AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಂತ್ರದಲ್ಲಿ ಸಿಲುಕಿದ ಅಡುಗೆ ಸಿಬ್ಬಂದಿಯ ಕೈಬೆರಳು: ಭಾರೀ ಅವಘಡ ತಪ್ಪಿಸಿದ ವಿದ್ಯಾರ್ಥಿ; ಎಲ್ಲೆಡೆ ಮೆಚ್ಚುಗೆ

Dakshina Kannada News: ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ನರಿಕೊಂಬು ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ತನ್ನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ ಘಟನೆ ನಡೆದಿದೆ. ಸದ್ಯ ಆ ವಿದ್ಯಾರ್ಥಿಯ ಧೈರ್ಯಕ್ಕೆ ಸಿಎಂ ಡಿಕೆ ಶಿವಕುಮಾರ್​​​ ಕೂಡ ಶ್ಲಾಘಿಸಿದ್ದಾರೆ. ಹಾಗಾದರೆ ನಡೆದಿದ್ದೇನು ಎಂಬ ಮಾಹಿತಿ ಇಲ್ಲಿದೆ.

ಯಂತ್ರದಲ್ಲಿ ಸಿಲುಕಿದ ಅಡುಗೆ ಸಿಬ್ಬಂದಿಯ ಕೈಬೆರಳು: ಭಾರೀ ಅವಘಡ ತಪ್ಪಿಸಿದ ವಿದ್ಯಾರ್ಥಿ; ಎಲ್ಲೆಡೆ ಮೆಚ್ಚುಗೆ
ವಿದ್ಯಾರ್ಥಿ ಮನ್ವಿತ್‌Image Credit source: CMofKarnataka
ಗಂಗಾಧರ​ ಬ. ಸಾಬೋಜಿ
|

Updated on: Aug 13, 2026 | 8:24 PM

Share

ಮಂಗಳೂರು, ಆಗಸ್ಟ್​​ 13: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಓರ್ವ ವಿದ್ಯಾರ್ಥಿ (student) ಅಡುಗೆ ಸಿಬ್ಬಂದಿಯನ್ನು ಪ್ರಾಣಾಪಾಯದಿಂದ ಕಾಪಾಡಿರುವಂತಹ ಘಟನೆ ನಡೆದಿದೆ. ಸದ್ಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್‌ನ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಶಿಕ್ಷಕರು ಸೇರಿದಂತೆ ಸಿಎಂ ಡಿಕೆ ಶವಿಕುಮಾರ್ (DK Shivakumar) ಕೂಡ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಡೆದಿದ್ದೇನು?

ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಅಕ್ಷರ ದಾಸೋಹ ಸಿಬ್ಬಂದಿಯೊಬ್ಬರು ವಿದ್ಯುತ್ ಚಾಲಿತ ಯಂತ್ರದಲ್ಲಿ ತೆಂಗಿನಕಾಯಿ ತುರಿಯುತ್ತಿದ್ದಾಗ, ಆಕಸ್ಮಿಕವಾಗಿ ಅವರ ಕೈಬೆರಳು ಚಾಲನೆಯಲ್ಲಿದ್ದ ಯಂತ್ರದೊಳಗೆ ಸಿಲುಕಿಕೊಂಡಿತು. ನೋವಿನ ತೀವ್ರತೆಗೆ ಸಿಬ್ಬಂದಿ ಕಿರುಚಾಡಲು ತೊಡಗಿದರು.

ಸಿಎಂ ಡಿಕೆ ಶಿವಕುಮಾರ್​ ಟ್ವೀಟ್​

ಈ ಕ್ಷಣದಲ್ಲಿ ಸ್ವಲ್ಪ ತಡವಾದರೂ ದೊಡ್ಡ ದುರಂತವೇ ಸಂಭವಿಸುತ್ತಿತ್ತು. ಆದರೆ, ಅಲ್ಲಿಗೆ ಬಂದ ಮನ್ವಿತ್, ಪರಿಸ್ಥಿತಿಯ ಗಂಭೀರತೆ ಅರಿತು ಎದೆಗುಂದದೆ ಧಾವಿಸಿ ಹೋಗಿ ತಕ್ಷಣ ವಿದ್ಯುತ್​ ಸಂಪರ್ಕ ಕಡಿತಗೊಳಿಸುವ ಮೂಲಕ ಮುಂದಾಗಬಹುದಿದ್ದ ಭಾರೀ ಅನಾಹುತ್​ವೊಂದನ್ನು ತಪ್ಪಿಸಿದ್ದಾನೆ. ಸದ್ಯ ವಿದ್ಯಾರ್ಥಿ ಮನ್ವಿತ್ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ವಿದ್ಯಾರ್ಥಿ ಮನ್ವಿತ್​​ ಸಾಹಸಕ್ಕೆ ಸಿಎಂ ಡಿಕೆ ಶಿವಕುಮಾರ್​ ಮೆಚ್ಚುಗೆ

ಇನ್ನು ವಿದ್ಯಾರ್ಥಿ ಮನ್ವಿತ್​​ ಸಾಹಸಕ್ಕೆ ಸಿಎಂ ಡಿಕೆ ಶಿವಕುಮಾರ್​ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್‌ನ ಸಮಯಪ್ರಜ್ಞೆ ಹಾಗೂ ಧೈರ್ಯ ನಿಜಕ್ಕೂ ಹೃದಯಸ್ಪರ್ಶಿ ಮತ್ತು ಶ್ಲಾಘನೀಯ. ಅಡುಗೆ ಸಿಬ್ಬಂದಿಯನ್ನು ಅಪಾಯದಿಂದ ಕಾಪಾಡಿದ ಮನ್ವಿತ್‌ಗೆ ಹೃದಯಪೂರ್ವಕ ಅಭಿನಂದನೆಗಳು’ ಎಂದಿದ್ದಾರೆ.

‘ವಿದ್ಯುತ್‌ ಚಾಲಿತ ಕಾಯಿ ತುರಿಯುವ ಯಂತ್ರದಲ್ಲಿ ಅಕ್ಷರ ದಾಸೋಹ ಸಿಬ್ಬಂದಿಯ ಕೈಬೆರಳು ಸಿಲುಕಿಕೊಂಡು ಅವರು ನೋವಿನಿಂದ ಕಿರುಚುತ್ತಿದ್ದಾಗ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕ ಮನ್ವಿತ್‌, ತಕ್ಷಣ ವಿದ್ಯುತ್‌ ಸ್ವಿಚ್‌ ಆಫ್‌ ಮಾಡುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯವನ್ನು ತಪ್ಪಿಸಿದ್ದಾನೆ’.

ಇದನ್ನೂ ಓದಿ: ರಸ್ತೆ ಗುಂಡಿಯಲ್ಲಿ ‘ಕೆರೆ-ದಂಡೆ’ ಆಟ: ಹಾಳಾದ ರಸ್ತೆ ವಿರುದ್ಧ ಯುವಕರ ವಿಶಿಷ್ಟ ಪ್ರತಿಭಟನೆ

‘ಬಾಲಕನ ಒಂದು ಕ್ಷಣದ ಜಾಗರೂಕತೆ, ಸರಿಯಾದ ನಿರ್ಧಾರವೊಂದು ಅಡುಗೆ ಸಿಬ್ಬಂದಿಯ ಕೈಬೆರಳನ್ನು ಉಳಿಸಿದೆ. ಮನ್ವಿತ್‌ನ ಈ ಮಾನವೀಯ ಕಾಳಜಿ, ಧೈರ್ಯ ಮತ್ತು ಸಮಯಪ್ರಜ್ಞೆ ಎಲ್ಲರಿಗೂ ಮಾದರಿಯಾಗಲಿ. ಬಾಲಕನ ಮುಂದಿನ ಭವಿಷ್ಯ ಉಜ್ವಲವಾಗಲಿ, ಸಮಾಜದ ಒಳಿತಿಗಾಗಿ ಸದಾ ಸ್ಪಂದಿಸುವ ಉತ್ತಮ ಪ್ರಜೆಯಾಗಿ ಬೆಳೆದು ನಾಡಿಗೆ ಕೀರ್ತಿ ತರಲಿ’ ಎಂದು ಸಿಎಂ ಡಿಕೆ ಶಿವಕುಮಾರ್​ ಹಾರೈಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us