಮಲ್ಲಿಗೆ, ಕನಕಾಂಬರ ಹೂವಿನ ಬೆಲೆಯಂತೂ ಗಗನಕ್ಕೇರಿದೆ.

ಬೆಂಗಳೂರಿನಲ್ಲಿ ಹೂವಿನ ಬೆಲೆ ಎಷ್ಟಿದೆ?

ಗಣಿಜಲು ಹೂವಿನ ಬೆಲೆ ಮಾರಿಗೆ 250 ರೂ. ಹಾಗೂ- ಕೆಜಿಗೆ 600 ರೂ. ಇದೆ. ಸೇವಂತಿಗೆ ಬೆಲೆ ಮಾರಿಗೆ 150 ರೂ. ಕೆಜಿಗೆ 300 ರೂ. ಇದೆ. ಮಲ್ಲಿಗೆ ಮಾರಿಗೆ 160 ರೂ. ಕೆಜಿಗೆ 1200 ರೂ. ಇದೆ. ಕನಕಾಂಬರ ಮಾರಿಗೆ 500, ಕೆಜೆಗೆ 3000 ರೂ. ಇದೆ. ಗುಲಾಬಿ ಹೂ ಮಾರಿಗೆ 160, ಕೆಜಿಗೆ 600 ರೂ. ಇದೆ. ಚೆಂಡೂ ಹೂ ಮಾರಿಗೆ 150, ಕೆಜೆಗೆ 600 ರೂ. ಇದೆ. ಪರ್ಪಲ್ ಸೇವಂತಿಗೆ ಮಾರಿಗೆ 500 ರೂ. ಇದೆ. ತುಳಸಿ ಮಾರಿಗೆ 200, ಕೆಜಿಗೆ 1800 ರೂ. ಇದೆ. ತಾವರೆ ಹೂ ಜೋಡಿಗೆ 100 ರೂ. ಇದೆ.

ತರಕಾರಿಗಳ ಬೆಲೆ ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ 10 ರಿಂದ 20 ರಷ್ಟು ಏರಿಕೆಯಾಗಿದೆ. ಅದರಲ್ಲಿ ಕ್ಯಾರೆಟ್ , ಆಲೂಗಡ್ಡೆ , ಈರುಳ್ಳಿ, ಬಟಾಣಿ, ಬೀನ್ಸ್ ಬೆಲೆ ಸ್ವಲ್ಪ ದುಬಾರಿಯಾಗಿದೆ.‌ ಸದ್ಯ ಒಂದು ವಾರದಿಂದ ಮಳೆ ಬರುತ್ತಿರುವ ಕಾರಣ ತರಕಾರಿ ಕಡಿಮೆ ಬರ್ತಿದೆ. ಹೀಗಾಗಿ ಇಂದು ತರಕಾರಿಗಳ ಬೆಲೆ ಏರಿಕೆಯಾಗಿದ್ದು, ನಾಳೆ ಕೂಡ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.

ತರಕಾರಿ ಬೆಲೆ (ಕೆಜಿಗೆ ರೂಪಾಯಿಗಳಲ್ಲಿ)

ನಾಟಿ ಬೀನ್ಸ್ 400, ಟೊಮೆಟೊ 20, ಬಿಳಿ ಬದನೆ 80, ಮೆಣಸಿನಕಾಯಿ 120, ನುಗ್ಗೆಕಾಯಿ ಕೆಜಿಗೆ 160 ಹಾಗೂ ಒಂದಕ್ಕೆ 20 ರೂ., ಊಟಿ ಕ್ಯಾರೆಟ್ 80, ನವಿಲುಕೋಸು 60, ಮೂಲಂಗಿ 30, ಹೀರೇಕಾಯಿ 40, ಆಲೂಗಡ್ಡೆ 40, ಈರುಳ್ಳಿ 50, ಕ್ಯಾಪ್ಸಿಕಂ 60, ಹಾಗಲಕಾಯಿ 60, ಕೊತ್ತಂಬರಿ ಸೊಪ್ಪುಕಟ್ 40, ಶುಂಠಿ 200, ಬೆಳ್ಳುಳ್ಳಿ 350, ಪಾಲಕ್ 46, ಪುದಿನ 92, ನಾಟಿ ಬಟಾಣಿ 426, ಫಾರಂ ಬಟಾಣಿ 200 ರೂ. ಇದೆ.

ತರಕಾರಿಗಳ ಜೊತೆಗೆ ಹಣ್ಣುಗಳ ಬೆಲೆಯೂ ಏರಿಕೆಯಾಗಿದ್ದು ಸೇಬು, ದಾಳಿಂಬೆ, ದ್ರಾಕ್ಷಿಯ ಬೆಲೆ ಕೊಂಚ ಏರಿಕೆಯಾಗಿದೆ.‌

ಹಣ್ಣುಗಳ ಬೆಲೆ (ಕೆಜಿಗೆ ರೂಪಾಯಿಗಳಲ್ಲಿ)

ಸೇಬು 300, ದ್ರಾಕ್ಷಿ 350, ಮೂಸಂಬಿ 160, ಸಪೋಟ 250, ಡ್ರಾಗಾನ್ ಫ್ರುಟ್ 250, ಬಟರ್ ಫ್ರುಟ್ 300, ಏಲಕ್ಕಿ ಬಾಳೆಹಣ್ಣು 140, ಪಪ್ಪಾಯ 60, ಕಲ್ಲಂಗಡಿ 60, ಅನಾನಸ್ 130, ಕಿವಿ ಫ್ರುಟ್ 170, ಕಿತ್ತಳೆ 220, ದಾಳಿಂಬೆ- 160 ರೂ. ಇದೆ.

ಈ ಬೆಲೆ ನೋಡಿ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬ ಅಂದರೇನೆ ಹೆಣ್ಣು ಮಕ್ಕಳಿಗೆ ವಿಶೇಷ. ಈ ಹಬ್ಬವನ್ನು ಪ್ರತಿವರ್ಷ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.‌ ಈ ವರ್ಷವು ಅದ್ದೂರಿಯಾಗಿ ಮಾಡುತ್ತಿದ್ದೇವೆ. ಹೀಗಾಗಿ ಹಬ್ಬಕ್ಕೆ ತರಕಾರಿ, ಹೂ, ಹಣ್ಣುಗಳನ್ನ ಖರೀದಿ ಮಾಡಲು ಬಂದಿದ್ದೇವೆ. ಆದ್ರೆ ಬೆಲೆ ಕೇಳಿಯೇ ಸುಸ್ತಾಗಿದೆ ಎಂದು ಗ್ರಾಹಕರಾದ ಜ್ಯೋತಿ, ಶ್ರೀ ಲಕ್ಷ್ಮಿ ಎಂಬವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನಗರದಲ್ಲಿವೆ 180 ಡೆಡ್ಲಿ ಸ್ಪಾಟ್, ಬಿಬಿಎಂಪಿಗೆ ವರದಿ ಸಲ್ಲಿಸಿದ ಟ್ರಾಫಿಕ್ ಪೊಲೀಸರು

ಒಟ್ಟಿನಲ್ಲಿ ತರಾಕಾರಿಗಳ ಬೆಲೆ ಶುಕ್ರವಾರ ಮತ್ತಷ್ಟು ದುಬಾರಿಯಾಗಲಿದ್ದು, ಹಬ್ಬದ ಖುಷಿಯಲ್ಲಿರುವರುವ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Poornima Agali Nagaraj
Follow Us